ಸುಳ್ಯ: ನೆರೆಯ ಕೇರಳ ರಾಜ್ಯ ಹಲಸನ್ನು ರಾಜ್ಯದ ಅಧಿಕೃತ ಫಲ ಎಂದು ಘೋಷಣೆಯಾದ ಕಾರಣ ಈಗ ಆ ರಾಜ್ಯದಲ್ಲಿ ಹಲಸಿನ ಗ್ಲಾಮರ್, ಗೌರವ ಹೆಚ್ಚಿದೆ.
ಅದೇ ಕರ್ನಾಟಕದ ರಾಜ ಬೀದಿಗಳ ಬದಿಯಲ್ಲಿಯೂ ಹಣ್ಣುಗಳ ರಾಜ ಹಲಸಿಗೆ ಈಗ ರಾಜ ಮರ್ಯಾದೆ ಮತ್ತು ಎಲ್ಲಿಲ್ಲದ ಬೇಡಿಕೆ. ದಕ್ಷಣ ಕನ್ನಡ ಜಿಲ್ಲೆಯ ವಿವಿಧ ಹೆದ್ದಾರಿಗಳಲ್ಲಿ ಪ್ರಯಾಣಿಸುತ್ತಿದ್ದರೆ ರಸ್ತೆ ಬದಿಯಲ್ಲೆಲ್ಲ ಹಲಸಿನ ಹಣ್ಣಿನ ವ್ಯಾಪಾರದ್ದೇ ಭರಾಟೆ. ಎಲ್ಲಿ ನೋಡಿದರೂ ರಸ್ತೆ ಬದಿಯಲ್ಲಿ ಅಂದವಾಗಿ ಜೋಡಿಸಿಟ್ಟ ಹಣ್ಣುಗಳೇ ಗೋಚರಿಸುತ್ತಿದೆ, ಜೊತೆಗೆ ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣುಗಳ ಘಮ ಘಮ ಮೂಗಿಗೆ ಬಡಿಯುತ್ತದೆ. ಹಲವು ರಸ್ತೆಗಳ ಬದಿಯಲ್ಲಿ ಈಗ ಹಲಸು ಹಣ್ಣಿನ ವ್ಯಾಪಾರದ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ. ಅದರಲ್ಲೂ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪೆರಿಯಶಾಂತಿಯಿಂದ ತಿರುಗಿ ಧರ್ಮಸ್ಥಳಕ್ಕೆ ಹೋಗುವ ಹೆದ್ದಾರಿ ಬದಿಯಲ್ಲಿ ಅತೀ ಹೆಚ್ಚು ಹಲಸು ಮಾರಾಟ ಕಂಡು ಬರುತ್ತದೆ. ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೆತ್ರ ದರ್ಶನಕ್ಕೆ ಬರುವ ರಾಜ್ಯ, ಅಂತಾರಾಜ್ಯ ಯಾತ್ರಿಕರಿಂದ ಹೆಚ್ಚು ಬೇಡಿಕೆ ಇರುವ ಕಾರಣ ಇಲ್ಲಿ ಅತೀ ಹೆಚ್ಚು ಹಲಸಿನ ವ್ಯಾಪಾರ ನಡೆಯುತಿದೆ. ಈ ಮಾರ್ಗದಲ್ಲಿ ಬರುವ ಸಾವಿರಾರು ಮಂದಿ ಇಲ್ಲಿನ ಹಲಸಿನ ಹಣ್ಣಿನ ಸಿಹಿಯನ್ನು ಸವಿದು ಮರಳುತ್ತಾರೆ. ಹಲಸಿನ ಹಣ್ಣು, ಹಲಸಿನ ಕಾಯಿ ಮತ್ತು ಹಣ್ಣಿನ ಎಸಳುಗಳು ಪ್ಯಾಕೇಟ್ಗಳಾಗಿ ಲಭ್ಯ. ಯಾತ್ರಿಕರು ವಾಹನ ನಿಲ್ಲಿಸಿ ಬೆಲೆಗೆ ಚರ್ಚೆ ನಡೆಸಿ ಕೆಲವರು ಇಡೀ ಹಲಸಿನ ಕಾಯಿ ಅಥವಾ ಹಣ್ಣನ್ನು ಖರೀದಿಸಿ ಹೋದರೆ ಕೆಲವರು ಎಸಳಿನ ಪ್ಯಾಕೆಟ್ ಖರೀದಿಸಿ ತೃಪ್ತರಾಗುತ್ತಾರೆ.
ನಮ್ಮ ಮನೆಯ ಹಿತ್ತಲಿನಲ್ಲಿ ಮತ್ತು ತೋಟದಲ್ಲಿನ ಹಲಸಿನ ಮರಗಳಲ್ಲಿ ಸಮೃದ್ಧವಾಗಿ ಬೆಳೆಯುವ ಟನ್ಗಟ್ಟಲೆ ಹಲಸು ಹಣ್ಣಾಗಿ ಬಿದ್ದು ಕರಗಿ ನಾಶವಾಗುವುದೇ ಹೆಚ್ಚು. ಹಲಸಿನ ಕಾಯಿ ಮತ್ತು ಹಣ್ಣಿನಿಂದ ಹತ್ತಾರು ಮೌಲ್ಯ ವರ್ಧಿತ ಉತ್ಪನ್ನಗಳನ್ನು ಮತ್ತು ತಿಂಡಿ ತಿನಿಸುಗಳನ್ನು ಮಾಡಬಹುದಾದರೂ ಸಮೃದ್ಧ ಮತ್ತು ರುಚಿಕರವಾದ ಹಲಸು ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿಲ್ಲ ಎಂಬ ಕೊರಗು ಇದೆ.
ಅದನ್ನು ಮನಗಂಡು ಕೆಲವು ಮಂದಿ ಆಸಕ್ತಿ ವಹಿಸಿ ಅಲ್ಲಲ್ಲಿ ಒಂದಷ್ಟು ಹಲಸನ್ನು ತಂದು ವ್ಯಾಪಾರ ನಡೆಸುತ್ತಾರೆ. ಸ್ಥಳೀಯವಾಗಿ ಮನೆಗಳಿಂದ ನಿರ್ದಿಷ್ಟ ಹಣ ನೀಡಿ ಹಲಸನ್ನು ಖರೀದಿಸಿ ಇವರು ವ್ಯಾಪಾರಕ್ಕೆ ತರುತ್ತಾರೆ. ನೆಲಕ್ಕೆ ಬೀಳದಂತೆ ಮರದಿಂದ ಎಚ್ಚರಿಕೆಯಿಂದ ಕೊಯ್ದು ಬಚ್ಚಿಟ್ಟು ಹಣ್ಣಾದ ಬಳಿಕ ಮಾರಾಟಕ್ಕೆ ತರಲಾಗುತ್ತದೆ. ಬೇಡಿಕೆ ಹೆಚ್ಚಿರುವ ಕಾರಣ ಹಲಸಿನ ಕಾಯಿಯನ್ನೂ ತಂದು ಮಾರಾಟ ಮಾಡುವುದೂ ಇದೆ. ಸಾಮಾನ್ಯವಾಗಿ ವರ್ಷದ ಎರಡು ತಿಂಗಳ ಕಾಲ ಹಲಸು ಹಣ್ಣಿನ ವ್ಯಾಪಾರ ಸಮಯ. ಒಂದೂವರೆ ತಿಂಗಳಿನಿಂದ ಈ ರೀತಿಯ ರಸ್ತೆ ಬದಿಯಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಅಲ್ಲಲ್ಲಿ ಕಂಡು ಬರುತ್ತದೆ. ವರ್ಷ ಪೂರ್ತಿ ಹಣ್ಣಿನ ವ್ಯಾಪಾರ ನಡೆಸುವ ರಸ್ತೆ ಬದಿಯ ಅಂಗಡಿಗಳಲ್ಲಿಯೂ ಈಗ ಹಲಸಿನ ಹಣ್ಣಿಗೇ ಹೆಚ್ಚು ಡಿಮಾಂಡ್. ಹಲಸು ಹಣ್ಣಿನ ಜೊತೆಗೆ ಅನನಾಸು, ಕಲ್ಲಂಗಡಿ, ಜೋಳ ಸೇರಿದಂತೆ ರಸ್ತೆ ಬದಿಯ ಅಂಗಡಿಯಲ್ಲಿರುವ ಹಲವು ಹಣ್ಣುಗಳು ಪ್ರಯಾಣಿಕರ ದಾಹ ಮತ್ತು ಹಸಿವನ್ನು ತಣಿಸುತ್ತದೆ. ಅನನಾಸು, ಹಲಸು ಮತ್ತಿರರ ಹಣ್ಣುಗಳು ಅಂದವಾಗಿ ಜೋಡಿಸಿಟ್ಟಿರುವುದು ನೋಡುವುದೇ ಬಲು ಚೆಂದ. ಪ್ರಯಾಣಿಕರನ್ನು ಸೆಳೆಯಲು ಹಣ್ಣಾದ ಹಲಸಿನ ಹಣ್ಣನ್ನು ಕಡಿದು ಪ್ರದರ್ಶನಕ್ಕಿಡುವುದು, ಅನನಾಸುಗಳನ್ನು ಸ್ಟಾಂಡ್ಗಳಲ್ಲಿ ಜೋಡಿಸಿಡುವುದು ರಸ್ತೆ ಬದಿಯ ಕಲರ್ ಫುಲ್ ದೃಶ್ಯ.
ಹಲಸಿನ ಕಾಯಿ ಬಳಸಿ ಸುಲಭವಾಗಿ ಮಾಡುವ ಕರಕರೆ ಬೋಂಡಾ – ಸಾಮಾನ್ಯ ಬೋಂಡಾ…
ಜೀವನವೆಂದರೆ ಕೇವಲ ಉಸಿರಾಟವಲ್ಲ; ಅದು ಅನುಭವಗಳ ಹೂಗುಚ್ಛ, ಭಾವನೆಗಳ ಹಬ್ಬ, ತತ್ತ್ವದ ಹಾದಿ.…
ಗೋವಾದಲ್ಲಿ ಗೇರು ತೋಟಗಳ ಮೇಲೆ ಕೋತಿಗಳ ದಾಳಿ ಆರಂಭವಾಗಿದೆ. ಇದು ಕರಾವಳಿ ಕರ್ನಾಟಕದ…
ಗ್ರಾಮೀಣ ಮಕ್ಕಳಿಗೆ ಮಣ್ಣಿನ ಪಾಠ, ಬದುಕಿನ ಶಿಕ್ಷಣ ಮತ್ತು ಅಂಕದ ಶಿಕ್ಷಣದ ನಡುವಿನ…
ಜಾಗತಿಕ ಕೋಕೋ ಬೆಲೆಗಳು ಒಂದು ವರ್ಷದ ಅವಧಿಯಲ್ಲಿ ಅರ್ಧದಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ಪಶ್ಚಿಮ…
ಭಾರತ ಮತ್ತು ಬಾಂಗ್ಲಾದೇಶದಲ್ಲಿ ಮೂರು ನಿಪಾ ಪ್ರಕರಣಗಳು ದೃಢಪಟ್ಟಿದ್ದರೂ, ಜಾಗತಿಕ ಹಾಗೂ ಪ್ರಾದೇಶಿಕ…