ಸುಬ್ರಹ್ಮಣ್ಯ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ 69 ಮನೆಗಳು ಭಾಗಶಃ ಹಾನಿಯಾಗಿದೆ. ಕ್ಷೇತ್ರದ ಅನೇಕ ರಸ್ತೆಗಳು ಹಾನಿಗೊಳಗಾಗಿದೆ ಲೋಕೋಪಯೋಗಿ ಇಲಾಖೆಯ 13ಕೋ ರೂ ನಷ್ಟವಾದರೆ, 12 ಕೋಟಿಯಷ್ಟು ಜಿ.ಪಂ.ರಸ್ತೆ ನಾಶವಾಗಿದೆ. ಸರಕಾರಿ ಶಾಲೆ, ಸರಕಾರಿ ಕಟ್ಟಡಗಳು, ಸೇರಿ 6ಕೋ ರೂ ನಷ್ಟವಾಗಿದೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್ ಅಂಗಾರ ಹೇಳಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಸಂತ್ರಸ್ಥ ಸ್ಥಳಗಳಿಗೆ ಕಳೆದ ಆರು ದಿನಗಳಿಂದ ಭೇಟಿ ನೀಡಿ ಜನರ ಯೋಗಕ್ಷೇಮ ವಿಚಾರಿಸಿ ಅವರಿಗೆ ಸೂಕ್ತ ಪರಿಹಾರ ನೀಡುವತ್ತ ಹೆಚ್ಚಿನ ಕ್ರಮ ವಹಿಸಿದ್ದೇನೆ.ಮಾನವೀಯ ನೆಲೆಯಲ್ಲಿ ಸೂಕ್ತ ಪರಿಹಾರವನ್ನು ತುರ್ತಾಗಿ ನೆರೆ ಸಂತ್ರಸ್ಥರಿಗೆ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಳ್ಯ ವಿಧಾನಸಭಾ ವ್ಯಾಪ್ತಿಯಲ್ಲಿ ಸುಮಾರು 69 ಮನೆಗಳು ಭಾಗಶಃ ಹಾನಿಯಾಗಿದೆ. ಅಲ್ಲದೆ ಈ ವ್ಯಾಪ್ತಿಯಲ್ಲಿ ಹೆಚ್ಚು ತೊಂದರೆಗೊಳಗಾದ ಮನೆಗಳಿಗೆ ಶೀಘ್ರ ಪರಿಹಾರ ಘೋಷಣೆ ಮಾಡಲಾಗುವುದು. ಅಲ್ಲದೆ ಕಲ್ಮಕಾರಿನ ಗುಳಿಕ್ಕಾನ ಪರಿಸರದ 10 ಮನೆಗಳ ಮಂದಿ ಸಂತರಸ್ಥರಾಗಿದ್ದಾರೆ.ಇವರಿಗೆ ಪಂಚಾಯತ್ ವ್ಯಾಪ್ತಿಯಲ್ಲಿನ ಸರಕಾರಿ ಜಾಗವನ್ನು ಗುರುತಿಸಿ ಶಾಶ್ವತವಾಗಿ ಪುನರ್ವಸತಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಮಂತ್ರಿ ಮಂಡಲವು ಇನ್ನೇನು ರಚಿತವಾಗಲಿದೆ. ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡುವ ನಿರ್ಧಾರವನ್ನು ಪಕ್ಷ ಮಾಡುತ್ತದೆ.ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಅಲ್ಲದೆ ಕಳೆದ 26 ವರ್ಷದಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ದುಡಿಯುತ್ತಿದ್ದೇನೆ.ಸಚಿವ ಸ್ಥಾನ ಸಿಗಬೇಕೆನ್ನುವುದು ಸುಳ್ಯದ ಜನತೆಯ ಆಶಯವಾಗಿದೆ.ಪಕ್ಷ ನೀಡಿದರೆ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.ಆದರೆ ಮಂತ್ರಿ ಮಾಡುವ ನಿರ್ಧಾರ ಪಕ್ಷದ್ದಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಹೇಳಿದರು. ಪಕ್ಷ ನಿಧಾರ ಕೈಗೊಂಡು ಮಂತ್ರಿ ಸ್ಥಾನ ದೊರಕಿದರೆ ಅದನ್ನು ನಿಭಾಯಿಸುವುದು ಒಂದು ಸವಾಲಿನ ಕೆಲಸ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಅಲ್ಲದೆ ಬಾಯಿ ಮಾತಿಗೆ ಭರವಸೆ ನೀಡದೆ ಕಾರ್ಯದ ಮೂಲಕ ಜನರ ಆಶೋತ್ತರ ಈಡೇರಿಕೆ ಮಾಡಬೇಕು ಎನ್ನುವುದು ನನ್ನ ಭಾವನೆ ಎಂದು ಶಾಸಕ ಎಸ್ ಅಂಗಾರ ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಬಿಜೆಪಿ ಮಂಡಲ ಸಮಿತಿ ಸದಸ್ಯ ಚಿದಾನಂದ ಕಂದಡ್ಕ, ಕುಕ್ಕೆ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮೋನಪ್ಪ ಮಾನಾಡು, ಮೋಹನರಾಂ ಸುಳ್ಳಿ, ಸುಬ್ರಹ್ಮಣ್ಯ ಭಟ್ ಮಾನಾಡು, ಪ್ರಮುಖರಾದ ಶ್ರೀಕುಮಾರ್ ಬಿಲದ್ವಾರ, ಅಶೋಕ್ ಕಡಬ, ಅಶೋಕ್ ಆಚಾರ್ಯ, ಶಿವಪ್ರಸಾದ್ ಮೈಲೇರಿ, ಸುಬ್ರಹ್ಮಣ್ಯ ಕಣ್ಕಲ್ ಉಪಸ್ಥಿತರಿದ್ದರು.