ಕಾಣಿಯೂರು:ಮಂಗಳೂರು ಬೆಂಗಳೂರು ರೈಲು ಮಾರ್ಗದ ಕಾಣಿಯೂರು ರೈಲ್ವೇ ನಿಲ್ದಾಣ ಪ್ರಯಾಣಿಕರಿಗೆ ಉಪಯೋಗಕ್ಕೆ ಬಾರದಾಗಿದೆ. ನಿತ್ಯವೂ ಲೋಕಲ್ ರೈಲು ಉಳಿದ ರೈಲುಗಳ ಓಡಾಟ ನೋಡಲಷ್ಟೇ ಸಾಧ್ಯವಾಗಿದೆ.
ಮಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣದ ಸಂದರ್ಭ ಉಡುಪಿಯ ಅಷ್ಟಮಠಗಳಲ್ಲೊಂದಾದ ಕಾಣಿಯೂರು ಮಠದ ಮೂಲ ಮಠವಿರುವ ಕಾಣಿಯೂರಿನಲ್ಲಿ ಬ್ರೇಕ್ಹಾಲ್ಟ್ ರೈಲ್ವೇ ನಿಲ್ದಾಣವನ್ನು ನಿರ್ಮಾಣ ಮಾಡಲಾಯಿತು. ಕಾಣಿಯೂರು ಮಠಕ್ಕೆ ಸಂಬಂಧಿಸಿದ ಅಂದಿನ ಕಾಂಗ್ರೆಸ್ ನಾಯಕರೊಬ್ಬರ ಪ್ರಯತ್ನದ ಫಲವಾಗಿ ಇಲ್ಲಿ ಬ್ರೇಕ್ಹಾಲ್ಟ್ ನಿಲ್ದಾಣ ನಿರ್ಮಾಣವಾಯಿತು. ಈಗಲೂ ಬ್ರೇಕ್ಹಾಲ್ಟ್ ನಿಲ್ದಾಣವಾಗಿಯೇ ಕಾಣಿಯೂರು ರೈಲ್ವೇ ನಿಲ್ದಾಣವಿದೆ.
ಕಾಣಿಯೂರು ರೈಲ್ವೇ ನಿಲ್ದಾಣವು ರೈಲ್ವೇ ಸಂಪರ್ಕ ವ್ಯವಸ್ಥೆಯಲ್ಲಿ ಅಭಿವೃದ್ಧಿ ಹೊಂದಲು ಇರುವ ಏಕೈಕ ಮಾರ್ಗವೆಂದರೆ ಕಾಂಞಗಾಡ್ -ಕಾಣಿಯೂರು ಹೊಸ ರೈಲು ಮಾರ್ಗ ರಚನೆ. ಈ ರೈಲು ಮಾರ್ಗ ರಚನೆಯಾದರೆ ಕಾಣಿಯೂರು ಹೊಸ ರೈಲ್ವೇ ಜಂಕ್ಷನ್ ಆಗುತ್ತದೆ. ಮಂಗಳೂರು-ಹಾಸನ ಮತ್ತು ಕಾಂಞಗಾಡ್-ಕಾಣಿಯೂರು ರೈಲು ಮಾರ್ಗವು ಇಲ್ಲಿ ಸಂಧಿಸುತ್ತದೆ. ಉದ್ದೇಶಿತ ರೈಲು ಮಾರ್ಗದ ಯೋಜನೆಗಾಗಿ ಕಾಣಿಯೂರಿನ ಏಲ್ಯಡ್ಕದಲ್ಲಿ ರೈಲ್ವೇ ಇಲಾಖೆಯು ಈಗಾಗಲೇ ನಿವೇಶನವನ್ನು ಗುರುತಿಸಿದೆ. ಕಾಣಿಯೂರು ರೈಲ್ವೇ ನಿಲ್ದಾಣವು ಈಗ ಇರುವ ಸ್ಥಳದಿಂದ ಎರಡು ಕಿ.ಮೀ. ಮುಂದಕ್ಕೆ ರಚನೆಯಾಗುವ ಕಾಣಿಯೂರು ಜಂಕ್ಷನ್ಗೆ ಸ್ಥಳಾಂತರಗೊಳ್ಳುತ್ತದೆ.
ಕಾಣಿಯೂರು ಬ್ರೇಕ್ಹಾಲ್ಟ್ ರೈಲ್ವೇ ನಿಲ್ದಾಣವು ಕಾಣಿಯೂರು ಪೇಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಕಮಿಷನ್ ಏಜೆಂಟ್ ಇರುವ ನಿಲ್ದಾಣವಾಗಿದೆ. ರೈಲು ಬಳಕೆದಾರರ ಸಂಖ್ಯೆಯು ಇದೆ. ಈ ಹಿಂದೆ ದೂರ ಪ್ರಯಾಣದ ರೈಲುಗಳು ಕಾಣಿಯೂರಿನಲ್ಲಿ ನಿಲುಗಡೆಗೊಳ್ಳುತ್ತಿದ್ದವು. ಗೇಜ್ ಪರಿವರ್ತನೆಯ ಬಳಿಕ ಕಾಣಿಯೂರು ಬ್ರೇಕ್ಹಾಲ್ಟ್ ನಿಲ್ದಾಣದಲ್ಲಿ ಮಂಗಳೂರು-ಸುಬ್ರಹ್ಮಣ್ಯ ರಸ್ತೆ ಲೋಕಲ್ ರೈಲ್ ಮಾತ್ರ ನಿಲುಗಡೆಗೊಳ್ಳುತ್ತದೆ.
ಕಾಣಿಯೂರು ರೈಲ್ವೇ ನಿಲ್ದಾಣದಲ್ಲಿ ಕಮಿಷನ್ ಏಜೆಂಟ್ ನೆಲೆಯಲ್ಲಿ 5ವರ್ಷಗಳ ಅವಧಿಗೆ ರೈಲ್ವೇ ಏಜೆಂಟರನ್ನು ನೇಮಕಗೊಳಿಸಲಾಗುತ್ತದೆ. ಪ್ರತೀ ಬಾರಿಯು 5ವರ್ಷಗಳ ಬಳಿಕ ಏಜೆಂಟ್ ನೇಮಕ ವಿಳಂಬವಾಗುತ್ತಿದ್ದು ಈ ಕಾರಣದಿಂದ ಕಾಣಿಯೂರಿನಲ್ಲಿ ಲೋಕಲ್ ರೈಲು ನಿಂತರೂ ಪ್ರಯಾಣಿಕರು ಟಿಕೆಟ್ ಖರೀದಿಸಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೊಸ ಏಜೆಂಟರ ಅಥವಾ ಹಳೇ ಏಜೆಂಟರನ್ನೇ ಮುಂದುವರಿಸುವ ಪ್ರಕ್ರಿಯೆ ಮುಗಿಯುವವರೆಗೆ ಕಾಣಿಯೂರಿನವರು ಮಂಗಳೂರಿಗೆ ತೆರಳುವುದಾದರೆ ನರಿಮೊಗರು ರೈಲ್ವೇ ನಿಲ್ದಾಣದಲ್ಲಿ ಇಳಿದು ಟಿಕೆಟ್ ಮಾಡಿ ಮತ್ತೆ ಪ್ರಯಾಣ ಮುಂದುವರಿಸಬೇಕಾಗುತ್ತದೆ. ಅದೇ ರೀತಿ ಸುಬ್ರಹ್ಮಣ್ಯ ರಸ್ತೆ ಕಡೆಗೆ ತೆರಳುವುದಾದರೆ ಎಡಮಂಗಲ ರೈಲ್ವೇ ನಿಲ್ದಾಣದಲ್ಲಿ ಇಳಿದು ಟಿಕೆಟ್ ಖರೀದಿಸಿ ಪ್ರಯಾಣ ಮುಂದುವರಿಸಬೇಕಾಗುತ್ತದೆ.
ಕಾಣಿಯೂರು-ಕಾಂಞಗಾಡ್ ಹೊಸ ರೈಲುಮಾರ್ಗ ಯೋಜನೆಯು ದಶಕಗಳಿಂದ ನೆನೆಗುದಿ ಬಿದ್ದಿದೆ. ಕೇರಳ ಭಾಗದಿಂದ ಈ ಯೋಜನೆಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಯಾಕೆಂದರೆ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕದ ಹಾಸನ, ಬೆಂಗಳೂರು ನಗರಗಳನ್ನು ಸಂಪರ್ಕಿಸಲು ಇದು ಹತ್ತಿರದ ರೈಲು ಮಾರ್ಗವಾಗಿದೆ. ಕರ್ನಾಟಕ ಭಾಗದಲ್ಲಿ ಈ ಯೋಜನೆಗೆ ಹೆಚ್ಚಿನ ಆಸಕ್ತಿ ವ್ಯಕ್ತವಾಗುತ್ತಿಲ್ಲ. ಈ ರೈಲು ಮಾರ್ಗ ರಚನೆಯಾದರೆ ಸುಳ್ಯದ ಮೂಲಕ ರೈಲು ಮಾರ್ಗ ಹಾದು ಹೋಗುತ್ತದೆ. ಡಿ.ವಿ. ಸದಾನಂದ ಗೌಡರು ಕೇಂದ್ರ ರೈಲ್ವೇ ಸಚಿವರಾಗಿದ್ದಾಗ ಈ ಯೋಜನೆಯ ಸರ್ವೇ ನಡೆಸಲು ಅನುದಾನ ಮಂಜೂರು ಮಾಡಿದ್ದರು. ಆ ಬಳಿಕ ಯಾವುದೇ ಪ್ರಗತಿ ಕಂಡುಬಂದಿಲ್ಲ.
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…