ಗುಡ್ಡದ ಮನೆಗಳಿಗೆ ಮಡಿಕೇರಿ ನಗರಸಭೆ ನೋಟಿಸ್ : ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

June 21, 2019
11:00 AM

ಮಡಿಕೇರಿ: ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪದಿಂದ ಪಾರಾಗುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರ ಬಡಾವಣೆಗಳ ನಿವಾಸಿಗಳಿಗೆ ನಗರಸಭೆ ನೋಟಿಸ್ ಜಾರಿ ಮಾಡಿದ್ದು, ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ಈಗಾಗಲೇ ಮಳೆಯ ಆತಂಕದ ನಡುವೆಯೇ ಕಾಲ ಕಳೆಯುತ್ತಿರುವ ಈ ನಗರಗಳ ಜನತೆ, ಇದೀಗ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದರೆ ಎಲ್ಲಿಗೆ ತೆರಳುವುದೆಂದು ತೋಚದೆ ಕಂಗಾಲಾಗಿದ್ದಾರೆ.

Advertisement
Advertisement

ಕಳೆದ ಬಾರಿಯ ಜಲಪ್ರಳಯಕ್ಕೆ ಕೊಡಗು ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಅವುಗಳಲ್ಲಿ ಮಡಿಕೇರಿ ನಗರದ ಈ ಮೂರು ವಾರ್ಡ್‍ಗಳು ಹೆಚ್ಚು ಅನಾಹುತಕ್ಕೆ ತುತ್ತಾಗಿದ್ದವು. ಅದರ ಕರಾಳ ನೆನೆಪು ಮಾಸುವ ಮುನ್ನವೇ ಮತ್ತೊಂದು ಮಳೆಗಾಲ ಆರಂಭವಾಗಿದ್ದು, ನಗರಸಭೆ ನೀಡಿರುವ ನೋಟಿಸ್ ಅಪಾಯದ ಸ್ಥಳದಲ್ಲಿರುವ ಜನರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಈ ಮೂರು ನಗರಗಳಲ್ಲಿ ಬೆಟ್ಟ, ಗುಡ್ಡದ ನಡುವೆಯೇ ನೂರಾರು ಮನೆಗಳಿವೆ.ಕಳೆದ ಮಳೆಗಾಲದಲ್ಲಿ ಅರ್ಧ ಬಿದ್ದು, ಅಪಾಯದಂಚಿನಲ್ಲಿರುವ ಮನೆಗಳಲ್ಲೇ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ನಗರಸಭೆಯ ನೋಟಿಸ್ ಅವರಿಗೆ ಮತ್ತೊಂದು ಶಾಕ್ ನೀಡಿದ್ದು, ಮುಂದೇನು ಮಾಡಬೇಕೆಂದು ತಿಳಿಯದೆ ಜನರು ಭಯದಿಂದ ಕಾಲ ಕಳೆಯುತ್ತಿದ್ದಾರೆ.

 

ನೋಟಿಸ್ ಹೀಗಿದೆ :
2018ನೇ ಸಾಲಿನಲ್ಲಿ ಮಳೆಗೆ ಆದ ನಷ್ಟ, ತೊಂದರೆಗಳು ಮರುಕಳಿಸದೇ ಇರಲು ಅಪಾಯ ಸ್ಥಿತಿಯಲ್ಲಿರುವ ಸ್ಥಳ, ಮನೆ, ಎತ್ತರದ ಪ್ರದೇಶದಲ್ಲಿರುವ ಮನೆಗಳು, ಇಳಿಜಾರು ಬೆಟ್ಟದ ಕೆಳಗೆ ಇರುವ ಮನೆಗಳು, ಮರಗಳ ಕೆಳಭಾಗದಲ್ಲಿ ಇರುವ ಮನೆಗಳಲ್ಲಿ ವಾಸವಿರುವವರು ಸುರಕ್ಷತೆಯ ದೃಷ್ಟಿಯಿಂದ ಮಳೆಗಾಲದ ಅವಧಿಯಲ್ಲಿ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಅವಶ್ಯವಿದೆ. ಸದ್ಯ ನೀವು ವಾಸವಾಗಿರುವ ಸ್ಥಳ ಮಳೆ, ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ವಾಸಿಸಲು ಯೋಗ್ಯವಿಲ್ಲದ ಕಾರಣ ಪ್ರಾಣ ಹಾನಿಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ನೀವು ವಾಸಿಸುತ್ತಿರುವ ಸ್ಥಳವನ್ನು ತೆರವುಗೊಳಿಸುವುದು. ಈ ಸೂಚನೆಯನ್ನು ಪಾಲಿಸದ ಪಕ್ಷದಲ್ಲಿ ಮುಂದೆ ಆಗುವ ಕಷ್ಟ ನಷ್ಟಗಳಿಗೆ ನೀವೇ ಜವಾಬ್ದಾರರಾಗುತ್ತೀರಿ’ ಎಂದು ನಗರಸಭೆ ನೀಡಿರುವ ನೋಟೀಸ್‍ನಲ್ಲಿ ಎಚ್ಚರಿಸಲಾಗಿದೆ.

 

Advertisement

ಅತಂತ್ರ ಆತಂಕ :
‘ಸುರಕ್ಷತೆ ದೃಷ್ಟಿಯಿಂದ ನಗರಸಭೆ ನೋಟಿಸ್ ನೀಡಿದೆ. ಆದರೆ ಇಷ್ಟು ಸಮಯ ಸುಮ್ಮನಿದ್ದ ನಗರಸಭೆ ಈಗ ನೋಟೀಸ್ ನೀಡಿ ಮನೆ ಖಾಲಿ ಮಾಡಿ ಎನ್ನುತ್ತಿದೆ. ಸರಿ ಮನೆ ಬಿಟ್ಟು ಹೋಗ್ತೀವಿ, ಆದ್ರೆ ಎಲ್ಲಿಗೆ ಹೋಗೋದು? ಪರ್ಯಾಯ ವ್ಯವಸ್ಥೆ ಮಾಡದೆ ಮನೆಬಿಟ್ಟು ಹೋಗಿ ಅಂದ್ರೆ ಹೇಗೆ ? ಎಂದು ಈ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ.
ಮಳೆಯ ಆತಂಕ, ಕಳೆದ ವರ್ಷದ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಮಳೆ ಎದುರಿಸಬೇಕಾದ ನೋವಿನ ನಡುವೆ ಜನರಿದ್ದಾರೆ. ನೋಟಿಸ್ ಪಡೆದುಕೊಂಡ ಮಂದಿ ಸುರಕ್ಷಿತ ಸ್ಥಳಕ್ಕಾಗಿ ಹುಡುಕಾಡುತ್ತಿದ್ದಾರೆ. ಜಿಲ್ಲಾಡಳಿತ ಮನೆ ಖಾಲಿ ಮಾಡುವವರನ್ನು ಬೀದಿಗೆ ಬಿಡದೆ ತಾತ್ಕಾಲಿಕವಾಗಿಯಾದರು ಸೂರು ನೀಡಬೇಕು ಎಂದು ಕೆಲವು ಸ್ಥಳೀಯರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಬಾಡಿಗೆ ಮನೆ ಸಿಗೋದೆ ಕಷ್ಟ 
ಮಡಿಕೇರಿ ನಗರದಲ್ಲಿ ಬಾಡಿಗೆ ಮನೆ ಸಿಗುವುದೇ ಕಷ್ಟ, ಸಿಕ್ಕಿದರೂ ದುಬಾರಿ ಬಾಡಿಗೆ ಪಾವತಿಸಬೇಕಾಗಿದೆ. ಇದ್ದ ಮನೆಗಳೆಲ್ಲ ಹೋಂಸ್ಟೇಗಳಾಗಿ ಪರಿವರ್ತನೆಯಾಗಿದ್ದು, ಮನೆಗಳಿಗೆ ಎಲ್ಲಿ ಹುಡುಕುವುದು ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

ಕಳ್ಳರದ್ದೇ ಭಯ
ಕಳೆದ ಬಾರಿ ವಿಕೋಪ ಉಂಟಾದ ಸಂದರ್ಭ ಈ ಭಾಗದಲ್ಲಿ ಎಲ್ಲರೂ ಮನೆ ಖಾಲಿ ಮಾಡಿದ್ದರು. ಆದರೆ ಹಿಂತಿರುಗಿ ಬಂದ ಸಂದರ್ಭ ಕೆಲವು ಮನೆಯಲ್ಲಿ ಕಳ್ಳತನದ ಪ್ರಕರಣವೂ ಬೆಳಕಿಗೆ ಬಂದಿತ್ತು. ಈ ಎಲ್ಲಾ ಘಟನೆಯಿಂದ ಜನತೆ ಆತಂಕಗೊಂಡಿದ್ದಾರೆ. ನಗರಸಭೆ ಸುರಕ್ಷತೆ ದೃಷ್ಟಿಯಿಂದ ನೋಟಿಸ್ ನೀಡಿದೆ. ಆದ್ದರಿಂದ ತಾತ್ಕಾಲಿಕವಾಗಿ ತಂಗಲು ಮನೆ ಹುಡುಕಲಾಗುತ್ತಿದೆ. ಆದರೆ ಮನೆಗಳು ಸಿಗುತ್ತಿಲ್ಲ. ಅಲ್ಲದೆ ಒಂದು ವಾರಕ್ಕೂ ಹೆಚ್ಚಿನ ಸಮಯ ಮನೆಯಿಂದ ಹೊರಗೆ ಇದ್ದಲ್ಲಿ ಕಳ್ಳರ ಕಾಟವೂ ಇದೆ ಎನ್ನುತ್ತಾರೆ ಸ್ಥಳೀಯರು.

 

Advertisement

ಗುಡ್ಡ ಜರಿಯುವ ಈ ಸ್ಥಳದಲ್ಲಿ ಕಳೆದ ಬಾರಿಯ ಮಳೆಯ ಅನಾಹುತಕ್ಕೆ ಹಲವರು ಮನೆ ಕಳೆದುಕೊಂಡಿದ್ದರು. ಈ ವರ್ಷವೂ ಹಾಗೇನಾದರೂ ಆದರೆ ಕಷ್ಟ ಎಂದು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಪಾಯದಂಚಿನಲ್ಲಿರುವ ಮನೆಗಳವರಿಗೆ ನಗರಸಭೆ ನೋಟಿಸ್ ನೀಡಿದೆ ಎಂದು ಪೌರಾಯಕ್ತ ರಮೇಶ್ ಅವರು ಹೇಳಿದ್ದಾರೆ.ಅಪಾಯದಂಚಿನಲ್ಲಿರುವ ಮನೆಗಳಿಗೆ ವರ್ಷ ವರ್ಷ ನೋಟಿಸ್ ನೀಡಲಾಗುತ್ತದೆ. ಕಳೆದ ಬಾರಿ ಹೆಚ್ಚು ಮಳೆಯಾಗಿ ಅಧಿಕ ಹಾನಿಯುಂಟಾಗಿದೆ. ಈ ಬಾರಿ ಹೀಗಾಗದಿರಲಿ ಎಂದು ಮುಂಚಿತವಾಗಿಯೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಅವರು.ಈ ಮೂರು ಬಡಾವಣೆಗಳಲ್ಲಿ 630ಕ್ಕೂ ಅಧಿಕ ಮನೆಗಳಿವೆ. ಆದರೆ ಅಪಾಯದಂಚಿನಲ್ಲಿರುವ ಮನೆಗಳಿಗೆ ಸುರಕ್ಷತೆ ದೃಷ್ಟಿಯಿಂದ ಮಾತ್ರ ನೋಟಿಸ್ ನೀಡಲಾಗುತ್ತಿದೆ. ಹೆಚ್ಚು ಮಳೆ ಬಂದರೆ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ರಮೇಶ್ ಹೇಳಿದ್ದಾರೆ.

 

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಕೃಷಿ ಇಲಾಖೆ ಸೂಚನೆ | ಭತ್ತ ಬೆಳೆಯುವವರಿಗೆ ವಿಶೇಷ ಗಮನ |
June 23, 2025
11:22 PM
by: The Rural Mirror ಸುದ್ದಿಜಾಲ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಇಳಿಕೆ
June 23, 2025
11:36 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?
June 21, 2025
8:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group