ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸರಣಿ- ಮೂರು ತಿಂಗಳಲ್ಲಿ ನಡೆದ ಭೀಕರ ಅಪಘಾತದಲ್ಲಿ 14 ಮಂದಿ ಸಾವು

October 14, 2019
8:00 AM

ಸುಳ್ಯ: ಸುಳ್ಯ ನಗರ ಸಮೀಪ ಅರಂಬೂರಿನಲ್ಲಿ ಕಾರು ಮತ್ತು ಕೆಎಸ್‍ಆರ್‍ಟಿಸಿ ಬಸ್ ಮಧ್ಯೆ ಅಪಘಾತದಲ್ಲಿ ಮೂರು ಮಂದಿ ಸಾವು, ಪುತ್ತೂರು ಅರಿಯಡ್ಕ ಗ್ರಾಮದ ಮಡ್ಯಂಗಳ ಎಂಬಲ್ಲಿ ರಸ್ತೆ ಬದಿಯ ಕೆರೆಗೆ ಕಾರು ಬಿದ್ದು ದಂಪತಿ ಮತ್ತು ಇಬ್ಬರು ಮಕ್ಕಳು ಸಾವು, ಸುಳ್ಯ ಅಡ್ಕಾರ್ ಮಾವಿನಕಟ್ಟೆಯಲ್ಲಿ ಕಾರು ಮತ್ತು ಲಾರಿ ಮಧ್ಯೆ ಉಂಟಾದ ಅಪಘಾತದಲ್ಲಿ ತಂದೆ ಮತ್ತು ಮೂರು ಮಕ್ಕಳ ಸಾವು, ವಾರದ ಬಳಿಕ ಅದೇ ಸ್ಥಳದಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಇನ್ನೋವ ಕಾರು ಮಧ್ಯೆ ಉಂಟಾದ ಅಪಘಾತದಲ್ಲಿ ಮೂರು ಮಂದಿ ಸಾವು. ಹೀಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಭೀಕರ ಅಪಘಾತಗಳ ಸರಣಿಯೇ ನಡೆದು ಹೋಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ರಸ್ತೆ ಅಪಘಾತದಲ್ಲಿ ಬಲಿಯಾದ ಜೀವಗಳು 14. ಹೀಗೆ ಉಂಟಾಗುತ್ತಿರುವ ಅಪಘಾತಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಭೀತಿ ಹುಟ್ಟಿಸುತಿದೆ. ಅದರಲ್ಲೂ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ದುರಂತಗಳು ಮಿತಿ ಮೀರಿದ್ದು ಅಪಘಾತ ವಲಯವಾಗಿ ಮಾರ್ಪಾಡಾಗುತಿದೆ.

Advertisement
Advertisement

ಅಪಘಾತಗಳು ನಡೆದು ರಸ್ತೆಯಲ್ಲಿ ರಕ್ತದ ಓಕುಳಿಯ ಜೊತೆಗೆ ಕುಟುಂಬಗಳ ಕಣ್ಣೀರ ಕೋಡಿಯೇ ಹರಿಯುತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ತುರ್ತು ಕ್ರಮ ಅನಿವಾರ್ಯವಾಗಿದೆ ಎಂಬ ಕೂಗು ಈಗ ಎಲ್ಲಡೆಯಿಂದ ಕೇಳಿ ಬಂದಿದೆ. ಇತ್ತೀಚಿನ ಅಪಘಾತಗಳ ತೀವ್ರತೆ ಹೆಚ್ಚಿದ್ದು ಕುಟುಂಬಗಳೇ ಬಲಿಯಾಗಿದೆ, ಕುಟುಂಬಗಳ ಆಧಾರ ಸ್ತಂಭಗಳೇ ಕಳಚಿ ಬಿದ್ದಿದೆ.

Advertisement

ರಸ್ತೆಯಲ್ಲಿ ಯಾಕೆ ಅವಸರ ?: ಅಪಘಾತಗಳು ಸಂಭವಿಸಿ ಜೀವಗಳು ಬಲಿಯಾದಾಗ ಕುಟುಂಬಕ್ಕೆ, ಸಮಾಜಕ್ಕೆ ನೋವು, ನಷ್ಟ ಸಂಭವಿಸುವುದರ ಜೊತೆಗೆ ದೇಶಕ್ಕೆ ದೊಡ್ಡ ನಷ್ಟ ಉಂಟಾಗುತಿದೆ. ಅತ್ಯಮೂಲ್ಯ ಮಾನವ ಸಂಪನ್ಮೂಲವೇ ಕಳೆದು ಹೋಗುತ್ತದೆ. ಆರ್ಥಿಕ ನಷ್ಟವೂ ಸಂಭವಿಸುತ್ತದೆ. ದೇಶದಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ಕಡಿಮೆ ಮಾಡಲೆಂದೇ ಕೇಂದ್ರ ಸರಕಾರ ಇತ್ತೀಚೆಗೆ ಮೋಟಾರು ವಾಹನ ಕಾಯಿದೆಯನ್ನು ಪರಿಷ್ಕರಿಸಿತ್ತು. ಈ ಕಾನೂನನ್ನು ಸಡಿಲ ಮಾಡದೆ ಯಾವುದೇ ರಾಜಿಯಿಲ್ಲದೆ ಕಾನೂನನ್ನು ಅನುಷ್ಠಾನ ಮಾಡಿದರೆ ಅಪಘಾತಕ್ಕೆ ಸ್ವಲ್ಪ ಮಟ್ಟಿನ ಕಡಿವಾಣ ಹಾಕಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಬಹುತೇಕ ಅಪಘಾತಗಳಿಗೆ ಅತಿವೇಗ ಮತ್ತು ಅಜಾಗರೂಕತೆಯ, ಅವಸರದ ವಾಹನ ಚಾಲನೆ ಕಾರಣವಾಗುತ್ತದೆ. ಕೆಲವೇ ನಿಮಿಷಗಳ ಲಾಭಕ್ಕಾಗಿ ಅತಿವೇಗ ಮತ್ತು ಅವಸರದ ಚಾಲನೆ ಮಾಡಿ ಅಮೂಲ್ಯ ಜೀವಗಳೇ ನಷ್ಟವಾಗುತ್ತದೆ ಎಂಬ ಸರಳ ಮತ್ತು ಸಾಮಾನ್ಯ ಜ್ಞಾನ ವಾಹನ ಚಾಲಕರಲ್ಲಿ ಮೂಡಿಸಿದರೆ ದೇಶದ ರಸ್ತೆಗಳಲ್ಲಿ ಮನುಷ್ಯ ಜೀವಗಳು ಬಲಿಯಾಗುವುದು ತಪ್ಪಬಹುದು.

Advertisement

ಅತಿವೇಗಕ್ಕೆ ಕಡಿವಾಣ ಅಗತ್ಯ:ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಅತಿವೇಗವನ್ನು ಪತ್ತೆ ಹಚ್ಚಿ ದಂಡ ವಿಧಿಸಿ ಕಾನೂನು ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಜರುಗಿಸಬೇಕು. ಆಧುನಿಕ ಸಿಸಿ ಟಿವಿ ಕ್ಯಾಮರಾ, ವೇಗ ಪತ್ತೆ ಹಚ್ಚುವ ಸಾಧನಗಳನ್ನು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಳವಡಿಸಿ ಅತಿವೇಗ ಪತ್ತೆ ಹಚ್ಚಿ ದಂಡ ವಿಧಿಸಬೇಕು, ಅಪಘಾತ ವಲಯಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವೇಗ ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. ವೇಗ ನಿಯಂತ್ರಣ ಇರುವ ಮತ್ತು ಸದಾ ವಾಹನಗಳು ತುಂಬಿ ತುಳುಕುವ ಸುಳ್ಯ ನಗರದಲ್ಲಿ ಕೂಡ ಅತಿವೇಗವಾಗಿ ವಾಹನ ಚಲಾಯಿಸುವುದು, ಎಡಬದಿಯಲ್ಲಿ ಓವರ್‍ಟೇಕ್ ಮಾಡುವುದು, ಎಡ ಬದಿ ಬಿಟ್ಟು ರಸ್ತೆ ಮಧ್ಯದಲ್ಲಿ ಸಂಚರಿಸುವುದು ಕಂಡು ಬರುತಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದಿರುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು, ಓವರ್ ಲೋಡ್, ನಿರ್ಲಕ್ಷ್ಯದ ನಿಲುಗಡೆ ಹೀಗೆ ಹಲವು ಕಾರಣಗಳು ಅಪಘಾತಗಳಿಗೆ ಮತ್ತು ಅಪಘಾತದ ತೀವ್ರತೆ ಹೆಚ್ಚಲು ಕಾರಣವಾಗುತಿದೆ. ಅಲ್ಲದೆ ನಿರ್ಲಕ್ಷ್ಯದ ಚಾಲನೆ ಇತರ ವಾಹನ ಸವಾರರಿಗೆ ಕಿರಿ ಕಿರಿಯನ್ನೂ ಉಂಟು ಮಾಡುತಿದೆ.

ಚಾಲನಾ ತರಬೇತಿಯ ಜೊತೆಗೆ ಕೌನ್ಸಿಲಿಂಗ್ ಕೂಡ ಅಗತ್ಯ: ವಾಹನಗಳ ದಟ್ಟಣೆ ಹೆಚ್ಚಿದಂತೆ ಹೆಚ್ಚುತ್ತಿರುವ ಅಪಘಾತಗಳು ಆಧುನಿಕ ಸಮಾಜಕ್ಕೆ ದೊಡ್ಡ ಸಮಸ್ಯೆ ಮತ್ತು ಪಿಡುಗಾಗಿದೆ. ಇದರ ನಿಯಂತ್ರಣಕ್ಕೆ ವಾಹನ ಚಾಲನಾ ತರಬೇತಿ ಸಂಸ್ಥೆಗಳು, ಚಾಲನಾ ಪರವಾನಿಗೆ ನೀಡುವ ಸಾರಿಗೆ ಇಲಾಖೆ ಇನ್ನಷ್ಟು ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ. ಯುವ ಸಮುದಾಯಕ್ಕೆ ವಾಹನ ಚಾಲನೆ ಮಾಡಲು ಕಲಿಸುವುದರ ಜೊತೆಗೆ ಸಂಚಾರಿ ಕಾನೂನುಗಳನ್ನು ಸಮರ್ಪಕವಾಗಿ ತಿಳಿಸಿಕೊಡಬೇಕು. ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಪ್ರಬುದ್ಧತೆಯನ್ನು ಪಡೆಯುವ ನಿಟ್ಟಿನಲ್ಲಿ ಒಂದಿಷ್ಟು ಕೌನ್ಸಿಲಿಂಗ್ ರೀತಿಯ ತರಬೇತಿಯನ್ನೂ ನೀಡಿದರೆ ಉತ್ತಮ. ಅದೇ ರೀತಿ ಪರವಾನಗಿ ನೀಡುವ ಸಂದರ್ಭದಲ್ಲಿ ಸಂಚಾರಿ ಕಾನೂನಿನ ಅರಿವು ಮತ್ತು ಪ್ರಬುದ್ಧತೆಯನ್ನು ಪರಿಣಾಮಕಾರಿಯಾಗಿ ಪರೀಕ್ಷೆಗೊಳಪಡಿಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Advertisement

ಮಹಿಳೆಯರ ಚಾಲನೆ ಹೆಚ್ಚು ಸುರಕ್ಷಿತ:ಪುರುಷರಿಗೆ ಸರಿ ಸಮಾನರಾಗಿ ಇಂದು ಮಹಿಳೆಯರೂ ವಾಹನ ಚಲಾಯಿಸುತ್ತಾರೆ. ಅದರಲ್ಲೂ ಕಾರ್, ದ್ವಿಚಕ್ರ ವಾಹನಗಳನ್ನು ಮಹಿಳೆಯರು ವ್ಯಾಪಕವಾಗಿ ಚಲಾಯಿಸುತ್ತಾರೆ. ಮಹಿಳೆಯರು ವಾಹನ ಚಲಾಯಿಸಿದಾಗ ಅಪಘಾತಗಳು ನಡೆಯುವುದು ತೀರಾ ಕಡಿಮೆ ಎಂದು ಇತ್ತೀಚೆಗೆ ಕೇರಳದಲ್ಲಿ ನಡೆದ ಸಮೀಕ್ಷೆ ಒಂದು ಹೇಳಿದೆ. ಜಾಗೃತೆ ಮತ್ತು ಅವಸರವಿಲ್ಲದ ವಾಹನ ಚಾಲನೆಯಿಂದ ಮಹಿಳಾ ಚಾಲಕರು ಹೆಚ್ಚು ಸುರಕ್ಷಿತರು ಎಂಬ ನಂಬಿಕೆ ಮೂಡುತಿದೆ. ಇತ್ತೀಚೆಗೆ ಗಲ್ಫ್ ರಾಷ್ಟ್ರಗಳಲ್ಲಿಯೂ ಮಹಿಳೆಯರಿಗೆ ವಾಹನ ಚಾಲನಾ ಪರವಾನಿಗೆ ನೀಡಲು ಆರಂಭಿಸಿರುವುದು ಗಮನಾರ್ಹ.

‘ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಹಲವು ಸಂದರ್ಭಗಳಲ್ಲಿ ರಸ್ತೆ ಅಪಘಾತಕ್ಕೆ ಕಾರಣವಾಗುತ್ತಿದೆ. ಆದುದರಿಂದ ವಾಹನ ದಟ್ಟಣೆ ಹೆಚ್ಚಿರುವ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ಅತ್ಯಂತ ಜಾಗರುಕತೆಯ ಚಾಲನೆ ಮಾಡಬೇಕು. ಅಪಘಾತ ವಲಯಗಳನ್ನು ಗುರುತಿಸಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಅಪಘಾತಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ಮಾಡುತಿದೆ. ರಸ್ತೆಯಲ್ಲಿ ಏನಾದರು ನ್ಯೂನತೆಗಳಿದ್ದಲ್ಲಿ ಸರಿಪಡಿಸಲು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು – ಆರ್.ಸತೀಶ್ ಕುಮಾರ್, ವೃತ್ತ ನಿರೀಕ್ಷಕರು ಸುಳ್ಯ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಬರಗಾಲದ ಪರಿಣಾಮ | ತರಕಾರಿ ಬೆಲೆ ಏರಿಕೆಯ ಬಿಸಿ | ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ…. ಎಲ್ಲವೂ ದರ ಏರಿಕೆ |.
April 25, 2024
2:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror