ಪುತ್ತೂರು: ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಬದಲಾವಣೆಯ ಕೇಂದ್ರಗಳಾಗಬೇಕು. ಶ್ರೇಷ್ಠ ಗುರಿಯನ್ನು ಸಾಧಿಸುವುದಕ್ಕೆ ಶಿಕ್ಷಣ ಒಂದು ಮಾಧ್ಯಮ. ಆದರೆ ಶಿಕ್ಷಣ ಸಂಸ್ಥೆಗಳ ಆಡಳಿತ ಚುಕ್ಕಾಣಿ ಹಿಡಿದವರು ಸಂಸ್ಥೆಯ ಬಗೆಗೆ ಅಪಾರವಾದ ಕಾಳಜಿ, ಪ್ರೀತಿ ತೋರಿದಾಗ ಮಾತ್ರ ಸಂಸ್ಥೆ ಒಳ್ಳೆಯ ರೀತಿಯಲ್ಲಿ ಬೆಳವಣಿಗೆ ಕಾಣುವುದಕ್ಕೆ ಸಾಧ್ಯ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವಿಧ ವಿವೇಕಾನಂದ ಸಂಸ್ಥೆಗಳ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗಾಗಿ ಆಯೋಜಿಸಿದ ಒಂದು ದಿನದ ಚಿಂತನ ಬೈಠಕ್ನಲ್ಲಿ ಭಾಗವಹಿಸಿ ಮಂಗಳವಾರ ಮಾತನಾಡಿದರು. ಇಂದು ಪ್ರಪಂಚದಾದ್ಯಂತ ಬದಲಾವಣೆಗಳು ಸಾಧ್ಯವಾಗುತ್ತಿವೆ. ಅಂತಹ ಅನೇಕ ಬದಲಾವಣೆಗಳಿಗೆ ಭಾರತವೇ ಕಾರಣವಾಗುತ್ತಿರುವುದು ಮತ್ತು ನಮ್ಮ ದೇಶ ವಿಶ್ವಗುರು ಸ್ಥಾನಕ್ಕೇರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಇಂತಹ ಸಂದರ್ಭದಲ್ಲಿ ನಾವೂ ಈ ದೇಶದೊಂದಿಗೆ ಹೆಜ್ಜೆ ಹಾಕಬೇಕು. ಮೆಕಾಲೆ ಶಿಕ್ಷಣದಿಂದ ಮಹರ್ಷಿ ಶಿಕ್ಷಣದೆಡೆಗೆ ನಮ್ಮ ಮಕ್ಕಳನ್ನು ಒಯ್ದಾಗ ಈ ದೇಶದ ಅಸ್ಮಿತೆ ಉಳಿದುಕೊಳ್ಳಲು ಸಾಧ್ಯ ಎಂದರು.
ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ ವಿವೇಕಾನಂದ ವಿದ್ಯಾವರ್ಧಕ ಸಂಘವನ್ನು ಅನೇಕರು ನಡೆಸಿಕೊಂಡು ಬಂದಿದ್ದಾರೆ. ಆಯಾ ಕಾಲಘಟ್ಟದಲ್ಲಿ ಸಂಸ್ಥೆಯ ಜವಾಬ್ಧಾರಿ ಹೊತ್ತವರು ಆಯಾ ಕಾಲದ ಸವಾಲುಗಳನ್ನೆದುರಿಸಿ ಮುಂದುವರಿಯುವುದಕ್ಕೆ ಪ್ರಯತ್ನ ಪಡಬೇಕು. ಸಮಾಜದ ಅನೇಕರು ವಿವೇಕಾನಂದ ಸಂಸ್ಥೆಗಳಿಗಾಗಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುವ ಎಲ್ಲಾ ವಿದ್ಯಾ ಸಂಸ್ಥೆಗಳ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು. ಕಾರ್ಯಕ್ರಮ ಆರಂಭಕ್ಕೆ ಮುನ್ನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಥೆಗಳ ಬಗೆಗೆ ವೀಡಿಯೋ ಹಾಗೂ ಪಿಪಿಟಿ ಪ್ರದರ್ಶನ ನಡೆಯಿತು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಧ್ಯಕ್ಷ ಅಚ್ಯುತ ನಾಯಕ್ ಅವರು ವೈಯಕ್ತಿಕ ಗೀತೆ ಹಾಗೂ ಪ್ರೇರಣಾ ಗೀತೆಯನ್ನು ಪ್ರಸ್ತುತಪಡಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಚಿಂತನ ಬೈಠಕ್"