ಬೆಂಗಳೂರು: ಕೊರೊನಾ ವೈರಸ್ ತಡೆಯ ಹಿನ್ನೆಲೆಯಲ್ಲಿ ಈಗಾಗಲೇ ಕೊರೊನಾ ವೈರಸ್ ಕಂಡುಬಂದ ರಾಜ್ಯದ 9 ಜಿಲ್ಲೆಗಳು ಮುಂಜಾಗ್ರತಾ ಕ್ರಮವಾಗಿ ಮಾ. 31 ರವರೆಗೆ ಲಾಕ್ ಡೌನ್ ಮಾಡಿದರೂ ಸಹಕರಿಸದ ಕಾರಣ ಇದೀಗ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಈ ಬಗ್ಗೆ ಸಂಜೆಯ ವೇಳಗೆ ಅಧಿಕೃತ ತೀರ್ಮಾನ ಹೊರಡಿಸುವುದಾಗಿ ಸಿಎಂ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಇದೀಗ ವಿಪಕ್ಷ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರದ ಬಗ್ಗೆ ತೀರ್ಮಾನಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ , ಮಂಗಳೂರು, ಕಲಬುರ್ಗಿ , ಕೊಡಗು, ಮೈಸೂರು, ಚಿಕ್ಕಬಳ್ಳಾಪುರ , ಧಾರವಾಡ ಜಿಲ್ಲೆಗಳು ಲಾಕ್ ಡೌನ್ ಆಗಿತ್ತು. ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮವನ್ನು ಈಗಾಗಲೇ ಕೈಗೊಂಡಿದ್ದರೂ ಜನರು ಸಹಕರಿಸದ ಹಿನ್ನಲೆಯಲ್ಲಿ, ಜನರ ಹಿತದೃಷ್ಟಿಗಾಗಿ ಈ ತೀರ್ಮಾನ ಕೈಗೊಂಡಿರುವುದಾಗಿ ಸಿಎಂ ತಿಳಿಸಿದರು. ಮನೆಯಲ್ಲೇ ಇರಿ, ಕೊರೋನಾ ಸೋಂಕು ತಡೆಗೆ ಸಹಕರಿಸಿ. ಜನರಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಾಗುತ್ತಿಲ್ಲ. ಬಡವರ ಹಿತದೃಷ್ಟಿಯಿಂದ ಇಂದಿರಾ ಕಾಂಟೀನ್ ನಲ್ಲಿ ಬಡವರಿಗೆ ಉಚಿತ ಊಟ ವಿತರಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

