ಧರ್ಮಸ್ಥಳ : ಪ್ರಾಚೀನ ಮತ್ತುಆಧುನಿಕತೆಯ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ, ಪರಂಪರೆ ಮತ್ತು ವೈವಿಧ್ಯಮಯ ಹಿನ್ನೆಲೆ ಹೊಂದಿರುವ ತುಳುಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೇಳರಿಮೆ ಹೊಂದದೆ ಅಭಿಮಾನ, ಗೌರವದೊಂದಿಗೆ ಉಳಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ ಹೆಗ್ಗಡೆಯವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್.ಡಿ.ಎಂ.ತುಳುಪೀಠ ಮತ್ತು ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಕನ್ನಡ ವಿಭಾಗದ ತುಳು ಸಂಘದ ಜಂಟಿ ಆಶ್ರಯದಲ್ಲಿಉಜಿರೆಯಲ್ಲಿಎಸ್.ಡಿ.ಎಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ “ತುಳುವೆರೆ ಪಾರಂಪರಿಕ ಜ್ಞಾನ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಳುನಾಡಿನ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು, ಸಂದಿ-ಪಾಡ್ದನಗಳು, ತಾಳ ಮದ್ದಳೆ, ಯಕ್ಷಗಾನ, ಜಾನಪದ ಕಲೆಗಳು, ಬಲೀಂದ್ರ ಪೂಜೆ, ಭೂತಾರಾಧನೆ, ನಾಗಾರಾಧನೆ, ಕೃಷಿ ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಪ್ರೇರಕವಾಗಿವೆ. ಸರ್ವಧರ್ಮೀಯರೊಂದಿಗೆ ಸಾಮರಸ್ಯದ ಸಾರ್ಥಕ ಬದುಕಿಗೆ ಮಾರ್ಗದರ್ಶಕವಾಗಿದೆ ಎಂದರು.
ಎಸ್.ಡಿ.ಎಂ.ಕಾಲೇಜಿನ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ರಚಿಸಿದ “ಅರಿವು” ಡಿಜಿಟಲ್ ಪತ್ರಿಕೆಯನ್ನು ಡಾ. ಬಿ. ಯಶೋವರ್ಮ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಯುವಜನತೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.
ತುಳು ನಾಡಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ, ಮೂಲ ನಂಬಿಕೆಗಳು:
ಅಧ್ಯಕ್ಷತೆ ವಹಿಸಿದ ಮಂಗಳೂರು ವಿ.ವಿ. ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ವೈವಿದ್ಯಮಯ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮರೆತರೂ, ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು ವೈಜ್ಞಾನಿಕ ಹಿನ್ನಲೆ ಹೊಂದಿದ್ದುಗೊಡ್ಡು ಸಂಪ್ರಾಯಗಳಲ್ಲ. ತುಳುನಾಡಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ, ಮೂಲ ನಂಬಿಕೆಗಳು ಎಂದು ಅವರು ಸ್ಪಷ್ಟ ಪಡಿಸಿದರು.
ಮಂಗಳೂರು ವಿ.ವಿ. ತುಳು ಪೀಠದ ಸಂಯೋಜಕ ಡಾ.ಮಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಸ್ವಾಗತಿಸಿದರು. ಡಾ. ಸನ್ಮತಿ ಕುಮಾರ್ ಧನ್ಯವಾದವಿತ್ತರು. ಡಾ. ದಿವಾಕರ ಕೆ. ಕಾರ್ಯಕ್ರಮ ನಿರ್ವಹಿಸಿದರು.