ಸುಳ್ಯ:ರಾಜ್ಯ ಸರಕಾರದಲ್ಲಿ ಸಚಿವರಾಗಿ, ಮಂತ್ರಿಯಾಗಿ ಬನ್ನಿ ಎಂದು ಹಲವಾರು ಮಂದಿ ಹಾರೈಸಿದ್ದಾರೆ. ಆದರೆ ಅಧಿಕಾರಕ್ಕಾಗಿ ಎಂದೂ ಬೇಡಿಕೆ ಇಡುವುದಿಲ್ಲ.. ಅಧಿಕಾರ ಅರಸಿ ಬಂದರೆ ವಿನಮ್ರತೆಯಿಂದ ಸ್ವೀಕರಿಸುತ್ತೇನೆ.. ಹೀಗೆ ತನ್ನ ಮನದಾಳವನ್ನು ಬಿಚ್ಚಿಟ್ಟವರು ಶಾಸಕ ಎಸ್.ಅಂಗಾರ.
ಸುಳ್ಯದಲ್ಲಿ ನಡೆದ ಸ್ಚಾತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರಕಾರದಲ್ಲಿ ಅಂಗಾರರು ಸಚಿವರಾಗುತ್ತಾರೆ ಎಂಬ ಚರ್ಚೆಗಳು ಗರಿಗೆದರುತ್ತಿರುವ ಸಂದರ್ಭದಲ್ಲಿ ಅವರು ತಮ್ಮ ಮನದಾಳವನ್ನು ಬಿಚ್ಚಿಟ್ಟರು.
ಅಧಿಕಾರದ ಹಿಂದೆ ಇದುವರೆಗೆ ಹೋಗಿಲ್ಲ ಇನ್ನೂ ಹೋಗುವುದಿಲ್ಲ. ಸಂಘಟನೆಯ ತತ್ವ ಸಿದ್ಧಾಂತಗಳ ಆಧಾರದಲ್ಲಿ ಬೆಳೆದು ಬಂದು ಸಂಘಟನೆಯ ಆಶಯದಂತೆ ಜನರ ಆಶೀರ್ವಾದದೊಂದಿಗೆ ಜನಪ್ರತಿನಿಧಿಯಾಗಿದ್ದೇನೆ. ಸಂಘಟನೆಗೆ ಅದರದ್ದೇ ಆದ, ತತ್ವ, ವಿಚಾರ, ಉದ್ದೇಶಗಳಿವೆ. ನನಗೆ ಅಧಿಕಾರಕ್ಕಿಂತ ಅದೇ ಮುಖ್ಯ. ಆಧಿಕಾರ ದೊರೆತರೆ ಅನೇಕ ಅಪೇಕ್ಷೆಗಳು ಸವಾಲುಗಳು ಇದೆ, ಅದರ ಬಗ್ಗೆ ಅರಿವಿದೆ ಆ ಸವಾಲುಗಳನ್ನು ಎದುರಿಸಲು ಅಪೇಕ್ಷೆಗಳನ್ನು ಈಡೇರಿಸಲು ಜನರ ಸಹಕಾರ ಅತೀ ಮುಖ್ಯ ಎಂದು ಅವರು ಹೇಳಿದರು.
ಮಂತ್ರಿಯಾಗಿ ಹಿರಿಯರ ಆಶೀರ್ವಾದ:
ಸ್ವಾತಂತ್ರ್ಯ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ವಾಣೀಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮತ್ತಿತರರು ಅಂಗಾರರು ಸಚಿವರಾಗಲಿ ಎಂದು ಹಾರೈಸಿದರು.