ಸುಳ್ಯ: ಲೋಕಸಭಾ ಸಭಾ ಚುನಾವಣೆಯ ಬಿಸಿ ತಣ್ಣಗಾಗುತ್ತಿದ್ದಂತೆ ಸುಳ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಕಾವು ಆರಂಭಗೊಂಡಿತ್ತು. ಇದೀಗ ನಗರ ಪಂಚಾ ಯತ್ ಚುನಾವಣೆಯ ಪ್ರಚಾರದ ಕಾವು ಏರುತ್ತಿದ್ದಂತೆ ಲೋಕಸಭಾ ಚುನಾವಣೆಯ ಫಲಿತಾಂಶದ ಕುತೂಹಲ ಹೆಚ್ಚಿದೆ.
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸ್ಪರ್ಧೆ ಏರ್ಪಟ್ಟಿತು. ಸುಳ್ಯ ನಗರ ಪಂಚಾಯತ್ ಚುನಾವಣಾ ರಂಗದಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೇ ನೇರ ಎದುರಾಳಿಗಳು. ಆದುದರಿಂದ ನ.ಪಂ.ಚುನಾವಣೆಯ ಬಿಝಿಯ ಮಧ್ಯೆಯೂ ಲೋಕಸಭಾ ಫಲಿತಾಂಶದ ಮೇಲೆ ಎರಡೂ ಪಕ್ಷಗಳು ಕಣ್ಣಿಟ್ಟಿದೆ. ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷಕ್ಕೆ ನ.ಪಂ.ಚುನಾವಣಾ ಪ್ರಚಾರಕ್ಕೆ ಟಾನಿಕ್ ಸಿಕ್ಕಿದಂತಾದರೆ, ಸೋಲುವ ಪಕ್ಷಗಳಿಗೆ ಇನ್ನಷ್ಟು ಜಾಗೃತರಾಗುವ ಮತ್ತು ಪ್ರಚಾರ ತಂತ್ರವನ್ನು ಬದಲಿಸಿ ಕಣದಲ್ಲಿ ಮುಂದುವರಿಯುವ ಅವಕಾಶ ಸಿಕ್ಕಿದಂತಾಗುತ್ತದೆ. ಹೀಗೆ ಲೋಕ ಫಲಿತಾಂಶ ಸ್ಥಳೀಯ ಸಂಸ್ಥೆ ಚುನಾವಾಣಾ ಪ್ರಚಾರದಲ್ಲಿಯೂ ಪ್ರತಿಫಲಿಸಲಿದೆಯೇ ಎಂಬ ಕುತೂಹಲ ಮೂಡಿದೆ. ನಗರದಲ್ಲಿ ಎಷ್ಟು ಲೀಡ್ ಸಿಕ್ಕಿದೆ ಎನ್ನುವುದು ಸ್ಥಳೀಯ ಸಂಸ್ಥೆಯ ಚುನಾವಣೆಗೆ ದಿಕ್ಸೂಚಿಯಾಗದೇ ಇದ್ದರೂ ಕೊಂಚ ಪ್ರಭಾವ, ಪರಿಣಾಮವಾಗಬಹುದು ಎಂದು ವಿಶ್ಲೇಷಿಸಲಾಗಿದೆ.