ಸುಳ್ಯ: ತಾಲೂಕಿನ ಎಲ್ಲಾ ಇಲಾಖೆಗಳು ತಮ್ಮ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ಮಾಡುವ ಮೂಲಕ ಕಡ್ಡಾಯ ಕನ್ನಡ ಅನುಷ್ಠಾನಕ್ಕೆ ಇಲಾಖೆಗಳು ಗಮನ ನೀಡಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಭವಾನಿಶಂಕರ್ ಸೂಚನೆ ನೀಡಿದ್ದಾರೆ.
ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಿನ ಅಭಿವೃದ್ದಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಿದರು. ಮುಂದಿನ ತಿಂಗಳು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಇಲಾಖೆಗಳಿಗೆ ಬಂದು ಪರಿಶೀಲನೆ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ಮಾಡುವ ಮೂಲಕ ಕಡ್ಡಾಯ ಕನ್ನಡ ಅನುಷ್ಠಾನಕ್ಕೆ ಮುನ್ನುಡಿ ಬರೆಯಬೇಕು ಎಂದು ಹೇಳಿದರು. ಸುಳ್ಯ ಕಸಬಾ ಗ್ರಾಮದಲ್ಲಿ ಕೆಎಫ್ಡಿಸಿ ಇಲಾಖೆಗೆ ಕಂದಾಯ ಇಲಾಖೆಯಿಂದ ವಿವಿಧ ಹಂತಗಳಲ್ಲಿ ಒಟ್ಟು ಮಂಜೂರಾದ 1.20 ಎಕರೆ ಸ್ಥಳದ ಗಡಿ ಗುರುತಿಸಲು ಸರ್ವೇ ಇಲಾಖೆಗೆ ಸೂಚಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಅಧ್ಯಕ್ಷ ಚನಿಯ ಕಲ್ತಡ್ಕ ಪ್ರಶ್ನಿಸಿದರು. ಈ ಬಗ್ಗೆ ಕೆ.ಎಫ್.ಡಿ.ಸಿ, ಭೂದಾಖಲೆಗಳ ಸಹಾಯಕ ನಿರ್ದೇಶಕ ಇಲಾಖೆ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಸರ್ವೇ ನಡೆಸಿ ಮಾತುಕತೆ ಮೂಲಕ ಇತ್ಯರ್ಥ ಪಡಿಸಲು ಅಧ್ಯಕ್ಷರು ಸೂಚನೆ ನೀಡಿದರು.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಸ್ ರೋಗಿಗಳಿಗೆ ಇಂಜೆಕ್ಷನ್ ಖಾಸಗಿ ಔಷಧಿ ಸೆಂಟರ್ಗಳಿಂದ ತರಿಸುತ್ತಿದ್ದಾರೆ. ಬಡ ರೋಗಿಗಳಿಗೆ ಇದರಿಂದ ತೊಂದರೆಗಳಾಗುತ್ತಿದೆ. ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಅದ್ಯಕ್ಷರು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಕ್ಷಯರೋಗಿಗಳಿಗೆ ಸೂಕ್ತ ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ದೊರೆಯುತ್ತಿಲ್ಲ. ಈ ಕಾರಣದಿಂದ ರೋಗಕ್ಕೆ ಒಬ್ಬರು ಬಲಿಯಾಗಿದ್ದಾರೆ. ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲದಿದ್ದರೆ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಕ್ಷಯ ರೋಗಿಗಳಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಬೇರೆ ಕಾಯಿಲೆಗಳು ಕೂಡಾ ಸೇರಿ ಮರಣ ಆಗಿದೆ. ಜನರಲ್ ರೋಗಿಗಳಿಗೆ ಮಾತ್ರ ಸ್ವಲ್ಪ ಮಟ್ಟಿನ ತೊಂದರೆಗಳು ಆಗುತ್ತಿದೆ ಎಂದರು.
ಡಿಸೆಂಬರ್ ಕೊನೆಯ ಒಳಗೆ ಜಿಲ್ಲಾ ಪಂಚಾಯತ್ ಕಾಮಗಾರಿಗಳನ್ನು ಮುಗಿಸಬೇಕು ಎಂದು ತಾ.ಪಂ ಇ.ಒ ಜಿ.ಪಂ ಇಂಜಿನಿಯರ್ ಇಲಾಖೆಗೆ ಸೂಚನೆ ನೀಡಿದರು. ಅಲ್ಲದೇ ತಾಲೂಕಿನ ವಿವಿಧ 13 ಕಡೆ ಕುಡಿಯುವ ನೀರಿನ ಘಟಕಗಳನ್ನು ಬೇಗ ಮುಗಿಸಬೇಕು ಇ.ಒ ಹೇಳಿದರು. ಕುಡಿಯುವ ನೀರಿನ ಘಟಕಗಳ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಕೊಲ್ಲಮೊಗ್ರದ ಸಂತ್ರಸ್ತ ಕುಟುಂಬಗಳಿಗೆ ಜಾಗ ನೀಡುವ ವಿಚಾರವನ್ನು ಕೂಡಲೇ ಮುಗಿಸಬೇಕು. ಅನುದಾನಗಳು ಬಂದಿದೆ. ಈ ಬಗ್ಗೆ ವಸತಿಗಳನ್ನು ನಿರ್ಮಿಸಲು ಸ್ಥಳ ಗುರುತು ಕೂಡಲೇ ಮಾಡಿ ಅನುದಾನವನ್ನು ಬಳಕೆ ಮಾಡಿ ಎಂದು ಅಧ್ಯಕ್ಷರು ಸೂಚನೆ ನೀಡಿದರು. ಅಲ್ಲದೇ ನೆರೆ ಪರಿಹಾರಕ್ಕೆ ಬಂದಿರುವ ಅನುದಾನಗಳನ್ನು ಕೂಡಲೇ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಹಲವು ಕಡೆ ವಿದ್ಯುತ್ ಟಿಸಿಗಳ ಅಳವಡಿಕೆ ಮಾಡಲು ಬಾಕಿ ಇದೆ. ಟಿಸಿ ಅಳವಡಿಸಲು 2 ವರ್ಷಗಳ ಹಿಂದೆಯೇ ನೀಡಿದ ಅರ್ಜಿಗಳು ಬಾಕಿ ಇದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಹೇಳಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎ.ಇ ಟಿಸಿಗಳನ್ನು ಅಳವಡಿಸಲು ಟೆಂಡರ್ಗಳು ಆಗಿದೆ. ಅನುದಾನಗಳು ಬಂದ ಕೂಡಲೇ ಮಾಡಲಾಗುವುದು ಎಂದರು. ದೀನ್ ದಯಾಳ್ ವಿದ್ಯುತ್ತಿಕರಣ ಯೋಜನೆಯಲ್ಲಿ ವಿಸ್ಯುತ್ ಸಂಪರ್ಕ ನೀಡಲು ಬಾಕಿ ಇರುವ ಮನೆಗಳ ಬಗ್ಗೆ ಪಂಚಾಯತ್ ಪಿಡಿಒಗಳಿಂದ ಮಾಹಿತಿಗಳನ್ನು ಪಡೆದುಕೊಂಡು ಕೆಲಸಗಳನ್ನು ಮುಸಿಸಬೇಕು ಎಂದು ಅದ್ಯಕ್ಷರು ಸೂಚನೆ ನೀಡಿದರು.
ಸರಕಾರಿ ಶಾಲೆಗಳಲ್ಲಿ ಇರುವ ದೈಹಿಕ ಶಿಕ್ಷಕರನ್ನು ವಾರದಲ್ಲಿ ಮೂರು ಮೂರು ದಿನ ಬೇರೆ ಶಾಲೆಗಳಿಗೆ ಕರ್ತವ್ಯಕ್ಕೆ ಹಾಕಲಾಗುತ್ತಿದೆ. ಇದರಿಂದ 200ಕ್ಕಿಂತ ಅಧಿಕ ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ಈ ನಿಯಮಗಳನ್ನು ಬದಲಾವಣೆ ಮಾಡಿ ಕಡಿಮೆ ಮಕ್ಕಳು ಇರುವ ಶಾಲೆಗಳಿಂದ ಶಿಕ್ಷಕರನ್ನು ನಿಯೋಜನೆ ಮಾಡಿಕೊಳ್ಳಬೇಕು ಎಂದು ಉಪಾದ್ಯಕ್ಷೆ ಶುಭದಾ ಎಸ್. ರೈ ಶಿಕ್ಷಣ ಇಲಾಖೆಗೆ ಸೂಚಿಸಿದರು.
ಶಾಲೆಗಳಲ್ಲಿ ನೀಡಲಾಗುವ ಅಕ್ಷರದಾಸೋಹ ಯೋಜನೆಯಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರದಲ್ಲಿ ಬದಲಾವಣೆ ಆಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ. ಗೋಧಿಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಧಿ ಪೂರೈಕೆ ಮಾಡಿದರೆ ಹೇಗೆ ಉಪಯೋಗಿಸುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಹೇಳಿದರು. ಇದಕ್ಕೆ ಉತ್ತರಿಸಿದ ಅಕ್ಷರ ದಾಸೋಹ ಯೋಜನೆ ಸಹಾಯಕ ದೇವರಾಜ್ ಮುತ್ಲಾಜೆ ಸರಕಾರದ ಆದೇಶದಂತೆ ಆಹಾರ ಸಾಮಾಗ್ರಿಗಳ ಪೂರೈಕೆ ಆಗಿದೆ. ಈ ಬಗ್ಗೆ ಈಗಾಗಲೇ ಗೋಧಿ ಪೂರೈಕೆ ಬೇಡ ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು. ಈ ಬಗ್ಗೆ ನಿರ್ಣಯ ಮಾಡಿ ಸರಕಾರ ಸಲ್ಲಿಸಿ. ಅಲ್ಲದೇ ಶಾಲೆಗಳಲ್ಲಿ ತರಕಾರಿ ಕೈತೋಟಗಳಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಅಕ್ಷರ ದಾಸೋಹ ಯೋಜನೆಗೆ ಆಹಾರಗಳನ್ನು ಬೇಡಿಕೆಗಳಿಗಿಂತ ಹೆಚ್ಚು ಪೂರೈಕೆ ಮಾಡಲಾಗುವುದು ಅಧಿಕಾರಿ ಉತ್ತರಿಸಿದರು. ಈ ಬಗ್ಗೆ ಸಂಪೂರ್ಣ ಲೆಕ್ಕಚಾರಗಳನ್ನು ನೀಡಬೇಕು ಎಂದು ಸೂಚಿಸಿದರು.
ಮುರುಳ್ಯದಲ್ಲಿರುವ ಅಂಗನವಾಡಿ ಕೇಂದ್ರ ಶಿಥಿಲ ವ್ಯವಸ್ಥೆಯಲ್ಲಿದೆ. ಮಳೆಗಾಲದಲ್ಲಿ ಮಳೆ ನೀರು ಒಳಗೆ ಬರುತ್ತಿದೆ. ಈ ಬಗ್ಗೆ ಹೊಸ ಕಟ್ಟಡಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಉಪಾದ್ಯಕ್ಷೆ ಶುಭದಾ ಎಸ್ ರೈ ಹೇಳಿದರು. ಅಲ್ಲದೇ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕೊಡುವ ಆಹಾರಗಳನ್ನು ಪರಿಶಿಲನೆ ನಡೆಸಬೇಕು ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…
ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…
ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…
ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…
ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…
ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…