ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಬ್ರಹ್ಮ’
ಪ್ರಸಂಗ : ಬ್ರಹ್ಮಕಪಾಲ
“… ದೇಹ, ಮನಸ್ಸು, ಬುದ್ಧಿ ಈ ಮೂರೂ ಸಮತೋಲನ ಸ್ಥಿತಿಯಲ್ಲಿದ್ದಾಗ ನನ್ನಂತಹವರು ಆತ್ಮಶಕ್ತಿಯನ್ನು ಹೊರಚೆಲ್ಲುತ್ತಾ ಇದ್ದಾರೆ ಎಂಬುದು ತಾತ್ಪರ್ಯ. ಈ ರೀತಿಯ ಇಚ್ಛಾ, ಕ್ರಿಯಾ, ಜ್ಞಾನ – ಈ ಮುಪ್ಪುರಿ ಶಕ್ತಿಯಿಂದ ನಾನು ಏನನ್ನಾದರೂ ಸೃಜಿಸಿದರೆ ಅದು ಯಜ್ಞದಿಂದ ಸೃಷ್ಟಿಯಾಯಿತು ಎಂದರ್ಥ. ಪ್ರಜಾಕೋಟಿಯನ್ನು ಸೃಷ್ಟಿಮಾಡಿ ಅವರಿಗೆಲ್ಲಾ ಯಜ್ಞವನ್ನೇ ಉಪದೇಶಿಸಿದ್ದೇನೆ. ಮಾತ್ರವಲ್ಲ, ಪುರುಷಸೂಕ್ತ ಮಂತ್ರದಲ್ಲಂತೂ ಅದನ್ನು ಪ್ರತಿಪಾದಿಸಿದ್ದೇನೆ. ವಿಶ್ವವಿರಾಟರೂಪಿಯಾದಂತಹ ಸತ್ಯ ಸ್ವರೂಪಕ್ಕೆ ಮುಖವೇ ಬ್ರಾಹ್ಮಣ ವರ್ಗ, ಕ್ಷತ್ರಿಯರೇ ಭುಜಗಳು, ಊರು ಭಾಗವೇ ವೈಶ್ಯರು, ಆಮೇಲೆ ಉಳಿದ ಜನಾಂಗ ಪಾದಸ್ಥಾನಲ್ಲಿದೆ ಅಂತ ಅರ್ಥ. ಹೀಗೆ ಹೇಳುವಾಗ ನಾಲ್ಕನೇ ವರ್ಣದವರು ಕೀಳು ಎಂದು ಅರ್ಥವಲ್ಲ. ಇಡೀ ದೇಹಕ್ಕೆ ಆಧಾರವಾದದ್ದೇ ಪಾದ ತಾನೆ. ಯಜ್ಞಶಕ್ತಿ ಇದು ಕೃತು ಶಕ್ತಿ. ಯಜ್ಞಮೂಲಕವಾಗಿ ಪಡೆದಿದ್ದೇನೆ ಒಬ್ಬಾಕೆ ಹೆಣ್ಣು ಮಗಳನ್ನು…
ಯಜ್ಞಮೂಲಕವಾಗಿ ಪಡೆದಂತಹ ಮಗಳೆಂದರೆ ದೇಹ ಸಂಬಂಧದಿಂದ ಸಂಸಾರಿಗರು ಪಡೆಯುವಂತಹ ಪುತ್ರಿ ಎಂಬರ್ಥವಲ್ಲ. ಜನ್ಮ ಯಾವುದು? ಜನಕ ಯಾವುದು? ಎಂಬ ಅರ್ಥದಲ್ಲಿ ಯಾವುದು ಕಾರಣವಾಗಿ ಯಾವುದು ಹುಟ್ಟಿತು ಎಂಬಲ್ಲಿ ‘ತಂದೆ, ಮಗಳು’ ಸಂಬಂಧ. ಹೀಗೆ ಯಜ್ಞದಲ್ಲಿ ಹುಟ್ಟಿದ ಈ ಶಿಶುವಿಗೆ ‘ಶಾರದಾ’ ಎಂದು ನಾಮಕರಣ ಮಾಡಿದ್ದೇನೆ. ‘ಶರತ್’ ಎಂದರೆ ಬೆಳಕೂ ಹೌದು, ಉತ್ಸಾಹವೂ ಹೌದು. ಆನಂದವೂ ಹೌದು. ಹೀಗೆ ನಾನಾರ್ಥ ಪ್ರತಿಪಾದ್ಯವಾದಂತಹ ಶರತ್ ಶಬ್ದದ ಸಾಕಾರ ಮೂರ್ತಿಯೇ ಯಜ್ಞಮುಖದಿಂದ ಹುಟ್ಟಿದ ‘ಶಾರದಾ’.
ಅರ್ಥ – ಪ್ರತಿಯೊಬ್ಬರ ಆತ್ಮದ ಉತ್ಕರ್ಷಕ್ಕೆ ಶಾರೀರಿಕವಾದ ಉಲ್ಲಾಸವೂ ಬೇಕು. ಶರೀರದಲ್ಲಿ ಚಟುವಟಿಕೆಯಿಲ್ಲದಿದ್ದರೆ ಮನಸ್ಸು ಚಡಪಡಿಸುತ್ತದೆ. ಶಾರೀರಿಕ ಆರೋಗ್ಯ, ಇದಕ್ಕೆ ಅನುಯೋಜ್ಯವಾಗಿ ಮಾನಸಿಕವಾದಂತಹ ಉಲ್ಲಾಸ. ಈ ಮನೋಲ್ಲಾಸ ದೈಹಿಕವಾದಂತಹ ಶಕ್ತಿ. ಇದನ್ನು ಆಧರಿಸಿಕೊಂಡು ನಮ್ಮ ದೀಃಶಕ್ತಿ ಬೆಳೆಯುತ್ತದೆ. ಆದ್ದರಿಂದಲೇ ವ್ರತ, ಉಪವಾಸ, ನೇಮ, ನಿಷ್ಠೆ.. ಇದೆಲ್ಲಾ ದೇಹಕ್ಕೆ, ಮನಸ್ಸಿಗೆ ಉಪದಿಷ್ಟವಾದದ್ದು. ಹಾಗೆ ಸರ್ವಾಂಗೀಣವಾಗಿ ಉತ್ಸಾಹ ತುಂಬಿದಾವಾಗ, ಮನುಷ್ಯರು ಪೂರ್ಣಾನಂದವನ್ನು ಅನುಭವಿಸುತ್ತಾರೆ. ಸತ್, ಚಿತ್, ಆನಂದಾತ್ಮಕವಾದಂತಹ ನಿಗೂಢ ರಹಸ್ಯವನ್ನು ಅವರು ಅನುಭವಿಸಬೇಕಾಗಿದ್ದರೆ ಈ ‘ಶಾರದಾ’ಳನ್ನು ಪೂಜಿಸಬೇಕಾಗುತ್ತದೆ. ಇವಳ ಅನುಗ್ರಹ ಬೇಕಾಗುತ್ತದೆ…”