ಕೊರೊನಾ ಲಾಕ್ಡೌನ್ ನಂತರ ಇದೀಗ ಜೂ.8 ರಿಂದ ದೇವಸ್ಥಾನಗಳ ಬಾಗಿಲು ಭಕ್ತರಿಗೆ ತೆರೆಯುತ್ತಿದೆ. ಇದುವರೆಗೆ ಅರ್ಚಕರು ಹಾಗೂ ಅಗತ್ಯ ಸಿಬಂದಿಗಳು ದೇವಸ್ಥಾನದಲ್ಲಿ ಪೂಜೆ ಸಹಿತ ಇತರ ತುರ್ತು ಕಾರ್ಯ ಮಾಡುತ್ತಿದ್ದರು. ಜೂ.8 ರಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ದೇವಸ್ಥಾನದ ವಠಾರದಲ್ಲಿ ಇನ್ನೂ ಹೆಚ್ಚು “ಶುದ್ಧಾಚಾರ”ದಿಂದ ಎಲ್ಲಾ ಭಕ್ತಾದಿಗಳು ಇರಲೇಬೇಕಾಗಿದೆ. ಆಡಳಿತದಿಂದ ತೀರ್ಥಪ್ರಸಾದ ನೀಡುವುದು, ದೇವರಿಗೆ ಅಡ್ಡ ಬೀಳುವುದಕ್ಕೆ ಅವಕಾಶ ನಿರಾಕರಿಸಲಾಗಿದೆ.
Advertisement
ಕೊರೊನಾ ಲಾಕ್ಡೌನ್ ನಂತರ ಜೂ.8 ರಿಂದ ರಾಜ್ಯದ ಪ್ರಸಿದ್ಧ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಸಹಿತ ವಿವಿಧ ದೇಗುಲಗಳು ಭಕ್ತರ ಪ್ರವೇಶಕ್ಕೆ ಬಾಗಿಲು ತೆರೆಯುತ್ತದೆ. ಆದರ ಸರಕಾರ ಕೆಲವೊಂದು ಕಡ್ಡಾಯ ನಿಯಮ ಪಾಲಿಸಲು ಸೂಚಿಸಿದೆ. ಕೊರೊನಾ ಹರಡಂತೆ ಮುಂಜಾಗ್ರತಾ ಕ್ರಮ ವಹಿಸಿದೆ.
ಕುಕ್ಕೆ ಸುಬ್ರಹ್ಮಣ್ಯದ ಭಕ್ತರ ಪ್ರವೇಶಕ್ಕೆ ವಿವಿಧ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಬೆಳಗ್ಗೆ 8.30 ಕ್ಕೆ ದೇವಸ್ಥಾನ ಭಕ್ತಾದಿಗಳಿಗೆ ಬಾಗಿಲು ತೆರೆದರೆ ಸಂಜೆ 5.30 ರ ವರೆಗೆ ಮಾತ್ರವೇ ದೇವರ ದರ್ಶನಕ್ಕೆ ಅವಕಾಶ ಇದೆ. ಜೂ.30 ರವರೆಗೆ ದೇವಸ್ಥಾನ ವಸತಿ ಗೃಹಗಳಲ್ಲಿ ಕೊಠಡಿ ವ್ಯವಸ್ಥೆ ಇರುವುದಿಲ್ಲ. ದೇವಸ್ಥಾನ ಪ್ರವೇಶಕ್ಕೆ ಮುನ್ನ ಕಡ್ಡಾಯವಾಗಿ ಜ್ವರ ಪರೀಕ್ಷೆ, ಸ್ಯಾನಿಟೈಸರ್ ಬಳಕೆ ಇರುತ್ತದೆ. ಶೀತ, ಜ್ವರ ಇದ್ದವರಿಗೆ ಕಡ್ಡಾಯವಾಗಿ ಪ್ರವೇಶ ಇರುವುದಿಲ್ಲ, 65 ವರ್ಷ ಮೇಲ್ಪಟ್ಟ, 10 ವರ್ಷದ ಕೆಳಗಿನವರಿಗೆ, ಗರ್ಭಿಣಿಯರು ದೇವರ ದರ್ಶನ ಸದ್ಯಕ್ಕೆ ಮುಂದೂಡಬೇಕಾಗುತ್ತದೆ. ತೀರ್ಥ-ಗಂಧ, ಮಂಗಳಾರತಿ, ಪ್ರಸಾದ, ಅನ್ನಪ್ರಸಾದ ಇರುವುದಿಲ್ಲ. ಕೇವಲ ದೇವರ ದರ್ಶನ ಮಾಡಿ ಬರಬಹುದಾಗಿದೆ. ಒಳಗಡೆ ಕಡ್ಡಾಯವಾಗಿ ಸಾಮಾಜಿಕ ಅಂತರ, ಮುಖವಸ್ತ್ರ ಇರಲೇಬೇಕು. ಅಡ್ಡಬೀಳುವುದು ಹಾಗೂ ಕೂರುವುದಕ್ಕೆ ಅವಕಾಶ ಇಲ್ಲ.