ಮುಗಿಯದ ಗಡಿ ಜನರ ಆತಂಕ: ಪರಪ್ಪೆಯಲ್ಲಿ ರಸ್ತೆ ಮೇಲೆ ಹಾಕಿದ ಮಣ್ಣು ತೆರವು

July 3, 2020
1:07 PM

ಸುಳ್ಯ: ಸುಳ್ಯ-ಕಾಸರಗೋಡು ಅಂತಾರಾಜ್ಯ ರಸ್ತೆಯ ಪರಪ್ಪೆಯಲ್ಲಿ ರಸ್ತೆಗೆ ಅಡ್ಡಲಾಗಿ ಎರಡು ದಿನದ ಹಿಂದ ಕೇರಳ ಹಾಕಲಾಗಿದ್ದ ಮಣ್ಣನ್ನು ಗುರುವಾರ ಸಂಜೆ ತೆರವು ಮಾಡಲಾಗಿದೆ‌. ದೇಲಂಪಾಡಿ ಗ್ರಾಮದ ಕೆಲವು ಭಾಗದ ಜನರಿಗೆ ತಮ್ಮ ದೈನಂದಿನ ಅಗತ್ಯತೆಗಳಿಗೆ ಪರಪ್ಪೆಗೆ ಹೋಗಲು ಇದು ತಡೆಯಾಗಿತ್ತು‌. ಸಾರ್ವಜನಿಕರಿಂದ ತೀವ್ರ ಆಕ್ರೋಶ ಉಂಟಾದ ಹಿನ್ನಲೆಯಲ್ಲಿ ಇದನ್ನು ತೆರವು ಮಾಡಲಾಗಿದೆ.

Advertisement

ಪರಪ್ಪೆ, ಬೆರಿಪ್ಪದವು, ಪಾದೆಕಲ್ ಸೇರಿದಂತೆ ಕಾಸರಗೋಡು- ದಕ್ಷಿಣ ಕನ್ನಡ ಗಡಿಯ ಕೆಲವೊಂದು ರಸ್ತೆಗಳಲ್ಲಿ ಕರ್ನಾಟಕ ಮಾದರಿಯಲ್ಲಿ ಕೇರಳವೂ ಎರಡು ದಿನಗಳ ಹಿಂದೆ ಮಣ್ಣು ಹಾಕಿ ರಸ್ತೆ ಮುಚ್ಚಲಾಗಿತ್ತು‌. ಈ ಮಧ್ಯೆ ಕೇರಳ- ಕರ್ನಾಟಕ ಗಡಿಯ ಎಲ್ಲಾ ರಸ್ತೆಗಳಿಗೆ ಕೇರಳ ಮಣ್ಣು ಹಾಕಿ ಮುಚ್ಚಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಬಂದ ವರದಿ ಮತ್ತು ಜುಲೈ 4 ರ ಬಳಿಕ ಎಲ್ಲಾ ಗಡಿ ಮುಚ್ಚಲಾಗುತ್ತದೆ ಎಂಬ ವದಂತಿ ತೀವ್ರ ಗೊಂದಲಕ್ಕೆ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗಳು ಪ್ರತ್ಯೇಕ ಸ್ಪಷ್ಟೀಕರಣವನ್ನು ನೀಡಿದ್ದಾರೆ‌.

ಈ ಹಿಂದೆ ದೇವರಗುಂಡದಲ್ಲಿ ಬೆಳ್ಳಿಪ್ಪಾಡಿ- ದೇವರಗುಂಡ ರಸ್ತೆಯಲ್ಲಿ ಕರ್ನಾಟಕ ಮಣ್ಣು ಹಾಕಿದ ಕಾರಣ ದೇಲಂಪಾಡಿ ಭಾಗದ ಹಲವು ಪ್ರದೇಶದ ಜನರಿಗೆ ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸಲು ಸಮಸ್ಯೆಯಾಗಿತ್ತು. ಪಡಿತರ, ಬ್ಯಾಂಕಿಂಗ್, ಔಷಧಿ ಮತ್ತಿತರ ಅಗತ್ಯತೆಗಳಿಗೆ ಪರಪ್ಪೆ ಮತ್ತಿತರ ಕಡೆಗಳಿಗೆ ಹೋಗಲಾಗದೆ ತ್ರಿಶಂಕು ಸ್ವರ್ಗದಲ್ಲಿ ಸಿಲುಕಿತ್ತು. ಇದರ ವಿರುದ್ಧ ತೀವ್ರ ಜನಾಕ್ರೋಶ ಮತ್ತು ಮಣ್ಣು ತೆರವು ಮಾಡಲು ಒತ್ತಾಯ ಉಂಟಾದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ದೇವರಗುಂಡದಲ್ಲಿ ಹಾಕಿದ್ದ ಮಣ್ಣು ತೆರವು ಮಾಡಲು ಆದೇಶ ನೀಡಿದ ಮಣ್ಣನ್ನು ತೆರವು ಮಾಡಲಾಗಿದೆ. ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆಯೂ ಆರಂಭವಾದ ಹಿನ್ನಲೆಯಲ್ಲಿ ಸಚಿವರ ಸೂಚನೆಯ ಮೇರೆಗೆ ಸುಳ್ಯ ಸಂಪರ್ಕದ ಆಲೆಟ್ಟಿ- ಕಲ್ಲಪಳ್ಳಿ, ಕೋಲ್ಚಾರ್- ಬಂದಡ್ಕ ಸೇರಿದಂತೆ ರಸ್ತೆಯಲ್ಲಿ ಕರ್ನಾಟಕ ಹಾಕಿದ್ದ ಮಣ್ಣು ತೆರವು ಮಾಡಲಾಗಿ ಚೆಕ್ ಪೋಸ್ಟ್ ಸ್ಥಾಪಿಸಿ ಎಸ್ ಎಸ್ ಎಲ್ ಸಿ ಮಕ್ಕಳ ಪ್ರಯಾಣಕ್ಕೆ ಅನುವು ಮಾಡಿ ಕೊಡಲಾಗಿತ್ತು. ಇದೀಗ ಈ ರಸ್ತೆಗಳಲ್ಲಿ ಕೇರಳ ಮಣ್ಣು ಹಾಕಿ ಮುಚ್ಚಿದೆ ಎಂಬ ವರದಿಗಳು ಜನರಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ರಸ್ತೆ ಮುಚ್ಚುಗಡೆ ಕುರಿತ ವರದಿಗಳು, ಊಹಾಪೋಹಗಳು ತೀವ್ರ ಗೊಂದಲ, ಗಡಿ ಪ್ರದೇಶದ ಜನರಲ್ಲಿ ಆತಂಕ ಸೃಷ್ಠಿಸಿದೆ‌. ಅಲ್ಲದೆ ಜುಲೈ 4ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ಬಳಿಕ ಜಿಲ್ಲೆಯ ಎಲ್ಲಾ ಗಡಿ ರಸ್ತೆಗಳನ್ನು ಮತ್ತೆ ಸಂಪೂರ್ಣ ಮುಚ್ಚಲು ನಿರ್ಧರಿಸಿದೆ ಎಂಬ ವದಂದಿಯೂ ಹರಿದಾಡಿತ್ತು‌. ಈ ಹಿನ್ನಲೆಯಲ್ಲಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಪ್ರತ್ಯೇಕ ಸ್ಪಷ್ಟನೆ ನೀಡಿದ್ದಾರೆ.

ಕೇರಳ ಗಡಿ ಬಂದ್ ಕುರಿತ ವದಂತಿ ನಂಬಬೇಡಿ: ದ. ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿರುವ ಕಾರಣದಿಂದ ಕೇರಳದ ಎಲ್ಲಾ ಗಡಿಯನ್ನು ಮತ್ತೆ ಬಂದ್‌ ಮಾಡಲಾಗುತಿದೆ ಎಂಬುದು ವದಂತಿಯಾಗಿದ್ದು, ಈ ಬಗ್ಗೆ ಯಾರೂ ಗಮನ ಕೊಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ಪಷ್ಟನೆ ನೀಡಿದ್ದಾರೆ.
ಆ ರೀತಿಯ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಏನೇ ಇದ್ದರೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಯಾರೂ ಗೊಂದಲ ಮೂಡಿಸುವ ಸುಳ್ಳು ಸುದ್ದಿ ಹರಡಬಾರದು ಎಂದು ಅವರು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲಾಧಿಕಾರಿ ಸ್ಪಷ್ಟನೆ:
ಕಾಸರಗೋಡು ಜಿಲ್ಲಾಡಳಿತ ಕೇರಳ ಗಡಿಯನ್ನು ಸಂಪರ್ಕಿಸುವ ರಾಜ್ಯದ ಎಲ್ಲ ರಸ್ತೆಗಳನ್ನು ಮಣ್ಣು ಹಾಕಿ ಬಂದ್‌ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರಲ್ಲಿ ಸತ್ಯಾಂಶವಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಗಡಿಯ ರಸ್ತೆಗಳನ್ನು ಮುಚ್ಚುವ ಬಗ್ಗೆ ಹೊಸದಾಗಿ ಜಿಲ್ಲಾಡಳಿತ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಲಾಕ್‌ಡೌನ್ ಆರಂಭದಲ್ಲಿ ಬಂದ್ ಮಾಡಿದ್ದ ರಸ್ತೆಗಳನ್ನು ಮಾತ್ರ ಈಗಲೂ ಬಂದ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಿಶ್ರ ಕೃಷಿಯತ್ತ ಮಲೆನಾಡಿನ ರೈತನ ಹೆಜ್ಜೆ ಅನಿವಾರ್ಯ
February 21, 2026
10:19 AM
by: ಮಹೇಶ್ ಪುಚ್ಚಪ್ಪಾಡಿ
ನಂದಿನಿ ಉತ್ಪನ್ನಗಳ ವಿರುದ್ಧದ ವದಂತಿ ನಂಬಬೇಡಿ : ಗ್ರಾಹಕರಿಗೆ ಕೆಎಂಎಫ್ ಮನವಿ
February 21, 2026
10:03 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಗನ್ ಪರವಾನಗಿ : ಶೀಘ್ರದಲ್ಲೇ ಆನ್ಲೈನ್ ವ್ಯವಸ್ಥೆ ಜಾರಿ – ಜಿಲ್ಲಾಧಿಕಾರಿ ದರ್ಶನ್ ಎಚ್.ವಿ
February 21, 2026
9:59 AM
by: ದ ರೂರಲ್ ಮಿರರ್.ಕಾಂ
ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!
February 20, 2026
10:26 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror