ಬರಹ : ಡಾ.ಚಂದ್ರಶೇಖರ ದಾಮ್ಲೆ , ಸುಳ್ಯ
ತುಳುನಾಡಿನ ಜಾನಪದ ಬದುಕಿನಲ್ಲಿ ಆಟಿ ತಿಂಗಳೆಂದರೆ ಅತಿ ಮಳೆಯಿಂದಾಗಿ ಬಡತನದ ತಿಂಗಳು. ಕೃಷಿಕರ ಪಾಲಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಕಷ್ಟದ ದಿನಗಳ ಕಾಲ. ತುಳು ಸಂಪ್ರದಾಯದಲ್ಲಿ ಮದುವೆಯಾದ ವರ್ಷ ಮಗಳು ತವರಿಗೆ ಬಂದು ಒಂದು ತಿಂಗಳು ಸುಖವಾಗಿ ಕಳೆಯುವ ಸಂಪ್ರದಾಯ ಇದ್ದ ತಿಂಗಳು. ಅನೇಕ ರೋಗಗಳು ಹರಡುವ ಭಯ ಹುಟ್ಟಿಸುತ್ತಿದ್ದ ಆಟಿ ತಿಂಗಳು ದುಸ್ವಪ್ನದಂತೆ ಕಳೆದು ಹೋಗಬೇಕಾಗಿತ್ತು.
ಈ ಆಟಿ ತಿಂಗಳಲ್ಲಿ ಅಮಾವಾಸ್ಯೆಯ ದಿನ ಬಹಳ ಮುಖ್ಯವಾದದ್ದು. ಏಕೆಂದರೆ ಆ ದಿನ ಹಾಲೆ ಮರದಲ್ಲಿ ಪ್ರಕೃತಿಯ ಎಲ್ಲ ಔಷಧಗಳು ಬಂದು ಸೇರುತ್ತವೆ ಎಂಬ ನಂಬಿಕೆ ಇದೆ. ಅದರ ಪ್ರಕಾರ ಆ ದಿನ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಹಾಲೆ ಮರದ ಬಳಿಗೆ ಹೋಗಿ ಕಲ್ಲಿನಲ್ಲಿ ಜಜ್ಜಿ ಅದರ ಕೆತ್ತೆಯನ್ನು ತಂದು ಗುದ್ದಿ ರಸತೆಗೆದು ಬರೆ ಹೊಟ್ಟೆಗೆ ಕುಡಿದರೆ ಅದು ಸರ್ವರೋಗ ನಿರೋಧಕ ಎಂಬ ನಂಬಿಕೆ ಇದೆ. ಈ ರೀತಿ ತಮ್ಮ ಆರೋಗ್ಯದ ಬಗ್ಗೆ ರೋಗನಿರೋಧಕ ಪ್ರಯೋಗ ನಡೆಯುತ್ತಿತ್ತು. ಈಗ ಇದು ಮರೆತು ಹೋಗಿರುವ ಸಂಗತಿಯಾಗಿದೆ. ಆಧುನಿಕ ಮಾತ್ರೆ ಸೀರಪ್ ಇಂಜೆಕ್ಷನ್ ಗಳ ಎದುರು ಮೂಢನಂಬಿಕೆ ಎನಿಸಿದೆ. ಆದರೆ ನನಗಿನ್ನೂ ವಿಶ್ವಾಸವಿದೆ. ನಾನು ಪ್ರತಿ ವರ್ಷ ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಲೆ ಮರದ ರಸ ಕುಡಿಯುವ ವಾಡಿಕೆ ಇಟ್ಟುಕೊಂಡಿದ್ದೇನೆ.
ಪಂಚಾಂಗ ಪ್ರಕಾರ ಇಂದು (1-8-2019) ಆಟಿ ಅಮಾವಾಸ್ಯೆ. ಭಾರೀ ಮಳೆ ಇರಬೇಕಿತ್ತು. ಆದರೆ ಎರಡು ದಿನಗಳಿಂದ ಮಳೆ ಇಲ್ಲ. ಸೂರ್ಯೋದಯಕ್ಕೆ ಮೊದಲೇ ಹಾಲೆ ಮರದ ಕೆತ್ತೆ ತರಲು ಹೋದರೆ ಮರದ ತೊಗಟೆ ಮಳೆ ಇದ್ದರೆ ಇರುವಂತೆ ಮೃದುವಾಗಿಲ್ಲ. ಗಟ್ಟಿಯಾಗಿತ್ತು. ಮರದ ಮೈ ಇಡೀ ಇರುವೆಗಳ ಓಡಾಟ. ಅತಿಯಾಗಿ ಸೊಳ್ಳೆಗಳ ಕಾಟ. ಪ್ರಕೃತಿ ನಿಯಮದಂತೆ ಬರಬೇಕಿದ್ದ ಮಳೆ ಬಾರದೆ ವಾತಾವರಣ ಕಲುಷಿತಗೊಂಡಿದೆ. ಹೀಗೇ ಆದರೆ ಡಿಸೆಂಬರ್ ನಿಂದಲೇ ಬರಗಾಲ ಬಾಧಿಸೀತು. ಹಾಗಾಗಿ ಇನ್ನೀಗ ಬಂದಷ್ಟು ಮಳೆ ನೀರನ್ನು ಇಂಗು ಗುಂಡಿಗಳನ್ನು ಮಾಡಿ ಇಂಗಿಸಿಕೊಳ್ಳುವುದು ಒಳ್ಳೆಯದು.
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…
ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್ ಮತ್ತು ಆಹಾರ ವಿತರಣೆ…
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…