ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಮೇ.20 ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯುವ ಸಮಯ ಕೊನೆಯಾಗುತ್ತಿದ್ದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. 20 ವಾರ್ಡ್ ಗಳಲ್ಲಿ ಒಟ್ಟು 66 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆಯ ವೇಳೆ ಒಬ್ಬ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು ಉಳಿದ 65 ನಾಮಪತ್ರಗಳು ಸ್ವೀಕೃತವಾಗಿದ್ದವು.
ಬಂಡಾಯ ಅಭ್ಯರ್ಥಿಗಳ ನಿಲುವು ನಿರ್ಣಾಯಕ:
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬಿಸಿ ತುಪ್ಪವಾಗಿರುವ ಬಂಡಾಯ ಅಭ್ಯರ್ಥಿ ಗಳು ನಾಮಪತ್ರ ಹಿಂಪಡೆಯತ್ತಾರಾ ಅಥವಾ ಕಣದಲ್ಲಿ ಮುಂದುವರಿಯುತ್ತಾರಾ ಎಂಬುದು ಎಲ್ಲೆಡೆ ಇರುವ ಕುತೂಹಲ. ತಲಾ ನಾಲ್ಕು ವಾರ್ಡ್ ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಬಂಡಾಯ ಸ್ಪರ್ಧೆ ಮತ್ತು ಅಸಮಾಧಾನ ತಲೆ ನೋವು ತಂದಿದೆ. ಬಂಡಾಯವನ್ನೂ, ಅಸಮಾಧಾನವನ್ನು ಶಮನ ಮಾಡಲು ಎರಡೂ ಪಕ್ಷಗಳು ಕಳೆದ ಮೂರು ದಿನಗಳಿಂದ ಶತಾಯ ಗತಾಯ ಪ್ರಯತ್ನ ನಡೆಸಿದ್ದವು. ಅದು ಫಲ ಕೊಡುತ್ತದಾ ಎಂದು ಕಾದು ನೋಡಬೇಕಾಗಿದೆ. 10ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಯ ನಾಮಪತ್ರ ತಿರಸ್ಕಾರಗೊಂಡ ಕಾರಣ ಬಿಜೆಪಿ ನಿಟ್ಟುಸಿರು ಬಿಡುವಂತಾಗಿದ್ದರೂ ಮಾಜಿ ಸದಸ್ಯರಿಗೆ, ಸ್ಥಳೀಯ ಆಕಾಂಕ್ಷಿಗಳಿಗೆ ಸೀಟ್ ನೀಡಿಲ್ಲ ಎಂಬ ಅಸಮಾಧಾನ ಈಗಲೂ ಹೊಗೆಯಾಡುತಿದೆ. 19 ಮತ್ತು 20ನೇ ಮಹಿಳಾ ಮೀಸಲು ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದು ಬಿಜೆಪಿಗೆ ತಲೆನೋವು ತಂದಿದೆ. ಇವರ ಜೊತೆ ಬಿಜೆಪಿ ಮುಖಂಡರು ಚರ್ಚೆ ನಡೆಸಿದ್ದರೂ ಅವರು ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇನ್ನು ಮೂರನೇ ವಾರ್ಡ್ ನಲ್ಲಿ ಟಿಕೆಟ್ ನೀಡದೆ ಹಿರಿಯ ಕಾರ್ಯಕರ್ತರೋರ್ವರನ್ನು ಕಡೆಗಣಿಸಿದೆ ಎಂಬ ಅಸಮಾಧಾನ ತೀವ್ರಗೊಂಡಿದೆ. ಇದರಿಂದ ಅಸಮಾಧಾನಗೊಂಡು ಬಿಜೆಪಿಯಲ್ಲಿ ಒಂದು ಗುಂಪು ಚುನಾವಣೆಯಲ್ಲಿ ತಟಸ್ಥರಾಗಲಿದ್ದಾರೆ ಎಂದು ಹೇಳಲಾಗಿದೆ. ಹೀಗೆ ಗೆಲುವು ಪಕ್ಕಾ ಎಂದು ಬಿಜೆಪಿ ನೇತೃತ್ವ ನಂಬಿರುವ ನಾಲ್ಕು ವಾರ್ಡ್ ಗಳಲ್ಲಿ ಬಂಡಾಯ ಮತ್ತು ಅಸಮಾಧಾನ ಯವ ರೀತಿ ಪರಿಣಾಮ ಬೀರಬಹುದು ಎಂಬ ಕುತೂಹಲ ಮೂಡಿದೆ.
ಇನ್ನು ಕಾಂಗ್ರೆಸ್ ಪಾಳಯಕ್ಕೆ ಬಂದರೆ ಬಂಡಾಯ ತಾರಕಕ್ಕೇರಿದೆ. ನಾಲ್ಕು ವಾರ್ಡ್ ಗಳಲ್ಲಿ ಪಕ್ಷದ ಟಿಕೇಟ್ ಆಕಾಂಕ್ಷಿಗಳು ಪಕ್ಷೇತರರಾಗಿ ಸ್ಪರ್ಧೆಗಿಳಿದಿರುವುದು ನ.ಪಂ.ಆಡಳಿತ ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 17ನೇ ವಾರ್ಡ್ ಬೋರುಗುಡ್ಡೆಯಲ್ಲಿ ಆರ್.ಕೆ.ಮಹಮ್ಮದ್ ಮತ್ತು 13ನೇ ವಾರ್ಡ್ ಬೂಡುವಿನಲ್ಲಿ ರಿಯಾಝ್ ಕಟ್ಟೆಕ್ಕಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ. 6ನೇ ವಾರ್ಡ್ ಬೀರಮಂಗಲ ದಲ್ಲಿ ಅಬ್ದುಲ್ ರಹಿಮಾನ್ ಮೊಗರ್ಪಣೆ ಮತ್ತು 15ನೇ ವಾರ್ಡ್ ನಾವೂರಿನಲ್ಲಿ ಅಬ್ದುಲ್ ಮಜೀದ್ ನಾಮಪತ್ರ ಸಲ್ಲಿಸಿದ್ದು ಕಾಂಗ್ರೆಸ್ ಗೆ ಬಿಸಿ ತಟ್ಟಲಿದೆ. ಈ ನಾಲ್ಕು ವಾರ್ಡ್ ಗಳಲ್ಲಿ ಬಂಡಾಯ ಶಮನಕ್ಕೆ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ಬಂಡಾಯ ಅಭ್ಯರ್ಥಿಗಳ ನಿಲುವು ಮಾತ್ರ ಇನ್ನೂ ಸಸ್ಪೆನ್ಸ್.
ಮೇ.20 ಮೂರು ಗಂಟೆಯ ವರೆಗೆ ಆ ಸಸ್ಪನ್ಸ್ ಮುಂದುವರಿಯಲಿದೆ. ಇನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯವಾಗುತ್ತದಾ ಎಂಬುದು ಮತ್ತೊಂದು ಸಸ್ಪೆನ್ಸ್.
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…