ಸುಳ್ಯ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕನಸು ಕಾಣಬೇಕು ಮತ್ತು ಅದರ ಸಾಕಾರಕ್ಕೆ ಸೃಜನಶೀಲವಾಗಿ ಪ್ರಯತ್ನ ನಡೆಸಬೇಕು. ಧನಾತ್ಮಕ ಚಿಂತನೆಯ ಸೃಜನಶೀಲತೆಯಿಂದ ಅದ್ಭುತ ಸಾಧನೆಯನ್ನು ಮಾಡಬಹುದು ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ.
ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯ ಮತ್ತು ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನೆಹರೂ ಸ್ಮಾರಕ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಡಾ.ಬಿ.ಪ್ರಭಾಕರ ಶಿಶಿಲರ ಆತ್ಮಕಥನ `ಬೊಗಸೆ ತುಂಬಾ ಕನಸು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯತೆಯ ಕಡೆಗೆ ನಡೆದ ಅದ್ಭುತ ಕಥೆ ಡಾ.ಪ್ರಭಾಕರ ಶಿಶಿಲ ಅವರದ್ದು. ಅವರ ಈ ಸಾಧನೆ ಬೊಗಸೆ ತುಂಬಾ ಕನಸು ರೂಪದಲ್ಲಿ ಹೊರ ಬಂದಿದೆ ಎಂದು ಅವರು ಹೇಳಿದರು.
ಮಾತನಾಡದ ಭಾಷೆಯೊಳಗೆ ದೇಶದ ಆತ್ಮ ಅಡಗಿದೆ-ಡಾ.ಬಿಳಿಮಲೆ
ಇದುವರೆಗೆ ಮಾತನಾಡದ ಸಣ್ಣ ಭಾಷೆಯೊಳಗೆ ಭಾರತದ ನಿಜವಾದ ಆತ್ಮ ಅಡಗಿದೆ ಎಂದು ಕೃತಿಯ ಬಗ್ಗೆ ಮಾತನಾಡಿದ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ.ಬಿ.ಪುರುಷೋತ್ತಮ ಬಿಳಿಮಲೆ ಹೇಳಿದರು. ಸಣ್ಣ ಭಾಷೆಯ ಮತ್ತು ಆ ಭಾಷೆಗಳನ್ನು ಮಾತನಾಡುವ ಸಮುದಾಯದ ಅನುಭವಗಳು ದೇಶದ ಸಂಸ್ಕೃತಿಯ ಭಾಗವಾಗಿ ಬರುತ್ತಿಲ್ಲ. ಸಣ್ಣ ಭಾಷೆಗಳ ಮತ್ತು ಸಣ್ಣ ಮನುಷ್ಯರ ಬದುಕು ಹಾಗು ಸಾಧನೆಗಳು ಒಂದೊಂದು ಹೆಜ್ಜೆ ಗುರುತಾಗಿ ದೇಶ ಕಟ್ಟಲು ಮೆಟ್ಟಿಲಾಗಬೇಕು. ನಮ್ಮ ಯೋಚನೆಗಳನ್ನು ಸ್ವಲ್ಪ ಬದಲಾಯಿಸಿದರೆ ಸಣ್ಣ ಜನರ ಆತ್ಮ ಚರಿತ್ರೆಗಳು, ಸಣ್ಣ ಭಾಷೆಗಳಲ್ಲಿ ಅಡಗಿರುವ ಮೌಲ್ಯಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟರು. ನಮ್ಮ ದೇಶ ಒಂದು ರಂಗೋಲಿಯಂತೆ ಅದು ನೂರಾರು ಬಣ್ಣಗಳನ್ನು ಒಳಗೊಂಡಿದೆ. ಅಂತಹಾ ರಂಗೋಲಿಗೆ ಶಿಶಿಲರು ಒಂದು ಬಣ್ಣ ಸೇರಿಸಿದ್ದಾರೆ ಎಂದರು.
ದೂರದೃಷ್ಠಿಯೇ ಬದುಕಿನ ದೃಷ್ಠಿ- ಡಾ.ಬಿ.ಯಶೋವರ್ಮ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ `ದೂರದೃಷ್ಠಿ ಇಲ್ಲದಿರುವುದು ದೃಷ್ಠಿ ಹೀನತೆಗಿಂತ ಕಷ್ಟಕರ. ಆದುದರಿಂದ ದೂರದೃಷ್ಠಿಯೇ ಬದುಕಿನ ದೃಷ್ಠಿಯಾಗಿರಬೇಕು ಎಂದು ಹೇಳಿದರು. ಜೀವನದ ಎಲ್ಲಾ ಕಷ್ಟಗಳನ್ನೂ ಎದುರಿಸಿ ಈ ಹಂತಕ್ಕೆ ಬೆಳೆದ ಡಾ.ಶಿಶಿಲರ ಆತ್ಮಕಥೆ ಬದುಕಿಗೆ ದೊಡ್ಡ ಭರವಸೆ ಮತ್ತು ಸಮಾಜಕ್ಕೆ ದೊಡ್ಡ ಕೊಡುಗೆ ಎಂದು ಬಣ್ಣಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ನಿರ್ದೇಶಕರಾದ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ. ಅತಿಥಿಗಳಾಗಿದ್ದರು. ನೆಹರೂ ಸ್ಮಾರಕ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘದ ಮಾರ್ಗದರ್ಶಕಿ ಪ್ರೊ.ರತ್ನಾವತಿ ಕೇರ್ಪಳ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಪೂವಪ್ಪ ಕಣಿಯೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಕಾಲೇಜಿನ ವಿದ್ಯಾರ್ಥಿ ನಾಯಕ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗಿರಿಧರ ಗೌಡ ಸ್ವಾಗತಿಸಿದರು. ಡಾ.ಪ್ರಭಾಕರ ಶಿಶಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ದಿನೇಶ್ ಮಡಪ್ಪಾಡಿ ವಂದಿಸಿದರು. ಅಚ್ಚುತ ಅಟ್ಲೂರು, ಡಾ.ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು. ಡಾ.ಪ್ರಭಾಕರ ಶಿಶಿಲ ದಂಪತಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…