ಸವಣೂರು : ಬೆಳಂದೂರು- ಪೆರುವಾಜೆ ರಸ್ತೆಯಲ್ಲಿ ವಾಹನ ಚಲಾಯಿಸುವುದು ಬಿಡಿ, ನಡೆದಾಡಲೂ ಸಾಧ್ಯವಾಗದು. ಅಷ್ಟು ಕುಲಗೆಟ್ಟು ಹೋಗಿದೆ. ತೀರಾ ಹದಗೆಟ್ಟಿರುವ ಬೆಳಂದೂರು – ಪೆರುವಾಜೆ ರಸ್ತೆಯ ಮೂಲಕ ಕಂಪ, ಪಾತಾಜೆ, ಪೆರುವಾಜೆ, ಪೆರುವೋಡಿ ಮೊದಲಾದೆಡೆ ಹೋಗಬಹುದಾಗಿದ್ದು, ಈ ರಸ್ತೆಯಲ್ಲಿ ಬೆಳಂದೂರುನಿಂದ ಬೆಳ್ಳಾರೆಗೆ ಇರುವ ದೂರ ಕೇವಲ 9 ಕಿ.ಮೀ. ಆದರೆ ಈ ರಸ್ತೆಯ ದುರವಸ್ಥೆಯಿಂದ ಜನತೆ ಸುತ್ತು ಬಳಸಿ ಪ್ರಯಾಣಿಸುವಂತಹ ಪರಿಸ್ಥಿತಿ. ಈಗ ಈ ಸಮಸ್ಯೆಗೆ ಇನ್ನೊಂದು ದೊಡ್ಡ ಸಮಸ್ಯೆಯನ್ನು ಖಾಸಗಿ ಸಂಸ್ಥೆಯ ಅಳವಡಿಸುವವರು ಮಾಡಿದ್ದಾರೆ. ಕಾಪುತಕಾಡಿನಿಂದ ಕುಂಬೋಡಿವರೆಗಿನ ಸುಮಾರು 5 ಕಿ.ಮೀ ರಸ್ತೆ ಬದಿಯಲ್ಲಿ ಕೇಬಲ್ ಗುಂಡಿ ತೆಗೆದಿದ್ದಾರೆ.
ಬೆಳಂದೂರಿನಿಂದ ಪೆರುವಾಜೆಗೆ ಹೋಗಲು ಯಾವ ಆಟೋ ಚಾಲಕರೂ ಮುಂದೆ ಬರುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸಿದರೆ ಸಿಗುವ ಬಾಡಿಗೆಗಿಂತ ಹೆಚ್ಚು ಹಣ ವಾಹನ ರಿಪೇರಿಗೆ ಬೇಕಾಗುತ್ತದೆ ಎಂಬುದು ರಿಕ್ಷಾ ಚಾಲಕರ ಅಭಿಪ್ರಾಯ. ಹೀಗಾಗಿ ಹೆಚ್ಚಿನವರು ಸಣ್ಣ ಪ್ರಮಾಣದ ಹೊರೆಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಹೋಗುವಂತಹ ಸ್ಥಿತಿ ಬಂದೊದಗಿದೆ. ಇಂತಹ ಪರಿಸ್ಥಿತಿಯಿರುವ ಈ ರಸ್ತೆಯಲ್ಲಿ ಈಗ ಕೇಬಲ್ ಅಳವಡಿಕೆಗಾಗಿ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ತೆಗೆದ ಹೊಂಡ ಅಪಾಯವನ್ನು ತಂದೊಡ್ಡಿದೆ. ಕಿರಿದಾದ ರಸ್ತೆ ಆಗಿರುವುದರಿಂದ ವಾಹನಗಳು ಎದುರು ಬದುರಾದರೆ ಸೈಡ್ ಕೊಡಲು ಕಷ್ಟ ಪಡುವ ಸ್ಥಿತಿ ಇದೆ. ಈಗ ಕೇಬಲ್ ಗುಂಡಿಯಿಂದಾಗಿ ವಾಹನಗಳು ಎದುರು ಬದುರಾದರೂ 5 ಕಿ.ಮೀ ಹಿಂದಕ್ಕೆ ಚಲಿಸುವಂತಹ ಸ್ಥಿತಿ ಇದೆ.
ಸೂಕ್ತ ಕ್ರಮಕ್ಕೆ ಒತ್ತಾಯ: ರಸ್ತೆಯ ಬದಿಯಲ್ಲಿ ಕೇಬಲ್ ಗುಂಡಿ ತೆರೆದು ಸಾರ್ವಜನಿಕ ಸಮಸ್ಯೆ ಉಂಟು ಮಾಡಿದವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈ ಸಮಸ್ಯೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.