ಪುತ್ತೂರು: ಕಳೆದ ಎಪ್ಪತ್ತು ವರ್ಷಗಳಲ್ಲಿ ಬಡತನದ ರೇಖೆಗಿಂತ ಕೆಳಗುಳಿದ ಸುಮಾರು 60 ಶೇಕಡಾದಷ್ಟು ಜನರನ್ನು ಮೇಲೆತ್ತಲು ಆಗಿರಲಿಲ್ಲ. ಹೀಗಿದ್ದಾಗ ಹೇಗೆ ತಾನೇ ದೇಶಕ್ಕೆ ಗೌರವ ದೊರಕುವುದಕ್ಕೆ ಸಾಧ್ಯ? ಆದರೆ ಇಂದು ದೇಶ ಅಭಿವೃದ್ಧಿ ಸಾಧಿಸುತ್ತಿದೆ. ಹಾಗಾಗಿಯೇ ದೇಶಕ್ಕೆ ಎಲ್ಲೆಡೆ, ವಿದೇಶದಲ್ಲೂ ಗೌರವ ಸಿಗುತ್ತಿದೆ. ಸರಕಾರ ಮತ್ತು ಆಡಳಿತ ವರ್ಗ ಸರಿಯಾಗಿ ಕಾರ್ಯನಿರ್ವಹಿಸಿದಾಗ ಸಾಧನೆ ಸಾಧ್ಯವಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಕಲ್ಲದ್ದಲು ಮತ್ತು ಗಣಿಗಾರಿಕೆ ಖಾತೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಶಸ್ ಅಧ್ಯಯನ ಕೇಂದ್ರದಿಂದ ಆಯೋಜಿಸಲಾದ ಐಎಎಸ್, ಕೆಎಎಸ್ ತರಬೇತಿ ಅಕಾಡೆಮಿ ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೃಷ್ಟಿ ಕಾರ್ಯಾಗಾರವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸಮಾಜದ ಕಟ್ಟಕಡೆಯ ಮನುಷ್ಯನ ಕಣ್ಣೀರನ್ನು ಒರೆಸುವ ದಿನ ಬಂದಾಗ ಇಪ್ಪತ್ತೊಂದನೆಯ ಶತಮಾನ ಭಾರತದ್ದಾಗುತ್ತದೆ. ಅದಕ್ಕಾಗಿ ಆ ತೆರನಾದ ಮನೋಭೂಮಿಕೆಯುಳ್ಳವರು ವಿವಿಧ ಆಡಳಿತ ಹಂತದಲ್ಲಿರಬೇಕಾಗುತ್ತದೆ. ಸರಿಯಾದ ಜವಾಬ್ಧಾರಿಯುಳ್ಳವರು, ಪ್ರಾಮಾಣೀಕರಾದವರು ನಾಗರಿಕ ಸೇವಾ ಪರೀಕ್ಷೆಯ ಮೂಲಕ ಸೇವಾ ಕ್ಷೇತ್ರಕ್ಕೆ ಬಂದರೆ ಸದೃಢ ಭಾರತ ನಿರ್ಮಾಣವಾಗುತ್ತದೆ ಎಂದು ನುಡಿದರು.
ಆತ್ಮವಿಶ್ವಾಸದ ಆಧಾರದ ಮೇಲೆ ನಮ್ಮ ಯಶಸ್ಸು ನಿರ್ಣಯಿಸಲ್ಪಡುತ್ತದೆ. ನಮ್ಮ ಮೇಲೆ ನಮಗೆ ಎಷ್ಟು ನಂಬಿಕೆಯಿದೆ ಎನ್ನುವುದು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪ್ರಮುಖವೆನಿಸುತ್ತದೆ. ಜತೆಗೆ ಅತ್ಯಂತ ಕಠಿಣ ಪರಿಶ್ರಮ ಸಾಧನೆಗೆ ತಳಪಾಯ ಒದಗಿಸುತ್ತದೆ. ಐಎಎಸ್ ಮಾತ್ರವಲ್ಲದೆ ಯಾವುದೇ ಸವಾಲುಗಳನ್ನೂ ಎದುರಿಸುವಲ್ಲಿ ಈ ಸಂಗತಿಗಳು ನಮಗೆ ಸಹಾಯ ಮಾಡುತ್ತವೆ ಎಂದರಲ್ಲದೆ ಮನಸ್ಸಿನ ಸಮಾಧಾನ ಹಣದಿಂದ ಸಾಧ್ಯವಾಗುವುದಿಲ್ಲ. ಕೋಟಿ ಕೋಟಿ ಗಳಿಸಿದವರೂ ಹೇಗಿದ್ದಾರೆಂಬುದನ್ನು ಕಾಣುತ್ತಿದ್ದೇವೆ. ಹಾಗಾಗಿ ಐಎಎಸ್ನಂತಹ ಪರೀಕ್ಷೆಯನ್ನು ತೇರ್ಗಡೆಯಾಗಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದರೆ ಅದು ನಮ್ಮನ್ನು ಅತ್ಯಂತ ಹೆಚ್ಚು ತೃಪ್ತರನ್ನಾಗಿ ಮಾಡಬಲ್ಲುದು ಎಂದು ನುಡಿದರು
ಮತ್ತೋರ್ವ ಅತಿಥಿ ಮಂಗಳೂರು ನಗರ ಪೋಲಿಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ ಯುವಜನರಿಗೆ ಇಂದು ಸಾಕಷ್ಟು ಅವಕಾಶಗಳಿವೆ. ಹಾಗಾಗಿ ಯಾಕೆ ನಾಗರಿಕ ಸೇವೆಯನ್ನೇ ಆಯ್ಕೆ ಮಾಡಬೇಕೆಂಬ ಪ್ರಶ್ನೆ ಬರುವುದು ಸಹಜ. ಆದರೆ ಐಎಎಸ್, ಐಪಿಎಸ್, ಕೆಎಎಸ್ ನಂತಹ ಪರೀಕ್ಷೆಗಳನ್ನು ತೇರ್ಗಡೆ ಮಾಡುವುದರಿಂದ ಉಳಿದೆಲ್ಲಾ ರಂಗದಲ್ಲಿ ದೊರಕಬಹುದಾದ ಅಷ್ಟೂ ಅವಕಾಶಗಳು ಒಂದೇ ಕಡೆ ದೊರೆಯುವುದಕ್ಕೆ ಸಾಧ್ಯ. ಸಮಾಜಸೇವೆಯ ಮೂಲಕ ಬದುಕನ್ನು ಸಾರ್ಥಕಗೊಳಿಸುವುದಕ್ಕೆ ಇಲ್ಲಿ ಸಾಧ್ಯ ಎಂದು ನುಡಿದರು.
ಪ್ರತಿಯೊಬ್ಬನಿಗೂ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸ್ ಆಗುವುದಕ್ಕೆ ಸಾಧ್ಯವಿದೆ. ನಾನು ಗ್ರಾಮೀಣ ಭಾಗದವನು, ಇಂಗ್ಲಿಷ್ ಬರುವುದಿಲ್ಲ, ಆರ್ಥಿಕವಾಗಿ ಬಲಿಷ್ಟವಾಗಿಲ್ಲ ಎಂಬೆಲ್ಲಾ ಸಂಗತಿಗಳು ಪ್ರತಿಭೆಯ ಮುಂದೆ ಗೌಣವಾಗುತ್ತವೆ. ಹಾಗಾಗಿ ದೃಢ ನಿರ್ಧಾರವೊಂದೇ ನಮ್ಮನ್ನು ಇಲ್ಲಿ ಗೆಲ್ಲುವಂತೆ ಮಾಡುತ್ತದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಅದಾಗಲೇ ಬೇಕಾದಷ್ಟು ಐಎಎಸ್ ಕೋಚಿಂಗ್ ಸೆಂಟರ್ ಗಳಿವೆ. ಆದರೆ ಯಶಸ್ ಘಟಕ ಮತ್ತೊಂದು ಕೋಚಿಂಗ್ ಸೆಂಟರ್ ಅಲ್ಲ, ಬದಲಾಗಿ ರಾಷ್ಟ್ರೀಯ ದೃಷ್ಟಿಕೋನವನ್ನು ತುಂಬುವ ಮತ್ತು ತನ್ಮೂಲಕ ದೇಶದ ಕುರಿತಾಗಿ ಚಿಂತಿಸುವ ಅಧಿಕಾರಿ ವರ್ಗದ ಸೃಷ್ಟಿಯ ಹಿನ್ನೆಲೆಯಲ್ಲಿ ಇದು ಆರಂಭಗೊಂಡಿದೆ. ದೇಶದ ಸಂಸ್ಕೃತಿ, ಜೀವನ ಮೌಲ್ಯಗಳನ್ನು ಮುಂದುವರೆಸುವ ಕಾರ್ಯವನ್ನು ಮಾಡುವ ಅಧಿಕಾರಿಗಳು ನಮಗೆ ಬೇಕಾಗಿದೆ ಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್,ಯಶಸ್ ಅಧ್ಯಯನ ಕೇಂದ್ರದ ಸಂಯೋಜಕ ಗೋವಿಂದರಾಜ ಶರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನಘ, ಆಸ್ವಿನಿ ಹಾಗೂ ಸಾಯಿಕೃಷ ಪ್ರಾರ್ಥಿಸಿದರು. ಯಶಸ್ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಮುರಳಿಕೃಷ್ಣ ಕೆ.ಎನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೇಂದ್ರದ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ವಂದಿಸಿದರು. ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳಿಂದ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣರಾಯ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…
ಇತ್ತೀಚಿನ ದಿನಗಳಲ್ಲಿ, ಜನರು ಮೊಬೈಲ್ ಫೋನ್ಗಳನ್ನು(Mobile Phone) ಹಿಡಿದಿಟ್ಟುಕೊಳ್ಳುವ ಬದಲು ಇಯರ್ಫೋನ್(Ear Phone)…