Advertisement
ಸುದ್ದಿಗಳು

ಆರು ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘ

Share

ಪುತ್ತೂರು: ಎಪ್ರಿಲ್ ಮೇ ತಿಂಗಳಲ್ಲಿ ಧಗೆ ಏರುತ್ತಿದ್ದಂತೆ ಪರಿಸರ ಸಂರಕ್ಷಿಸಬೇಕು, ಗಿಡಗಳನ್ನು ನೆಡಬೇಕು, ಸಸ್ಯಗಳೇ ನಮ್ಮ ಬದುಕಿನ ಬುನಾದಿ ಎಂಬೆಲ್ಲಾ ಮಾತುಗಳು ಆಗಿಂದಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಜಾಗತಿಕ ತಾಪಮಾನದ ಬಗೆಗೂ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಮಳೆ ಬಂದೊಡನೆ ಮೇ ತಿಂಗಳಲ್ಲಿ ಹೊಮ್ಮಿದ ಉತ್ಸಾಹ ಕುಗ್ಗಿ ಗಿಡ ನೆಡುವ ಕಾರ್ಯ ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತದೆ!
ಆದರೆ ಇಲ್ಲೊಂದು ಸಂಸ್ಥೆಯಿದೆ. ಈ ಸಂಸ್ಥೆ ಪರಿಸರದ ಬಗೆಗಿನ ನಿಜಕಾಳಜಿಯನ್ನು ಸದ್ದಿಲ್ಲದೆ ಕಾರ್ಯರೂಪದಲ್ಲಿ ಕಾಣಿಸುತ್ತಿದೆ. ಹೌದು, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಗಿಡಗಳನ್ನು ಬೆಳೆಸುವ ಕಾಯಕದಲ್ಲಿ ಕಳೆದ ತಿಂಗಳೊಂದರಿಂದ ಕಾರ್ಯಪ್ರವೃತ್ತವಾಗಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಅರುವತ್ತೇಳು ಸಂಸ್ಥೆಗಳಿವೆ. ಅವುಗಳಲ್ಲಿ ಆಯ್ದ ಮೂವತ್ತೈದು ಸಂಸ್ಥೆಗಳು ಕಳೆದ ಕೆಲವು ವರ್ಷಗಳಿಂದ ಗ್ರಾಮವಿಕಾಸ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಪ್ರತಿಯೊಂದು ಸಂಸ್ಥೆಯೂ ಒಂದೊಂದು ಗ್ರಾಮವನ್ನು ಆಯ್ದುಕೊಂಡು ಆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿವೆ. ಕಳೆದ ವರ್ಷ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಸಂಬಂಧಿ ಕಾರ್ಯಾಗಾರಗಳು, ಮೆಡಿಕಲ್ ಚೆಕಪ್‍ಗಳು, ಮನೆಮದ್ದು, ಜಾನುವಾರು ಲಸಿಕೆ ಕಾರ್ಯಕ್ರಮಗಳು, ಯೋಗ ಶಿಬಿರಗಳು ನಡೆದಿದ್ದರೆ ಈ ಬಾರಿ ಯೋಜಿಸಿದ್ದು ಪರಿಸರ ಪ್ರೀತಿ. ಅದರನ್ವಯ ಪ್ರತಿಯೊಂದು ವಿವೇಕಾನಂದ ಸಂಸ್ಥೆಯೂ ತಾನು ಗ್ರಾಮ ವಿಕಾಸಕ್ಕಾಗಿ ಆಯ್ದುಕೊಂಡ ಗ್ರಾಮದೊಂದಿಗೆ ನೆರೆಯ ಮತ್ತೊಂದೂ ಗ್ರಾಮವನ್ನು ಸೇರಿಸಿ ಒಟ್ಟು ಎರಡೆರಡು ಗ್ರಾಮದಲ್ಲಿ ಗಿಡ ನೆಡುವ ಯೋಜನೆ ಸಿದ್ಧವಾಯಿತು.
ಕೇವಲ ಗಿಡ ನೆಡುವುದಷ್ಟೇ ಈ ಯೋಜನೆಯ ಉದ್ದೇಶವಲ್ಲ. ಜತೆಗೆ ಗಿಡ ಮರಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವುದೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಉದ್ದೇಶ. ಈ ಹಿನ್ನೆಲೆಯಲ್ಲಿ ಗ್ರಾಮದ ಕಮ್ಮಿಯೆಂದರೂ 25 ಮನೆಗಳಿಗೆ ತೆರಳಿ ಆ ಮನೆಗೆ ಸಂಬಂಧಿಸಿದ ಜಾಗದಲ್ಲಿ ಕನಿಷ್ಟ ಎರಡು ಗಿಡ ನೆಡಬೇಕೆಂಬ ಯೋಚನೆಯೂ ಬಂತು. ಮಾತ್ರವಲ್ಲದೆ ಆ ಗಿಡಗಳನ್ನು ಜೋಪಾನವಾಗಿ ರಕ್ಷಿಸುವಂತೆ ಆ ಮನೆಯವರ ಬಳಿ ಪ್ರೀತಿಪೂರ್ವಕವಾಗಿ ವಿನಂತಿಸಬೇಕೆಂಬ ನಿರ್ಧಾರವಾಯಿತು. ಮುಂದೆ ನಡೆದದ್ದೆಲ್ಲ ಈಗ ಇತಿಹಾಸ!

ಈ ಬಾರಿ ಸುಮಾರು ಸಾವಿರ ಗಿಡ ನೆಡುವ ಯೋಜನೆ ವಿವೇಕಾನಂದ ವಿದ್ಯಾವರ್ಧಕ ಸಂಘದ್ದು. ಅದಕ್ಕಾಗಿ ವಿವಿಧ ಸರ್ಕಾರಿ ನರ್ಸರಿಗಳಿಂದ ಅಷ್ಟು ಸಂಖ್ಯೆಯ ಗಿಡಗಳನ್ನು ತಂದೂಆಗಿದೆ. ಅವುಗಳಲ್ಲಿ ಸುಮಾರು ಐದೂವರೆ ಸಾವಿರದಷ್ಟು ಗಿಡಗಳನ್ನು ಅದಾಗಲೇ ನೆಟ್ಟೂ ಆಗಿದೆ. ಸದ್ಯದಲ್ಲೇ ಉಳಿದಿರುವ ಒಂದು ಐದುನೂರು ಗಿಡಗಳ ವಿಲೇವಾರಿಯೂ ನಡೆಯಲಿದೆ.

ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಕಡಬ ಹೀಗೆ ಬೇರೆ ಬೇರೆ ತಾಲೂಕುಗಳ ಸುಮಾರು ಐವತ್ತು ಗ್ರಾಮಗಳಲ್ಲಿ ಈ ಗಿಡ ನೆಡುವಕಾಯಕ ನಡೆದಿದೆ. ವಿವಿಧ ವಿವೇಕಾನಂದ ವಿದ್ಯಾಸಂಸ್ಥೆಗಳ ಸುಮಾರು ಆರು ಸಾವಿರ ಮಂದಿ ವಿದ್ಯಾರ್ಥಿಗಳು ಈ ಒಟ್ಟೂ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಬಹುತೇಕ ಪ್ರತಿಯೊಂದು ಗ್ರಾಮದಲ್ಲೂ ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭ ಆಯೋಜಿಸಿ ಗಿಡಗಳ ಅವಶ್ಯಕತೆಗಳ ಬಗೆಗೆ ಸಾರ್ವಜನಿಕರಿಗೆ ಮಾಹಿತಿಯನ್ನೂ ನೀಡಲಾಗಿದೆ. ಕೆಲವೆಡೆ ಎರಡೆರಡು ಗ್ರಾಮಗಳನ್ನು ಸೇರಿಸಿಯೂ ಕಾರ್ಯಕ್ರಮಗಳು ನಡೆದಿವೆ.
ಹಲಸು, ಮಾವು, ಪುನರ್ಪುಳಿ, ನೇರಳೆ, ರೆಂಜ, ಕೆತ್ತೆಹುಳಿ, ಸಾಗುವಾನಿ, ಮಾಗುವಾನಿ, ಕಿರಾಲ್‍ಬೋಗಿ, ಬಸವನ ಪಾದ, ಬಿಲ್ವಪತ್ರೆ, ಬಾದಾಮಿ, ನೆಲ್ಲಿ ಹೀಗೆ ನಾನಾ ಗಿಡಗಳು ಈಗ ವಿವಿಧ ಮಂದಿಯ ಮನೆಯಂಗಳದಲ್ಲಿ ಬೆಳೆಯುತ್ತಿವೆ. ಈ ನಡುವೆ ಗಿಡಗಳನ್ನು ನೆಟ್ಟ ಮಕ್ಕಳಿಗೂ ಮನೆಯವರಿಗೂ ಬಾಂಧವ್ಯ ಬೆಳೆದಿದೆ. ಕೆಲವು ಕಡೆಗಳಲ್ಲಂತೂ ನೆಟ್ಟ ಮಕ್ಕಳ ಹೆಸರನ್ನೇ ಆ ಗಿಡಕ್ಕೂ ಇಟ್ಟು ಮನೆಯವರು ಸಂಭ್ರಮಿಸಿದ್ದಾರೆ!

ಈ ನಡುವೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಈ ಸಮಾಜಮುಖಿ ಕಾರ್ಯಕ್ಕೆ ವಿವಿಧ ಗ್ರಾಮಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಕಡೆಗಳಲ್ಲಿ ಆಯಾ ಊರಿನ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಸಹಕಾರ ನೀಡಿವೆ. ಅನೇಕ ಮನೆಯವರು ಊಟ ತಿಂಡಿಗಳನ್ನೂ ಇತ್ತು ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ

ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…

2 hours ago

ಜೇನುನೊಣಗಳ ಅಳಿವು ಕೃಷಿಗೂ, ಆಹಾರ ಭದ್ರತೆಗೂ ದೊಡ್ಡ ಅಪಾಯ – ತಜ್ಞರ ಎಚ್ಚರಿಕೆ

ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…

2 hours ago

ಒಂದು ಹಕ್ಕಿಯ ಫೋಟೋಗಾಗಿ 7 ತಿಂಗಳು ಕಾಯ್ದ ವ್ಯಕ್ತಿ..!, 60ನೇ ಹುಟ್ಟುಹಬ್ಬವನ್ನೂ ವಿಭಿನ್ನವಾಗಿ ಆಚರಿಸಿದರು..!

ವಿಟ್ಲದ ಆರ್‌. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…

9 hours ago

₹1.11 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಅಡಿಕೆ ವಶಕ್ಕೆ – ಮಹಾರಾಷ್ಟ್ರದ ಕೋಲ್ಡ್ ಸ್ಟೋರೇಜ್‌ನಲ್ಲೂ ಕಳಪೆ ಅಡಿಕೆ ದಾಸ್ತಾನು..!

ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…

11 hours ago

ಹವಾಮಾನ ವರದಿ | 14.06.2026 | ಜೂನ್ 20ರವರೆಗೆ ಕರಾವಳಿ-ಮಲೆನಾಡಿನಲ್ಲಿ ಇದೇ ವಾತಾವರಣ| ಎಲ್‌ನಿನೋ ಪ್ರಭಾವದ ನಡುವೆ ಮಳೆ ನೀರು ಸಂಗ್ರಹಕ್ಕೆ ರೈತರಿಗೆ ಸಲಹೆ

ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…

18 hours ago

ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ

ತುಮಕೂರು ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ 94 ಸಾವಿರ ಹೆಕ್ಟೇರ್‌ ದಾಟಿದ್ದು, ತೆಂಗಿನ…

20 hours ago