MIRROR FOCUS

ಇತಿಹಾಸದ ಹೆಗ್ಗುರುತು ಬೋಗಾಯನ ಕೆರೆಯೂ ಬಿಸಿಲ ಬೇಗೆಗೆ ಬರಡಾಯಿತು..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ:   ಬಳ್ಪದ ಬೋಗಾಯನ ಕೆರೆಯು ನಮ್ಮ ಇತಿಹಾಸದ ಒಂದು ಭಾಗ. ಇತಿಹಾಸದ ಗತ ವೈಭವವನ್ನು ಸಾರಿ ಹೇಳುವ ಈ ಕೆರೆಯಲ್ಲಿ ನೀರು ಬತ್ತಿದ ಇತಿಹಾಸವಿಲ್ಲ. ಆದರೆ ಈ ಬಾರಿಯ ಕಡು ಬೇಸಿಗೆಗೆ ಸಿಲುಕಿ ಭೂಮಿ ಬೆಂದು ಬಸವಳಿದಾಗ ಬೋಗಾಯನ ಕೆರೆಯೂ ಬರಡಾಯಿತು. ಕಡು ಬೇಸಿಗೆಯಲ್ಲೂ ಸಮೃದ್ಧ ನೀರು ತುಂಬಿ ನಳ ನಳಿಸುತ್ತಿದ್ದ ಬೋಗಾಯನ ಕೆರೆಯು ಈ ಬೇಸಿಗೆಯಲ್ಲಿ ಬರಡು ಬಂಜರವಾಗಿ ಹೋಗಿತ್ತು. ಮುಂಗಾರು ಗಟ್ಟಿಗೊಳ್ಳದ ಕಾರಣ ಕೆರೆಯ ಜಲ ಸಮೃದ್ಧಿ ಮರಳಿ ಬಂದಿಲ್ಲ.

Advertisement

ಈ ಸುದ್ದಿಯನ್ನು  ನಾವು ನೆಗೆಟಿವ್ ಆಗಿ ಬಿತ್ತುತ್ತಿಲ್ಲ, ಬದಲಾಗಿ ನಾವೆಷ್ಟು ಜಾಗೃತಿಯಾಗಬೇಕಿದೆ ಎಂಬುದರ ಬಗ್ಗೆ ತಿಳಿಯಬೇಕಿದೆ.

ಬಳ್ಪ ಗ್ರಾಮಕ್ಕೆ ಆಗಮಿಸಿದರೆ ಇಲ್ಲಿರುವ ಇತಿಹಾಸ ಪ್ರಸಿದ್ಧ ಬೋಗಾಯನ ಕೆರೆ ಗಮನ ಸೆಳೆಯುತ್ತದೆ. ಐತಿಹಾಸಿಕ ಹಿನ್ನಲೆಯುಳ್ಳ ಬಳ್ಪಕ್ಕೆ ಮುಕುಟಪ್ರಾಯವಾಗಿ ಹಲವು ಶತಮಾನಗಳ ಇತಿಹಾಸವಿರುವ ಬೋಗಾಯನ ಕೆರೆ ಕಂಗೊಳಿಸುತಿದೆ.
ಅದರೆ ಗತ ವೈಭವವನ್ನು ಸಾರುತ್ತಾ ವಿಶಾಲವಾಗಿ ಹರಡಿರುವ ಕೆರೆಯು ಇಂದು ನಾಶದೆಡೆಗೆ ಮುಖ ಮಾಡಿದ್ದು ತುರ್ತು ಕಾಯಕಲ್ಪಕ್ಕಾಗಿ ಕಾದಿದೆ.
ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬದಿಯಲ್ಲಿ ಬಳ್ಪ ಗ್ರಾಮ ಕೇಂದ್ರದಿಂದ ಅಲ್ಪ ದೂರದಲ್ಲಿ ಹಚ್ಚ ಹಸಿರು ವನರಾಶಿಯ ಮಧ್ಯೆ ಬೋಗಾಯನ ಕೆರೆ ಇದೆ. ಸುಮಾರು ಒಂದೂವರೆ ಎಕ್ರೆಯಷ್ಟು ವ್ಯಾಪ್ತಿಯಲ್ಲಿರುವ ಕೆರೆಯಲ್ಲಿ ವರ್ಷಪೂರ್ತಿ ನೀರು ತುಂಬಿರುತ್ತದೆ. ಆದರೆ ಈ ಬೇಸಿಗೆ ಮಾತ್ರ ಬೋಗಾಯನ ಕೆರೆಗೂ ಬರಗಾಲ ತಂದಿತ್ತು. ಮಳೆಗಾಲದಲ್ಲಿ ಕೆರೆ ತುಂಬಿ ಹರಿಯುತ್ತದೆ, ಜೊತೆಗೆ ಬಳ್ಪ ರಕ್ಷಿತಾರಣ್ಯ ಮತ್ತಿತರ ಕಡೆಗಳಿಂದ ಹರಿದು ಬರುವ ನೀರು ಕೆರೆಯಲ್ಲಿ ಸೇರಿಕೊಳ್ಳುತ್ತದೆ. ಸುಮಾರು 30 ಅಡಿಗಿಂತಲೂ ಹೆಚ್ಚು ಆಳವಿರುವ ಕೆರೆ ಈಗ ಪೂರ್ತಿ ಹೂಳು, ಕೆಸರು, ಪಾಚಿ ತುಂಬಿ ವಿನಾಶದ ಅಂಚಿನಲ್ಲಿದೆ. ಈ ಬಾರಿಯಂತೂ ನೀರೆ ಇಲ್ಲದ ಕೆರೆಯ ದೃಶ್ಯ ನೋಡುಗರಲ್ಲಿ ವಿಷಾದ ಭಾವ ತರುತ್ತಿತ್ತು. ಒಂದು ಕಾಲದಲ್ಲಿ ಇಡೀ ನಾಡಿಗೆ ನೀರುಣಿಸುತ್ತಿದ್ದ ಕೆರೆಯು ಇಂದು ನಿರುಪಯುಕ್ತವಾಗಿದೆ. ವರುಷ ಕಳೆದಂತೆ ಕೆರೆಯು ತನ್ನ ಜೀವ ಕಳೆ ಕಳೆದುಕೊಳ್ಳುತಿದೆ.

ಇತಿಹಾಸದ ಪುಟದಿಂದ:
ಸುಮಾರು ಏಳು ಶತಮಾನಗಳ ಹಿಂದೆ ವಿಜಯನಗರದ ಅರಸರು ಈ ಕೆರೆಯನ್ನು ನಿರ್ಮಿಸಿದ್ದರು ಎಂದು ಅಂದಾಜಿಸಲಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ಶ್ರೀಮಂತವಾಗಿದ್ದ ನಾಡಿನ ವಿಶಾಲವಾದ ಭತ್ತದ ಗದ್ದೆಗಳಿಗೆ ನೀರುಣಿಸುವ ಆಶ್ರಯ ತಾಣವಾಗಿತ್ತು ಈ ಕೆರೆ. ಈ ಕೆರೆಯನ್ನು ಬೋಗರಾಯ ಅರಸು ಕಟ್ಟಿಸಿದನೆಂದು ಐತಿಹ್ಯವಿದೆ. ಆದ್ದರಿಂದ ಇದಕ್ಕೆ `ಬೋಗರಾಯನ ಕೆರೆ’ ಎಂಬ ಹೆಸರು ಬಂತು. ಬಳಿಕ ಅದು ಬೋಗಾಯನ ಕೆರೆ ಎಂದಾಯಿತು ಎಂದು ಸ್ಥಳೀಯರು ಹೇಳುತ್ತಾರೆ. ಹಿಂದೆ ಸುಮಾರು ಎಂಟು ಎಕ್ರೆಯಷ್ಟು ವಿಶಾಲವಾಗಿದ್ದ ಕೆರೆ ಇಡೀ ನಾಡಿಗೆ ನೀರುಣಿಸುತ್ತಿತ್ತು. ಅಂದು ಕೆರೆಯ ಒಂದು ತುದಿಯಿಂದ ನೋಡಿದರೆ ಇನ್ನೊಂದು ತುದಿಗೆ ದೃಷ್ಠಿ ತಲುಪುತ್ತಿರಲಿಲ್ಲ ಎಂದು ಹಿರಿಯರು ನೆನಪಿಸುತ್ತಾರೆ. ಆದರೆ ಕ್ರಮೇಣ ಕೆರೆ ನಾಶವಾಗುತ್ತಾ ಬಂದಿದೆ. ಈಗ ಕೆರೆ ಪೂರ್ತಿ ಹೂಳು ತುಂಬಿದೆ. ಮಣ್ಣು ಕುಸಿದು ಬಿದ್ದು ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಾ ಬಂದು ಕುಬ್ಜವಾಗಿದೆ.

Advertisement

 

Advertisement

ಏನು ಅಭಿವೃದ್ಧಿ ಮಾಡಬಹುದು:

ಸಂಬಂಧಪಟ್ಟವರು ಮನಸ್ಸು ಮಾಡಿದರೆ ಬೋಗಾಯನ ಕೆರೆಯನ್ನು ಅಭಿವೃದ್ಧಿಪಡಿಸಿ ಒಂದು ಅದ್ಭುತ ಪ್ರವಾಸೀ ಕೇಂದ್ರವಾಗಿಸಬಹುದು ಎಂಬುದು ಬಳ್ಪದ ಜನತೆಯ ಆಶಯ. ಬಳ್ಪ ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ದತ್ತು ಪಡೆದಿರುವುದರಿಂದ ಆದರ್ಶ ಗ್ರಾಮವಾಗುವುದರ ಜೊತೆಗೆ ಬೋಗಾಯನ ಕೆರೆಗೂ ಕಾಯಕಲ್ಪ ದೊರೆಯಬಹುದು ಎಂಬ ನಿರೀಕ್ಷೆ ಜನರದ್ದು. ಕೆರೆಯ ಹೂಳನ್ನು ಎತ್ತಿ, ಪಾಚಿ ಮತ್ತಿತರ ಕಲ್ಮಶಗಳನ್ನು ತೆಗೆದು ಕೆರೆಯನ್ನು ಶುದ್ದೀಕರಿಸಬೇಕು. ಕೆರೆಯನ್ನು ಸಾಧ್ಯವಾದಷ್ಟು ಅಗಲೀಕರಣ ಮಾಡಿ ಸುತ್ತಲೂ ರಕ್ಷಣಾ ಬೇಲಿ ನಿರ್ಮಿಸಿ ಪ್ರವಾಸಿಗರಿಗೆ ಬೋಟಿಂಗ್ ಮತ್ತಿತರ ವ್ಯವಸ್ಥೆಯನ್ನು ಕಲ್ಪಿಸಬಹುದು. ಸುತ್ತಲೂ ಗಾರ್ಡನ್ ನಿರ್ಮಿಸಿ ಪಾರ್ಕ್ ಮಾಡಿದಲ್ಲಿ ನಾಡಿನ ಪರಂಪರೆಯ ಹೆಗ್ಗುರುತಾಗಿರುವ ಬೋಗಾಯನ ಕೆರೆಯನ್ನು ಶಾಶ್ವತವಾಗಿ ಸಂರಕ್ಷಿಸುವುದರ ಜೊತೆಗೆ ಉತ್ತಮ ಪ್ರವಾಸೀ ತಾಣವಾಗಿ ಮಾರ್ಪಾಡಾಗಿಸಬಹುದು ಎಂಬುದು ಸಾರ್ವಜನಿಕರ ಆಶಯ.
ಹಚ್ಚ ಹಸಿರ ಪ್ರಕೃತಿ ಸಿರಿಯ ಮಧ್ಯೆ ಇರುವ ಅಪರೂಪದ ಬೋಗಾಯನ ಕೆರೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿ ಮಧ್ಯೆ ಒಂದು ಉತ್ತಮ `ಪಿಕ್‍ನಿಕ್ ಪಾಯಿಂಟ್’ ಆಗಬಹುದು.

ಅಲ್ಲದೆ ಈಗ ಕಾಡಿನಿಂದ ಮತ್ತಿತರ ಕಡೆಗಳಿಂದ ಕೆಸರು ನೀರು ಹರಿದು ಬಂದು ಕೆರೆಗೆ ಸೇರುವುದನ್ನು ತಡೆದು, ಒರತೆ ನೀರು ಮಾತ್ರ ಕೆರೆಯಲ್ಲಿ ಶೇಖರಣೆಯಾಗಬೇಕು. ಹಾಗಾದರೆ ಕೆರೆಯ ನೀರನ್ನು ಕೃಷಿ ಮತ್ತಿತರ ಅಗತ್ಯತೆಗಳಿಗೆ ಬಳಕೆ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕೆರೆಯ ನೀರು ಭೂಮಿಗೆ ಇಂಗಿ ಸಮೀಪದ ಹತ್ತಾರು ಎಕ್ರೆ ಭೂಪ್ರದೇಶ ಜಲಸಮೃದ್ಧವಾಗಲು ಸಹಾಯಕವಾಗಬಹುದು. ಮೀನುಗಳನ್ನು ಸಾಕಿ, ಪ್ರದೇಶದಲ್ಲಿ ಮತ್ಸ್ಯೋದ್ಯಮವನ್ನು ಬೆಳೆಸಲು ಕೆರೆ ಪೂರಕವಾಗಿದೆ. ಗ್ರಾಮದ ಎತ್ತರದ ಭಾಗದಲ್ಲಿರುವ ಕೆರೆಯಿಂದ ನೀರನ್ನು ಇಡೀ ಗ್ರಾಮಕ್ಕೆ ಸಲೀಸಾಗಿ ಬಳಸಬಹುದು. ಹಲವು ವರ್ಷಗಳ ಹಿಂದೆ ಬೋಗಾಯನ ಕೆರೆಯನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದ್ದರೂ ಅದು ಕೈಗೂಡಿಲ್ಲ. ಬೋಗಾಯನ ಕೆರೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಸಂಬಂಧಪಟ್ಟವರನ್ನು ಜನತೆ ಒತ್ತಾಯಿಸುತ್ತಲೇ ಬಂದಿದ್ದಾರೆ.

ಕೆರೆ ಅಭಿವೃದ್ಧಿಗೆ ಅನುದಾನ: ನಳಿನ್‍ಕುಮಾರ್ ಕಟೀಲ್

Advertisement

ಬೋಗಾಯನ ಕೆರೆಯನ್ನು ಅಭಿವೃದ್ಧಿಪಡಿಸಬೇಕೆಂಬ ಕನಸು ಮತ್ತು ಬೇಡಿಕೆ ಹಲವು ವರ್ಷಗಳಿಂದ ಇದೆ. ಇದೀಗ ಕೆರೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಚುನಾವಣೆ ಇದ್ದ ಕಾರಣ ಟೆಂಡರ್ ಪ್ರಕ್ರಿಯೆ ವಿಳಂಬವಾಗಿತ್ತು. ಮುಂದಿನ ದಿನಗಳಲ್ಲಿ ಕೆರೆಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ. ಸಂಸದರು ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿರುವ ದೇವಾಲಯಗಳ ನಾಡಾದ ಬಳ್ಪಕ್ಕೆ ಮುಕುಟ ಪ್ರಾಯವಾಗಿರುವ ಬೋಗಾಯನ ಕೆರೆಯೂ ಅಭಿವೃದ್ಧಿಯಾದರೆ ಆದರ್ಶ ಗ್ರಾಮಕ್ಕೆ ಇನ್ನಷ್ಟು ಮೆರುಗು ತರಬಹುದು.

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಆನೆ ದಾಳಿಗೆ ಮೂರು ವರ್ಷದಲ್ಲಿ 129 ರೈತರು ಬಲಿ | ವಿಧಾನಪರಿಷತ್‌ನಲ್ಲಿ ಮಾಹಿತಿ ನೀಡಿದ ಅರಣ್ಯ ಇಲಾಖೆ

ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…

10 hours ago

ಹವಾಮಾನ ವರದಿ | 11-08-2025 | ಇಂದು ಸಾಮಾನ್ಯ ಮಳೆ | ಆ-12 ರಿಂದ ಆ-20 ರವರಗೆ ರಾಜ್ಯದ ವಿವಿದೆಡೆ ಮಳೆ |

ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…

17 hours ago

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ

ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

23 hours ago

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

24 hours ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

2 days ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

2 days ago