ಪತ್ತನಾಜೆ: ಗರಿಗೆದರುವ ಕೃಷಿ ಕಾರ್ಯಗಳು……

May 24, 2020
8:38 AM
ದೈನಿಕ ಕಾರ್ಯಗಳಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ಈ ವರ್ಷವಿದ್ದಂತೆ ಮುಂದಿನ ವರ್ಷವಿಲ್ಲ. ಅದರಲ್ಲೂ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಜನಜೀವನದ ಮೇಲಾದ ಪರಿಣಾಮ ಅಪಾರ.  ಲಾಕ್ ಡೌನ್ ನಿಂದಾಗಿ  ಉಂಟಾದ ಬದಲಾವಣೆಗಳು   ಕೇವಲ ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ  ಮಾತ್ರವಲ್ಲ ಸಾಂಸ್ಕೃತಿಕ ಕ್ಷೇತ್ರದ ಮೇಲೂ ನಡೆದಿದೆ.  ಅಲ್ಲದೆ ನಮ್ಮ ಧಾರ್ಮಿಕ ಆಚರಣೆಗಳಲ್ಲೂ ಅನಿವಾರ್ಯವಾಗಿ ಈ ಲಾಕ್ ಡೌನ್ ಪ್ರಭಾವ ಬೀರಿದೆ.
 ಇಂದು ಪತ್ತನಾಜೆ. ತುಳು ತಿಂಗಳ ಹತ್ತನೇಯ ದಿನ. ಇಂದಿನಿಂದ ಮಳೆಗಾಲ ಆರಂಭ ಎಂಬುದು ಇಲ್ಲಿನವರ ನಂಬಿಕೆ. ಹಾಗಾಗಿ  ಭೂತ ಕೋಲ, ನೇಮ, ತಂಬಿಲ, ಯಕ್ಷಗಾನ, ಜಾತ್ರೆಗಳಿಗೆಲ್ಲ ಇನ್ನು ವಿರಾಮ. ಗದ್ದೆ ಬೇಸಾಯದ ಕೆಲಸಗಳೆಲ್ಲ ಆರಂಭಿಸಲು ಸಕಾಲ. ಪತ್ತನಾಜೆಯಾದ ಮೇಲೆ ದೈವ  ಬೂತಗಳೆಲ್ಲಾ ಘಟ್ಟ ಹತ್ತುತ್ತವೆ ಎಂಬುದು ಜನಸಾಮಾನ್ಯರ ನಂಬಿಕೆ.  ದೀಪೋತ್ಸವಕ್ಕೆ ಶುರು ಆಗುವ ಮೇಳಗಳ ತಿರುಗಾಟಕ್ಕೆ ಪತ್ತನಾಜೆಯಿಂದ ವಿಶ್ರಾಂತಿ. ಊರಿಂದ ಊರಿಗೆ ತಿರುಗಾಡಿ ಸುಸ್ತಾದ ಕಲಾವಿದರ ಪಯಣಕ್ಕೆ ತಾತ್ಕಾಲಿಕ ವಿರಾಮ. ಬೇಸಾಯ ,ತೋಟದ ಕೆಲಸಗಳಲ್ಲಿ ಜನರು ‌ ತೊಡಗುವುದರಿಂದ ಮನರಂಜನಾ ಕಾರ್ಯಕ್ರಮಗಳಿಗೆ ಕೊಂಚ ವಿರಾಮ.  ಆದರೆ ಈ‌ ಬಾರಿ  ಮೇಳದಾಟ ನಿಂತು   ಹೆಚ್ಚು ಕಡಿಮೆ  ಎರಡು ತಿಂಗಳಾಯಿತು.  ಕೋಲ, ನೇಮಗಳೂ ಬಾಕಿಯಾಗಿವೆ.  ದೈವ ಭೂತಗಳೆಲ್ಲವೂ ಈ ಬಾರಿ ತಂಬಿಲಕ್ಕೆ  ಸಮಾಧಾನ ಪಡಬೇಕಾಯಿತು.  ಜಾತ್ರೆಗಳು ನಾಮಕಾವಸ್ಥೆಗೆ ಸದ್ದು ಗದ್ದಲ ವಿಲ್ಲದೆ  ನಡೆದಿವೆ.
ಕೊರೊನಾದಿಂದಾಗಿ  ಯಕ್ಷಗಾನ ಕಲಾವಿದರು, ನಾಟ್ಯ, ಸಂಗೀತ, ಸಿನೆಮಾ, ಧಾರಾವಾಹಿ ಕಲಾವಿದರು, ದೈವ ನರ್ತಕರೆಲ್ಲರೂ ನಿರುದ್ಯೋಗ ಸಮಸ್ಯೆಯಿಂದ  ಬವಣೆ ಪಡುತ್ತಿದ್ದಾರೆ. ಮೂರು ಹೊತ್ತಿನ ಅನ್ನಕ್ಕೂ ಸಂಕಷ್ಟವಾಗಿದೆ.‌  ಪತ್ತನಾಜೆಯಂದು ಗೆಜ್ಜೆ ಬಿಚ್ಚಬೇಕಾದವರು ಮೊದಲೇ  ಬಿಚ್ಚಿ  ಬಿಟ್ಟಿದ್ದಾರೆ.  ಸದ್ಯ ‌ಯಾವುದೇ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಎಂದಿನಂತೆ  ಮೇಳದ ತಿರುಗಾಟ ಮುಗಿಸಿ  ಮನೆಗೆ  ಬರುವ ಪತಿ ಮಗನನ್ನು ಕಾಯುವ ಅಗತ್ಯವಿಲ್ಲ. ಅವರೆಲ್ಲಾ ಮನೆಯಲ್ಲೇ ಇದ್ದಾರೆ. ಈ ಬಾರಿ ತೋಟದ ಕೆಲಸವಾದರೂ ಸಮಯಕ್ಕೆ ಮುಗಿಯ ಬಹುದೇನೋ ಎಂಬ  ನಿರೀಕ್ಷೆ .
‘ಪತ್ತನಾಜೆಗ್ ಪತ್ತ ಪನಿ ಬರ್ಸ’ ಎಂಬುದು ರೂಡಿಯಲ್ಲಿನ ಮಾತು. ಆದರೆ ಈ ಬಾರಿ ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದೆ. ಪತ್ತನಾಜೆ ದಿನದಿಂದ ಕೃಷಿ ಕಾರ್ಯಗಳಿಗೆ ಮೈ ಕೊಡವಿ ಸಿದ್ಧರಾಗ ಬೇಕಾಗಿದೆ.  ಮಳೆಗಾಲದ ಮೊದಲಿನ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸ ಬೇಕಾಗಿದೆ.  ಗದ್ದೆಯ ಕೆಲಸಗಳು, ತೋಟಕ್ಕೆ ಮದ್ದು ಸಿಂಪಡಣೆಯ ಕೆಲಸಗಳನ್ನು ಆರಂಭಿಸಲು  ಸಿದ್ಧರಾಗುವ ಸರದಿ ಕೃಷಿ ಮಿತ್ರರದ್ದು.
ಹಳೆಯ ಆಚರಣೆಗಳು ಮೌಲ್ಯ ‌ಕಳೆದು ಕೊಳ್ಳುತ್ತಿರುವ  ಸಂದರ್ಭದಲ್ಲಿ ನಮ್ಮ ಮುಂದಿನ  ಜನಾಂಗಕ್ಕೆ ಪತ್ತನಾಜೆಯ ಮಹತ್ವ ವನ್ನು ಹಸ್ತಾಂತರಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!
February 20, 2026
10:26 PM
by: ಅರುಣ್‌ ಕುಮಾರ್ ಕಾಂಚೋಡು
ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ
February 20, 2026
7:46 AM
by: ದ ರೂರಲ್ ಮಿರರ್.ಕಾಂ
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು
February 20, 2026
7:20 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror