ಸುಳ್ಯದಲ್ಲಿ ಮಿಣಿ ಮಿಣಿ ವಿದ್ಯುತ್ ಚಿಮಿಣಿ….! : ಕೃಷಿಕರ ಅಸಹಾಯಕತೆ-ಜನರ ಗೋಳು

February 8, 2020
12:13 PM

ಸುಳ್ಯ ತಾಲೂಕಿನಲ್ಲಿ  ಈ ಬಾರಿಯೂ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ಲೋವೋಲ್ಟೇಜ್, ಆಗಾಗ ಟ್ರಿಪ್, ನಿಗದಿತ ಸಮಯಕ್ಕೆ ವಾರದ ವಿದ್ಯುತ್ , ಜಂಪರ್ ಕಟ್ , ಓವರ್ ಲೋಡ್, ವಯರ್ ಕಟ್…..! ಇದೆಲ್ಲಾ ಶಬ್ದಗಳು ಈಗ ಕೇಳಿ ಕೇಳಿ ಸಾಕಾಗಿದೆ. ಜನರಿಗೆ ಕಂಠಪಾಠವಾಗಿದೆ. ಕೃಷಿಕರು, ಜನಸಾಮಾನ್ಯರು, ಉದ್ಯಮಿಗಳು ಅಸಹಾಯಕರಾಗಿದ್ದಾರೆ. ಪ್ರತಿಭಟನೆ ಮಾಡಿದರೂ ಫಲ ಸಿಗದ ಮೇಲೆ ಈಗ  ವಿದ್ಯುತ್ ಸಮಸ್ಯೆ ಬಗ್ಗೆ ಎಲ್ಲಿ, ಯಾರಲ್ಲಿ, ಹೇಗೆ ಮಾತನಾಡಬೇಕು ? ಎಂಬುದು ತಿಳಿಯದೆ ಗೊಂದಲಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ  ವಿದ್ಯುತ್ ಸಮಸ್ಯೆ ಬಗ್ಗೆ ಸಾಕಷ್ಟು ವೈರಲ್ ಆಗುತ್ತಿದೆ. ಹಾಗಿದ್ದರೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ, ಮೆಸ್ಕಾಂ , ಕೆಪಿಟಿಸಿಎಲ್ ಅಧಿಕಾರಿಗಳು ಆ ಕಡೆ ಈ ಕಡೆ ನೋಡುತ್ತಾರೆ..!. ಈಗ ಸುಳ್ಯದಲ್ಲಿ ವೋಲ್ಟೇಜ್ ಇಲ್ಲದ ವಿದ್ಯುತ್ ಬಲ್ಬ್ ಮಿಣಿ ಮಿಣಿಯಾಗಿ… ಚಿಮಿಣಿಯಂತಾಗಿದೆ…!

Advertisement
Advertisement

ಎರಡು ದಿನಗಳ ಹಿಂದೆ ಕಲ್ಮಡ್ಕದ ರಾಮ ಅಜ್ಜಕಾನ ಎಂಬವರು ಸರಣಿ ಟ್ವೀಟ್ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ವಿದ್ಯುತ್ ಸಮಸ್ಯೆ ತರಲು ಪ್ರಯತ್ನಿಸಿದರು. ಪೇಸ್ ಬುಕ್ ಮೂಲಕ ಕಲ್ಮಡ್ಕದ ಸುರೇಶ್ಚಂದ್ರ ಅವರು ಎರಡು ವರ್ಷಗಳಿಂದ ವಿದ್ಯುತ್ ಸಮಸ್ಯೆ ಗಮನಕ್ಕೆ ತರುತ್ತಿದ್ದಾರೆ. ಹತ್ತಾರು ಮಂದಿ ಸುಳ್ಯ ತಾಲೂಕಿನ ವಿದ್ಯುತ್ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದಾರೆ. ಬೆಳ್ಳಾರೆಯ ವಿದ್ಯುತ್ ಬಳಕೆದಾರರ ಸಂಘದ ಸಂಚಾಲಕ ಜಯಪ್ರಸಾದ್ ಜೋಶಿ ಅವರ ಸತತ ಹೋರಾಟ ಫಲವಾಗಿ ಮಾಡಾವು 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ವೇಗ ಪಡೆದಿದೆ. ಇದೆಲ್ಲಾ ಆದರೂ ಸುಳ್ಯದ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ…!

 

 

 

ಯಾರೇ, ಏನೇ ಮಾಡಿದರೂ ಸಭೆ ನಡೆಸುವವರೇ ಸಭೆ ನಡೆಸಿ ತರಾಟೆಗೆ ತೆಗೆದುಕೊಳ್ಳಬೇಕು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಬೇಕು. ಯಾರೇ ಎಷ್ಟೇ ಬರೆದರೂ, ಹೋರಾಟ ಮಾಡಿದರೂ ಇಚ್ಛಾ ಶಕ್ತಿಯೇ ಇಲ್ಲದೇ ಇದ್ದರೆ ಪ್ರಯೋಜನ ಏನು?. “ಬರೆದಷ್ಟು ಸುಲಭ ಇಲ್ಲ” ಎಂದು  ಹೇಳಿ ಮುಗಿಸಿಬಹುದು. ಅದು 3 ಶಬ್ದದಲ್ಲಿ  ಮುಗಿದು ಬಿಡುತ್ತದೆ.  ಮುಂದಿನ ವರ್ಷವೂ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತದೆ ಅಷ್ಟೇ….!

ಇಂದು ಸುಳ್ಯ ತಾಲೂಕಿನ ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡಿದರೆ ಅನೇಕ ಜನಪ್ರತಿನಿಧಿಗಳು ಉರಿದು ಬೀಳುತ್ತಾರೆ. ಆಗುತ್ತದೆ… ಅಡೆತಡೆ ಇದೆ ಅದೆಲ್ಲಾ ನಿವಾರಣೆಯಾದ ಬಳಿಕ ಆಗುತ್ತದೆ ಎನ್ನುತ್ತಾರೆ. ಡಿ ವಿ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರ ಮಾಡಿ ಎಂದು ಒತ್ತಾಯ ಮಾಡಲಾಗಿತ್ತು. ಮಾಡಾವು ಆದರೂ ಆಗಲಿ ಎನ್ನಲಾಗಿತ್ತು. ಆದರು ಆಗಿರಲಿಲ್ಲ. ಸುಳ್ಯ ತಾಲೂಕಿನ ಅಭಿವೃದ್ಧಿ, ಇಲ್ಲಿನ ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಯೋಚಿಸಿದರೆ ವಿದ್ಯುತ್ ಮಾತು ಹೆಚ್ಚಾಗಲೇಬೇಕಾದ ಅನಿವಾರ್ಯತೆ ಇದೆ.

ಕಳೆದ ಹಲವಾರು ವರ್ಷಗಳಿಂದ ಸುಳ್ಯ ತಾಲೂಕಿಗೆ ವಿದ್ಯುತ್ ಸಮಸ್ಯೆ ಇದೆ. ಪ್ರತೀ ಬಾರಿ ಮಾತನಾಡುವಾಗಲೂ ಸುಳ್ಯಕ್ಕೆ 110 ಕೆವಿ ಲೈನ್ ಬಂದರೆ ಎಲ್ಲವೂ ಸರಿಯಾಗುತ್ತದೆ ಎಂಬುದು ಒಂದು ಉತ್ತರವಾದರೆ, ಮಾಡಾವು ಸಬ್ ಸ್ಟೇಶನ್ ಆದರೆ ಸರಿಯಾಗುತ್ತದೆ ಎಂಬುದು ಇನ್ನೊಂದು ಉತ್ತರ. ಸುಬ್ರಹ್ಮಣ್ಯ ಸಬ್ ಸ್ಟೇಶನ್ ಕೂಡಾ ಗುಣಮಟ್ಟದ ವಿದ್ಯುತ್ ಗೆ ಕಾರಣವಾಗುತ್ತದೆ ಎಂಬುದು ಇತ್ತು. ಆದರೆ ಇದ್ಯಾವುದೂ ಇಂದು ಪರಿಹಾರವಾಗಿ ಕಂಡಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೊಂದು ಇಶ್ಯೂ ಆಗಿತ್ತು. ಹೋರಾಟದ ಹಂತದವರೆಗೂ ಹೋಗಿತ್ತು. ಆದರೆ ಚುನಾವಣೆಯ ನಂತರ ವಿದ್ಯುತ್ ಕೆಲಸ ಆಗುತ್ತದೆ ಎನ್ನಲಾಗಿತ್ತು.  ಯಾವುದೇ ನಿರೀಕ್ಷಿತ ಪ್ರಗತಿ ಆಗಿಲ್ಲ.

ಗುಜರಾತ್ ಮಾದರಿ ಅಭಿವೃದ್ಧಿ ಎಂದು ಪ್ರತೀ ಬಾರಿಯೂ ಅನೇಕರು ಹೇಳುತ್ತಾರೆ. ಗುಜರಾತ್ ಅಭಿವೃದ್ಧಿಗೆ ಮೊದಲ ಹೆಜ್ಜೆಯೇ ವಿದ್ಯುತ್ ವ್ಯವಸ್ಥೆ. ಸೋಲಾರ್ ವಿದ್ಯುತ್, ವಿಂಡ್ ಪವರ್ ಸೇರಿದಂತೆ ಜಲವಿದ್ಯುತ್ ಅಲ್ಲಿ ಬಳಕೆಯಾಗುತ್ತದೆ. ಅದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯ ಕಾರಣದಿಂದ ಕೃಷಿ ಅಭಿವೃದ್ಧಿಯ ಜೊತೆಗೆ ಕೈಗಾರಿಕೆಗಳು ಅಭಿವೃದ್ಧಿಯಾದವು. ಇದೇ ಮಾದರಿ ಗಮನಿಸಿದರೆ ಸುಳ್ಯ ಬಹುಪಾಲು ಹಿಂದಿದೆ.  ಸುಳ್ಯದಲ್ಲಿ ಇಂದಿಗೂ  ಒಂದೇ ಒಂದು ಕೈಗಾರಿಕೆ ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಯುವಕರು ನಗರದತ್ತ ಮುಖ ಮಾಡಲೇಬೇಕಾದ ಅನಿವಾರ್ಯತೆ ಇದೆ. ಕೈಕೊಡುವ ವಿದ್ಯುತ್ ಕಾರಣದಿಂದಲೇ ಇಂದು ಸಂಪರ್ಕ ವ್ಯವಸ್ಥೆಗೂ ಕಷ್ಟವಾಗಿದೆ. ಆಗಾಗ ಮೊಬೈಲ್ ಕೈಕೊಡುತ್ತದೆ ಡಿಜಿಟಲ್ ಇಂಡಿಯಾದ ಕನಸಿನಲ್ಲಿ ಇರುವ ಭಾರತದಲ್ಲಿರುವ ಸುಳ್ಯಕ್ಕೆ ಈಗ ವಿದ್ಯುತ್ ಬಹುದೊಡ್ಡ ಸಮಸ್ಯೆಯಾಗಿ ಕಾಡಿದೆ.

ಕೃಷಿಯ ಸಮಸ್ಯೆಯೂ ಇದೇ ಹಾದಿಯಲ್ಲಿದೆ. ಇಲ್ಲಿ ಆಗಾಗ ಕೈಕೊಡುವ ವಿದ್ಯುತ್ ಒಂದು ಕಡೆಯಾದರೆ ಲೋವೋಲ್ಟೇಜ್ ಇನ್ನೊಂದು ಸಮಸ್ಯೆ. ಪಂಪ್ ಚಾಲೂ ಆಗದ ಸ್ಥಿತಿ ಇದೆ. ಚಾಲೂ ಆದರೂ ನೀರು ಹಾಯಿಸುವುದು ಕಷ್ಟವಾಗುತ್ತದೆ. ವಾರಕ್ಕೊಮ್ಮೆಯಾದರೂ ನೀರುಣಿಸಲು ಅನೇಕರಿಗೆ ಕಷ್ಟವಾಗಿದೆ.

ವಿದ್ಯುತ್ ಹೆಸರಿನಲ್ಲಿ ಹೋರಾಟಗಳು ಸುಳ್ಯದಲ್ಲಿ ಎಷ್ಟಾದವು. ರಾಜ್ಯದಲ್ಲಿ ಆಡಳಿತ ಪಕ್ಷ ಇರುವಾಗ ವಿಪಕ್ಷಗಳು ಬೊಬ್ಬೆ ಹೊಡೆದವು, ಆಡಳಿತ  ಇರುವ ಪಕ್ಷ ಮೌನವಾಯಿತು. ಸಮಸ್ಯೆ ಎಲ್ಲಿ ಅಂತ ತಿಳಿದುಕೊಂಡು ಜನರೇ ಹೇಳಿದರೂ ಪರಿಹಾರ ಇಲ್ಲವಾಗಿದೆ. ಪ್ರತಿಭಟನೆ, ಹೋರಾಟ ನಡೆದಾಗ  ಎಲ್ಲರಿಗೂ ಇಲಾಖೆ ನೀಡಿದ ಉತ್ತರ 110 ಕೆವಿ ಆದರೆ ಎಲ್ಲಾ ಸರಿಯಾಗುತ್ತದೆ…! ಅದು ಯಾವಾಗ ಆಗುತ್ತದೆ…??

ಸುಮಾರು 15 ವರ್ಷದಿಂದ ಸುಳ್ಯದಲ್ಲಿ  ವಿದ್ಯುತ್ ಸಮಸ್ಯೆ ಇದ್ದರೂ ಕಳೆದ ವರ್ಷದ ಪ್ಲಾಶ್ ಬ್ಯಾಕ್ ಇಲ್ಲಿದೆ….!

ಕಳೆದ ವರ್ಷ ಶಾಸಕ ಅಂಗಾರ ಮಾಡಾವು ಸಬ್ ಸ್ಟೇಶನ್ ಗೆ ಭೇಟಿ ನೀಡಿದ ವರದಿ…

ಶಾಸಕ ಅಂಗಾರ ಅವರಿಂದ ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಕಾಮಗಾರಿ ವೀಕ್ಷಣೆ

 

ಮಾಡಾವು ಸಬ್ ಸ್ಟೇಶನ್ ಆದರೆ ಏನು ಲಾಭ..(ಕಳೆದ ವರ್ಷ ಎಚ್ಚರಿಸಿದ ವರದಿ )

ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಆದರೆ ಏನು ಪ್ರಯೋಜನ ?

 

 

ಜನರೇ ಮಾತನಾಡಿದರು, ಚರ್ಚೆ ನಡೆಸಿದರು (ಕಳೆದ ವರ್ಷ )

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ? ಬಾಳಿಲದಲ್ಲಿ ನಡೆಯಿತು ಚರ್ಚೆ

 

ಕಳೆದ ವರ್ಷ ಜೂನ್ ವೇಳೆ ಮಾಡಿದ ಒತ್ತಾಯ (ಜನರು)

ಮಾಡಾವು ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಚುರುಕಿಗೆ ಒತ್ತಾಯ

 

ಜನರ ಒತ್ತಾಯ-ಪ್ರಯತ್ನ: 

ವಿದ್ಯುತ್ ಬಳಕೆದಾರರ ಪ್ರಯತ್ನ : ಸ್ಪಂದಿಸಿದ ಅರಣ್ಯ ಇಲಾಖೆ : ಬಳಕೆದಾರರಿಂದ ಶುರುವಾಗಿದೆ ಹಂತ ಹಂತದ ಹೋರಾಟ

 

ಜನರ ಪ್ರಯತ್ನದ ಫಲ….. ಹಾಗಿದ್ದರೂ ಪ್ರಯೋಜನ… ತೆಗೆದುಕೊಂಡ ಕ್ರಮ…?

ಶಾಸಕರ ಮುಂದೆ ಕೆ.ಪಿ.ಟಿ.ಸಿ.ಎಲ್ ಬಣ್ಣ ಬಯಲಾಯ್ತು……! ಸತ್ಯ ಅರಿತ ಶಾಸಕರು ತೆಗೆದುಕೊಳ್ಳಬೇಕಾದ ಕ್ರಮ ಏನು ?

 

 ಪತ್ರಕರ್ತರ ಪ್ರಶ್ನೆಗೆ ಸಚಿವರು ಹೇಳಿದ್ದು…

110 ಕೆವಿ ಸಬ್ ಸ್ಟೇಶನ್ : ಫೆ.10 ರೊಳಗೆ ಸಭೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

 

ಕಳೆದ ವರ್ಷ ಹೇಳಿದ್ದು…!

110 ಕೆವಿ ಲೈನ್ ನಿರ್ಮಾಣಕ್ಕೆ ಅರಣ್ಯ ಅನುಮತಿ : ಅಂಗಾರ

 

(ಗಮನಿಸಿ : ಇಲ್ಲಿ ಮಿಣಿ ಮಿಣಿ ವಿದ್ಯುತ್ ಚಿಮಿಣಿ…. ಎನ್ನುವುದು  ಗ್ರಾಮೀಣ ಭಾಗದಲ್ಲಿ ಬಳಕೆಯಲ್ಲಿರುವ ಶಬ್ದ. ತೀರಾ ಲೋಲ್ಟೇಜ್ ಕಡಿಮೆ ಇದ್ದಾಗ, ಬಲ್ಬ್ ಟಂಗಸ್ಟನ್ ಉರಿಯುವಷ್ಟು ಬೆಳಕು ಇದ್ದಾಗ ಮಿಣಿ ಮಿಣಿ ಉರಿಯುತ್ತದೆ ಎನ್ನುತ್ತಾರೆ. ಚಿಮಣಿಯಷ್ಟೇ ಬೆಳಕು ಎನ್ನುವುದು ಸಂದೇಶ. ಅಪಹಾಸ್ಯದ ವಿಷಯವಲ್ಲ, ಜನರ ಅಸಹಾಯಕತೆಯ ಪ್ರತಿಬಿಂಬವಷ್ಟೇ)

POk

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ
ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು
February 12, 2026
6:40 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror