ಕೃಷಿಯಲ್ಲಿ ಯಂತ್ರ ,ತಾಂತ್ರಿಕತೆಗಳು

August 5, 2019
1:00 PM

ಅವಶ್ಯಕತೆ ಹೊಸ ವಿಚಾರಕ್ಕೆ ನಾಂದಿ ಹಾಡುತ್ತದಂತೆ. ಹೌದು ಇಂದು ಕೃಷಿ ಕ್ಷೇತ್ರವೂ ಈ ಮಾತಿಗೆ ಹೊರತಾಗಿಲ್ಲ.ಮಾನವ ಶ್ರಮವನ್ನು ಕಡಿಮೆಗೊಳಿಸುವುದೇ ಎಲ್ಲಾ ಕ್ಷೇತ್ರದ ಆದ್ಯತೆ. ಇತ್ತೀಚಿನ ಹತ್ತು ಹದಿನೈದು ವರ್ಷಗಳಲ್ಲಿ ಸಂಪೂರ್ಣ ಕೃಷಿ ಜೀವನದ ಮಾನಸಿಕತೆ ಬದಲಾಗಿದೆ ಎಂದೆನಿಸುತ್ತಿದೆಯಲ್ಲವೇ. ಯಾವನೇ ವ್ಯಕ್ತಿಗೆ ಮೈ ಬೆವರ ಬಾರದು,ಮಣ್ಣು ತಗಲಬಾರದು ಎಂಬ ಭಾವನೆ ಬೇರೂರಿದೆ ಎಂದೆನಿಸುವುದಿಲ್ಲವೇ. ಐಟಿ,ಬಿಟಿ,ಪೇಟೆ,ಪಟ್ಟಣದ ಉದ್ಯೋಗದ ಮರೀಚಿಕೆಯ ಹಿಂದೋಡುವ ಧಾವಂತದಲ್ಲಿ ,ಕೃಷಿ ಜನ, ಜಮೀನುಗಳು “ಬೇ ವಾರೀಸ್” (ನಿರ್ಗತಿಕ) ಗಳಾಗುತ್ತಿರು ಈ ದಿನಗಳಲ್ಲಿ ಯಂತ್ರೋಪಕರಣಗಳು ಕೃಷಿಗೆ ಒಂದಷ್ಟು ಚೈತನ್ಯ ತುಂಬಿದ್ದು,ಆಕರ್ಷಣೀಯವಾದದ್ದು ನಿಜವೇ ಹೌದು.

ನಮ್ಮ ದಕ್ಷಿಣ ಕನ್ನಡದ ಊರಿಗೆ ಅನ್ವಯಿಸುವಂತೆ , ಎಂಬತ್ತರ ದಶಕದಲ್ಲಿ,ಜನ ಸಂಖ್ಯೆ ಬೆಳೆದಂತೆಯೇ, ಕೃಷಿ ಕ್ಷೇತ್ರ ನಿಧಾನವಾಗಿ ಸಾಂಪ್ರದಾಯಿಕವಲ್ಲದ ನೆಲದಲ್ಲಿ ವಿಸ್ತರಣೆಗೆ ಶುರುವಿಟ್ಟುಕೊಂಡ ದಿನಗಳು, ಜನಮಾನಸಕ್ಕೆ ಕೃಷಿಯ ಬಗ್ಗೆ ಗೌರವ, ಒಲವು,ಆಕರ್ಷಣೆ, ಆಸಕ್ತಿ ಇದ್ದ ದಿನಗಳು.ನೀರಾವರಿಗಾಗಿ ಬೋರ್ ವೆಲ್ ಗಳು,ಸಬ್ಮರ್ಸಿಬಲ್ ಪಂಪ್,ಸ್ಪಿಂಕ್ಲರ್ ಗಳು ಊರ ತೋಟಗಳಲ್ಲಿದ್ದ ನೀರ ದಂಡೆ,ನೀರು ಹಾಯಿಸುತ್ತಿದ್ದ “ಚಿಲ್ಲಿ” “ಕೊರಿಂಗೆ”ಗಳನ್ನು ಬದಿಗೆ ಸರಿಸಿ ಶ್ರಮ ಕಡಿಮೆಗೊಳಿಸಿದ್ದು ಅನಂತರದ ಡ್ರಿಪ್ ನೀರಾವರಿ ಮುಂತಾದವು ಕೃಷಿ ವಿಸ್ತರಣೆಗೆ ಪೂರಕವಾದವು.

ಅದೇ ಎರಡು ಸಾವಿರದ ಐದರ ನಂತರ ಕೃಷಿ ಕ್ಷೇತ್ರದ ಮಾನಸಿಕತೆ ಇನ್ನಷ್ಟು ಬದಲಾಗುತ್ತಾ ಇನ್ನಷ್ಟು ಅನಾಥವಾಗುತ್ತಾ,ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಕವಿವಾಣಿ ಪುಸ್ತಕಕ್ಕೇ ಸೀಮಿತವಾಗಿ,ಹುಟ್ಟಿ ಬೆಳೆದ ಮಣ್ಣಲ್ಲಿ ಬೇರು ಮಾತ್ರ ಉಳಿವಂತೆ,ನವ ಜನತೆ ಇನ್ನೆಲ್ಲೋ ಚಿಗಿತುಕೊಳ್ಳಲು ವಿಶ್ವ ಪ್ರವಾಹದಲ್ಲಿ ದುಮುಕಿತು. ಆಗ ಕೃಷಿ ಕಾರ್ಯದಲ್ಲಿ ಹೆಗಲು ಕೊಟ್ಟು ಕಾಪಾಡಲು ಬಂದದ್ದೇ ಯಂತ್ರ ತಂತ್ರಜ್ಞಾನ.

ಅಡಿಕೆ ಕೃಷಿಯಲ್ಲಿ ಮುಖ್ಯವಾಗಿ ಕೊಳೆರೋಗಕ್ಕೆ ಸಿಂಪರಣೆಯೇ ಸವಾಲು….ಮಳೆ,ಮರವೇರಲು ಸಾದ್ಯವಾಗದಿರುವುದು, ಕುಶಲ ಕೆಲಸಗಾರರ ಕೊರತೆ,ತೋಟಗಳಲ್ಲಿ ಕಳೆ ನಿರ್ವಹಣೆ,ಗೊಬ್ಬರ,ಉತ್ಪನ್ನಗಳ ಸಾಗಣೆ,ದೊಡ್ಡ ಸಮಸ್ಯೆಯಾಗುತ್ತಾ ಬಂತು.ಆ ಸಂಧರ್ಭದಲ್ಲಿ ಕೃಷಿ ಹಿನ್ನೆಲೆಯ ಕೆಲವೊಬ್ಬರಿಂದ ಹೊಸ ಮಾದರಿಯ ಯಂತ್ರೋಪಕರಣಗಳು ಪರಿಚಯಿಸಲ್ಪಟ್ಟವು.

ಇಂದು ಪ್ರತಿಯೊಬ್ಬ ಕೃಷಿಕನೂ ಕೆಲಸ ಕಾರ್ಯಗಳನ್ನು ಸುಲಭಗೊಳಿಸುವತ್ತ ಮುಖ ಮಾಡಿದ್ದಾನೆ. ತೋಟದ ಮೂಲೆ ಮೂಲೆಗಳಿಗೆ ರಸ್ತೆ,ಮರವೇರಲು ಬೈಕ್,ಪಂಪ್ ಕೂತಿರುವಲ್ಲಿಂದಲೇ ಚಾಲನೆ ಮಾಡಲು ರಿಮೋಟ್ ಸ್ಟಾರ್ಟರ್ ಗಳು, (ಪಂಪ್ ಚಾಲನೆ ಮಾಡುವ ನೆಪದಲ್ಲಾದರೂ ತೋಟಕ್ಕೆ ಹೋದರೆ ಆಗುಹೋಗುಗಳನ್ನು ಗಮನಿಸಬಹುದು ) ಮೊಬೈಲ್ ಮೂಲಕ ಕಾರ್ಮಿಕರಿಗೆ ಸೂಚನೆ ಕೊಡುವ ವ್ಯವಸ್ಥೆ, ನೀರಾವರಿಯೊಂದಿಗೇ ನಿಖರವಾಗಿ ಗೊಬ್ಬರ ಕೊಡುವ ಪದ್ಧತಿ, ಸೋಲಾರ್ ವಿದ್ಯುತ್, ಉತ್ಪನ್ನಗಳನ್ನು ಒಣಗಿಸುವ,ಕಾಪಿಡುವ,ಬೇರ್ಪಡಿಸುವ ತಂತ್ರಗಳು,ಯಂತ್ರಗಳು,ಮಾರುಕಟ್ಟೆ ಮಾಹಿತಿ, ವಾತಾವರಣದ ಬಗ್ಗೆ ಮುನ್ಸೂಚನೆ,ಮುಂತಾಗಿ ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಅವಶ್ಯಕತೆಗಳನ್ನು,ಕೆಲಸಗಳನ್ನು ಹಗುರಗೊಳಿಸಿದ್ದು ಹೌದು.

ಎಲ್ಲವೂ ಹೌದೆಂದರೂ ಕೃಷಿಯಲ್ಲಿ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ,ಆಳು ಹೋದಲ್ಲಿ ಹಾಳು,ಎಂಬ ಮಾತು ತುಂಬಾ ಅನ್ವಯಿಕವಲ್ಲವೇ,ಒಂದಷ್ಟು ನೇರವಾದ,ಸ್ಪಷ್ಟವಾದ ಮಾಹಿತಿಗಳು ಕೃಷಿಕನಿಗೆ ಬೇಕೇ ಬೇಕು, ಇಲ್ಲದಿದ್ದರೆ ನನ್ನ ಕಾಲೇಜು ದಿನಗಳಲ್ಲಿ ಇಂಗ್ಲಿಷ್ ಪ್ರೊಫೆಸರ್ ಮಾಧವ ಭಟ್ ಆಗಾಗ ಹೇಳುತ್ತಿದ್ದಂತೆ….ಯಂತ್ರೋಪಕರಣಗಳು …Francastrain’s Robot ಗಳಾಗಿ ನಮ್ಮನ್ನೇ ಆಪೋಷನ ತೆಗೆದುಕೊಂಡಾವು. ಕೃಷಿಯಲ್ಲಿ ಸ್ವತಃ ತೊಡಗಿಸಿಕೊಂಡು ,ಮಾಹಿತಿ ಪಡೆದುಕೊಳ್ಳುವುದು ತೀರಾ ಅವಶ್ಯಕ ಅಲ್ಲವೇ……ಏನು ಮಾಡೋಣ….ಪ್ರವಾಹದೊಂದಿಗೆ ಈಜೋಣವೇ….ವಿಮುಖರಾಗೋಣವೇ….ಕಾಲಾಯ ತಸ್ಮೈ ನಮ:

“ಸದ್ವಿಚಾರ ಧಾರೆಯಿಂದ ಹೊಮ್ಮಲಿ ಸ್ಪೂರ್ತಿ”….
” ನವೋತ್ಸಾಹದಿಂದ ಹೊರಗೆ ಹೊಮ್ಮಲಿ ಶಕ್ತಿ ”

ಚಿಲ್ಲಿ=ಅಡಿಕೆ ಹಾಳೆಯಿಂದ ನೀರು ಹಾಯಿಸಲು ಮಾಡುತ್ತಿದ್ದ ಸಾಧನ
ಕೊರಿಂಗೆ=ಬೈನೆ ಮರದ ಒಂದು ಭಾಗ,ಇದರಿಂದಲೂ ನೀರು ಹಾಯಿಸುತ್ತಿದ್ದರು.
Francastrain’s Robot= ಈತ ಒಬ್ಬ ಕಾಲ್ಪನಿಕ ವಿಜ್ಞಾನಿ,ತನ್ನ ಸಹಾಯಕ್ಕಾಗಿ ಒಂದು ರೋಬೋಟ್ ತಯಾರಿಸುತ್ತಾನೆ….ನಂತರ ಅದೇ ರೋಬಾಟ್ ಅವನನ್ನೇ ಅಪೋಶನ ತೆಗೆದುಕೊಳ್ಳುತ್ತದೆ.
ಸದ್ವಿಚಾರ….= ಸಂಘ ಗೀತೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್
ಹೊಸರುಚಿ | ಎಳೆಯ ಹಲಸಿನ ಕಾಯಿ 65 – ಕರಕರಾ, ರುಚಿಕರ ಸ್ನ್ಯಾಕ್ ರೆಸಿಪಿ
February 22, 2026
9:09 AM
by: ದಿವ್ಯ ಮಹೇಶ್
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror