ಸುಳ್ಯ: ರಾಜಕೀಯ ವಿವಾದ ಸೃಷ್ಠಿಸಿದ್ದ, ಪ್ರತಿಭಟನೆ, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿ ಪೂರ್ತಿಯಾಗುತ್ತಿದೆ. ಕೇಂದ್ರ ರಸ್ತೆ ನಿಧಿ ಅನುದಾನದಲ್ಲಿ ಆರು ಕೋಟಿ ರೂ ವೆಚ್ಚದಲ್ಲಿ ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಕಾಂತಮಂಗಲದಿಂದ ಅಜ್ಜಾವರದ ಅಡ್ಪಂಗಾಯದವರೆಗೆ ಆರು ಕಿ.ಮಿ. ಅಭಿವೃದ್ಧಿ ನಡೆಯುತಿದೆ. ಇದರಲ್ಲಿ 4.5 ಕಿ.ಮಿ.ರಸ್ತೆ ಡಾಮರೀಕರಣ ಪೂರ್ತಿಯಾಗಿದೆ. ಉಳಿದ ಸುಮಾರು ಒಂದೂವರೆ ಕಿ.ಮಿ ರಸ್ತೆಯಲ್ಲಿ ಜಲ್ಲಿ ಹಾಸುವ ಕೆಲಸ ಪೂರ್ತಿಯಾಗಿದೆ. ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದ್ದು ಡಾಮರೀಕರಣ ಕೆಲಸ ಸದ್ಯದಲ್ಲಿಯೇ ಪೂರ್ತಿಯಾಗಲಿದೆ ಎಂದು ಇಂಜಿನಿಯರ್ಗಳು ತಿಳಿಸಿದ್ದಾರೆ. 5.5 ಮೀಟರ್ ಅಗಲದಲ್ಲಿ ರಸ್ತೆ ಡಾಮರೀಕರಣ ಮಾಡಲಾಗಿದೆ. ಅಗಲೀಕರಣ ಮಾಡಿ ಅಲ್ಲಲ್ಲಿ ಕಿರು ಸೇತುವೆ, ಮೋರಿಗಳ ನಿರ್ಮಾಣವೂ ನಡೆದಿದೆ. ಡಾಮರು ಕಂಡು ದಶಕಗಳೇ ಕಳೆದು ಸಂಪೂರ್ಣ ಎಕ್ಕುಟ್ಟಿ ಹೋಗಿದ್ದ ರಸ್ತೆಯಲ್ಲಿನ ಪ್ರಯಾಣ ದೇವರಿಗೇ ಪ್ರೀತಿ ಎಂಬ ಸ್ಥಿತಿ ಇತ್ತು. ಕಳೆದ ಬೇಸಿಗೆಯಲ್ಲಿ ಕಾಮಗಾರಿ ಆರಂಭಿಸಿ ಮಳೆಗಾಲಕ್ಕೆ ಮುನ್ನ ಸ್ವಲ್ಪ ಭಾಗ ಅಭಿವೃದ್ಧಿಸಿ ಡಾಮರೀಕರಣ ನಡೆಸಲಾಗಿತ್ತು. ಮಳೆಗಾಲ ಕಳೆದ ಬಳಿಕ ಕಾಮಗಾರಿ ಮತ್ತೆ ಆರಂಭಿಸಲಾಗಿತ್ತು.
ದಶಕದ ಯಾತನೆಗೆ ಮುಕ್ತಿ: ಸುಳ್ಯ ಅಜ್ಜಾವರ ಮಧ್ಯೆಯ ಆರೂವರೆ ಕಿ.ಮಿ.ರಸ್ತೆ ಅಭಿವೃದ್ಧಿ ಕಾಣದೆ ದಶಕಗಳೇ ಕಳೆದು ಹೋಗಿತ್ತು. ಇದೀಗ ರಸ್ತೆ ಅಭಿವೃದ್ಧಿ ಕಂಡಿರುವುದರಿಂದ ದಶಕದ ಯಾತನೆಗೆ ಮುಕ್ತಿ ದೊರೆಯುವಂತಾಗಿದೆ. ಕಾಂತಮಂಗಲ ವೃತ್ತದಿಂದ ಅಡ್ಪಂಗಾಯದವರೆಗೆ ಒಟ್ಟು ಏಳೂವರೆ ಕಿ.ಮಿ.ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ಆರೂವರೆ ಕಿ.ಮಿ. ಸಂಪೂರ್ಣ ಎಕ್ಕುಟ್ಟಿ ಹೋಗಿ ಪ್ರಯಾಣ ದುಸ್ತರವಾಗಿತ್ತು. ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸುಳ್ಯದಿಂದ ಮಂಡೆಕೋಲು ಗಡಿವರೆಗೆ ಕರ್ನಾಟಕದ ಭಾಗ ಒಟ್ಟು 14 ಕಿ.ಮಿ. ರಸ್ತೆ ಇದೆ. ಇದರಲ್ಲಿ ಅಡ್ಪಂಗಾಯದಿಂದ ಮಂಡೆಕೋಲು ಪೇಟೆವರೆಗೆ ಮೂರು ಕಿ.ಮಿ.ಲೋಕೋಪಯೋಗಿ ರಸ್ತೆ ಹೊರತುಪಡಿಸಿದರೆ ಉಳಿದ 11 ಕಿ.ಮಿ.ಜಿಲ್ಲಾ ಪಂಚಾಯಿತಿ ರಸ್ತೆ ಇದೆ. ಇದರಲ್ಲಿ ನಾಲ್ಕು ಕೋಟಿ ರೂ ಅನುದಾನದಲ್ಲಿ ನಾಲ್ಕೂವರೆ ಕಿ.ಮಿ. ಕೆಲವು ವರ್ಷಗಳ ಹಿಂದೆ ಅಭಿವೃದ್ದಿಗೊಂಡಿತ್ತು. ಕಾಂತಮಂಗಲ ಹಾಗು ಅಜ್ಜಾವರಗಳಲ್ಲಿ ಒಟ್ಟು ಒಂದು ಕಿ.ಮಿ.ಕಾಂಕ್ರೀಟೀಕರಣ ಮತ್ತು ಮಂಡೆಕೋಲು ಪೇಟೆಯಿಂದ ಗಡಿಯವರೆಗೆ 3.5 ಕಿ.ಮಿ.ಡಾಮರೀಕರಣ ಮಾಡಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಕಾಂತಮಂಗಲ-ಅಜ್ಜಾವರ ಮಧ್ಯೆ ಉಳಿದ ಆರೂವರೆ ಕಿ.ಮಿ. ರಸ್ತೆ ಡಾಮರೀಕರಣ ಕಾಣದೇ ಒಂದೂವರೆ ದಶಕ ಸಂದಿತ್ತು.
ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ನಿಧಿಯಿಂದ ಆರು ಕೋಟಿ ರೂ ಅನುದಾನ ನಾಲ್ಕು ವರ್ಷದ ಹಿಂದೆಯೇ ಮಂಜೂರುಗೊಂಡಿತ್ತು. ಆದರೆ ಈ ಅನುದಾನದ ಟೆಂಡರ್ ಪ್ರಕ್ರಿಯೆ ನಡೆಯದೆ ಕಾಮಗಾರಿ ಆರಂಭಿಸಲು ವಿಳಂಬ ಆಗಿ ಭಾರೀ ವಿವಾದಕ್ಕೆ ಮತ್ತು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ನಿರಂತರ ಒತ್ತಡ ಮತ್ತು ಪ್ರತಿಭಟನೆಯ ಬಳಿಕ ರಸ್ತೆ ಕಾಮಗಾರಿ ಆರಂಭಗೊಂಡಿತ್ತು.
ಕೇಂದ್ರ ರಸ್ತೆ ನಿಧಿಯಿಂದ ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿ ನಡೆಯುತಿದ್ದು ಅಂತಿಮ ಹಂತದಲ್ಲಿದೆ. ಕಾಮಗಾರಿ ಆರಂಭಗೊಳ್ಳುವುದು ವಿಳಂಬವಾಗಿದ್ದರೂ ಇದೀಗ ಅತ್ಯುತ್ತಮ ರಸ್ತೆ ನಿರ್ಮಾಣಗೊಂಡಿದೆ. ರಸ್ತೆ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಿದ ಕಾರಣ ಸುಂದರ ರಸ್ತೆ ನಿರ್ಮಾಣಗೊಂಡಿದೆ-ನವೀನ್ಕುಮಾರ್ ಮೇನಾಲ, ಮಾಜಿ ಸದಸ್ಯ, ದ.ಕ.ಜಿಲ್ಲಾ ಪಂಚಾಯಿತಿ.
ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…
ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ರಸ್ತೆ, ಗುಡ್ಡ…
ಈಶಾನ್ಯ ಭಾರತದಲ್ಲಿ ಡಿಆರ್ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಸಂಜೆ ಹಾಗೂ ರಾತ್ರಿ ಮಳೆಯ…
ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…
“ಕಾಕ್ರೋಚ್ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್ ಪ್ಯಾರಾಸಿಟಿಕ್ ಫ್ರಂಟ್” ಎಂಬ ಹೊಸ…