MIRROR FOCUS

ಸಿಡಿಲಾಘಾತ | “When Thunder Roars Go Indoors”

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

“ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವಾ ಆಸೆ” ಅಂತ ಕವಿ ಕೆ.ಎಸ್.ನರಸಿಂಹ ಸ್ವಾಮಿ ಯವರು ತಮ್ಮ ಕವನವೊಂದರಲ್ಲಿ ಹೇಳಿದ್ದಾರೆ…

Advertisement
Advertisement

ಮುನ್ನಡೆಯುವ ಮುಂಚೆ ಆ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ…..

ಮಳೆ ಬರುವ ಸಮಯದಲ್ಲಿ ಗುಡುಗು ಸಿಡಿಲು ಸಾಮಾನ್ಯ. ಮೋಡ,ಮಿಂಚು, ಗುಡುಗು, ಸಿಡಿಲು ಗಾಳಿ ಮಳೆ ಇವು ಪ್ರಕೃತಿ ನಮಗೆ ನೀಡಿದ ಅಪೂರ್ವ ಕೊಡುಗೆಗಳು.ಜೀವ ಸಂಕುಲದ ಉಳಿವಿಗೂ ಅಗತ್ಯ. ಗುಡುಗು ಸಿಡಿಲಿನಿಂದ ಕೂಡಿದ ಮಳೆ ಬಂದ ಮರುದಿನ ಹುಲ್ಲು,ಗಿಡಗಂಟಿಗಳು ಹೆಸರಿನಿಂದ ನಳನಳಿಸುವುದನ್ನು ಗಮನಿಸಬಹುದು. ಮಳೆಗಾಲದ ಆರಂಭದಲ್ಲಿ ಗುಡುಗು ಸಿಡಿಲುಗಳ ಜುಗಲ್ ಬಂಧಿ ಸೊಬಗನ್ನೂ, ಅನೇಕ ಬಾರಿ ಭಯವನ್ನೂ ಹುಟ್ಟಿಸುತ್ತದೆ.

ಮಿಂಚು ಸಿಡಿಲುಗಳ ಅಗಾಧ ಶಕ್ತಿ ಸಾಮರ್ಥ್ಯ ನಿಜಕ್ಕೂ ವಿಸ್ಮಯಕಾರಿ. ಈ ನೈಸರ್ಗಿಕ ವಿದ್ಯಮಾನವನ್ನು ಪೂರ್ತಿಯಾಗಿ ಅಭ್ಯಸಿಸಲು ಇನ್ನೂ ಸಾಧ್ಯವಾಗಿಲ್ಲ. ಅದನ್ನೇ ‘ಪ್ರಕೃತಿಯ ಮುಂದೆ ನಾವು ಕುಬ್ಜರು’ ಎನ್ನುವುದು. ಕೆಲವು ಋತುಮಾನ ಮತ್ತು ಸಂದರ್ಭಗಳಲ್ಲಿ ಮೋಡಗಳ ನಡುವಿನ ಆಕರ್ಷಣೆ – ವಿಕರ್ಷಣೆಯ ಪರಿಣಾಮ ಉಂಟಾಗುವ ಅಪಾರ ಪ್ರಮಾಣದ ಶಕ್ತಿಯೇ ಮಿಂಚು ಸಿಡಿಲು.

ಬೇಸಗೆಯಲ್ಲಿ ನೆಲದಿಂದ ಹೊರಬರುವ ಬಿಸಿಗಾಳಿ ಹಾಗೂ ವಾತಾವರಣದಲ್ಲಿಯ ತೇವಾಂಶ, ಭೂ ಮೇಲ್ಭಾಗದಲ್ಲಿನ ತಂಪಾದ ವಾತಾವರಣದಲ್ಲಿ ಪರಸ್ಪರ ಸಂಧಿಸುತ್ತವೆ. ಆಗ ಮೋಡಗಳು ಸಂಭವಿಸುತ್ತವೆ. ಗಾಳಿಯೊಂದಿಗೆ ವೇಗವಾಗಿ ಚಲಿಸುವ ಮೋಡಗಳು ಪರಸ್ಪರ ಡಿಕ್ಕಿಯಾದಾಗ ಭಾರೀ ಶಕ್ತಿಯಿಂದ ಒಡಗೂಡಿದ ಧನ ಮತ್ತು ಋಣ ವಿದ್ಯುತ್ ಕಣಗಳು ಉಂಟಾಗುತ್ತವೆ. ಅದರೊಂದಿಗೆ ಅಪಾರ ಪ್ರಮಾಣದ ವಿದ್ಯುತ್ ಶಕ್ತಿಯ ಉತ್ಪತ್ತಿಗೂ ಕಾರಣವಾಗುತ್ತದೆ. ಸಾಮಾನ್ಯವಾಗಿ ವಿದ್ಯುತ್ ನಿರೋಧಕ ಗುಣಗಳನ್ನು ವಾತಾವರಣದಲ್ಲಿರುವ ಗಾಳಿಯ ಕಣಗಳು ಹೊಂದಿವೆ. ಆದರೆ ಮೋಡಗಳಲ್ಲಿ ನಿರ್ಮಾಣವಾದ ವಿದ್ಯುತ್ ಕಾಂತೀಯ ಕ್ಷೇತ್ರ ವಾತಾವರಣಕ್ಕಿಂತ ಬಲಯುತವಾಗಿರುವ ಕಾರಣ ಗಾಳಿಯಲ್ಲಿಯ ಕಣಗಳು ವಿದ್ಯುತ್ ಪ್ರವಾಹಯೋಗ್ಯ ಅಯಾನ್ ಕಣಗಳಾಗಿ ರೂಪಾಂತರಗೊಳ್ಳುತ್ತವೆ. ಆಗ ಧನ ವಿದ್ಯುತ್ ಕಾಂತೀಯ ಪ್ರವಾಹ ಸಿಡಿಲಿನ ರೂಪದಲ್ಲಿ ವಾತಾವರಣ ಭೇದಿಸಿ ಭೂಮಿಗೆ ಅಪ್ಪಳಿಸುತ್ತದೆ. ಎಲ್ಲಿ,ಯಾವಾಗ ಸಿಡಿಲು ಬಡಿಯುತ್ತದೆ ಅಂತ ನಿಖರವಾಗಿ ಅಂದಾಜಿಸುವುದು ಕಷ್ಟ.
ಬೆಳಕಿನ ವೇಗಕ್ಕೂ, ಶಬ್ಧದ ವೇಗಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದರಿಂದ, ಮಿಂಚು ಕಂಡುಬಂದ ಬಳಿಕ, ಸಿಡಿಲಿನ ಶಬ್ದ ಕೇಳಿ ಬರುವ ಸಮಯಕ್ಕೆ ಹೊಂದಿಕೊಂಡು ಆ ಸಿಡಿಲು ಬಡಿದ ದೂರವನ್ನು ಅಂದಾಜು ಮಾಡಬಹುದು. ಮಿಂಚಿನ ಒಟ್ಟೊಟ್ಟಿಗೇ ಸಿಡಿಲಿನ ಶಬ್ದವೂ ಕೇಳಿಸಿತೆಂದರೆ ಅತೀ ಹತ್ತಿರದ ಪ್ರದೇಶದಲ್ಲಿ ಸಿಡಿಲು ಬಡಿದಿದೆ ಎಂದು ತಿಳಿಯಬಹುದು.

Advertisement

ಇಷ್ಟಕ್ಕೂ ಸಿಡಿಲು ಎಷ್ಟು ಅಪಾಯಕಾರಿ ಅಂದರೆ ಒಂದು ಸಾಮಾನ್ಯ ಮಿಂಚಿನ ಕಿಡಿ ಸೆಕುಂಡಿಗೆ ಅರುವತ್ತು ಸಾವಿರ ಮೀಟರಿಗೂ ಅಧಿಕ ವೇಗದಲ್ಲಿ ಚಲಿಸಬಲ್ಲುದು, ಅಲ್ಲದೆ ಮೂವತ್ತು ಸಾವಿರ ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪಮಾನ ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ಭಯಂಕರವಾದ ಸಿಡಿಲುಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಕೊಳ್ಳಬಹುದು ಎಂದು ತಿಳಿದುಕೊಳ್ಳೋಣ….

When Thunder Roars Go Indoors... ಎಂಬುದು ಅಮೇರಿಕನ್ ಗಾದೆ. ಸಿಡಿಲು ಮಿಂಚು ಜೋರಾಗಿದ್ದಾಗ ಹಿರಿಯರು ಮಕ್ಕಳನ್ನು ಹೊರಹೋಗ ಬಿಡುತ್ತಿರಲಿಲ್ಲ. ನಾವು ಕೂಡ ಅಷ್ಟೇ.. ಆಕಾಶದಲ್ಲಿ ಆರ್ಭಟ ಆರಂಭವಾದ ಕೂಡಲೇ ಮನೆ ಬಿಟ್ಟು ಹೊರಹೋಗದಿರೋಣ.

  • ಮನೆಯ ಹೊರಗಿದ್ದರೆ ಸಮೀಪದ ,ಸಾಧ್ಯವಿರುವ ಬಲಯುತವಾದ ಕಟ್ಟಡದ ಆಶ್ರಯ ಪಡೆಯಬೇಕು. ಬಯಲು ಪ್ರದೇಶವಾದರೆ ತಗ್ಗಿನ ತಾಣದಲ್ಲಿ ಹೋಗಿ ಕುಳಿತುಕೊಳ್ಳಬೇಕು.ಒದ್ದೆ ನೆಲದೊಂದಿಗೆ ನಮ್ಮ ಇಡೀ ದೇಹ ಸಂಪರ್ಕದಲ್ಲಿರಬಾರದು.ಕುಕ್ಕುರುಗಾಲಿನಲ್ಲಿ ಕುಳಿತು ನಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಬೇಕು. ಇದು ಮೆದುಳಿಗೂ,ಹೃದಯಕ್ಕೂ ಮಿಂಚಿನಿಂದ ಸಂಭವಿಸಬಹುದಾದ ಬಹುಮಟ್ಟಿನ ಹಾನಿಯನ್ನು ತಪ್ಪಿಸುತ್ತದೆ.
  • ಯಾವುದೇ ಕಾರಣಕ್ಕೂ ಮರದ ಕೆಳಗೆ ನಿಲ್ಲಬಾರದು. ಮಿಂಚು ಭೂಮಿಗೆ ಹರಿಯುವಾಗ ಮರದಂತಹ ಹಸಿ ವಸ್ತುಗಳೊಂದಿಗೆ ಬೇಗನೆ ಆಕರ್ಷಣೆಗೊಳಗಾಗುತ್ತದೆ.
  • ಲೋಹದ ವಸ್ತುಗಳಿಂದ ದೂರವಿರಬೇಕು.(ಉದಾ.. ಕೊಡಲಿ,ಹಾರೆ,ಕುಡುಗೋಲು).ಅಂದು ಹಿರಿಯರು ಸಿಡಿಲು ಬರುವ ಕಾಲಕ್ಕೆ ಕತ್ತಿ ಮುಂತಾದ ಲೋಹದ ವಸ್ತುಗಳನ್ನು ಅಂಗಳಕ್ಕೆ ಎಸೆಯುತ್ತಿದ್ದರು.
  • ನೀರಿನಲ್ಲಿದ್ದರೆ ಅಂದರೆ ಸ್ನಾನ ಮಾಡುತ್ತಿದ್ದರೆ, ಕೆರೆಯಲ್ಲಿ ಈಜುತ್ತಿದ್ದರೆ ತಕ್ಷಣ ಹೊರಬರಬೇಕು.
  • ವಿದ್ಯುತ್ ಕಂಬ, ಜೋತಾಡುತ್ತಿರುವ ತಂತಿ,ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್,ತಂತಿ ಬೇಲಿ, ಬಟ್ಟೆ ಒಣಹಾಕುವ ಲೋಹದ ತಂತಿಗಳಿಂದ ದೂರವಿರಬೇಕು.
  • ಬಸ್ಸು, ಕಾರು ಮುಂತಾದ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರೆ ಕಿಟಕಿ ಗಾಜುಗಳನ್ನು ಮುಚ್ಚಿಕೊಳ್ಳಿ. ದ್ವಿ ಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರೆ ರೈನ್ ಕೋಟ್ ಹಾಕಲು ಮರದಡಿ ನಿಲ್ಲಿಸುವುದು ಅಪಾಯವನ್ನು ಆಹ್ವಾನಿಸಿದಂತೆ. ಚಲಿಸುತ್ತಿರುವ ತ್ರಿಚಕ್ರ, ನಾಲ್ಕು ಚಕ್ರ ,ಅಥವಾ ಅದಕ್ಕಿಂತ ಹೆಚ್ಚು ಚಕ್ರಗಳ ವಾಹನಕ್ಕೆ ಸಿಡಿಲು ಬಡಿದ ಉದಾಹರಣೆ ಇಲ್ಲವಾದರೂ ಸಂಭಾವ್ಯ ಮಿಂಚಿನ ಪ್ರಖರ ಬೆಳಕಿನ ಅಪಾಯಕ್ಕಾಗಿ ಈ ಮುಂಜಾಗ್ರತಾ ಕ್ರಮ.
  • ಮುನ್ನೆಚ್ಚರಿಕಾ ಕ್ರಮವಾಗಿ ಮನೆಯಲ್ಲಿನ ಎಲ್ಲ ಸ್ವಿಚ್ ಬೋರ್ಡ್ ಗಳಿಂದ ಟಿ.ವಿ.,ರೆಫ್ರಿಜರೇಟರ್,ಟೇಬಲ್ ಫ್ಯಾನ್, ವಾಷಿಂಗ್ ಮೆಷಿನ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳ ಕೇಬಲ್ ನ್ನು ತೆಗೆಯಲೇಬೇಕು. ಇಲ್ಲದಿದ್ದರೆ ಉಪಕರಣಗಳು ಹಾಳಾಗುವ ಸಾಧ್ಯತೆ ಅಧಿಕ. ಮನೆಯ ಮೀಟರ್ ಬೋರ್ಡ್ ಸಮೀಪ ಮೊದಲೇ ಇಂಡಸ್ಟ್ರಿಯಲ್ ಸಾಕೆಟ್ ಅಳವಡಿಸಿ. ಅದನ್ನು ಸಿಡಿಲಿನ ಸಮಯ ಕಳಚಿಡುವುದು ಸುಲಭ ವಿಧಾನ. ಹಾಗೆ ಪಂಪುಶೆಡ್ ನಲ್ಲಿ ಕೂಡಾ ಅಳವಡಿಸಿಕೊಳ್ಳುವುದು ಒಳಿತು.
  • ಗುಡುಗಿನ ಸಂದರ್ಭದಲ್ಲಿ ಸ್ಥಿರ ದೂರವಾಣಿಯಲ್ಲಿ ಮಾತನಾಡಲೇ ಬಾರದು.ಮೊಬೈಲ್ ನಲ್ಲಿ ಮಾತನಾಡುವುದು ಕೂಡಾ ಅಪಾಯ ಅಂತ ಇತ್ತೀಚಿನ ಕೆಲವು ಘಟನೆಗಳು ಸಾರಿವೆ. ಕಂಪ್ಯೂಟರ್ ಕೆಲಸದಿಂದ ದೂರವಿರಿ.
  • ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಮಳೆಯ ಸಂದರ್ಭದಲ್ಲಿ ಸತತವಾಗಿ ಗುಡುಗುತ್ತಿದ್ದರೆ ಸಿಡಿಲು ಬಡಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಸತತ ಗುಡುಗಿನ ಮಧ್ಯೆ ಕ್ಷಣಕಾಲ ಗುಡುಗು ಇಲ್ಲದಿದ್ದರೆ ಅಲ್ಲಿ ಅಪಾಯಕಾರಿ ಸಿಡಿಲಿನ ಉತ್ಪತ್ತಿ ಆಗುತ್ತಿದೆ ಎಂದು ತಿಳಿಯಬಹುದು.

ಪ್ರಪಂಚದಾದ್ಯಂತ ಪ್ರತಿ ವರ್ಷ 25 ಸಾವಿರಕ್ಕೂ ಅಧಿಕ ಮಂದಿ ಸಿಡಿಲಿನ ಆಘಾತದಿಂದ ಸಾವನ್ನಪ್ಪುತ್ತಾರೆ. ಲಕ್ಷಾಂತರ ಜನರು ಗಾಯಹೊಂದುತ್ತಾರೆ. ಅಕಸ್ಮಾತ್ ಸಿಡಿಲಿನ ಆಘಾತಕ್ಕೊಳಗಾದರೆ…

● ತಕ್ಷಣವೇ ವೈದ್ಯಕೀಯ ನೆರವು ಅಥವಾ ಅಂಬ್ಯುಲೆನ್ಸ್ ಗೆ ಕರೆ ಮಾಡಿ.
● ಮಿಂಚಿನ ಆಘಾತಕ್ಕೊಳಗಾದವರನ್ನು ಸ್ಪರ್ಷಿಸಬಾರದು ಎಂಬ ತಪ್ಪು ಕಲ್ಪನೆ ಇದೆ. ಸ್ಪರ್ಷಿಸುವುದು ಮತ್ತು ಪ್ರಥಮ ಚಿಕಿತ್ಸೆ ನೀಡುವುದು ಸುರಕ್ಷಿತವಾಗಿದೆ.

ತಕ್ಷಣದ ಕ್ರಮವಾಗಿ ಈ ಕೆಳಗಿನಂತೆ ಪ್ರಥಮ ಚಿಕಿತ್ಸೆ ನೀಡಬಹುದು.

Advertisement

ಉಸಿರಾಟ ನಿಂತಿದ್ದರೆ ….

• ಬಾಯಿಂದ ಬಾಯಿಗೆ ಪುನರುಜ್ಜೀವನವನ್ನು ತಕ್ಷಣ ಆರಂಭಿಸಿ..
• ಹೃದಯದ ಬಡಿತ ನಿಂತಿದ್ದರೆ…
ವೈದ್ಯಕೀಯ ನೆರವು ಬರುವವರೆಗೂ

ಹೃದಯ ಮತ್ತು ಶ್ವಾಸಕೋಶದ ಪ್ರಚೋದಕ (CPR) ವನ್ನು ನಿರ್ವಹಿಸಿ. (ಅಂದರೆ ಆಘಾತಕ್ಕೊಳಗಾದವರ ಹೃದಯದ ಮೇಲೆ ನಮ್ಮ ಅಂಗೈನಿಂದ ವಿಶೇಷ ಒತ್ತಡವನ್ನು ಹಾಕುವುದು.)

ಹೆಚ್ಚಿನ ಸಂದರ್ಭಗಳಲ್ಲಿ ಇದು ಮತ್ತೆ ಉಸಿರಾಟ, ಹೃದಯದ ಬಡಿತ ಆರಂಭವಾಗಲು ಸಹಕಾರಿಯಾಗುತ್ತದೆ.

ಮಿಂಚಿನ ಆಘಾತಕ್ಕೊಳಗಾದವರು ನಾಡಿ ಮತ್ತು ಉಸಿರಾಟವನ್ನು ಹೊಂದಿದ್ದರೆ ಇತರ ಸಂಭವನೀಯ ಸುಟ್ಟ ಗಾಯಗಳನ್ನು, ಕೇಳುವ ನಷ್ಟ, ದೃಷ್ಟಿ ನಷ್ಟಗಳನ್ನು ಗಮನಿಸಿ.

Advertisement

ಸಾಧ್ಯವಿದ್ದವರು ಮುಂಚಿತವಾಗಿಯೇ ಮನೆಗಳಿಗೆ ಪ್ರಬಲವಾದ ಮಿಂಚು ನಿರೋಧಕವನ್ನು (Lightning Arrester) ಅಳವಡಿಸಿಕೊಂಡು ಮಿಂಚು ಸಿಡಿಲಿನ ಸಂಭಾವ್ಯ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು..

ಬರಹ: ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ

 

 

Advertisement

 

( ಪಿ ಜಿ ಎಸ್ ಎನ್ ಪ್ರಸಾದ್ ಅವರು ಕೃಷಿಕರು. ಹವಾಮಾನ ಆಸಕ್ತರು. ಕಳೆದ ಹಲವಾರು ವರ್ಷಗಳಿಂದ ಮಳೆ ದಾಖಲೆ ಇರಿಸುತ್ತಿದ್ದಾರೆ.)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ

30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

6 hours ago

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

13 hours ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

13 hours ago

14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ

ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…

13 hours ago

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ – ಉಪಲೋಕಾಯುಕ್ತ ಬಿ. ವೀರಪ್ಪ

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ  ಉಪಲೋಕಾಯುಕ್ತ ಬಿ.…

13 hours ago