ಮಡಿಕೇರಿ : ಮಹಾಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ದಾಖಲೆಗಳನ್ನೇ ಆಧಾರವಾಗಿಸದೆ ಮಾನವೀಯ ನೆಲೆಗಟ್ಟಿನಡಿ ಪರಿಹಾರ ವಿತರಿಸುವಂತೆ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾ ಜೆಡಿಎಸ್ ವತಿಯಿಂದ ಕಾಂಡನಕೊಲ್ಲಿಯ ನಿರಾಶ್ರಿತ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಸಂದರ್ಭ ಅವರು ಮಾತನಾಡಿದರು. ಪ್ರವಾಹ ಮತ್ತು ಭೂಕುಸಿತದಿಂದ ಕೊಡಗಿನ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವು ಕುಟುಂಬಗಳು ವಾಸದ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ಮಾನವೀಯತೆಯ ಆಧಾರದಲ್ಲಿ ಪರಿಹಾರವನ್ನು ಸಕಾಲದಲ್ಲಿ ಒದಗಿಸದೆ ದಾಖಲೆಗಳನ್ನೇ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಗಣೇಶ್ ಟೀಕಿಸಿದರು.
ಕಾಂಡನಕೊಲ್ಲಿಯ ಬಾವುಕ ಮತ್ತು ಬೀಪಾತು ಎಂಬುವವರು ಅಣ್ಣ ತಂಗಿಯರಾಗಿದ್ದು, ಕಳೆದ 45 ವರ್ಷಗಳಿಂದ ವಾಸವಿದ್ದ ಮನೆಯನ್ನು ಮಹಾಮಳೆಯಿಂದ ಕಳೆದುಕೊಂಡಿದ್ದಾರೆ. ಇವರ ಮನೆಗೆ ಹಕ್ಕುಪತ್ರ ದೊರೆಯದೆ ಇದ್ದ ಕಾರಣವನ್ನೇ ನೆಪ ಮಾಡಿಕೊಂಡು ಮನೆ ಕಳೆದುಕೊಂಡವರಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ನೀಡದೆ ವಂಚಿಸಲಾಗಿದೆ. ವಾರಸುದಾರರು ಯಾರೂ ಇಲ್ಲದೆ ವೃದ್ಧಾಪ್ಯದ ದಿನಗಳನ್ನು ಕಳೆಯುತ್ತಿರುವ ಇವರಿಬ್ಬರ ಬದುಕು ಅತಂತ್ರವಾಗಿದೆ. ಆದ್ದರಿಂದ ಜಿಲ್ಲಾಡಳಿತ ದಾಖಲೆಗಳನ್ನು ಕಡ್ಡಾಗೊಳಿಸದೆ ಪ್ರತ್ಯಕ್ಷವಾಗಿ ಕಾಣುತ್ತಿರುವ ನಷ್ಟವನ್ನು ತುಂಬಿಕೊಡಬೇಕೆಂದು ಗಣೇಶ್ ಒತ್ತಾಯಿಸಿದರು. ಇದೇ ರೀತಿಯ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿದ್ದು, ಸಂತ್ರಸ್ತರು ಪರಿಹಾರದಿಂದ ವಂಚಿತರಾಗದಂತೆ ಸರಕಾರ ಸೂಕ್ತ ನಿರ್ದೇಶನ ನೀಡಿ ಪರಿಹಾರದ ಮೊತ್ತವನ್ನು ಸಮಾನವಾಗಿ ಹಂಚಿಕೆ ಮಾಡಬೇಕೆಂದು ಅವರು ಹೇಳಿದರು.
ಮನೆ ಕಳೆದುಕೊಂಡಿರುವ ಅಣ್ಣ, ತಂಗಿಗೆ ಜೆಡಿಎಸ್ ವತಿಯಿಂದ ಆರ್ಥಿಕ ನೆರವನ್ನು ವಿತರಿಸಲಾಯಿತು. ಈ ಸಂದರ್ಭ ಪಕ್ಷದ ಪ್ರಮುಖರಾದ ಸುನೀಲ್, ಡೆನ್ನಿ ಬರೋಸ್, ಷರೀಫ್, ಅಬ್ದುಲ್ಲ, ಯೂಸುಫ್. ಹನೀಫ್ ಮತ್ತಿತರರು ಹಾಜರಿದ್ದರು.
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…