ಆದಿ-ಅಂತ್ಯ ದ ದೂರ ಹತ್ತಿರವಾಗುತ್ತಿದೆ…..! “ಆ” ದೀರ್ಘವಾಗಿದೆ….”ಅ” ಹ್ರಸ್ವವಾಗಿದೆ….

August 11, 2020
11:32 AM
ನೆನಪಿದೆಯೇ ನಮಗೆ,ಸುಮಾರು ನಲ್ವತ್ತು ವರ್ಷ ಹಿಂದಿನ ಆ  ನಮ್ಮ ಬಾಲ್ಯದ ದಿನಗಳು. ಆಹಾ,ಪ್ರಕೃತಿಗೆ ಎಷ್ಟು ನಿಕಟವಾಗಿದ್ದೆವು ಅಲ್ಲವೇ. ಪ್ರತೀ ಕ್ಷಣಗಳಲ್ಲೂ ಈ ಮಣ್ಣಿನ ಕಣ ಕಣಗಳಲ್ಲಿ ಬೆರೆಯುತ್ತಾ…..ಬಿದ್ದ ಎಲ್ಲಾ ಮಳೆ ನೀರನ್ನೂ ಅನುಭವಿಸುತ್ತಾ…..ಬೀಸುವ ಎಲ್ಲಾ ತಂಗಾಳಿಯನ್ನೂ ಆಹ್ಲಾದಿಸುತ್ತಾ…. ರವಿ ಬೀರಿದ ಕಿರಣಗಳಿಂದ  ಶಕ್ತಿ ಸಂಚಯಿಸಿಕೊಳ್ಳುತ್ತಾ ಯಾವುದೇ ಬೇಡಗಳೆಂಬ ಕಟ್ಟುಪಾಡುಗಳಿಲ್ಲದೆ ಸ್ವಚ್ಚಂದ ದಿನಗಳನ್ನು ಅನುಭವಿಸಿದೆವಲ್ಲಾ. ಹೌದು…..
ಹಾಗೇ ಅಡ್ಡಾಡುತ್ತಾ ಅಂಗಳದಲ್ಲಿ ಹೋಗುತ್ತಿರುವಾಗ ಅದರಷ್ಟಕ್ಕೇ ಬೆಳೆದು ನೀರ ಹಿಡಿದಿಟ್ಟ  ಹುಲ್ಲಕಡ್ಡಿಯ ಬೇರು  ನನ್ನನ್ನೇ ನೋಡುತ್ತಾ, ಬಾಲ್ಯದ ದಿನಗಳತ್ತ ನನ್ನ ಎಳೆದೊಯ್ಯಿತು. ಬಾಲ್ಯದಲ್ಲಿ ಈ ತರದ  ಹುಲ್ಲ ಬೇರನ್ನು ಬಾಯಿಗಿಟ್ಟು ಚೀಪದೆ ಬೆಳೆದವರ್ಯಾರಿದ್ದಾರೆ….ಆಹಾ…ಅದರ ಖುಷಿಯೇ ಬೇರೆ….ಈ ಬೇರುಗಳ ಹುಡುಕುತ್ತಾ ದುಂಬಿಗಳಂತೆ ತಾ ಮುಂದು  ನಾ ಮುಂದು ಎಂದು ಓಡಾಡಿದ ನೆನಪುಗಳು ಮನಸಿನಾಳದಲ್ಲಿ ಇನ್ನೂ ಹಸಿರಾಗಿಲ್ಲವೇ….
 ಹೌದಲ್ಲಾ…,  ಆ ದಿನಗಳಲ್ಲಿ  ತಮ್ಮ ತಂಗಿಯರೊಡಗೂಡಿ ತೋಟ ಗುಡ್ಡ ಬೆಟ್ಟಗಳಲ್ಲಿ ಅಡ್ಡಾಡುತ್ತಾ…ಮರಗಿಡಗಳನ್ನೇರುತ್ತಾ ಕಂಡ ಕಂಡ ಹಣ್ಣು, ಕಾಯಿ,ಎಲೆಗಳನ್ನು ಸವಿಯುತ್ತಾ ,ನೀರಾಟ,ಮಣ್ಣಾಟ,ಕಲ್ಲಾಟ,ಕಳ್ಳಾಟ, ಮನೆಯಾಟ,ಓಡಾಟ ಮುಂತಾಗಿ ಆಟವಾಡಿದ ದಿನಗಳ ಖುಷಿಯೇ ಖುಷಿ…. ಆದರೂ ಯಾವುದೇ ಶೀತ ಜ್ವರಗಳು ಬಾಧಿಸುತ್ತಿರಲಿಲ್ಲ…. ಬಂದರೂ ಅದರಷ್ಟಕ್ಕೇ ನೆಂಟನಂತೆ ಬಂದು ಹೋಗುತ್ತಿತ್ತು ಹೊರತು ಬೇರೆ ಬೇರೆ ರೂಪ ತಾಳಿ ಈಗಿನಂತೆ ಝಂಡಾ ಹೂಡುತ್ತಿರಲಿಲ್ಲ…..ಇರಲಿ….ಇದೆಲ್ಲಾ ಮನಸಿನ ಮೂಲೆಗಳಲ್ಲಿ ಹೊಯ್ದಾಡಿದಂತಾದಾಗ…ಇಂತಹ ನಿಜ ಲೋಕ  ಈಗಿನ ಮಕ್ಕಳಿಗಿದೆಯೇ,ಎಲ್ಲಿ ಈ ಜೀವನ ಸಂಕೋಲೆಯ ಕೊಂಡಿಗಳು ಸವೆಯುತ್ತಾ ಬಿಟ್ಟು ಹೋಯಿತು …ಎಂದು ಮನಸ್ಸು ಕೇಳಿತು.
 ಹೌದಲ್ಲಾ…., ನಿಧಾನವಾಗಿ ನಾವು ಬೆಳೆಯುತ್ತಾ ಬೆಳೆಯುತ್ತಾ…. ಮಕ್ಕಳಾಗಿದ್ದವರು ಗೃಹಸ್ಥಾರಾಗುತ್ತಾ , ನಮಗೂ ಮಕ್ಕಳಾದಾಗ ನಮ್ಮ ಮನಸ್ಥಿತಿ ಯಾಕಿಷ್ಟು ಬದಲಾಯಿತೂ…. ಇದ್ಯಾಕೆ ಹೀಗಾಯಿತೂ ಎಂದು ಒಂದು ಹಿನ್ನೋಟ ಮಾಡಿದೆವೇ ನಾವು.ನಾವೇ ಅಲ್ಲವೇ ಗೊತ್ತಿದ್ದೂ ಗೊತ್ತಿದ್ದೂ ನಮ್ಮ ಕುಡಿಗಳ ಕೈಗೆ ಅವ್ಯಕ್ತ ಬೇಡಿ ತೊಡಿಸಿದವರು. ಪಠ್ಯ,ಓದು , ಶಾಲೆ, ಡಿಗ್ರಿ ,ಉದ್ಯೋಗ, ಉದ್ಯಮ,ಗಳಿಕೆ,ಸಂಪಾದನೆ,ಸ್ಥಾನಮಾನ, ಎಂಬ ಹಾದಿಯನ್ನೇ  ತುಳಿಯುವಂತೆ ಹುಟ್ಟಿದ ಕೂಡಲೇ ಮಗುವಿನ ಕಿವಿಯಲ್ಲಿ ಉಸುರಿದವರು ನಾವೇ ಅಲ್ಲವೇ…. ಈಗಿನ ಸಂಕಷ್ಟದ ಸಮಯದಲ್ಲೂ ಇಡೀ ಮಾನವ ಪ್ರಪಂಚವೇ ಸ್ತಬ್ಧವಾಗಿದ್ದರೂ ನಮ್ಮ ಎಳೆಮನಸಿನ ಕುಡಿಗಳಿಗೆ ಅಂತರ್ಜಾಲದ ಮೂಲಕ ತಥಾಕಥಿತ ತರಗತಿಗಳನ್ನು ನಡೆಸಿ ತರಬೇತುಗೊಳಿಸಿ ಹಣ ಬಾಚುವ ಯಂತ್ರಗಳನ್ನಾಗಿ ಮಾಡುವಲ್ಲಿ  ನಾ ಮುಂದು ನಾ ಮುಂದು ಎಂದು ಓಡುತ್ತಿದ್ದೇವಲ್ಲಾ….ಈ ಓಟದ ವೇಗಕ್ಕೆ ಈ ಹುಲ್ಲ ಬೇರಿನ ನೀರ ಗಟ್ಟಿ, ಮಣ್ಣಿನ ಪರಿಮಳ,ಗಾಳಿಯ ಶೀತಲ ಸಂಚಾರ, ಬಿಸಿಲಿನ ಜೀವ ಚೈತನ್ಯ ,ನೀರಿನ ಸಂಚಲನಾ ಶಕ್ತಿ ನಮ್ಮ ,ನಮ್ಮ ಕುಡಿಗಳ ಅರಿವಿಗೆ ಬರಲು ಎಡೆಯೆಲ್ಲಿದೇ ….ಅಲ್ಲವೇ….. ಹಾಗಾದರೆ ನಾವೇ ಅಲ್ಲವೇ ಯುವ ಕುಡಿಗಳ ಕಣ್ಣೋಟ,ಮನಸಿನ ನೋಟ,ಓಟಗಳಿಗೆ ತಡೆಗೊಡೆ ಕಟ್ಟಿದವರೂ….
ಬದಲಾಗಲೇ ಬೇಕಿದೆ…. ಇಲ್ಲದಾದರೆ ಒಂದೇ ಕ್ಷಣಕ್ಕೆ ನಮ್ಮನ್ನೆಲ್ಲ ಬದಲಿಸಬಲ್ಲ ದೈತ್ಯ ಶಕ್ತಿ ನಮ್ಮ ಮುಂದೆ ಆಗಾಗ ಹಲವು ರೂಪಗಳಲ್ಲಿ ಪ್ರಕಟವಾಗುತ್ತಾ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿದೆಯಲ್ಲಾ……..ಆದರೂ…..ನಮ್ಮ ಓಟ ,ಧಾ‌ವಂತ ಸಾಗುತ್ತಲೇ ಇದೆಯಲ್ಲಾ…. ಕೊನೆಯೆಂದು ಈ ವೇಗಕ್ಕೆ……ನಡೆಯಲಾರೆವೇ ನಾವು ಪ್ರಕೃತಿಯ ಹಿತ ಮಿತ  ತಾಳಕ್ಕೆ…
 ಹೌದಲ್ಲಾ…..,  ಆದಿ-ಅಂತ್ಯ  ದ ಮದ್ಯದ ದೂರ ಹತ್ತಿರವಾಗುತ್ತಿದೆ ಅನಿಸುತ್ತದಲ್ಲಾ…ಆದಿಯಲ್ಲಿ …ದೀರ್ಘವಾಗಿದೆ … ಅಂತ್ಯದಲ್ಲಿ  ಹ್ರಸ್ವವಾಗಿದೆ….. ಅಂದರೆ ದೀರ್ಘ ದಾರಿಯಲ್ಲಿ  ವೇಗದ ಒಟ ಅಂತ್ಯಕ್ಕೆ ಸನಿಹ ಎಂದಾಯಿತಲ್ಲಾ……..  ಆಯ್ಕೆ ನಮ್ಮ ಅಂಗಳದಲ್ಲೇ ಇದೆ ಎಂಬ ಅರಿವು ಮೂಡಬೇಕಿದೆ….
ನಡೆಯಲೊಂದಿದೆ ದಾರಿ ,
ನುಡಿಯಲೊಂದಿದೆ ದಾರಿ
ನಡುವೆ ದಟ್ಟ ಮಂಜು
ನೆಲದ ಮೇಲಿನ ಮಂಜು ಸರಿದೀತು ಹರಿದೀತು
ಮನವ ತುಂಬಿದ ಮಂಜು ಸರಿಯಬೇಕು
ಕೊಂಡ ಕಿರುನಗೆಯುಳಿದು
ದಂಡ ದಿನಗಳು ಕಳೆದು
ಹೊಸ ಚೆಲುವು ಹೊಸ ಶಕ್ತಿ ಮೂಡಬೇಕು…..
– ಕೆ ಎಸ್ ನರಸಿಂಹ ಸ್ವಾಮಿ.
# ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ
September 8, 2026
10:02 PM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ
September 8, 2026
9:38 PM
by: ದ ರೂರಲ್ ಮಿರರ್.ಕಾಂ
‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?
September 8, 2026
9:43 AM
by: ದ ರೂರಲ್ ಮಿರರ್.ಕಾಂ
ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!
September 7, 2026
9:38 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror