ಯಕ್ಷಗ್ರಾಮದ ಮುಕುಟ ಮಣಿಗೆ ಅಮೃತ ಸಂಭ್ರಮ

May 8, 2019
7:00 AM

ಸುಳ್ಯ: ಅದೊಂದು ಕಾಲವಿತ್ತು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿಪ್ರದೇಶವಾದ ದೇಲಂಪಾಡಿಯಲ್ಲಿ ಯಕ್ಷಗಾನ ಕಲೆಯನ್ನು ಕಲಿಯದವರು, ಅದರ ಬಗ್ಗೆ ಆಸಕ್ತಿ ಇಲ್ಲದವರು ಯಾರೂ ಇಲ್ಲ ಎಂಬ ಸ್ಥಿತಿಯಿದ್ದ ದಿನಗಳು. ಯಕ್ಷಗಾನದ ಬಗ್ಗೆ ಆಸಕ್ತಿ, ಅರಿವು ಇರುವವರೇ ಎಲ್ಲರೂ, ಪ್ರತಿ ಮನೆಯಲ್ಲೂ ಯಕ್ಷಗಾನವನ್ನು ಬಲ್ಲವರು, ಕಲಾವಿದರು ತುಂಬಿದ್ದರು.

ಆಧುನಿಕ ಕಲೆಗಳ ಮತ್ತು ಮಾಧ್ಯಮಗಳ ಭರಾಟೆಯಲ್ಲೂ ದೇಲಂಪಾಡಿಯ ಯಕ್ಷಗಾನ ಪ್ರೀತಿಗೇನೂ ಕಮ್ಮಿಯಾಗಿಲ್ಲ. ಯಕ್ಷಗಾನ ಗ್ರಾಮವೆಂದೇ ಪ್ರಸಿದ್ಧವಾದ ದೇಲಂಪಾಡಿಗೆ ಮುಕುಟಮಣಿಯಾಗಿ ಬೆಳಗುವ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘಕ್ಕಿದು ಅಮೃತ ಸಂಭ್ರಮ. ಭೂರಮೆಯ ಸ್ವರ್ಗದಂತಿರುವ ಉಭಯ ರಾಜ್ಯಗಳ ಸಾಂಸ್ಕೃತಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಈ ಚಿಕ್ಕ ಮತ್ತು ಚೊಕ್ಕ ಗ್ರಾಮದಲ್ಲಿ ಯಕ್ಷಗಾನದ ಕಂಪನ್ನು ಅರಳಿಸಿದ ಮತ್ತು ಗ್ರಾಮದ ಪ್ರತಿಯೊಬ್ಬರಲ್ಲೂ ಪ್ರಾಣ ವಾಯುವಿನಂತೆ ಯಕ್ಷಪ್ರೇಮವನ್ನು ಬಿತ್ತಿದ ಕೀರ್ತಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘಕ್ಕಿದೆ.

 

 

ಯಕ್ಷಗಾನ ಶಾಲೆ:

ಯಕ್ಷಗಾನವನ್ನು ಕಲಿಸಲೆಂದು ಏಳೂವರೆ ದಶಕಗಳ ಹಿಂದೆ ಸ್ಥಾಪಿತವಾದ ಶಾಲೆ ಬನಾರಿ ಯಕ್ಷಗಾನ ಕಲಾ ಸಂಘ. ಯಕ್ಷಗಾನ ಕಲೆಯ ಅನನ್ಯ ಆರಾಧಕರೂ, ಕಲಾವಿದರೂ, ಪ್ರಸಂಗ ಸಾಹಿತಿಗಳೂ, ಯಕ್ಷಗಾನ ಗುರುಗಳೂ ಆಗಿದ್ದ ದಿ.ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ 1944 ರಲ್ಲಿ ಈ ಯಕ್ಷ ಕಲಾಶಾಲೆಯನ್ನು ಸ್ಥಾಪಿಸಿ ದೇಲಂಪಾಡಿಯನ್ನು ಕಲಾ ಗ್ರಾಮವನ್ನಾಗಿಸಿದರು. ಉಚಿತವಾಗಿ ತರಬೇತಿ ನೀಡಿ ಸ್ವಂತ ಕಲಾ ತಂಡವನ್ನು ಕಟ್ಟಿ ಅತಿಥಿ ಕಲಾವಿದರನ್ನೂ ಸೇರಿಸಿ ತಾಳಮದ್ದಳೆಗಳನ್ನೂ, ಯಕ್ಷಗಾನ ಬಯಲಾಟವನ್ನೂ ನಡೆಸಲು ಪ್ರಾರಂಭಿಸಿದರು. ಸ್ವಾತಂತ್ರ್ಯಾಪೂರ್ವದಲ್ಲಿ ಆರಂಭವಾದ ಯಕ್ಷ ಪರಂಪರೆ ನಿರಂತರವಾಗಿ ಇಂದಿಗೂ ಮುಂದುವರಿದಿದೆ. ಕಳೆದ ಏಳೂವರೆ ದಶಕಗಳಲ್ಲಿ ಅಸಂಖ್ಯ ಮಂದಿ ಕಲಾವಿದರು ಗೆಜ್ಜೆ ಕಟ್ಟಿ ಈ ಮಣ್ಣನ್ನು ಪಾವನಗೊಳಿಸಿದ್ದಾರೆ. ವಿಷ್ಣುಭಟ್ಟರು ತನ್ನ ಮನೆಯ ಚಾವಡಿಯಲ್ಲಿ ತರಬೇತಿ ಆರಂಭಿಸಿದ ಕಲಾ ಸಂಘವು ನಿರಂತರ 75 ವರ್ಷಗಳ ಕಾಲ ತನ್ನ ಕಲಾ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ.

ಇಂದಿಗೂ ನಿರಂತರ ಯಕ್ಷ ಅಭ್ಯಾಸ:

ಹಿಂದೆಲ್ಲ ನೂರಕ್ಕೂ ಹೆಚ್ಚು ಮಂದಿ ಬನಾರಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಅಭ್ಯಾಸಕ್ಕೆ ಬರುತ್ತಿದ್ದರು. ಈಗಲೂ ಕೇಂದ್ರದಲ್ಲಿ ಹಲವು ಮಂದಿ ಆಸಕ್ತರು ಯಕ್ಷ ಅಭ್ಯಾಸಕ್ಕೆ ಬರುತ್ತಾರೆ. ಭಾಗವತಿಕೆ, ಚೆಂಡೆ, ಮದ್ದಳೆ, ಅರ್ಥಗಾರಿಕೆಗಳ ಅಭ್ಯಾಸ, ನೃತ್ಯ ಕಲಿಯುವಿಕೆ ಇಲ್ಲಿಯ ನಿರಂತರ ಪ್ರಕ್ರಿಯೆ. ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರೂ ಇಲ್ಲಿ ಯಕ್ಷಗಾನ ಕಲಿತಿದ್ದಾರೆ. ಶ್ರೀ ಕೃಷ್ಣನ ಸಾನ್ನಿಧ್ಯವಿರುವ ಕೇಂದ್ರವಾಗಿರುವ ಬನಾರಿ ಯಕ್ಷಗಾನ ಸಂಘದಲ್ಲಿ ಅಭ್ಯಾಸದ ಜೊತೆಗೆ ತಾಳಮದ್ದಳೆ, ಯಕ್ಷಗಾನ ಬಯಲಾಟಗಳು ನಡೆಯುತ್ತವೆ. ಹರಕೆ ರೂಪದಲ್ಲಿಯೂ ತಾಳಮದ್ದಳೆಗಳು ನಡೆಯುತ್ತದೆ.


ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಪ್ರತಿ ವರ್ಷ ಅದ್ದೂರಿ ವಾರ್ಷಿಕೋತ್ಸವ, ಕೀರಿಕ್ಕಾಡು ಸಂಸ್ಮರಣೆ, ಕಲಾವಿದರ ಸನ್ಮಾನ ನಡೆಸಲಾಗುತಿದೆ. ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ ಅವರ ಹೆಸರಿನಲ್ಲಿ ಕೀರಿಕ್ಕಾಡು ಪ್ರಶಸ್ತಿಯನ್ನು ನೀಡಿ ಯಕ್ಷ ಕಲಾವಿದರನ್ನು ಸನ್ಮಾನಿಸಲಾಗುತ್ತದೆ. ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ ಅವರ ಮಕ್ಕಳೂ ಯಕ್ಷಗಾನದ ಮೇರು ಕಲಾವಿದರೂ ಆದ ವನಮಾಲಾ ಕೇಶವ ಭಟ್, ಡಾ.ರಮಾನಂದ ಬನಾರಿ, ವಿಶ್ವವಿನೋದ ಬನಾರಿ ಮತ್ತು ತಂಡ ಕಲಾ ಸಂಘದ ಚಟುವಟಿಕೆಗಳನ್ನು ನಡೆಸುತ್ತಿದ್ದು ಮಾಸ್ತರ್ ವಿಷ್ಣುಭಟ್ ಅವರ ಯಕ್ಷಗಾನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಯಕ್ಷಗಾನ ಸಂಶೋಧನಾ ಕೇಂದ್ರ:

ಕರಾವಳಿ ಜಿಲ್ಲೆಯಲ್ಲಿಯೇ ಸುಧೀರ್ಘ ಕಾಲ ಯಕ್ಷಗಾನ ಸೇವೆ ಮಾಡಿದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘವು ಯಕ್ಷ ಕಲೆಯ ಸಂಶೋಧನಾ ಕೇಂದ್ರವಾಗಬೇಕು ಎಂಬ ಆಶಯವನ್ನು ಬನಾರಿಗೆ ಅತೀ ಸಮೀಪದ ದೇವರಗುಂಡದವರಾದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಬಹಳ ವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು. ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬನಾರಿಯ ಯಕ್ಷಗಾನ ಸಂಘವನ್ನು ಅಧ್ಯಯನ ಕೇಂದ್ರವಾಗಿಸುವ ನಿಟ್ಟಿನಲ್ಲಿ ಅನುದಾನವನ್ನು ಘೋಷಣೆ ಮಾಡಿದ್ದರು. ಸರಕಾರದ ಆರ್ಥಿಕ ನೆರವಿನೊಂದಿಗೆ ಯಕ್ಷಗಾನ ಕಲಾ ಸಂಘಕ್ಕೆ ಕೆಲವು ವರ್ಷಗಳ ಹಿಂದೆ ಸುಂದರವಾದ ಕಟ್ಟಡ ತಲೆಯೆತ್ತಿದೆ. ಜೊತೆಗೆ ಈ ಯಕ್ಷಗಾನ ಕಲಾ ಶಾಲೆಯನ್ನು ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಯೋಜನೆಯನ್ನೂ ರೂಪಿಸಲಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ
July 19, 2026
10:17 PM
by: ದ ರೂರಲ್ ಮಿರರ್.ಕಾಂ
ತೆಂಗಿನ ನಾಡಿನಲ್ಲಿ ಅಡಿಕೆ ಕ್ರಾಂತಿ….! ತುಮಕೂರಿನಲ್ಲಿ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ
July 19, 2026
8:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror