ಪುತ್ತೂರು: ಒಂದು ಲೇಖನವನ್ನು ಬರೆಯುವ ಮೊದಲು ಪೂರ್ವಗ್ರಹಪೀಡಿತ ಮನಸ್ಥಿತಿ ಇರಬಾರದು. ಲೇಖಕ ತನ್ನ ಮನಸ್ತಾಪಗಳನ್ನು ಬದಿಗಿರಿಸಿ ನೈಜತೆಯನ್ನು ಸ್ವತಂತ್ರವಾಗಿ ಬರೆಯಬೇಕು. ಆಗ ಲೇಖನ ಸತ್ಯತೆಯನ್ನು ತಿಳಿಸುವುದರೊಂದಿಗೆ ಲೇಖನದ ಮೌಲ್ಯ ವೃದ್ಧಿಯಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಬರವಣಿಗೆ ಕೌಶಲ್ಯ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬರವಣಿಗೆ ಎಂದರೆ ವಿಷಯವನ್ನು ಅರಿತು ಆನಂತರ ಅದರ ಕುರಿತು ವಿಷಯವನ್ನು ಸಂಗ್ರಹಿಸಿ ಬರೆಯುವುದಲ್ಲ. ದಿನನಿತ್ಯದ ಜೀವನದ ಹಲವು ವಿಷಯಗಳು ಗುರುತಿಸಿ ಮಾಹಿತಿ ಕಲೆ ಹಾಕುವುದು ನಿಜವಾದ ಬರವಣಿಗೆ ಎಂದೆನಿಸುತ್ತದೆ. ಆಗ ಮಾತ್ರ ಯಾವ ರೀತಿ ಬರಹಗಳನ್ನು ಬೇಕಾದರು ಬರೆಯಲು ಧೈರ್ಯ ಹಾಗೂ ದೃಢವಾದ ಮಾಹಿತಿಗಳು ಲಭಿಸುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪುತ್ತೂರಿನ ಅಡಿಕೆ ಪತ್ರಿಕೆಯ ಸಹಸಂಪಾದಕ ನಾ. ಕಾರಂತ ಪೆರಾಜೆ ಮಾತನಾಡಿ, ಬರವಣಿಗೆ ಒಂದು ಧ್ಯಾನ, ಅದೊಂದು ನಾವೇ ಕೈಗೆತ್ತಿಕೊಳ್ಳುವ ತಪಸ್ಸು ಇದ್ದಂತೆ. ಇದು ಕಾಲಾತೀತವಾದ ಕಾರ್ಯ. ಕಲೆ ಮತ್ತು ಬರವಣಿಗೆ ಒಂದಕ್ಕೊಂದು ಬೆಸೆದುಕೊಂಡಿದೆ. ಕಲೆಯ ಸ್ಪರ್ಶ ಬರವಣಿಗೆಗೆ ನೀಡಿದಾಗ ಅದು ಸುಂದರವಾಗಿ ಮೂಡಿಬರುತ್ತದೆ. ಇಂಟರ್ನೆಟ್ನಲ್ಲಿ ಸಿಗುವ ಮಾಹಿತಿ ಜ್ಞಾನವಲ್ಲ. ಅದನ್ನು ಹೊರತುಪಡಿಸಿ ಜೀವನಕ್ಕೆ ಹತ್ತಿರವಾಗಿರುವುದನ್ನು ಬರೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಐ.ಕ್ಯು.ಎ.ಸಿ. ಘಟಕದ ಸಂಯೋಜಕ ಡಾ. ಶ್ರೀಧರ್ ಎಚ್.ಜಿ., ಕಣ್ಣೆದುರಿಗೆ ದಿನನಿತ್ಯವು ಕಾಣುವ ಅದೆಷ್ಟೋ ವಿಚಾರಗಳು, ವಿಸ್ಮಯಗಳು ಇರುತ್ತದೆ. ಅದನ್ನು ಗಮನಿಸಿದರೆ ಮಾತ್ರ ಬರಹಗಾರನ ಬೊಗಸೆಗೆ ಅವು ಸೇರುತ್ತವೆ. ಬರವಣಿಗೆಗೆ ಶಬ್ದಕೋಶಗಳು ಎಷ್ಟಿದ್ದರೂ ಸಾಕಾಗಲಾರದು. ಆದರೆ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕೈಗೆ ಸಿಲುಕಿ ಹಲವಾರು ಸುಂದರ ಪದಗಳು ಕಳೆದುಹೋಗುತ್ತಿವೆ. ಅದರತ್ತ ಮುಖ ಮಾಡಿದರೆ ಬರಹಗಳ ಮೌಲ್ಯ ಹೆಚ್ಚುತ್ತದೆ ಎಂದು ನುಡಿದರು.
ವಿದ್ಯಾರ್ಥಿನಿ ಪವಿತ್ರ ಪ್ರಾರ್ಥಿಸಿದರು. ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಸೀಮಾ ವಂದಿಸಿದರು. ಶಿವಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…
ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…
ಮ್ಯಾನ್ಮಾರ್ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…