ಮಡಿಕೇರಿ : ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ಹಾಗೂ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು, ತಾನೇ ಸ್ವತಃ ನೇತೃತ್ವ ವಹಿಸಿಕೊಂಡು ಈ ಭಾಗದ ಆಸ್ಪತ್ರೆಗಳ ಸುಧಾರಣೆಗೆ ವಿಶೇಷ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.
ಗುರುವಾರ ರಾತ್ರಿ ಇಲ್ಲಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಖುದ್ದು ಪರಿಶೀಲಿಸಿ, ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಕುರಿತು ಸಾರ್ವಜನಿಕರು ಗಮನಸೆಳೆದಿರುವುದಕ್ಕೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ನುಡಿದರು.
ಖಾಸಗಿ ಕಾರ್ಯನಿರ್ವಹಣೆ ತಡೆಗೆ ಕಾನೂನು: ಸರ್ಕಾರಿ ಆಸ್ಪತ್ರೆಯ ವೈದ್ಯರು ಎರಡು ದೋಣಿಯ ಪಯಣ ಮಾಡಬಾರದು. ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ಆಸ್ಪತ್ರೆಗಳಲ್ಲೂ ಕಾರ್ಯ ನಿರ್ವಹಿಸುವುದು ಅವರಿಗೆ ಶೋಭೆಯಲ್ಲ. ಒಂದು ವೇಳೆ ಅಲ್ಲಿಯೂ ಕೆಲಸ ಮಾಡುವುದಾದರೆ ಸರ್ಕಾರಿ ಆಸ್ಪತ್ರೆ ಬಿಟ್ಟು ತೊಲಗಲಿ ಎಂದೂ ಎಚ್ಚರಿಕೆ ನೀಡಿದ ಅವರು, ಈ ಸಂಬಂಧ ಕಾನೂನು ತರಲು ಪ್ರಯತ್ನಿಸುವುದಾಗಿ ನುಡಿದರು.
ಈ ಹಿಂದೆ ಕೆಪಿಎಸ್ಸಿಯಿಂದ ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈಗ ಅಗತ್ಯವಿರುವ ವೈದ್ಯರ ನೇಮಕಾತಿಗೆ ಡಿಎಚ್ಒಗಳಿಗೆ ಅಧಿಕಾರ ನೀಡಲಾಗಿದೆ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸುಧಾರಣೆ ಆಗಬೇಕು. ಖಾಸಗಿ ಆಸ್ಪತ್ರೆಗಳಿಗೆ ಪ್ರತಿಸ್ಪರ್ಧಿಯಾಗಿ ಸರ್ಕಾರಿ ಆಸ್ಪತ್ರೆಗಳು ಬೆಳೆಯಬೇಕು. ಅದಕ್ಕೆ ವಿಶೇಷ ಅನುದಾನ ನೀಡಲಾಗುವುದು. ಆಸ್ಪತ್ರೆಗಳಲ್ಲಿರುವ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿ ಇರಬೇಕು. ಸಾರ್ವಜನಿಕರಿಂದ ಈ ಬಗ್ಗೆ ದೂರುಗಳು ಕೇಳಿ ಬರಬಾರದು. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತ್ಯೇಕ ಅನುದಾನ ಮೀಸಲಿಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲೇ ವಾಸ್ತವ್ಯ: ನಗರದ ಜಿಲ್ಲಾ ಆಸ್ಪತ್ರೆಯ ಸ್ಥಿತಿಗತಿಯನ್ನು ಖುದ್ದು ಪರಿಶೀಲಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಬಳಿಕ ಆಸ್ಪತ್ರೆಯಲ್ಲೇ ವಾಸ್ತವ್ಯ ಮಾಡಿದರು. ಅದಕ್ಕೂ ಮೊದಲು ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯವನ್ನು ಸಚಿವರು ವಿಚಾರಿಸಿದರು.
ಸಚಿವರಿಗೆ ಜಿಲ್ಲಾಸ್ಪತ್ರೆಯ ನೆಲಮಹಡಿಯ ರೋಗಿಗಳ ಚಿಕಿತ್ಸಾ ಕೊಠಡಿ, 2ನೇ ಮಹಡಿಯ ಡೀನ್ ಕೊಠಡಿ, ಮೂರನೇ ಮಹಡಿಯ ವೈದ್ಯರ ಕೊಠಡಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರೋಗಿಗಳಿಗೆ ವಿತರಣೆ ಮಾಡುವ ಬೆಡ್ ಹಾಗೂ ಬ್ಲಾಂಕೆಟ್ ನ್ನೇ ಸಚಿವರು ಮಲಗಲು ಬಳಸಿದ್ದು ವಿಶೇಷವಾಗಿತ್ತು.
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…