Advertisement
Political mirror

ನ.ಪಂ.ಪ್ರಯೋಗಶೀಲತೆ ರಾಜಕೀಯ ಪಕ್ಷಗಳಿಗೆ ಮುಂದಿನ ಚುನಾವಣೆಗೆ ದಿಕ್ಸೂಚಿ..!

Share

ಸುಳ್ಯನ್ಯೂಸ್.ಕಾಂ ಪೊಲಿಟಿಕಲ್ ರೌಂಡ್ ಅಪ್

# ಸ್ಪೆಷಲ್ ಕರೆಸ್ಪಾಂಡೆಂಟ್ , ಸುಳ್ಯನ್ಯೂಸ್.ಕಾಂ

ಸುಳ್ಯ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪಕ್ಷಗಳಿಗೆ ನಿಜವಾದ ಅಗ್ನಿ ಪರೀಕ್ಷೆ. ಸುಳ್ಯ ನಗರ ಪಂಚಾಯತ್ ಚುನಾವಣೆ ಮುಗಿದು ಫಲಿತಾಂಶವೂ ಹೊರ ಬಂದ ಬಳಿಕ ಪಕ್ಷಗಳು ನಿರಾಳರಾಗಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗಳು ಪಕ್ಷಗಳಿಗೆ ಹೇಗೆ ಅಗ್ನಿ ಪರೀಕ್ಷೆಯೋ ಹಾಗೆ ಒಂದು ರೀತಿಯಲ್ಲಿ ಪ್ರಯೋಗ ಶಾಲೆ ಕೂಡ. ಇಲ್ಲಿ ಮಾಡುವ ಪ್ರಯೋಗವು ಪಕ್ಷಗಳ ಮುಂದಿನ ಚುನಾವಣೆಗೆ ಆತ್ಮವಿಶ್ವಾಸವನ್ನೂ, ಧೈರ್ಯವನ್ನೂ ನೀಡುತ್ತದೆ. ಜೊತೆಗೆ ಸಂಘಟನಾ ಶಕ್ತಿಯನ್ನೂ ಹೆಚ್ಚಿಸುತ್ತದೆ. ಸುಳ್ಯ ಕ್ಷೇತ್ರವನ್ನು ತನ್ನ ಪ್ರಬಲ ಕೋಟೆಯನ್ನಾಗಿಸಿದರೂ ಬಿಜೆಪಿ ಇಲ್ಲಿ ಚುನಾವಣೆಯಲ್ಲಿ ಹೊಸ ಪ್ರಯೋಗ ಮಾಡುವುದು ತೀರಾ ವಿರಳ. ಆದರೆ ನಗರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ಪ್ರಯೋಗ ಯಶ ಕಂಡಿದೆ. ಬಂಡಾಯ, ಅಸಮಾಧಾನದ ನಡುವೆಯೂ ಸಂಪೂರ್ಣ ಹೊಸ ಮುಖಗಳನ್ನು ಕಣಕ್ಕಿಳಿಸಿ ಯಶ ಕಂಡಿರುವುದು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ ಚುನಾವಣೆಯ ಗೆಲುವು ಮುಖ್ಯ ಎಂದು ಭಾವಿಸಿ ಪ್ರಭಾವಿಗಳನ್ನೂ, ಟಿಕೆಟ್ ಆಕಾಂಕ್ಷಿಗಳನ್ನೂ ಕಡೆಗಣಿಸಿ ಪಕ್ಷದ ನೇತೃತ್ವಕ್ಕೆ ಹೊಸ ನಿರ್ಧಾರ ಕೈಗೊಳ್ಳಲು, ಹೊಸಬರಿಗೆ ಅವಕಾಶ ನೀಡಲು ಸಾಧ್ಯವಾಗುವುದೇ ಇಲ್ಲ. ಆದರೆ ನ.ಪಂ.ಚುನಾವಣೆಯಲ್ಲಿ ಗೆಲುವಿಗೆ ಅಭ್ಯರ್ಥಿಗಳ ಬದಲಾವಣೆ ಪಕ್ಷಕ್ಕೆ ಅನಿವಾರ್ಯವಾಗಿತ್ತು. ಆದುದರಿಂದಲೇ ಎಲ್ಲಾ ಸವಾಲುಗಳನ್ನೂ ಎದುರಿಸಿ ಹೊಸಬರಿಗೆ ಟಿಕೆಟ್ ನೀಡಿದರು. ಎಲ್ಲವನ್ನು ಮೀರಿ ಜಯಗಳಿಸಲೂ ಸಾಧ್ಯವಾಗಿದೆ. ಇದು ಮುಂದೆ ನಡೆಯುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಸಹಕಾರ ಸಂಘಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಖಡಕ್ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಬಹುದು.

ಗ್ರಾ.ಪಂ.ಗಳಲ್ಲಿ, ಸಹಕಾರಿ ಸಂಸ್ಥೆಗಳಲ್ಲಿ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆ ನಡೆಯದೇ ಇದ್ದರೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರೇ ಸ್ಪರ್ಧೆಗಿಳಿಯುತ್ತಾರೆ. ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷವೇ ಅಂತಿಮಗೊಳಿಸುತ್ತದೆ. ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಏಳು ಮಂದಿ ಅಡ್ಡಮತದಾನ ಮಾಡಿದ ಕಾರಣ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಸೋಲಾಗಿತ್ತು. ಶಿಸ್ತಿನ ಪಕ್ಷದಲ್ಲಿ ಆದ ಈ ಅಡ್ಡ ಮತದಾನ ಪ್ರಕರಣ ಪಕ್ಷಕ್ಕೆ ತೀವ್ರ ಮುಜುಗರವನ್ನೇ ಉಂಟು ಮಾಡಿತ್ತು. ಅಡ್ಡಮತದಾನ ಮಾಡಿದವರನ್ನು ಪತ್ತೆ ಹಚ್ಚಲು ಆಣೆ ಪ್ರಮಾಣ ಸೇರಿದಂತೆ ಹಲವಾರು ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಕೊನೆಗೆ ಸಹಕಾರಿ ಸಂಘಗಳ ಅಧ್ಯಕ್ಷರೂ ಸೇರಿ ಚುನಾವಣೆಯ ಪ್ರತಿನಿಧಿಗಳಾಗಿದ್ದ ಎಲ್ಲಾ 17 ಮಂದಿಯೂ ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಮತ್ತು ಇತರ ಪರಿವಾರ ಸಂಘಟನೆಯ ಪ್ರಮುಖರು ಸೂಚನೆ ನೀಡಿದ್ದರು. ಇದರಂತೆ ಬೆರಳೆಣಿಕೆಯ ಮಂದಿ ರಾಜಿನಾಮೆ ನೀಡಿದ್ದು ಬಿಟ್ಟರೆ ಬಹುತೇಕ ಮಂದಿ ಕ್ಯಾರೇ ಎನ್ನಲಿಲ್ಲ. ನಮಗೆ ಅಧಿಕೃತ ಸೂಚನೆ ಬಂದಿಲ್ಲ ಎಂದು ಹಲವರು ಸ್ಥಾನ ತ್ಯಜಿಸಲು ಒಪ್ಪಲಿಲ್ಲ ಇದು ಪಕ್ಷದ ನೇತೃತ್ವಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಮತ್ತು ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ ನ.ಪಂ‌.ನಲ್ಲಿ ಯಶ ಕಂಡ ಪ್ರಯೋಗ ಬಿಜೆಪಿ ನೇತೃತ್ವಕ್ಕೆ ತುಸು ಸಮಾಧಾನ ತಂದಿದೆ. ಮುಂದೆ ಬರುವ ಸಹಕಾರಿ, ಗ್ರಾ.ಪಂ ಚುನಾವಣೆಯಲ್ಲಿ ಸ್ಪಷ್ಟ ನಿರ್ಧಾರಕ್ಕೆ ನೇತೃತ್ವಕ್ಕೆ ಇದು ಶಕ್ತಿ ತುಂಬಲಿದೆ. ನ.ಪಂ.ನಲ್ಲಿ ಗೆಲುವು ಗ್ಯಾರಂಟಿ ಎಂದು ನಂಬಿದ್ದ ಒಂದೆರಡು ವಾರ್ಡ್ ಗಳ ಸೋಲು ಬಿಟ್ಟರೆ ಉಳಿದ ಇವರ ತಂತ್ರ ಪೂರ್ಣ ಯಶ ಕಂಡಿದೆ ಎಂದೇ ಹೇಳಬಹುದು.

ಕಾಂಗ್ರೆಸ್ ಗೆ ಕೈ ಕೊಟ್ಟ ಪ್ರಯೋಗ:

ಹಳೆ ಬೇರು ಹೊಸ ಚಿಗುರು ಹೊಂದಿದ ಸಮರ್ಪಕ ತಂಡ ನಮ್ಮದು ಎಂದು ಹೇಳಿ ಕಾಂಗ್ರೆಸ್‌ ಕಣಕ್ಕಿಳಿಸಿದ ತಂಡಕ್ಕೆ ಆಡಳಿತ ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಮಾತ್ರವಲ್ಲ ಕೇವಲ ನಾಲ್ಕು ಸ್ಥಾನಗಳಿಗೆ ತೃಪ್ತಿಪಡಬೇಕಾಗಿ ಬಂದಿದೆ. ಮೂರು ಬಾರಿ ನ.ಪಂ.ನ ಆಡಳಿತ ನಡೆಸಿದ ಬಿಜೆಪಿ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ. ದೇಶದಲ್ಲಿದ್ದ ಮೋದಿ ಅಲೆಯ ರಭಸಕ್ಕೆ ಇಲ್ಲಿದ್ದ ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್ ನ ನಿರೀಕ್ಷೆ ಎರಡೂ ಕೊಚ್ಚಿ ಹೋಗುವ ದೃಶ್ಯಕ್ಕೆ ನ.ಪಂ.ಚುನಾವಣೆ ಸಾಕ್ಷಿಯಾಯಿತು. ಕೆಲವು ವಾರ್ಡ್ ಗಳ ಅಭ್ಯರ್ಥಿ ಆಯ್ಕೆಯ ಗೊಂದಲ ಮತ್ತು ಬಂಡಾಯದ ಬಿಸಿಯಿಂದ ಕಾಂಗ್ರೆಸ್ ಗೆ ಹೊರ ಬರಲಾಗಲಿಲ್ಲ. ಇದರ ಪರಿಣಾಮ ಎರಡು ವಾರ್ಡ್ ಗಳಲ್ಲಿ ನೇರವಾಗಿ ಗೋಚರಿಸಿದರೆ ಎರಡು ಮೂರು ವಾರ್ಡ್ ಗಳಲ್ಲಿ ಪರೋಕ್ಷವಾಗಿ ಪರಿಣಾಮ ಬೀರಿದೆ. ಆದರೆ ಒಂದೆರಡು ವಾರ್ಡ್ ಗಳಲ್ಲಿ ಬಿಜೆಪಿಯ ಅಸಮಾಧಾನದ ಲಾಭ ಪಡೆದು ಮತ್ತು ಸಮರ್ಪಕವಾದ ಪ್ರಚಾರದ ಮೂಲಕ ಕಾಂಗ್ರೆಸ್ ಗೆಲುವು ಸಾಧಿಸಿದ್ದೂ ಇದೆ. ಕಾಂಗ್ರೆಸ್ ನ  ಹೊಸ ಮುಖಗಳು ಮೂರು ಕಡೆ ಗೆದ್ದರೆ ಕೆಲವೆಡೆ ವಿರೋಚಿತ ಹೋರಾಟ ನಡೆಸಿ ಪರಾಜಿತರಾದವರೂ ಇದ್ದಾರೆ. ಒಟ್ಟಿನಲ್ಲಿ ಗೆಲುವಿನ ಹಾದಿಗೆ ಬರಲು ಕಾಂಗ್ರೆಸ್ ಇನ್ನಷ್ಟು ಬದಲಾಗಬೇಕಿದೆ ಮತ್ತು ಬಿಜೆಪಿಯಂತೆ ಹೊಸ ಪ್ರಯೋಗಕ್ಕೂ ಮುಂದಾಗಬೇಕಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.

ಮತದಾರನ ಸ್ಪಷ್ಟ ಸಂದೇಶ:

ನ‌.ಪಂ.ಚುನಾವಣೆಯಲ್ಲಿ ಸುಳ್ಯದ ಮತದಾರ ನೀಡಿದ ಸ್ಪಷ್ಟ ಸಂದೇಶವನ್ನು ಯಾರೂ ಮರೆಯುವಂತಿಲ್ಲ. ಅಭಿವೃದ್ಧಿ ಮಾಡುವವರನ್ನು ಜನರ ಜೊತೆಯಾಗಿರುವವರನ್ನು ಮತದಾರ ಕೈ ಬಿಡುವುದಿಲ್ಲ ಎಂಬ ಸಂದೇಶ ವನ್ನು ಈ ಚುನಾವಣೆ ರವಾನಿಸಿದೆ. ಇಬ್ಬರು ಪಕ್ಷೇತರ ಗೆಲುವೇ ಅದಕ್ಕೆ ಸಾಕ್ಷಿ. ಯಾವುದೇ ಪಕ್ಷದ ಬೆಂಬಲ ಇಲ್ಲದೆ ಇವರ ನಿಲುವು ಮತ್ತು ಅಭಿವೃದ್ಧಿ ಪರ ಚಿಂತನೆ ಪಕ್ಷೇತರರಾಗಿ ಗೆದ್ದ ಕೆ.ಎಸ್.ಉಮ್ಮರ್ ಮತ್ತು ರಿಯಾಝ್ ಕಟ್ಟೆಕ್ಕಾರ್ ಗೆ ಶ್ರೀರಕ್ಷೆಯಾಯಿತು ಎಂದು ಸಾಮಾನ್ಯ ಜನರೂ ಹೇಳುತ್ತಾರೆ. ಕಳೆದ ಆಡಳಿತ ಮಂಡಳಿಯಲ್ಲಿ ಸದಸ್ಯನಾಗಿದ್ದ ಉಮ್ಮರ್ ತಳೆದ ನಿಲುವು ಮತ್ತು ಮಾಡಿದ ಅಭಿವೃದ್ಧಿ ಇವರ ಗೆಲುವಿಗೆ ಕಾರಣವಾಯಿತು. ಕಳೆದ ಬಾರಿ ಸದಸ್ಯನಾಗಿ ಮರು ಆಯ್ಕೆಯಾದ ಏಕೈಕ ಸದಸ್ಯ ಕೂಡ ಇವರು ಮಾತ್ರ.
ಯಾವುದೇ ಅಧಿಕಾರ ಇಲ್ಲದಿದ್ದರೂ ಜನ ಸಾಮಾನ್ಯನಾಗಿ ರಿಯಾಝ್ ಕಳೆದ ಒಂದು ವರ್ಷದಿಂದ ಜನಸಾಮಾನ್ಯರಿಗಾಗಿ ಮಾಡಿದ ಕೆಲಸ ಕಾರ್ಯಗಳಿಂದಾಗಿ ಎರಡು ಪ್ರಬಲ ಪಕ್ಷಗಳ ಅಭ್ಯರ್ಥಿಗಳನ್ನು ಹಿಂದಿಕ್ಕಿ ಜಯಶಾಲಿಯಾಗಲು ಸಹಾಯಕವಾಯಿತು ಎಂಬುದೇ ಮತದಾರನ ದೊಡ್ಡ ತೀರ್ಪುಗಳಲ್ಲೊಂದು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

11 hours ago

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

14 hours ago

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

14 hours ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

18 hours ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

18 hours ago