ಇಳೆಗೆ ಇಂಗಿಸುವ ಮಳೆ ನೀರಿನಿಂದ ಜಲ ಸಮೃದ್ಧಿ: ಕೃಷಿಕರ ತೆಂಗಿನ ತೋಟದಲ್ಲಿ ಮಳೆ ನೀರಿಂಗಿಸಲು ಕಟ್ಟಗಳು ಪೂರಕ

June 29, 2019
2:23 PM

ಸುಳ್ಯ: ಮಳೆಗಾಲದಲ್ಲಿ ನೀರನ್ನು ಶೇಖರಿಸಿ ಭೂಮಿಗೆ ಇಂಗಿಸಿ ತೆಂಗಿನ ತೋಟಗಳನ್ನು ಜಲಸಮೃದ್ಧಿಯಾಗಿಸುವಲ್ಲಿ ಕಟ್ಟಗಳ ಪಾತ್ರ ಬಲು ದೊಡ್ಡದು. ತನ್ನ ತೋಟದಲ್ಲಿ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿ ಭೂಮಿಯನ್ನು ಜಲಸಮೃದ್ಧಿ ಮಾಡುವ ಗಡಿ ಪ್ರದೇಶವಾದ ಕಲ್ಲಪಳ್ಳಿಯ ಪ್ರಗತಿ ಪರ ಕೃಷಿಕ ಬಿ.ರಾಜಗೋಪಾಲ ಭಟ್ ಅವರ ಪ್ರಯತ್ನ ಉತ್ತಮ ಫಲಿತಾಂಶವನ್ನೇ ನೀಡುತ್ತಿದೆ.

Advertisement
Advertisement

ಮಳೆ ಸುರಿದಾಗ ಗುಡ್ಡ ಪ್ರದೇಶದಲ್ಲಿ, ಭೂಮಿಯ ಇಳಿಜಾರಿನಲ್ಲಿ ಬಿದ್ದು ಹರಿದು ಹೋಗಿ ವ್ಯರ್ಥವಾಗುವ ನೀರನ್ನು ತಡೆದು ಶೇಖರಿಸಿ ಭೂಮಿಗೆ ಇಂಗಿಸಲು ಈ ರೀತಿಯ ಕಲ್ಲಿನ ಕಟ್ಟಗಳು ಬಹು ಉಪಯೋಗಿಯಾಗುತ್ತಿದೆ. ಗುಡ್ಡ ಪ್ರದೇಶದಲ್ಲಿ ಮಳೆ ಸುರಿದರೆ ಕ್ಷಣಾರ್ಧದಲ್ಲಿ ನೀರು ಹರಿದು ಹೋಗಿ ತೋಡು, ಹಳ್ಳಗಳಿಗೆ ಸೇರಿ ಸಮುದ್ರ ಪಾಲಾಗುತ್ತದೆ. ಇದರಿಂದ ಎಷ್ಟೇ ಅಧಿಕ ಮಳೆ ಸುರಿಯುವ ಪ್ರದೇಶವಾದರೂ ಮಳೆ ನಿಂತು ಕೆಲವೇ ದಿನದಲ್ಲಿ ಭೂಮಿ ಒಣಗಿ ಬರಡಾಗುತ್ತದೆ. ಮಳೆ ಹೋದ ಬೆನ್ನಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಬೇಸಿಗೆಯಲ್ಲಿ ತೆಂಗಿನ ತೋಟಗಳು ಮತ್ತಿತರ ಕೃಷಿ ಒಣಗಿ ಹೋಗುವುದರ ಜೊತೆಗೆ ಕುಡಿಯುವ ನೀರಿಗೂ ಬರ ಎದುರಾಗುತ್ತದೆ. ಅಂತರ್ಜಲ ಕುಸಿದು ಹೋಗಿ ಎಲ್ಲೆಡೆ ನೀರಿನ ತತ್ವಾರ ಸಾಮಾನ್ಯವಾಗುತ್ತದೆ. ಇದಕ್ಕೆ ಪರಿಹಾರವಾಗಿ ಜಲ ಮೂಲವನ್ನು ಹೆಚ್ಚಿಸಲು ಕೃಷಿಕರು ನಿರ್ಮಿಸುವ ಕಟ್ಟಗಳು ಬಹು ಉಪಯೋಗಿಯಾಗುತ್ತದೆ.

 

ತೆಂಗಿನ ತೋಟದಲ್ಲಿ ಅಲ್ಲಲ್ಲಿ ನಿರ್ಮಿಸಿದ ಕಟ್ಟಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಭೂಮಿಗೆ ಇಂಗಿಸುವ ತಮ್ಮ ಪ್ರಯೋಗದಿಂದ ಕಳೆದ 15 ವರ್ಷಗಳಿಂದೀಚೆಗೆ ರಾಜಗೋಪಾಲ ಭಟ್ಟರ ತೋಟದಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. ತಮ್ಮ ನಾಲ್ಕು ಏಕ್ರೆ ತೆಂಗಿನ ತೋಟ ವರ್ಷ ಪೂರ್ತಿ ಜಲ ಸಮೃದ್ಧಿಯಾಗಿಸಲು ಇದರಿಂದ ಸಾಧ್ಯವಾಗಿದೆ. ಗುಡ್ಡದ ಇಳಿಜಾರಿನಲ್ಲಿರುವ ತೆಂಗಿನ ತೋಟದಲ್ಲಿ ಹಿಂದೆಲ್ಲ ಮಳೆ ಸುರಿದರೆ ಕ್ಷಣಾರ್ಧದಲ್ಲಿ ಮಳೆ ನೀರು ಹರಿದು ಹೋಗುತ್ತಿತ್ತು. ಮಳೆ ನೀರು ತೋಟದ ಮಣ್ಣನ್ನೂ ಕೊಚ್ಚಿಕೊಂಡು ಹೋಗುತ್ತಿತ್ತು. ಇದರಿಂದ ಬೇಸಿಗೆಯಲ್ಲಿ ತೆಂಗಿನ ತೋಟ ಬರಡಾಗಿ ಒಣಗಿ ಹೋಗುತ್ತಿತ್ತು. ಆದರೆ ತೋಟದಲ್ಲಿ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿ ಮಳೆ ನೀರು ಶೇಖರಿಸಿ ನೀರನ್ನು ಭೂಮಿಗೆ ಇಂಗಿಸಲು ಆರಂಭಿಸಿದರಿಂದ ಇದಕ್ಕೆ ಪರಿಹಾರ ಸಿಕ್ಕಿದೆ. ತೋಟದಲ್ಲೇ ಸಿಗುವ ಕಲ್ಲುಗಳಿಂದ ಮೂರು-ನಾಲ್ಕು ಅಡಿ ಎತ್ತರದಲ್ಲಿ ಕಟ್ಟಗಳ್ನು ನಿರ್ಮಿಸಲಾಗುತ್ತದೆ. ಬಿದ್ದ ನೀರು ಅಲ್ಲಲ್ಲೇ ಶೇಖರಗೊಂಡು ನಿಧಾನವಾಗಿ ಇಂಗುತ್ತದೆ. ಈ ಪ್ರಯೋಗ ಆರಂಭಿಸಿದ ಬಳಿಕ ಕಡು ಬೇಸಿಗೆಯಲ್ಲಿಯೂ ತೆಂಗಿನ ತೋಟ ಹಸಿರಿನಿಂದ ನಳ ನಳಿಸುತ್ತದೆ. ಸಮೀಪದಲ್ಲಿರುವ ಕೆರೆಗಳಲ್ಲಿಯೂ ನೀರಿನ ಕೊರತೆ ಉಂಟಾಗುವುದಿಲ್ಲ. ತೆಂಗಿನ ತೋಟಕ್ಕೆ ಮಾತ್ರವಲ್ಲದೆ ಅಡಕೆ ತೋಟಕ್ಕೂ ನೀರಾವರಿಗೆ ಬೇಕಾದಷ್ಟು ನೀರು ದೊರೆಯುತ್ತದೆ ಎನ್ನುತ್ತಾರೆ ರಾಜಗೋಪಾಲ ಭಟ್. ತಮ್ಮ ಪ್ರದೇಶದ ನೀರಿನ ಸಂಪತ್ತನ್ನು ಹೆಚ್ಚಿಸಲು ಮಾತ್ರವಲ್ಲದೆ ತೋಟದ ಮಣ್ಣಿನ ಸವಕಳಿಯನ್ನು ತಡೆಯಲೂ ಕಟ್ಟಗಳು ಸಹಾಯಕವಾಗುತ್ತದೆ.

Advertisement

 

ಈ ರೀತಿಯಾಗಿ ತೆಂಗಿನ ತೋಟದಲ್ಲಿ ಎಲ್ಲೆಡೆ ಕಟ್ಟಗಳನ್ನು ನಿರ್ಮಿಸಿರುವುದರಿಂದ ಈಗ ಇವರ ತೆಂಗಿನ ತೋಟದಲ್ಲಿ ಸುರಿದ ಮಳೆ ನೀರಿನ ಒಂದು ಹನಿಯೂ ಹರಿದು ಹೋಗಿ ವ್ಯರ್ಥವಾಗುವುದಿಲ್ಲ. ಈ ರೀತಿಯ ಕಟ್ಟಗಳಲ್ಲಿ ಸುಮಾರು ಹತ್ತು ವರ್ಷಗಳ ಬಳಿಕ ಮಣ್ಣು ತುಂಬುತ್ತದೆ, ಆ ಸಂದರ್ಭದಲ್ಲಿ ಒಂದು ಅಡಿಯಷ್ಟು ಕಟ್ಟಗಳನ್ನು ಎತ್ತರಿಸಬೇಕು. ತೆಂಗಿನ ತೋಟದ ಒಳಗೆ ಕಟ್ಟಗಳನ್ನು ನಿರ್ಮಿಸಿ ನೀರಿಂಗಿಸುವುದರ ಜೊತೆಗೆ ತೋಟದ ಸುತ್ತಲೂ ಅಲ್ಲಲ್ಲಿ ಭಾರೀ ಗಾತ್ರದ ಗುಂಡಿಗಳನ್ನು ತೋಡಿ ಅದರಲ್ಲಿಯೂ ಮಳೆ ನೀರನ್ನು ಶೇಖರಿಸುತ್ತಾರೆ ಇವರು. ಇದರಿಂದ ಪ್ರದೇಶವೆಲ್ಲ ಜಲ ಸಮೃದ್ಧವಾಗುತ್ತದೆ.

ಮಳೆಗಾಲದಲ್ಲಿ ಎಷ್ಟೇ ಮಳೆ ಸುರಿದರೂ ಅದು ಹರಿದು ಸಮುದ್ರ ಸೇರುವುದರಿಂದ ಭೂಮಿಗೆ ಮಳೆ ನೀರಿನ ಪ್ರಯೋಜನ ದೊರೆಯುವುದಿಲ್ಲ. ಬೇಸಿಗೆಯಲ್ಲಿ ನೀರಿನ ಹಾಹಾಕಾರ ಉಂಟಾಗುತ್ತದೆ. ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿ, ಹೊಂಡಗಳನ್ನು ತೋಡಿ ಮಳೆಯ ನೀರನ್ನು ಸಂಗ್ರಹಿಸಿ ಸಾಧ್ಯವಾದಷ್ಟು ಭೂಮಿಗೆ ಇಂಗಿಸಿದರೆ, ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು ಎಂಬುದು ನಮ್ಮ ಅನುಭವ –  ಬಿ.ರಾಜಗೋಪಾಲ ಭಟ್ , ಕೃಷಿಕ

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಏನಾಯ್ತು..? | ವಿಘ್ನೇಶ್ವರ ಭಟ್‌ ವರ್ಮುಡಿ ಅವರ ವಿಶ್ಲೇಷಣೆ …
May 22, 2025
8:43 PM
by: The Rural Mirror ಸುದ್ದಿಜಾಲ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ಯಾಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪಣ | ಅರಣ್ಯ ಇಲಾಖೆಯಿಂದ ಹಲವು ಕ್ರಮ
April 18, 2025
6:35 AM
by: The Rural Mirror ಸುದ್ದಿಜಾಲ
ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group