ಕಬಕ : ವಿದ್ಯಾರ್ಥಿಗಳು ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಆತ್ಮವಿಶ್ವಾಸ ಬೆಳೆಸಬೇಕು. ಶಿಸ್ತನ್ನು ಅಳವಡಿಸಿಕೊಂಡು ವಿದ್ಯಾಭ್ಯಾಸ ಮಾಡಿ ಹೆತ್ತವರಿಗೂ ಶಾಲೆಗೂ ಕೀರ್ತಿ ತರಬೇಕು. ಸಾಮಾಜಿಕ ಶಾಂತಿ ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾಲೂ ಇದೆ ಎಂದು ಸಾಮಾಜಿಕ ಮುಖಂಡ ಶಾಲಾ ಎಸ್.ಡಿ.ಎಮ್.ಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ ಹೇಳಿದರು.
ಅವರು ಕಬಕ ಸರಕಾರಿ ಪ್ರೌಢ ಶಾಲೆಯಲ್ಲಿ ದ.ಕ. ಜಿಲ್ಲಾ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ಏರ್ಪಡಿಸಲಾದ ಅಬ್ಬಕ್ಕರಾಣಿ ಗೈಡ್ಸ್ ದಳವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ವಿಶ್ರಾಂತ ಯೋಧ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ತಾರನಾಥ್ ಬೋಳಾರ್ ಮಾತನಾಡಿ ಸೈನಿಕರ ತ್ಯಾಗ ಬಲಿದಾನದಿಂದಾಗಿ ನಾವು ಸುಖ ಶಾಂತಿಯಿಂದ ಬದುಕಬಹುದಾಗಿದೆ. ಸೈನ್ಯದಲಿ ಸೇರುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದರು.
ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಜಯಾನಂದ ಪೆರಾಜೆ ಅಭ್ಯಾಗತರಾಗಿ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ದಳದ ಸೇವಾಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಯಲ್ಲಿ ಗೈಡ್ಸ್ ದಳವನ್ನು ಆರಂಭಿಸಿರುವುದಕ್ಕೆ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಶಫಿಉಲ್ಲಾ ಎಸ್. ಅಧ್ಯಕ್ಷತೆ ವಹಿಸಿ ಗೈಡ್ಸ್ ಸಂಬಂಧಿಸಿದ ಪರಿಕರಗಳನ್ನು ನೀಡಿದರು. ವಿಶ್ರಾಂತ ಯೋಧ ತಾರನಾಥ ಬೋಳಾರ್ ಮತ್ತು ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ಇವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಿಜ್ಞಾನ ಶಿಕ್ಷಕಿ ಇಂದಿರಾ ಕೆ.ಸ್ವಾಗತಿಸಿದರು. ಗೈಡ್ಸ್ ಶಿಕ್ಷಕಿ ಶಾಂತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಗೈಡ್ಸ್ ದಳದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಶಾನಿಯಾ ನಿರೂಪಿಸಿ, ದೈಹಿಕ ಶಿಕ್ಷಕ ಕೃಷ್ಣಯ್ಯ ಕೆ. ವಂದಿಸಿದರು.