ಬೆಳ್ಳಾರೆ: ಬೆಳ್ಳಾರೆಯ ಗೌರಿಹೊಳೆಯ ಸಮೀಪದಲ್ಲಿರುವ ಸ್ಮಶಾನ ಮೂಲ ಸೌಕರ್ಯದ ಕೊರತೆಯಿಂದಾಗಿ ಬಳಲುತ್ತಿದೆ. ವ್ಯವಸ್ಥೆಗಾಗಿ ಜನರ ಒತ್ತಾಯ ಹೆಚ್ಚಾಗಿದೆ.
ಬೆಳ್ಳಾರೆ ಗ್ರಾಮ ಪಂಚಾಯತ್ ಒಳಪಟ್ಟ ಹಿಂದೂ ರುದ್ರಭೂಮಿ ಗೌರಿಹೊಳೆಯ ಸಮೀಪ 84 ಸೆಂಟ್ಸ್ ಜಾಗದಲ್ಲಿದೆ. ಇಲ್ಲಿ ಸ್ಮಶಾನಕ್ಕೆ ಜಾಗ ಕಾದಿರಿಸಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಇಲ್ಲಿ ಅಂತ್ಯ ಸಂಸ್ಕಾರಕ್ಕೆ ಬೇಕಾದ ಮೂಲ ಸೌಕರ್ಯಗಳಿಲ್ಲ. ಮಳೆಗಾಲದಲ್ಲಿ ಅಂತ್ಯ ಸಂಸ್ಕಾರಕ್ಕೆ ಇನ್ನಷ್ಟು ತೊಂದರೆಗಳು ಎದುರಾಗುತ್ತಿವೆ. ಇದರಿಂದ ಬೆಳ್ಳಾರೆ ಗ್ರಾಮದ ಕಾಲೊನಿ ನಿವಾಸಿಗಳು ಹಾಗು ಅಂತ್ಯ ಸಂಸ್ಕಾರಕ್ಕೆ ಜಾಗದ ಕೊರತೆ ಇರುವವರು ಪಕ್ಕದ ಗ್ರಾಮದ ಮುಕ್ತಿಧಾಮಕ್ಕೆ ಹೋಗಬೇಕಿದೆ.
ಮೂಲ ಸೌಕರ್ಯಗಳಿಲ್ಲ:
ಬೆಳ್ಳಾರೆಯ ಮುಕ್ತಿಧಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಬಂದವರಿಗೆ ನಿಲ್ಲು ಬೇಕಾದ ಕಟ್ಟಡ, ಕಟ್ಟಿಗೆ ಸಂಗ್ರಹಿಸಿಡುವ ಸ್ಥಳ, ನೀರು ಹಾಗು ವಿದ್ಯುತ್ ಹೀಗೆ ಯಾವುದೇ ಸೌಲಭ್ಯಗಳಿಲ್ಲ. ಅಂತ್ಯ ಸಂಸ್ಕಾರ ನಡೆಸುವವರು ಕಟ್ಟಿಗೆ ತಂದಲ್ಲಿ ಸುಡಲು ಬೇಕಾದ ಜಾಗ ಮಾತ್ರ ಇದೆ. ಸ್ಮಶಾನ ಜಾಗದ ತಡೆಗೋಡೆಯೂ ಕುಸಿದು ಹೋಗಿದೆ. ಹೀಗಾಗಿ ಈ ಭಾಗದ ಜನ ಅಂತ್ಯ ಸಂಸ್ಕಾರಕ್ಕೆ ಪಕ್ಕದ ಗ್ರಾಮದ ಹಿಂದೂ ರುದ್ರಭೂಮಿಗೆ ಹೋಗುತ್ತಿದ್ದಾರೆ.
ಮುಕ್ತಿಧಾಮಕ್ಕೆ ಬೇಡಿಕೆ
ಬೆಳ್ಳಾರೆ ಪಟ್ಟಣ ಬೆಳೆಯುತ್ತಿರುಂತೆಯೇ ಇಲ್ಲಿನ ನಿವಾಸಿಗಳಿಗೆ ವ್ಯವಸ್ಥಿತ ಮುಕ್ತಿಧಾಮದ ಅಗತ್ಯ ಪ್ರಮುಖವಾಗಿದೆ. ಬೆಳ್ಳಾರೆ ಗ್ರಾಮಕ್ಕೆ ಹೊಂದಿಕೊಂಡಿರುವ ಪಕ್ಕದ ಗ್ರಾಮದಲ್ಲೂ ಸ್ಮಶಾನಕ್ಕೆ ಜಾಗ ಇದೇಯಾದರೂ ಸೂಕ್ತ ವ್ಯವಸ್ಥೆಗಳಿಲ್ಲ.ಆದ್ದರಿಂದ ಬೆಳ್ಳಾರೆ ಗ್ರಾಮಸ್ಥರು ವ್ಯವಸ್ಥಿತವಾದ ಮುಕ್ತಿಧಾಮಕ್ಕೆ ಜನಪ್ರತಿನಿಧಿಗಳಲ್ಲಿ ಸತತವಾಗಿ ಬೇಡಿಕೆ ಇಡುತ್ತಲೇ ಇದ್ದಾರೆ. ಈಗಿರುವ ಸ್ಮಶಾನ ಜಾಗದಲ್ಲಿಯೇ ವ್ಯವಸ್ಥಿತವಾದ ಮುಕ್ತಿಧಾಮ ನಿರ್ಮಾಣದಲ್ಲಿ ಜನರು ತಮಗೆ ಬೇಕಾದಲ್ಲಿ ಅಂತ್ಯ ಸಂಸ್ಕಾರ ನಡೆಸಿ ಹೋಗುವುದು ತಪ್ಪಲಿದೆ ಮಾತ್ರವಲ್ಲ ಗ್ರಾಮಸ್ಥರಿಗೂ ಅನುಕೂಲವಾಗಲಿದೆ.
ಉದ್ಯೋಗ ಖಾತರಿ ಯೋಜನೆಯಲ್ಲಿ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಅವಾಶವಿದೆ. ಇದಕ್ಕಾಗಿ ನರೇಗಾ ಅಧಿಕಾರಿಯೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದು, ಮಳೆ ಕಡಿಮೆಯಾದ ಕೂಡಲೆ ಕಾಮಗಾರಿ ಆರಂಭಿಸುತ್ತೇವೆ. 1.5 ಲಕ್ಷ ರೂ ಪಂಚಾಯತ್ ಅನುದಾನವನ್ನೂ ಸ್ಮಶಾನ ಅಭಿವೃದ್ದಿಗೆ ಬಳಸಲು ನಿರ್ಧರಿಸಲಾಗಿದೆ. ಸಂಘ ಸಂಸ್ಥೆಗಳ ನೆರವು ಪಡೆದು ಸ್ಮಶಾನವನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿಗೊಳಿಸಲು ನಿರ್ಧರಿಸಲಾಗಿದೆ. – – ಧನಂಜಯ ಕೆ.ಆರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಬೆಳ್ಳಾರೆ
ಮುಕ್ತಿಧಾಮ ಬೆಳ್ಳಾರೆ ಗ್ರಾಮದ ಜನರ ಬಹುಕಾಲದ ಬೇಡಿಕೆಯಾಗಿದ್ದು, 5 ವರ್ಷಗಳಿಂದ ಇದರ ಅಭಿವೃದ್ದಿಗೆ ಹೋರಾಟ ನಡೆಸುತ್ತಿದ್ದೇವೆ. ಗ್ರಾ.ಪಂನಿಂದ ಹಿಡಿದು ಜಿ.ಪಂ , ಸಂಸದರವರೆಗೆ ಮನವಿ ಮಾಡಿದ್ದೇನೆ. ಸಂಬಂಧಪಟ್ಟವರು ಹಾಗು ಜನಪ್ರತಿನಿಧಿಗಳು ಆದಷ್ಟು ಶೀಘ್ರದಲ್ಲಿ ಮುಕ್ತಿಧಾಮದ ಅಭಿವೃದ್ದಿಗೆ ಮುಂದಾಗಬೇಕು. ಬೆಳೆಯುತ್ತಿರುವ ಬೆಳ್ಳಾರೆಯ ನಾಗರೀಕರಿಗೆ ಸೂಕ್ತವಾದ ಮುಕ್ತಿಧಾಮ ಅಗತ್ಯವಾಗಿ ಆಗಲೇಬೇಕಿದೆ. – ಜಯರಾಮ್ ಉಮಿಕ್ಕಳ, ಗ್ರಾಮಸ್ಥ
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…