ನಿಮಗೆ ಕೃತಜ್ಞತೆ , ನಿಮ್ಮ ಪ್ರೀತಿಗೆ ನಾವು ಆಭಾರಿ : ಕಡಿಮೆ ಅವಧಿಯಲ್ಲಿ 1 ಲಕ್ಷ ಓದುಗರನ್ನು ತಲಪಿತು ಸುಳ್ಯನ್ಯೂಸ್.ಕಾಂ

May 30, 2019
10:53 AM

ಸುಳ್ಯ: ಇವತ್ತು ನಮ್ಮ ಸಂತಸವನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಅದಕ್ಕೂ ಮೊದಲು ನಿಮಗೆ  ಕೃತಜ್ಞತೆ ಸಲ್ಲಿಸುತ್ತೇವೆ. ನಿಮ್ಮ ಪ್ರೀತಿಗೆ ನಾವು ಆಭಾರಿಗಳಾಗಿದ್ದೇವೆ. ನಿಮ್ಮ ಸಹಕಾರಕ್ಕೆ ನಾವು ಋಣಿಗಳಾಗಿದ್ದೇವೆ. ನಾವು  ಈಗ ಒಟ್ಟು 1 ಲಕ್ಷ ಓದುಗರನ್ನು ತಲಪಿದ್ದೇವೆ. ಅದೂ ಅತೀ ಕಡಿಮೆ ಅವಧಿಯಲ್ಲಿ. ಇದರ ಸಂಪೂರ್ಣ ಕ್ರೆಡಿಟ್ ನಿಮಗೇ ಸಲ್ಲುತ್ತದೆ.

Advertisement

ಅನೇಕ ಆನ್ ಲೈನ್ ಮಾಧ್ಯಮಗಳ ನಡುವೆ constructive media ಎಂಬ ಟ್ಯಾಗ್ ಲೈನ್ ನ   ಸುಳ್ಯನ್ಯೂಸ್.ಕಾಂ ವೆಬ್ ಸೈಟ್ , ಪಾಸಿಟಿವ್ ಆಗಿಯೇ ಯೋಚನೆ ಮಾಡುತ್ತಾ, ಅತೀ ಕಡಿಮೆ ಅಪರಾಧ ಸುದ್ದಿಗಳನ್ನು  ಪ್ರಕಟ ಮಾಡಿ , ಇದುವರೆಗೆ ರಚನಾತ್ಮಕ ಸುದ್ದಿಗಳ ಕಡೆಗೆ ಗಮನ ನೀಡಿತು. ಆರಂಭದಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಪರಾಧ ಸುದ್ದಿಗಳನ್ನೇ ಜನರು ಓದುತ್ತಾರೆ ಎಂಬ ಮನಸ್ಥಿತಿಯಿಂದ  ಹೊರಬಂದು ರಚನಾತ್ಮವಾದ ಸುದ್ದಿಗಳನ್ನೇ ನೀಡಿದಾಗ ಓದುಗರು ನೀಡಿದ ಪ್ರೋತ್ಸಾಹ ನಮ್ಮ ಪ್ರಯತ್ನಕ್ಕೆ ಯಶಸ್ಸು ನೀಡಿತು, ಇನ್ನಷ್ಟು ಪ್ರೇರಣೆ ನೀಡಿತು. ಇಷ್ಟೂ ದಿನಗಳ ಕಾಲ  ಎಲ್ಲಾ ಧರ್ಮ, ಜಾತಿ, ರಾಜಕೀಯ ಪಕ್ಷಗಳನ್ನು ಸಮಾನವಾಗಿ ಕಂಡಿದ್ದೇವೆ, ಸುದ್ದಿ ಮಾಡಿದ್ದೇವೆ. ಹೀಗಾಗಿ ಓದಿದ ಎಲ್ಲರೂ ಎಲ್ಲಾ ರಾಜಕೀಯ, ಧಾರ್ಮಿಕ ನಾಯಕರು  ಮೆಚ್ಚುಗೆ ವ್ಯಕ್ತಪಡಿಸಿದ್ದರೆ. ಈ ನಂಬಿಕೆ ಉಳಿಸಿಕೊಳ್ಳುತ್ತೇವೆ. ಇದೇ ರೀತಿ ಮುಂದುವರಿಯುತ್ತದೆ. ಅಪರಾಧಗಳೇ ವಿಜೃಂಭಿಸುವಂತೆ ಮಾಡುವುದಿಲ್ಲ. ಹಾಗಂತ ತಪ್ಪುಗಳೇ ಆಗುವುದಿಲ್ಲ ಎಂದು ಹೇಳುವುದಿಲ್ಲ. ಮನುಷ್ಯ ಸಹಜವಾದ ತಪ್ಪುಗಳು ನಡೆದೀತು. ಅಂತಹದ್ದು ತಿಳಿದರೆ ತಕ್ಷಣವೇ ನಮ್ಮ ಗಮನಕ್ಕೆ ತನ್ನಿ. ಏಕೆಂದರೆ ಮಾಧ್ಯಮ ಎನ್ನುವ ನಾವೂ ಮನುಷ್ಯರೇ ಆಗಿರುವುದರಿಂದ ಸಹಜವಾದ ತಪ್ಪುಗಳ ನಡೆದೀತು. ಅದನ್ನು ಗಮನಕ್ಕೆ ತನ್ನಿ. ಬದಲಾವಣೆಗೆ, ಸರಿಪಡಿಸುವುದಕ್ಕೆ ಅದೂ ಕಾರಣವಾಗುತ್ತದೆ. ನಿರಂತರವಾಗಿ ಎಲ್ಲಾ ರೀತಿಯ ಸಹಕಾರ ಇರಲಿ.

ಯಾವುದೇ ಮಾಧ್ಯಮ ಪ್ರಯತ್ನ ಮುಂದುವರಿಯಬೇಕಾದರೆ ಸಮಾಜದ ಪ್ರೋತ್ಸಾಹ, ಸಹಕಾರ ಬೇಕು. ಅದರಲ್ಲೂ ಆರ್ಥಿಕ ಬಲ ಬೇಕು. ಹೀಗಾಗಿ ಮುಂದೆ ಜಾಹೀರಾತು ಮೂಲಕ ನಮ್ಮನ್ನು  ಪ್ರೋತ್ಸಾಹಿಸಬೇಕು, ಬೆಂಬಲಿಸಬೇಕು ಎಂದು ಇದೇ ಸಂದರ್ಭ ಮನವಿ ಮಾಡುತ್ತೇವೆ.

( * ವೆಬ್ ಸೈಟ್ ಪ್ರವೇಶ ಮಾಡುವವರ ಸಂಖ್ಯೆ  ತಿಳಿಯಲು ಎನಲೆಟಿಕ್ ಟೂಲ್ ಅಳವಡಿಸಿರುತ್ತಾರೆ. ಈ ಮೂಲಕ ವೆಬ್ ಸೈಟ್ ಗೆ ಬರುವವರ ಸಂಖ್ಯೆ ಪ್ರತಿದಿನ ಎಣಿಕೆಯಾಗುತ್ತದೆ. ಹೀಗಾಗಿ ಓದುಗರ ಸಂಖ್ಯೆ ತಿಳಿಯಲು ಸಾಧ್ಯವಾಗುತ್ತದೆ )

 

*********************

  ಸುಳ್ಯನ್ಯೂಸ್.ಕಾಂ ದೀರ್ಘ ಕಾಲದ ಯೋಚನೆಯಿಂದ ಆರಂಭವಾದದ್ದು ಅಲ್ಲ.  ಹೊಸತನದೊಂದಿಗೆ ಗುಣಮಟ್ಟದಿಂದ ಕೂಡಿದ ಆನ್ ಲೈನ್ ಮಾಧ್ಯಮವೊಂದರ ಕನಸನ್ನು  ಹೊತ್ತು ಸುಳ್ಯನ್ಯೂಸ್.ಕಾಂ ಆರಂಭವಾಯಿತು. ಈ ಆರಂಭದ ಜೊತೆಗೆ ನಮ್ಮ ಉದ್ದೇಶಗಳನ್ನು  ಹೇಳಿಬಿಡುತ್ತೇವೆ,

ನಾವು ಯಾರೊಂದಿಗೂ ಪೈಪೋಟಿಗೆ ಇಳಿಯುವುದಿಲ್ಲ ಎಂಬ  ದೃಢ ನಿಲುವನ್ನು ತಳೆದೇ ನಾವು ಇಲ್ಲಿಗೆ ಆರಂಭ ಮಾಡಿದ ಕೆಲಸಗಳು ಯಶಸ್ಸಿನ ಮೆಟ್ಟಿಲಾಯಿತು. ಯಾವತ್ತೂ ಪೈಪೋಟಿಯೇ ಮಾಧ್ಯಮ ಜಗತ್ತಿನಲ್ಲಿ ಕೆಲವೊಂದು ಅವಾಂತರ ಸೃಷ್ಠಿ ಮಾಡುತ್ತದೆ ಎಂದು ನಾವು ನಂಬಿದ್ದೇವೆ. ಅದರ ಜೊತೆಗೆ ಯಾರೇ ನಮ್ಮನ್ನು  ತೆಗಳಲಿ, ನಮ್ಮ ಬಗ್ಗೆ ನೆಗೆಟಿವ್ ಆಗಿ ಮಾತಾಡಲಿ ಅದಕ್ಕೆ ನಾವು ಮರುತ್ತರ  ನೀಡುವುದಿಲ್ಲ,  ಕೆಲಸಗಳೇ ಅದಕ್ಕೆಲ್ಲಾ ಉತ್ತರ ನೀಡುತ್ತವೆ ಎಂದು ನಂಬಿದ್ದೇವೆ.

ಸುಳ್ಯನ್ಯೂಸ್.ಕಾಂ ಎಂಬ ಹೆಸರಿನ ಬಗ್ಗೆಯೂ ಕೆಲವೊಮ್ಮೆ ಚರ್ಚೆಯಾಗುತ್ತದೆ. ಸುಳ್ಯ ಅಂದರೆ ಒಂದು ಪ್ರದೇಶವನ್ನು  ಮಾತ್ರವೇ ಪ್ರತಿನಿಧಿಸುತ್ತದೆ ಎಂದು. ಹೌದು, ಒಂದು ಪ್ರದೇಶವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಸುಳ್ಯದ ನ್ಯೂಸ್ ಹೆಚ್ಚಿರುತ್ತದೆ. ಅದರ ಜೊತೆಗೆ ಪಕ್ಕದ ತಾಲೂಕು, ಜಿಲ್ಲೆ, ರಾಜ್ಯದ ನ್ಯೂಸ್ ಇರುತ್ತದೆ. ರಾಷ್ಟ್ರೀಯ ಸುದ್ದಿಗಳು ಇರುತ್ತದೆ. ಹೀಗಾಗಿ ಸುಳ್ಯದಿಂದ ಅಂದರೆ ಒಂದು ತಾಲೂಕಿನಿಂದ ಮಾಧ್ಯಮ ದೃಷ್ಠಿ ಬದಲಾಗಲಿ ಎಂಬ ದೂರದೃಷ್ಠಿ ನಮ್ಮದು.

ಹೌದು, ನಾವು ಇಡೀ ಸಮಾಜವನ್ನು ಬದಲಾಯಿತ್ತೇವೆ ಎಂದು ನಂಬಿಲ್ಲ, ಹಾಗಂತ ಭರವಸೆಯನ್ನೂ ನೀಡುವುದಿಲ್ಲ. ಆದರೆ ಯೋಚಿಸುವಂತೆ ಮಾಡುತ್ತೇವೆ. ಭ್ರಷ್ಟಾಚಾರವನ್ನು  ನಿಗ್ರಹ ಮಾಡುತ್ತೇವೆ ಎನ್ನುವುದಿಲ್ಲ, ಆದರೆ ಭ್ರಷ್ಟಾಚಾರವನ್ನು ತೋರಿಸುತ್ತೇವೆ. ನಾವು ರಾಜಕೀಯ ಶುದ್ದೀಕರಣ ಮಾಡುತ್ತೇವೆ ಎನ್ನುವುದಿಲ್ಲ, ಆದರೆ ಅನೈತಿಕ ರಾಜಕೀಯವನ್ನು  ತೋರಿಸುತ್ತೇವೆ, ನಾವು ಜಾತಿ, ಧರ್ಮದ ನಡುವೆ ಕಂದಕವೇ ಇಲ್ಲ ಅಂತ ಹೇಳುವುದಿಲ್ಲ, ಆದರೆ ಜೊತೆಯಲ್ಲಿ  ಸಾಗುವ ದಾರಿಯಲ್ಲಿ ನಾವು ಮುಂದೆ ನಡೆಯುತ್ತೇವೆ. ಒಂದು ಮಾಧ್ಯಮವಾಗಿ ಏನು ಮಾಡಬಹುದು  ಎಂಬುದನ್ನು  ಯೋಚನೆ ಮಾಡುತ್ತೇವೆ ಅಷ್ಟೇ.

ಈಗ ಸುಳ್ಯನ್ಯೂಸ್.ಕಾಂ ನಲ್ಲಿ ಏನೇನಿದೆ ಎನ್ನುವುದನ್ನೂ ನಿಮ್ಮ ಮುಂದೆ ಇಡುತ್ತೇವೆ

ಸುದ್ದಿಗಳ ವಿಭಾಗದಲ್ಲಿ  ರಾಜಕೀಯ , ನಮ್ಮೂರು ವಿಭಾಗದಲ್ಲಿ ಸ್ಥಳೀಯ ಸುದ್ದಿಗಳು , ಅಪರಾಧ ವಿಭಾಗ, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಸುದ್ದಿಗಳು ಇರುತ್ತವೆ.

ಪ್ರಮುಖವಾಗಿ ನಮ್ಮ ಹಿತೈಷಿಗಳು ಅನೇಕರು ವಾರದಲ್ಲಿ  ಒಂದು ದಿನ ವಿಶೇಷ ಅಂಕಣ ಬರೆಯುತ್ತಾರೆ. ಇವರು ನಮ್ಮ ಬಹುದೊಡ್ಡ ಮಾರ್ಗದರ್ಶಕರು, ಹಿತಚಿಂತಕರು. ಇವರಲ್ಲಿ  ನಾ.ಕಾರಂತ ಪೆರಾಜೆ, ಶಂ.ನಾ ಖಂಡಿಗೆ, ಮೋಕ್ಷಿತಾ ಪಟೇಲ್, ಸುರೇಶ್ಚಂದ್ರ  ಕಲ್ಮಡ್ಕ  , ಅಪೂರ್ವ ಕೊಲ್ಯ, ಅಶ್ವಿನಿ ಮೂರ್ತಿ, ಲಕ್ಷ್ಮಣ ದೇವಸ್ಯ, ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಸೇರಿದಂತೆ ಹಲವು ಇದ್ದಾರೆ. ಇವರಿಗೆ ನಾವೆಷ್ಟು ಋಣಿಯಾದರೂ ಸಾಲದು.

ವಿಶೇಷ ವರದಿ ವಿಭಾಗದಲ್ಲಿ Today’s Focus ಮೂಲಕ ಆಯಾ ದಿನ ಪ್ರಮುಖ ಹಾಗೂ ಬೆಳಕು ಚೆಲ್ಲಬೇಕಾದ ಸುದ್ದಿ ಇರುತ್ತದೆ. ಇದು ಪ್ರತೀ ದಿನ ಬೆಳಗ್ಗೆ ಪ್ರಕಟವಾಗುತ್ತದೆ.

ಎಕ್ಸಕ್ಲೂಸಿವ್ ಆಗಿರುವ ವರದಿಗಳು , ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಂಗತಿಗಳು ಇರುತ್ತದೆ.

ಅದರ ಜೊತೆಗೆ ವಾರದ ವ್ಯಕ್ತಿ ಎಂಬ ವಿಶೇಷ ವಿಭಾಗ ಇದರಲ್ಲಿ  ತಾಲೂಕಿನ ಮಾತ್ರವಲ್ಲ ಜಿಲ್ಲೆಯ ಸಾಧಕ ವ್ಯಕ್ತಿಗಳು, ಕೃಷಿಕರು, ಕಾರ್ಮಿಕರು ಸೇರಿದಂತೆ ಮಾದರಿಯಾಗಬಲ್ಲ ವ್ಯಕ್ತಿಗಳ ಪರಿಚಯ ಇರುತ್ತದೆ. ಪ್ರತೀ ವಾರಕ್ಕೊಬ್ಬರ ಪರಿಚಯ ಇರುತ್ತದೆ.

ಸುಳ್ಯನ್ಯೂಸ್.ಕಾಂ ಕಾಳಜಿ ವಿಭಾಗದಲ್ಲಿ ತಾಲೂಕಿನ ಕೆಲವೊಂದು ಸಾಮಾಜಿಕ  ಅಂಶಗಳ ಬಗ್ಗೆ  ಸಾಮಾಜಿಕ ಜವಾಬ್ದಾರಿ ನೆಲೆಯಲ್ಲಿ  ನಾವು ಕೂಡಾ ಫಾಲೋಅಪ್ ಮಾಡುತ್ತೇವೆ.

ಕೃಷಿ ವಿಭಾಗದಲ್ಲಿ ಕೃಷಿಗೆ ಸಂಬಂಧಿಸಿದ ವಿಷಯ ಪ್ರಕಟ ಮಾಡುತ್ತೇವೆ. ಇನ್ನು ಕಲೆ, ಸಂಸ್ಕೃತಿ, ಮಾಹಿತಿ. ಉದ್ಯೋಗ, ಸಾಹಿತ್ಯ, ಕಾರ್ಟೂನ್, ಧಾರ್ಮಿಕ, ಇತ್ಯಾದಿಗಳ ಬಗ್ಗೆಯೂ ಗಮನಹರಿಸಿದ್ದೇನೆ

ಇನ್ನೊಂದು  ಮುಖ್ಯವಾಗಿ ದಿನದ ಚಿತ್ರ ಎಂಬ ವಿಭಾಗದ ಇದೆ, ಇದರಲ್ಲಿ ಆಯಾ ದಿನಕ್ಕೆ ಸಂಬಂಧಿಸಿದ ಹಾಗೂ ಪಾಸಿಟಿವ್ ಚಿತ್ರಗಳನ್ನು ಅದರಲ್ಲಿ ತಾಲೂಕಿನ ಯಾರೇ ಕಳುಹಿಸಿದರೂ ಪ್ರಕಟ ಮಾಡುತ್ತೇವೆ. ಅಂತಹವರು ನಮ್ಮನ್ನು ಸಂಪರ್ಕ ಮಾಡಬಹುದು.

ಇದೆಲ್ಲಕ್ಕಿಂತಲೂ ಮುಖ್ಯವಾಗಿ ಹೇಳಬೇಕಾದ್ದು ಸುಳ್ಯದ ಪತ್ರಕರ್ತ ಗಂಗಾಧರ ಕಲ್ಲಪ್ಪಳ್ಳಿ ಅವರ ಸಂಪಾದಕೀಯ  ಸಹಕಾರ. ಯಶಸ್ಸಿನ ಒಂದು ಪಾಲು  ಕಲ್ಲಪ್ಪಳ್ಳಿ ಅವರದ್ದಾದರೆ ಗಿರೀಶ್ ಅಡ್ಪಂಗಾಯ ಅವರ ಸಹಕಾರವೂ ದೊಡ್ಡದಿದೆ. ನಮ್ಮೊಂದಿಗೆ ಸುಳ್ಯದ ಪತ್ರಕರ್ತ ಲೋಕೇಶ್ ಪೆರ್ಲಂಪಾಡಿ ಹಾಗೂ ಸುಳ್ಯದ ಅಮರ ಸುಳ್ಯ ಸುದ್ದಿ ವಾರಪತ್ರಿಕೆಯ ಸಂಪಾದಕ ಮುರಳಿ ಅಡ್ಡನಪಾರೆ ಹಾಗೂ ಎಲ್ಲಾ  ಸಿಬಂದಿಗಳೂ ನಿರಂತರ ಸಹಕಾರ ಮಾಡುತ್ತಿದ್ದಾರೆ. ಸುಬ್ರಹ್ಮಣ್ಯದ ಪತ್ರಕರ್ತ ಬಾಲಕೃಷ್ಣ ಭೀಮಗುಳಿ , ಬೆಳ್ಳಾರೆಯ ಬಾಲಚಂದ್ರ ಕೋಟೆ , ಸವಣೂರಿನ ಪ್ರವೀಣ್ ಚೆನ್ನಾವರ ಸೇರಿದಂತೆ ಇನ್ನೂ ಹಲವಾರು ಮಂದಿಯ ಸಹಕಾರ ನೆನಪಿಸುತ್ತೇವೆ.

 ನಮ್ಮ ವೆಬ್ ಸೈಟ್ ಅನ್ನು ಅಂದವಾಗಿ ಹಾಗೂ ಆಕರ್ಷಕವಾಗಿ  ಡಿಸೈನ್ ಮಾಡಿರುವ ವೆಬ್ ಪೀಪಲ್ ನ ಆದಿತ್ಯ ಕಲ್ಲೂರಾಯ ಹಾಗೂ ಅವರ ತಂಡಕ್ಕೂ ಧನ್ಯವಾದ ಹೇಳಲೇಬೇಕು.

 

  • ಮಹೇಶ್ ಪುಚ್ಚಪ್ಪಾಡಿ , ಸಂಪಾದಕ, ಸುಳ್ಯನ್ಯೂಸ್.ಕಾಂ
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಭಾರತ–ಬ್ರೆಜಿಲ್ ಕೃಷಿ ಸಹಕಾರ : ನೈಸರ್ಗಿಕ ಕೃಷಿಗೆ ಒತ್ತು, ಶೀಘ್ರದಲ್ಲೇ MoU
February 22, 2026
9:44 AM
by: ದ ರೂರಲ್ ಮಿರರ್.ಕಾಂ
ಕರಾವಳಿಯಲ್ಲಿ ಅಕಾಲಿಕ ಮಳೆ ಅಬ್ಬರ | ಸುಬ್ರಹ್ಮಣ್ಯದ ಬಳಿ 42 ಮಿಮೀ, ಅಡಿಕೆ ಬೆಳೆಗಾರರಿಗೆ ಸಂಕಷ್ಟ
February 21, 2026
8:36 PM
by: ದ ರೂರಲ್ ಮಿರರ್.ಕಾಂ
ನಂದಿನಿ ಉತ್ಪನ್ನಗಳ ವಿರುದ್ಧದ ವದಂತಿ ನಂಬಬೇಡಿ : ಗ್ರಾಹಕರಿಗೆ ಕೆಎಂಎಫ್ ಮನವಿ
February 21, 2026
10:03 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಗನ್ ಪರವಾನಗಿ : ಶೀಘ್ರದಲ್ಲೇ ಆನ್ಲೈನ್ ವ್ಯವಸ್ಥೆ ಜಾರಿ – ಜಿಲ್ಲಾಧಿಕಾರಿ ದರ್ಶನ್ ಎಚ್.ವಿ
February 21, 2026
9:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror