ಪಂಜ: ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗುತ್ತಿಗಾರು ಮತ್ತು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಶ್ರಯದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಪಂಜದಲ್ಲಿ ಮೇ.6 ರಿಂದ 10 ರವರೆಗೆ ಅಡಿಕೆ ಮರ ಏರುವ ಕೌಶಲ್ಯ ಸ್ವ ಉದ್ಯೋಗ ತರಬೇತಿ ಶಿಬಿರ ನಡೆಯಲಿದೆ. ಈಗಾಗಲೇ ಈ ಶಿಬಿರಕ್ಕೆ 30 ಅರ್ಜಿಗಳು ಬಂದಿದ್ದು , ಇನ್ನೂ ಒಂದೆರಡು ಅರ್ಜಿಗಳ ನಿರೀಕ್ಷೆ ಇದೆ ಎಂದು ಪಂಜ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ತಿಳಿಸಿದ್ದಾರೆ.
ಅಡಿಕೆ ಮರ ಏರುವ ಬಗ್ಗೆ ತರಬೇತಿ ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಕ್ಯಾಂಪ್ಕೋ ವತಿಯಿಂದ ವಿಟ್ಲ ಸಿ ಪಿ ಸಿ ಆರ್ ಐ ವಠಾರದಲ್ಲಿ ಎರಡು ಬಾರಿ ಯಶಸ್ವಿಯಾಗಿ ನಡೆದಿದೆ. ಆ ಬಳಿಕ ಪೆರ್ಲ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಪೆರ್ಲದಲ್ಲಿ ತರಬೇತಿ ಶಿಬಿರ ಯಶಸ್ವಿಯಾಗಿ ನಡೆದಿದೆ.ಎರಡೂ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಪಂಜದಲ್ಲಿ 3 ಸಹಕಾರಿ ಬ್ಯಾಂಕ್ ಸಹಯೋಗದೊಂದಿಗೆ 18ರಿಂದ 40 ವರುಷದ ಒಳಗಿನ ಯುವಕರಿಗೆ ಆದ್ಯತೆ ನೀಡಿ ಈ ಶಿಬಿರ ಆಯೋಜನೆ ಮಾಡಲಾಗಿತ್ತು. ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಥಳೀಯರೂ ಅಲ್ಲದೆ ಶಿರಸಿ , ಕುಂದಾಪುರ, ಕಾಸರಗೋಡು , ಪೆರ್ಲ ಕಡೆಯಿಂದಲೂ ತರಬೇತಿ ಬಗ್ಗೆ ವಿಚಾರಣೆ ನಡಿಸಿದ್ದಾರೆ ಎಂದು ಚಂದ್ರಶೇಖರ ಶಾಸ್ತ್ರಿ “ಸುಳ್ಯನ್ಯೂಸ್.ಕಾಂ” ಗೆ ಮಾಹಿತಿ ನೀಡಿದ್ದಾರೆ. ಅಡಿಕೆ ಮರ ಏರುವ ಕೌಶಲ್ಯ ತರಬೇತಿ ಶಿಬಿರ ವಿವಿಧ ಪ್ರೋತ್ಸಾಹ ಸೌಲಭ್ಯ ಗಳೊಂದಿಗೆ ಮೇ 6 ರಿಂದ10 ರ ವರೆಗೆ ಸಿ ಎ ಬ್ಯಾಂಕ್ ಪಂಜದಲ್ಲಿ ನಡೆಯುತ್ತದೆ.
ಶಿಬಿರವನ್ನು ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಗೋಪಾಲಕೃಷ್ಣ ಭಟ್ ಉದ್ಘಾಟಿಸುವರು. ಸಭಾಧ್ಯಕ್ಷತೆಯನ್ನು ಕೃಷಿಕ ಬಿಎಂ ಆನಂದ ಗೌಡ ವಹಿಸುವರು.ಅತಿಥಿಗಳಾಗಿ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾಕ ಶ್ರೀಪಡ್ರೆ ಭಾಗವಹಿಸುವರು.
ಮೇ.10 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಸಭಾಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ ಭಾಗವಹಿಸುವರು.
ಪ್ರತೀ ದಿನ ಅಡಿಕೆ ಮರ ಏರುವ ತರಬೇತಿ, ಕೊಕ್ಕೆ ಕಟ್ಟುವುದು,ತಳೆ ಕಟ್ಟುವುದು, ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಬಗ್ಗೆ ತರಬೇತಿಯ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಜೇಸಿಐ ಪಂಜ ಪಂಚಶ್ರೀ ಮತ್ತು ಲಯನ್ಸ್ ಪಂಜ ಸಹಕಾರ ನೀಡುತ್ತದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇ.6 ರಿಂದ ಪಂಜದಲ್ಲಿ ಅಡಿಕೆ ಕೌಶಲ್ಯ ತರಬೇತಿ ಶಿಬಿರ : 30 ಕ್ಕೂ ಹೆಚ್ಚು ಶಿಬಿರಾರ್ಥಿಗಳಿಂದ ಅರ್ಜಿ"