ಮಾಧ್ಯಮಗಳ ಬಗ್ಗೆ ಜಯಂತ ಕಾಯ್ಕಿಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ…. ಓದಿ..

August 2, 2019
11:16 PM

ಸಾಹಿತಿ, ಚಿಂತಕ ಜಯಂತ ಕಾಯ್ಕಿಣಿ ಅವರು ಇಂದಿನ ಮಾಧ್ಯಮ ಕ್ಷೇತ್ರದ ಬಗ್ಗೆ ಬರೆದಿದ್ದಾರೆ, ಪೇಸ್ ಬುಕ್ ಗೋಡೆಯಿಂದ ಅದನ್ನು ತೆಗೆದು ಯಥಾವತ್ತಾಗಿ  ಪ್ರಕಟಿಸಿದ್ದೇವೆ… ನಮಗ್ಯಾಕೆ ಇದು ಇಷ್ಟವಾಯಿತು ಅಂತ ಮುಂದೆ ಹೇಳುತ್ತೇವೆ… ಈಗ ಜಯಂತ ಕಾಯ್ಕಿಣಿ ಅವರು ಬರೆದಿರುವ ಬರಹದ ಯಥಾವತ್ತಾದ ರೂಪ ಇಲ್ಲಿದೆ….

Advertisement
Advertisement

 

“ನಮ್ಮ ವರ್ತಮಾನ ಪತ್ರಿಕೆಗಳಿಗೇಕೆ ಈಗ ಮೃತ ದೇಹಗಳಲ್ಲಿ ವಿಕಾರವಾದ ಆಸಕ್ತಿ ಉಂಟಾಗಿದೆ? ಛಿದ್ರ ಛಿಚ್ಚಿದ್ರ ದೇಹಗಳನ್ನು, ಮರದಿಂದ ನೇತಾಡುತ್ತಿರುವ ಕಳೇವರಗಳನ್ನು, ದುರ್ಮರಣಕ್ಕೀಡಾದ ನತದೃಷ್ಟರ ಬೇವಾರಸಿ ಪಾರ್ಥಿವ ಶರೀರಗಳನ್ನು- ಬಗೆ ಬಗೆ ಕೋನಗಳಿಂದ ಸೆರೆ ಹಿಡಿದು ಢಾಳಾಗಿ ಪ್ರಕಟಿಸುವ ಅತ್ಯಂತ ಅಮಾನವೀಯ ಹೀನ ಚಾಳಿಗೇಕೆ ಇಂದಿನ ಪತ್ರಿಕೋದ್ಯಮ ತುತ್ತಾಗಿದೆ? ಅಪಘಾತ, ದುರ್ಮರಣಗಳ ಮಾತಿರಲಿ, ನಿಸರ್ಗ ಸಹಜವಾಗಿಯೇ ಅಸುನೀಗಿದ ಹಿರಿಯರ ಸಾವಿನ ಸುದ್ದಿ ಪ್ರಕಟಿಸುವಾಗಲೂ ಅವರ ಸುಂದರ ಸಜೀವ ಭಾವಚಿತ್ರ ಪ್ರಕಟಿಸುವ ಬದಲಿಗೆ ಈಗೀಗ ಪತ್ರಿಕೆಗಳು ಮೂಗಿನಲ್ಲಿ ಹತ್ತಿ ತುರುಕಿ ಅಂತಿಮ ಯಾತ್ರೆಗೆ ಸಿದ್ಧವಾದ ಮೃತದೇಹಗಳ ಚಿತ್ರಗಳನ್ನು ಪ್ರಕಟಿಸುವುದಕ್ಕೆ ಹಪಹಪಿಸುತ್ತಿವೆಯಲ್ಲ!

ಇದು ಮನುಷ್ಯನ ಸಾವು- ನೋವುಗಳನ್ನು ಅತ್ಯಂತ ಹೃದಯಹೀನವಾಗಿ ನಾವು ಒಂದು ರೋಚಕ ಸರಕನ್ನಾಗಿ ಪರಿವರ್ತಿಸುವ ಹೀನ ತುರಿಕೆ. ಸತ್ತವನು ನನ್ನ ಅಣ್ಣನಲ್ಲ, ತಮ್ಮನಲ್ಲ, ತಂದೆಯಲ್ಲ, ಹೀಗಾಗಿ ಅವನ ದೇಹವನ್ನು ನಾನು ಬಹಿರಂಗವಾಗಿ ಹರಾಜಿಗಿಡಬಲ್ಲೆ ನನ್ನ ತಮ್ಮನೊಬ್ಬ ರೈಲು ಹಳಿಗೆ ಸಿಕ್ಕು ರುಂಡ ಮುಂಡ ಬೇರೆಯಾಗಿ ಬಿದ್ದಿದ್ದರೆ ಅದನ್ನು ನಾನು ಹೀಗೆ ಢಾಳಾಗಿ ತೆಗೆದು ಅಚ್ಚುಹಾಕಿ, ಚಹಾ ಕುಡಿಯುತ್ತಲೋ, ಅವಲಕ್ಕಿ ಮೆಲ್ಲುತ್ತಲೋ ಬೆಳಿಗ್ಗೆ ಬೆಳಿಗ್ಗೆ ಟಿವಿ ನೋಡುತ್ತಾ ಚಪ್ಪರಿಸುತ್ತಿದ್ದೇನೆ? ಇವಳು ನನ್ನ ಅಕ್ಕನೋ, ಅಮ್ಮನೋ ಆಗಿದ್ದರೆ- ಸಮುದ್ರ ತೀರಕ್ಕೆ ಬಂದು ವಿವಸ್ತ್ರವಾಗಿ ಊದಿಕೊಂಡು ಬಿದ್ದ ಈ ಅನಾಮಿಕ ದೇಹದ ಚಿತ್ರವನ್ನು ಪತ್ರಿಕೆಗಳಲ್ಲಿ ಹಾಕಲು ಬಿಡುತ್ತಿದ್ದೆನೆ? ಪ್ರತಿಯೊಬ್ಬ ಪತ್ರಕರ್ತನೂ, ಸಂಪಾದಕನೂ, ಸುದ್ದಿ ಛಾಯಾಗ್ರಾಹಕನೂ ಮತ್ತೆ ಮತ್ತೆ ತನ್ನನ್ನು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳಿವು.

ಏಕೆಂದರೆ ಇವು ನಮ್ಮನ್ನು ನಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಅಸೂಕ್ಷ್ಮರನ್ನಾಗಿ, ನಿರ್ದಯಿಗಳನ್ನಾಗಿ ಮಾಡುತ್ತ ಹೋಗುತ್ತವೆ. ಕಳ್ಳರಂತೆ ಕದ್ದು ಬೇರೆಯವರ ಸಾವು ನೋವುಗಳನ್ನು ‘ಫಜೀಲು ಕೌತುಕ’ದಲ್ಲಿ ನೆರೆಮನೆಯವರ ಜಗಳವನ್ನು ನೋಡುವಂತೆ ನೋಡುವ ಹೇಡಿ ಪ್ರವೃತ್ತಿಯನ್ನು ಬೆಳೆಸುತ್ತವೆ. ಎದುರಿಗೆ ನಿಂತ ಮನುಷ್ಯನನ್ನೇ ಗೌರವಿಸಲಾರದ ನಾವು ಅವನ ಮೃತದೇಹವನ್ನೆಂತು ಗೌರವಿಸಿಯೇವು?

Advertisement

ಈಚಿನ ವರುಷಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿರುವ ವರಸೆ ಇದು. ಆ ಮುನ್ನ ಪತ್ರಿಕೆಯ ಪುಟಗಳಲ್ಲಿ ಮೃತದೇಹ ಅತ್ಯಂತ ‘ಅಸಿಂಧು’ವಾದ ಸಂಗತಿ ಆಗಿತ್ತು ನೇತಾರರ ಅಂತ್ಯಯಾತ್ರೆಯ ಮೆರವಣಿಗೆಗಳನ್ನು ಬಿಟ್ಟರೆ, ಯಾವುದೇ ಮೃತದೇಹಗಳ ಚಿತ್ರಗಳನ್ನು ಪತ್ರಿಕೆಗಳು ಪ್ರಕಟಿಸುತ್ತಿರಲಿಲ್ಲ, ಪತ್ರಿಕೋದ್ಯಮ ತನ್ನ ನೀತಿ ಸಂಹಿತೆಯಲ್ಲಿ ಮನುಷ್ಯನನ್ನು ಘನತೆಯಿಂದ ನೋಡುತ್ತಿದ್ದ ಕಾಲ ಅದು. ಆದರೆ ಪೊಲೀಸರ ಕಡತಗಳ ಸ್ವತ್ತಾದ ಕೆಲ ಬೀಭತ್ಸ ಚಿತ್ರಗಳನ್ನು ಬಂಡವಾಳ ಮಾಡಿಕೊಂಡು ‘ಪೋಲೀಸ್ ಸುದ್ದಿ’ಗಳಂಥ ಪತ್ರಿಕೆಗಳು ಶುರುವಾಗಿದ್ದೇ ತಡ- ಬೇರೆಯವರ ರಕ್ತವನ್ನು ನೋಡುವ ಮನುಜ ಮನಸ್ಸಿನಾಳದ ಪ್ರಾಣಿ ಪ್ರವೃತ್ತಿಗೆ ಕುಮ್ಮಕ್ಕು ದೊರೆಯಿತು. ಪತ್ರಿಕೆಗಳು ತಮ್ಮ ಪುಟಗಳನ್ನು ಈ ನತದೃಷ್ಟ ಮೃತದೇಹಗಳಿಂದ ಸಿಂಗರಿಸತೊಡಗಿದವು. ಒಳಗಿನ, ಪಾಶವೀ ಕ್ಷಣಿಕವಾದ ಹೊಸ ಸಂವೇದನೆಯ ತುರಿಗಾಯಗಳಿಗೆ ಈ ಬಿಸಿಬಿಸಿ ನೀರನ್ನು ಹೊಯ್ದು ಕ್ಷಣಿಕವಾದ ಹೊಸ ಪಾಶವೀ ‘ಸುಖ’ದ ವಿಷವನ್ನು ಮೆಲ್ಲಗೆ ಮೆಲ್ಲಗೆ ಹಬ್ಬಿಸತೊಡಗಿದರು.

ಹೆದ್ದಾರಿಯಲ್ಲಿ ಟ್ರಕ್ಕಿನ ಗಾಲಿಗೆ ಸಿಕ್ಕು ಸತ್ತ ನಾಯಿಯ ದೆಹಕ್ಕೂ ಅದರದ್ದೇ ಆದ ಘನತೆ ಇದೆ. ಬಳಿಸಾರಿ ಅದನ್ನೆತ್ತಿ ಸಂಸ್ಕಾರಗೈಯುವ ನೈತಿಕ ಧೈರ್ಯ, ಆತ್ಮಸ್ಥೈರ್ಯ ಯಾರಿಗಿದೆಯೋ- ಅವನಿಗೆ ಮಾತ್ರ ಈ ಕಳೇವರದ ನಿಶ್ಚಲ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕು ಇದೆ. ಮತ್ಯಾರಿಗೂ ಇಲ್ಲ.

ಸಾವಿನಂಥ ಸಾವನ್ನೂ ಅತ್ಯಂತ ಘನತೆಯಿಂದ ಭರಿಸಿಕೊಂಡು ಮನುಜಲೋಕ ಬೆಳೆದು ಬಂದಿದೆ. ಸಾವು ಹೊಕ್ಕ ಮನೆಯ ಮಕ್ಕಳನ್ನು ಪಕ್ಕದ ಮನೆಯವರು ತಕ್ಷಣ ತಮ್ಮಲ್ಲಿಗೆ ಕರೆದುಕೊಂಡು ಹೋಗುವ, ಆಕಳು ಹೆರುವ ಸಂದರ್ಭದಲ್ಲೂ ಮಕ್ಕಳು ಆ ಕಡೆ ಹಾಯದಂತೆ ನೋಡುವ ಜಾಯಮಾನ ನಮ್ಮದು. ಅಷ್ಟೇ ಏಕೆ, ಸಾವಿನ ಕರಿನೆರಳು ಹೊದ್ದ ಆಸ್ಪತ್ರೆಯನ್ನು ಮಕ್ಕಳ ಕಣ್ಣಿಂದ ಆಚೆಗಿಟ್ಟುಕೊಂಡು ಬಂದಿದೆ ನಮ್ಮ ಮಾನವೀಯ ಸಮಾಜ. ಸತ್ತವರು ನಕ್ಷತ್ರಗಳಾಗುತ್ತಾರೆ, ದೇವರ ಮನೆಗೆ ಹೋಗುತ್ತಾರೆ ಎಂಬ ಸುಂದರ ವಿವೇಕೀ ಕಲ್ಪನೆಗಳಲ್ಲಿ ಮಕ್ಕಳಿಗೆ ಅಭಯ ನೀಡುತ್ತಾ ಬಂದಿದೆ. ಎಷ್ಟೊಂದು ವರುಷಗಳ ಧ್ಯಾನದಂಥ ಈ ವಿಸ್ಮಯದ ಒಡಪನ್ನು ಹಠಾತ್ತನೆ ನಮ್ಮ ಸುದ್ದಿ ಮಾಧ್ಯಮ ಇಷ್ಟೊಂದು ಹೀನವಾಗಿ ಏಕೆ ಒಡೆಯುತ್ತಿದೆ? ಮಕ್ಕಳ ಮನದಲ್ಲಿ ಪಾಶವೀ ತುರಿಕೆಯ ಬೀಜವನ್ನು ಯಾಕೆ ಬಿತ್ತುತ್ತಿದೆ ?

ತಕ್ಷಣ ಎಲ್ಲ ಪತ್ರಿಕೆಯ ಸಂಪಾದಕರು ಎಚ್ಚೆತ್ತುಕೊಳ್ಳ ಬೇಕಾಗಿದೆ. ಪತ್ರಿಕೆಗಳನ್ನು ಕೊಂಡು ಮನೆಯ ಟೀಪಾಯಿ ಮೇಲಿಡುವ ಪಾಲಕರು ಜಾಗೃತರಾಗಬೇಕಾಗಿದೆ, ಸರ್ಕ್ಯುಲೇಷನ್ನಿನ ನೆಪದಲ್ಲಿ ಜನಕ್ಕೆ ಇದೇಬೇಕು ಎನ್ನುವ ಹುಸಿ ತರ್ಕದಲ್ಲಿ (ಜನಕ್ಕೆ ಆ ರುಚಿ ಹತ್ತಿಸಿದವರೇ ಇವರು !) ನಮ್ಮ ಮುಂದಿನ ತಲೆಮಾರುಗಳ ಜೀವನ ದೃಷ್ಟಿಯನ್ನೇ ಬಗ್ಗಡಗೊಳಿಸಲು ಹೊರಟಿರುವ ಈ ಚಾಳಿ ತಕ್ಷಣ ನಿಲ್ಲಬೇಕಾಗಿದೆ.

ಬಿಸಿಯೂಟದ ಪ್ರಕರಣದಲ್ಲಿ ಅಸುನೀಗಿದ ಆ ಮುದ್ದು ಬಾಲಕನ ಒಂದಾದರೂ ಮುದ್ದಾದ ಚಿತ್ರ ಯಾರಿಗೂ ಸಿಗಲಿಲ್ಲವೆ? ಯಾಕೆ ಎಲ್ಲರೂ ಸರಕಾರಿ ಆಸ್ಪತ್ರೆಯ ಜುಂಗು ಹಿಡಿದ ಲೋಹದ ಸ್ಟ್ರೆಚರಿನ ಮೇಲೆ ಮಲಗಿಸಿದ ಪೋಸ್ಟ್ ಮಾರ್ಟಂ ಹೋಲಿಗೆ ಎದ್ದು ಕಾಣುವಂಥ ಆ ಪೋರನ ಮೃತದೇಹದ ಚಿತ್ರ ಹಾಕಿದರು? ಅದರಿಂದ ಏನು ಸಾಧನೆ ಮಾಡಿದರು? ಅದರ ಬದಲಿಗೆ ಅವನ ಸುಂದರ ಚಿತ್ರ ಹಾಕಿದರೆ ಆ ದುರಂತ ಇನ್ನೂ ತೀವ್ರವಾಗಿ ನಮ್ಮನ್ನು ಕಾಡಬಹುದಿತ್ತಲ್ಲವೇ? ಆದರೆ ‘ಸತ್ತ’ ‘ಬೇರೆ’ ದೇಹಗಳನ್ನು ಹೀಗೆ ನಾನಾ ರೂಪಗಳಲ್ಲಿ ಮಾರಿ ಹಣ ಮಾಡಲು ಹೊರಟಿರುವ ಪತ್ರಿಕೋದ್ಯಮ ಯಾಕೆ ತನ್ನ ಶೀಲವನ್ನು ಕಳಕೊಂಡಿದೆ?

Advertisement

ಮನೆಯಲ್ಲಿ ಯಾರೂ ಇಲ್ಲದಾಗ ಮೆಲ್ಲಗೆ ಮತ್ತೆ ಮತ್ತೆ ಪತ್ರಿಕೆಯ ಪುಟ ತೆರೆದು ರುಂಡ ಮುಂಡ ಬೇರೆಯಾದ ಅಪಘಾತದ ಚಿತ್ರವನ್ನೇ, ಅಥವಾ ಬೀಭತ್ಸವಾಗಿ ಕೊಲೆ ಗೀಡಾದ ವ್ಯಕ್ತಿಯ ಒಡೆದ ತಲೆಯ ಗಾಯದ ವಿವರಗಳನ್ನೇ ನೋಡುತ್ತ ನಿಂತ ಹಾಲುಗಲ್ಲದ ಪುಟ್ಟ ಹುಡುಗನ ಒಳಗೊಂದು ಮಹಾನರಕ ಹುಟ್ಟುವ ಸದ್ದು ಯಾರಿಗೂ ಕೇಳಿಸುತ್ತಿಲ್ಲವೇ ?

‘ನನಗೆ ಮನುಷ್ಯ ಬೇಕು, ಮೃತ ದೇಹವಲ್ಲ, ಇನ್ನು ಮುಂದೆ ನಾನು ಮೃತ ದೇಹದಿಂದ ನನ್ನ ಪುಟಗಳನ್ನು ಸಿಂಗರಿಸುವುದಿಲ್ಲ’ ಎಂದು ತನ್ನ ಆತ್ಮಕ್ಕೆ ಹೇಳಿಕೊಂಡೇ ಕಾರ್ಯಪ್ರವೃತನಾಗುವ ಸಂಪಾದಕ, ಪತ್ರಕರ್ತ, ಸುದ್ದಿಗಾರ ಬಹುಶಃ ಯಾವ ನೇತಾರನೂ, ಸಿದ್ಧಾಂತಿಯೂ ಮಾಡಿರದ ಅರ್ಥಪೂರ್ಣ ಹೊಸ ಮೌನ ಕ್ರಾಂತಿಯ ಅಮೂಲ್ಯ ಹರಿಕಾರನಾಗುತ್ತಾನೆ.
ತಾ ನಿಂತ ಪರಿಸರದ ಹವೆಯನ್ನು ಸಂಸ್ಕರಿಸಿ ಪ್ರಾಣವಾಯು ನೀಡುವ ಕಲ್ಪವೃಕ್ಷ ವಾಗುತ್ತಾನೆ. ಇಂಥವರಿಗೆ ಶರಣೆನ್ನುವೆ.”

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ವಿಶ್ವಪರಿಸರ ದಿನ | ತಾಯಿಯ ಹೆಸರಲ್ಲಿ ಒಂದು ಮರ -2.0 ಅಭಿಯಾನ
June 5, 2025
7:47 AM
by: The Rural Mirror ಸುದ್ದಿಜಾಲ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group