ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದು ಹಾಗೂ ನಿಯಂತ್ರಣಕ್ಕೆ, ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ರಾಜ್ಯ ಸರಕಾರ ಕೈಗೊಳ್ಳುತ್ತಿದೆ. ಇದೀಗ 1700 ಬೆಡ್ ಆಸ್ಪತ್ರೆಯನ್ನು ವಿಶೇಷವಾಗಿ (ಕೊರೊನಾ) ಕೋವಿಡ್ -19 ಕೇರ್ ಹಬ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಅದರ ಜೊತೆಗೆ 24*7 ಕರ್ತವ್ಯದಲ್ಲಿರುವ ಸಿಬಂದಿಗಳು ಹಾಗೂ ಸೀಎಂ ನೇತೃತ್ವದಲ್ಲಿಯೇ ಗಮನಿಸುವ ತಂಡ ವ್ಯವಸ್ಥೆ ಮಾಡಲಾಗಿದೆ.
ಮಾ.22 ರಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರಮುಖ ಅಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭ ಕರೋನಾ ವೈರಸ್ ತಡೆ ಹಾಗೂ ಎದುರಿಸಲು ಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚಿಸಲು ವಿಶೇಷ ಕಾರ್ಯಪಡೆ ರಚಿಸಿ ಅದರ ಸದಸ್ಯರೊಂದಿಗೆ ತುರ್ತು ಸಭೆಯಲ್ಲಿ ನಡೆಯಿತು. ಈ ಸಂದರ್ಭ 1,700 ಹಾಸಿಗೆಗಳ ವಿಕ್ಟೋರಿಯಾ ಆಸ್ಪತ್ರೆಯನ್ನು ಸದ್ಯಕ್ಕೆ ಕೋವಿಡ್ -19 ಕೇರ್ ಹಬ್ ಆಗಿ ನಿರ್ವಹಿಸಲು ಪ್ರತ್ಯೇಕವಾಗಿ ಕಾಯ್ದಿರಿಸಲಾಗುವುದು ಎಂದು ಘೋಷಿಸಿದರು. ಈಗಾಗಲೇ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುವುದು.
ಸಭೆಯಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಅವರೊಂದಿಗೆ ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಉಪಸ್ಥಿತರಿದ್ದರು.