Advertisement
ಅನುಕ್ರಮ

ಮಳೆ ಹೀಗಾದರೆ ಹೇಗೆ ?

Share

ಕಾಲಕಾಲಕ್ಕೆ ಯಾವ ಹವಾಮಾನ ಇರಬೇಕೊ ಅದು ಇದ್ದರೆ ಮಾತ್ರ ಅಲಫಲಗಳು ಎಂಬುದು ಹಿರಿಯರ ಮಾತು. ಬೇಸಿಗೆ ಹೆಚ್ಚಾದರೂ ಅಪಾಯ. ಮಳೆ ಹೆಚ್ಚಾದರೂ ಕಷ್ಟ. ಹಾಗೆಯೇ ಎರಡೂ ಕಡಿಮೆಯಾದರೆ ಎಲ್ಲವೂ ಅಯೋಮಯ. ಈಗಿನ ಪರಿಸ್ಥಿತಿ ಅಂತಾದ್ದು.

Advertisement
Advertisement

ಹೊರಗೆ ಕಾಲಿಡಲೂ ಅಸಾಧ್ಯ ಅನ್ನುವಂತಹ ಮಳೆ ಸುರಿಯುವ ಸಮಯದಲ್ಲಿ ಬೇಸಿಗೆಯನ್ನು ನಾಚಿಸುವ ಬಿರು ಬಿಸಿಲು. ಜೂನ್ ತಿಂಗಳು ಮುಗಿಯುತ್ತ ಬಂದರೂ ತೋಡು, ನದಿಗಳಲ್ಲಿ ಸರಿಯಾಗಿ ಮಳೆ ನೀರು ಹರಿದು ಹೋಗದ ಪರಿಸ್ಥಿತಿ. ಹಳ್ಳಿಗಳಲ್ಲಿ ಅಲ್ಲಿ ಇಲ್ಲಿ ಇರುವ ತೂತುಗಳಲ್ಲಿ ನೀರೊರತೆ ಮೇಲೆದ್ದು ಸಿಕ್ಕ ಸಿಕ್ಕಲ್ಲಿ ನೀರು ಹರಿದಾಡಬೇಕಾದ ಸಮಯದಲ್ಲಿ ಕುಡಿಯುವ ನೀರಿನ ಸುರಂಗಗಳಲ್ಲಿ, ಬಾವಿಗಳಲ್ಲಿ ಸರಿಯಾದ ಒರತೆಯೇ ಆಗದೆ ಪರಿತಪಿಸುವ ಅವಸ್ಥೆ. ಅಲ್ಲೊಬ್ಬ ಇಲ್ಲೊಬ್ಬ ಗದ್ದೆಯನ್ನು ಉತ್ತು ಬೇಸಾಯ ಮಾಡುವವನಿದ್ದ. ಈ ವರ್ಷ ಅವನಿಗೂ ಬೇಸಾಯಕ್ಕೆ ರಜೆ ಸಾರುವ ಸ್ಥಿತಿ. ಗುಡ್ಡಗಳಲ್ಲಿ ದನ ಕರುಗಳಿಗೆ ಮೇಯಲು ಹುಲ್ಲು ಹುಟ್ಟಿ ಕುರು ಕುರು ಕಚ್ಚಿ ತಿನ್ನಲು ಆಗುವಷ್ಟು ಬೆಳೆದು ನಿಲ್ಲುವ ಸಮಯದಲ್ಲಿ ಹುಲ್ಲೇ ಹುಟ್ಟಬೇಕಷ್ಟೆ ಅಂತ ದಿಗಿಲಾಗುವ ಅನುಭವ. ಮೇ ತಿಂಗಳಿನ ಮಳೆಗೆ ನೆಲ ತೇವವಾದಾಗ ತರಕಾರಿ ಬೀಜಗಳನ್ನು ಬಿತ್ತಿ ಅದು ಮೊಳಕೆಯೊಡೆದು ಗಿಡ ಬಳ್ಳಿಗಳಾಗಿ ಈಗ ಮುಂದಿನ ತರಕಾರಿ ಫಸಲಿಗೆ ಕಾದುಕೂರುವ ರೋಮಾಂಚಿತ ಸಮಯಕ್ಕೆ ಅವಕಾಶವೇ ಇಲ್ಲದಂತೆ ಆಗಿದೆ. ತರಕಾರಿ ಬಿತ್ತಿದರೆ ಈ ಮಳೆಗೆ ಬೆಳೆ ಬರುವುದಾದರೂ ಹೇಗೆ ಎಂದು ಆತಂಕ ಹೊರುವ ಪರಿಸ್ಥಿತಿ ಇಂದಿನದು.

 

ಅಡಿಕೆ ಕೃಷಿಕರಿಗೆ ಮಳೆಗಾಲದಲ್ಲಿ ಅಂಗಳ ತರಕಾರಿ ಕೃಷಿಗೆ ಮೀಸಲು. ಬಗೆ ಬಗೆಯ ತರಕಾರಿ ಬೆಳೆದು ತಾಜಾ ಹಸಿರು ತರಕಾರಿ ಸೇವಿಸುವ ಭಾಗ್ಯ ಯಥೇಚ್ಚವಾಗಿ ದೊರೆಯುವುದು ಮಳೆಗಾಲದಲ್ಲಿ. ಆದರೆ ಅದೂ ಈ ವರ್ಷ ಮರೀಚಿಕೆ. ಮುಂಚಿತವಾಗಿ ಬಿತ್ತನೆ ಮಾಡುವ ತರಕಾರಿ ಕೃಷಿಕರ ಅಂಗಳದಲ್ಲಿ ಗಿಡಗಳೆಲ್ಲ ಆಗಿವೆ. ಆದರೆ ಅದಕ್ಕೆ ಸಮಯಕ್ಕೆ ಕೊಡಬೇಕಾದ ಗೊಬ್ಬರ ಕೊಡಲು ಮಳೆಯಿಲ್ಲ. ಆಧ್ರ್ರಾ ಮಳೆಯ ಸಮಯದಲ್ಲಿ ಗಿಡ, ಗೆಲ್ಲು ಮತ್ತು ಬಳ್ಳಿಗಳನ್ನು ಊರಿ ಬಿಟ್ಟರೆ ಸಾಕು ಅದು ಚಿಗುರಿ ಬೆಳೆಯುತ್ತದೆ ಎಂಬುದು ನಂಬಿಕೆ. ಆದರೆ ಈ ವರ್ಷದ ಆಧ್ರ್ರಾ ಮಳೆಯ ಸಮಯದಲ್ಲೂ ಮಳೆ ಇಲ್ಲ ಅದರ ಹಿಂದೆಯೂ ಮಳೆ ಬಂದು ಒರತೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಟ್ಟುಬೆಳೆಸುವ ಯೋಚನೆಗೆ ಹಿನ್ನಡೆ ಸಹಜ.

ಕಾಲಕಾಲಕ್ಕೆ ಮಳೆ ಬಾರದೆ ಹೋದರೆ ಇಂತಹ ಭಯ, ಆತಂಕಗಳು ಸಹಜ. ತೋಟದಲ್ಲಿ ಕಾಳುಮೆಣಸಿನ ಬಳ್ಳಿಗಳು ಚಿಗುರದೆ ಫಸಲು ಅಯೋಮಯ. ಇನ್ನು ಮಳೆ ತಡವಾಗಿ ಬಂದ ಕಾರಣ ಕಾಳುಮೆಣಸಿನ ಬಳ್ಳಿಗಳು ಈಗ ಚಿಗುರಿ ಹೂ ಬಿಡುತ್ತಿವೆ. ಹಿಂದೆ ಬಿಟ್ಟ ಹೂವುಗಳು ಮಳೆಯಿಲ್ಲದೆ ಪರಾಗ ಸ್ಪರ್ಶವಾಗದೆ ಹೂಗೊಂಚಲು ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಬೀಳುತ್ತಿವೆ. ಈಗ ಚಿಗುರಿ ಹೂವು ಫಸಲಾಗಿ ಕೈಸೇರುವಾಗ ತಡವಾಗುವುದು ನಿಶ್ಚಿತ. ಅದು ಕೂಡ ಮಳೆ ನಿತ್ಯ ಬಂದರೆ ಮಾತ್ರ ಹೂವಿಗೆ ಪರಾಗ ಸ್ಪರ್ಶವಾಗಿ ಕಾಯಿಕಚ್ಚಬಹುದು. ಬಾಳೆ, ಅಡಿಕೆ ಗಿಡಗಳನ್ನು ಈ ಮಳೆ ನಂಬಿ ನಡುವುದಾದರೂ ಹೇಗೆ ಎಂಬ ಮಾತು ಕೃಷಿಕರಿಂದ ಬರುವುದು ಸಹಜವೆ.

ಪ್ರಕೃತಿಯ ಮುಂದೆ ಹುಲುಮಾನವರಾದ ನಮ್ಮ ಆಟ ನಡೆಯದು ಎಂಬುದು ಎಲ್ಲರಿಗೂ ತಿಳಿದದ್ದೆ. ಪರಿಸ್ಥಿತಿಗೆ ತಕ್ಕಂತೆ ನಾವು ಇದ್ದುಕೊಳ್ಳಲು, ಬದುಕಿಕೊಳ್ಳಲು ಮತ್ತು ಒಗ್ಗಿಕೊಳ್ಳಲು ಕಲಿತು ಬಿಟ್ಟರೆ ಬಹುತೇಕ ಸಮಸ್ಯೆಗಳು ದೂರ. ಈ ವರ್ಷ ಬರದ ಅನುಭವವನ್ನು ಪ್ರಕೃತಿ ನಮಗೆ ಮಾಡಿ ಕೊಟ್ಟಿದೆ. ಹಿಂದಿನ ವರ್ಷ ಮೂರು ತಿಂಗಳು ಮಳೆ ಎಡೆ ಬಿಡದೆ ಸುರಿದು ಕಾರ್ಗಾಲದ ವೈಭವವನ್ನು ಹಸಿರಾಗಿಸಿತ್ತು. ಅದು ಕಳೆದು ಬಂದ ಹಿಂದಿನ ಬೇಸಿಗೆಯಲ್ಲಿ ನೀರಿನ ಮಹತ್ವ ತಿಳಿಯುವಂತಾಯಿತು. ಇಂತಹ ಯಾವದೇ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧ ಸ್ಥಿತಿಯಲ್ಲಿ ನಾವೆಲ್ಲರೂ ಇರುವಂತಾಗಬೇಕು. ಕೆಲವರಿಗೆ ಪ್ರಕೃತಿ ಕೊಡುವ ಶಿಕ್ಷೆಗಳು ಅನುಭವಕ್ಕೆ ಬಂದರೂ ಅವರು ಎಚ್ಚೆತ್ತುಕೊಳ್ಳುವುದು ಕಡಿಮೆ. ಯಾರಾದರೂ ಮುಂದೆ ನಿಂತು ಮಾಡುವವರಿದ್ದರೆ ನಾಲ್ಕು ಕೊಂಕು ಮಾತಾಡಿ ಉತ್ಸಾಹಕ್ಕೆ ತಣ್ಣೀರೆರೆಚಲು ಅಂತವರು ಮುಂದು. ಮಳೆ ಕಡಿಮೆಯಾದರೆ ಮುಂದಿನ ಬೇಸಿಗೆ ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಂಡು ಅಂತರ್ಜಲವನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಸಮರೋಪಾದಿಯಲ್ಲಿ ಪ್ರತಿಯೊಬ್ಬ ತೊಡಗಿಕೊಳ್ಳುವುದು ಅನಿವಾರ್ಯ. ಕೊಂಕು ನುಡಿಯುವವನಿಗೂ ನೀರು ಬೇಕು, ಉತ್ಸಾಹದಿಂದ ಮುನ್ನಡೆಯುವವನಿಗೂ ನೀರು ಬೇಕು. ಮನಸ್ಸನ್ನು ಸರಿದೂಗಿಸಿಕೊಂಡು ಅಗತ್ಯಗಳತ್ತ ಮುಖಮಾಡುವುದನ್ನು ರೂಢಿಸಿಕೊಂಡಾಗ ಕಷ್ಟಗಳು ಸಮಾನವಾಗಿ ಹಂಚಲ್ಪಡುತ್ತವೆ. ಸಂಘಟನಾತ್ಮಕವಾಗಿ ಎಲ್ಲರೂ ಒಂದಾಗಿ ನಿಂತಾಗ ಯಾರ ಹೆಗಲಿಗೂ ಹೆಚ್ಚಿನ ಭಾರ ಬೀಳದೆ ಕೆಲಸ ನಡೆಯುತ್ತದೆ. ಅಂತಹ ಕಾರ್ಯಗಳು ನಡೆಯಲಿ, ಮುನ್ನಡೆಯಲಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

Published by
ಶಂ. ನಾ. ಖಂಡಿಗೆ

Recent Posts

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

16 hours ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

2 days ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

2 days ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

2 days ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

2 days ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

2 days ago