ಪಾನ್‌ ಮಸಾಲ ಉದ್ಯಮ ಬೆಳೆಯುತ್ತದೆಯಂತೆ…..! | ಅದರಾಚೆಗೆ ಯೋಚಿಸುವಾಗ…..! | ಕೃಷಿಕ ಎ ಪಿ ಸದಾಶಿವ ಬರೆಯುತ್ತಾರೆ…|

February 11, 2023
11:46 AM
ರೂರಲ್ ಮಿರರ್ ಪತ್ರಿಕೆಯನ್ನು ಓದುತ್ತಿದ್ದೆ. ಮುಂದಿನ ಐದು ವರ್ಷದಲ್ಲಿ ಭಾರತದ ಪಾನ್ ಮಸಾಲ ( ತಂಬಾಕು ರಹಿತ ಸಹಿತ ಗುಟುಕ ಉದ್ಯಮ ಎಲ್ಲವೂ ಸೇರಿರಬಹುದು ) ಉದ್ಯಮ 53000 ಕೋಟಿಗೆ ತಲುಪುವ ನಿರೀಕ್ಷೆಯ ವರದಿ ಓದುತ್ತಿದ್ದಂತೆ ಸ್ವತಃ ಅಡಿಕೆ ಬೆಳೆಗಾರನಾದ ನನಗೆ ಅತೀವ ಸಂತೋಷವೂ ಆಯಿತು. ಅತೀವ ದುಃಖವೂ ಒತ್ತರಿಸಿ ಬಂತು.
ಸದ್ಯದ ಮಟ್ಟಿಗೆ ಸುಸ್ಥಿತಿಯಲ್ಲಿಯೇ ಇರುವ ಆರ್ಥಿಕ ಸ್ಥಿತಿ ಯಾವುದೇ ಹಣಕಾಸಿನ ಒತ್ತಡವಿಲ್ಲದೆ ಮುಂದುವರಿಯಬಹುದು ಎಂಬ ವರದಿ ಸಂತೋಷ ಕೊಡಲೇಬೇಕು ಕೊಟ್ಟಿದೆ. ಪ್ರತಿಯೊಬ್ಬ ರೈತನಿಗೂ ಅನುದಿನವೂ ಕಾಡುವ  ಕೊರಗು ಏನೆಂದರೆ, ಪ್ರಕೃತಿಯ ಅಸಹಕಾರ, ಮಹಾಳಿಯಂತ ರೋಗಗಳ ಭಯ  ನೀರಿನ ಒತ್ತಡ, ವಿದ್ಯುತ್ತಿನ ಕೊರತೆ ಮತ್ತು ಕಳಪೆ ಗುಣಮಟ್ಟ, ಕಾಡು ಪ್ರಾಣಿಗಳ ಹಾವಳಿ, ತೀವ್ರವಾಗಿರುವ ಮಾನವ ಶ್ರಮದ ಸಮಸ್ಯೆ, ಇವುಗಳೊಂದಿಗೆ ಆರ್ಥಿಕ ಮುಗ್ಗಟ್ಟು ಬಂದರೆ ಬದುಕು ಎಂತು? ಎಂದು ಪ್ರತಿಯೊಬ್ಬರನ್ನೂ ಕಾಡುತ್ತಲೇ ಇರುತ್ತದೆ. ನಾಲ್ಕು ಜನ ಸೇರಿದಾಗ ಮಾತುಕತೆಯೇ ಮಾರುಕಟ್ಟೆಯ ಏರಿಳಿತದ ಬಗ್ಗೆ ನಡೆಯುತ್ತಲೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಈ ವರದಿಗಳು ಒಂದಷ್ಟು ಆಶಾದಾಯಕವಾಗಿ ಕಾಣುತ್ತದೆ ಮತ್ತು ಜೀವ ಚೈತನ್ಯ ತುಂಬುತ್ತದೆ.
ಪಾನ್ ಮಸಾಲ, ಗುಟ್ಕಾ ಮಾರುಕಟ್ಟೆಗೆ ಇನ್ನಷ್ಟು ಧಾವಂತದಲ್ಲಿ ನುಗ್ಗುತ್ತಿದೆ, ತಿನ್ನುವವರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ, ಗೂಡಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಗಳಲ್ಲಿಯೂ ವರ್ಣಮಯವಾದ ಅಲಂಕಾರದಲ್ಲಿ ಗುಟುಕ ಮಾಲೆ ನೇತಾಡುತ್ತಿದೆ. ಕೋಟಿಗಟ್ಟಲೆಯಲ್ಲಿ ವ್ಯವಹಾರ ನಡೆಯುತ್ತಿದೆ. ಅಡಿಕೆಯ ಬೇಡಿಕೆ ಎಂದೂ ಕಡಿಮೆಯಾಗಲಾರದು ಎಂಬ ಮಾತು ಸ್ವತಹ ಅಡಿಕೆ ಬೆಳೆಗಾರನಾದ ನನಗೆ ವೈಯಕ್ತಿಕವಾಗಿ ಸಂತೋಷ ಕೊಟ್ಟರೂ, ಸಮಾಜದ ಹಿತ ದೃಷ್ಟಿಯಿಂದ ಗಮನಿಸಿದಾಗ ನಾವೂ ಸ್ವಾರ್ಥಿಗಳಾಗುತ್ತಿದ್ದೇವೆಯೇ?ಎಂಬ ಪ್ರಶ್ನೆ ಮನದಲ್ಲಿ ಮೂಡಿತು.
ನಾನಾದರೂ, ನನ್ನ ಮಕ್ಕಳಿಗೆ ಅಡಿಕೆ ಮತ್ತು ವೀಳ್ಯವನ್ನು ಬೇಕಾದರೆ ಜಗಿ ಆದರೆ ತಂಬಾಕು ಸಹಿತ ಪಾನ್, ಗುಟುಕಾ ಮಾತ್ರ ಜಗಿಯಬೇಡ ಯಾಕೆಂದರೆ  ಅದು ವಿಷಕಾರಕ, ಕ್ಯಾನ್ಸರ್ ಕಾರಕ, ಆರೋಗ್ಯಕ್ಕೆ ಮಾರಕ ಎಂದು ಆರೋಪಗಳ ಸರಮಾಲೆಯನ್ನೇ ಹೊರಿಸುತ್ತೇನೆ. ಇಂದು ನಮ್ಮೂರಿನ ಹೆಚ್ಚಿನೆಲ್ಲಾ ಅಡಿಕೆ ಕೃಷಿಕರೂ  ಬೋಧಿಸುವುದು ಇದನ್ನೇ.  ಆದರೆ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಇಲ್ಲದ, ಆ ಬಗ್ಗೆ ತೀವ್ರತರವಾದ ಅರಿವಿಲ್ಲದ   ಶ್ರಮಜೀವಿ ವರ್ಗವಂತೂ  ಸೇವಿಸುವುದು ಅದನ್ನೇ. ಗುಟುಕಾ ಚಟಕ್ಕೆ ಬಿದ್ದ ಮಂದಿಗೆ ಗಂಟೆಗೊಮ್ಮೆಯಾದರೂ ಸೇವಿಸದಿದ್ದಲ್ಲಿ ಕೈ ಕಾಲಿನಲ್ಲಿ ನಡುಕ ಆರಂಭವಾಗುತ್ತದೆ, ಕೆಲಸದ ಮೇಲಿನ ಏಕಾಗ್ರತೆ ಕಡಿಮೆಯಾಗುತ್ತದೆ, ಕೆಲಸದ ಪರಿಷ್ಕಾರದಲ್ಲಿ ಏರುಪೇರು ಆಗುತ್ತದೆ. ಯೌವ್ವನದ ಏರು ಕಳೆದಂತೆ ಬಲು ಬೇಗ ವೃದ್ಧಾಪ್ಯ ವಕ್ಕರಿಸುವುದನ್ನು ಸದಾ ಕಾಣುತ್ತೇವೆ. ಅನಾರೋಗ್ಯದ ಪರಿಸ್ಥಿತಿಯನ್ನು ವರ್ಣಿಸದಿರುವುದೇ ಕ್ಷೇಮ.
 ದಿವಂಗತ ಕೃಷಿ ಋಷಿ ಪುರುಷೋತ್ತಮ ರಾಯರು ಸಭೆಯೊಂದರಲ್ಲಿ ನುಡಿದಿದ್ದರು. ಉತ್ತರ ಭಾರತದ ಯಾವುದೋ ನಗರಕ್ಕೆ ಹೋದಾಗ ರಾತ್ರಿ ಹೊತ್ತು ಉಳಕೊಳ್ಳಲು ಹೋಟೆಲಿನ ಕೋಣೆ ಒಂದು ಬಹಳ ಕಷ್ಟದಲ್ಲಿ ಸಿಕ್ಕಿತ್ತಂತೆ. ಕೋಣೆಯ ಮೂಲೆ ಮೂಲೆಗಳನ್ನು ಗಬ್ಬು ವಾಸನೆ ಬರುವಷ್ಟರ ಮಟ್ಟಿಗೆ ತಿಂದುಗುಳಿದ ಪಾನ್ ಅಲಂಕರಿಸಿತ್ತಂತೆ. ಆದರೂ ಸಹಿಸಿ ಕುಳಿತುಕೊಂಡೇ  ಬೆಳಗು ಮಾಡಿದೆ ಯಾಕೆಂದು ಬಲ್ಲಿರಾ? ಅವರು ನಮ್ಮ ಅನ್ನದಾತರು ಎಂಬ ಕಾರಣಕ್ಕಾಗಿ ಮಾತ್ರ,ಹೀಗೆ ಉತ್ತರವನ್ನೂ ಕೊಟ್ಟಿದ್ದರು. ಎಷ್ಟು ಸರಿಯಾದ ಮಾತಲ್ಲವೇ? ಇಂದು ಗಾರೆ ವರ್ಗದವರೋ, ಕಾಂಟ್ರಾಕ್ಟ್  ಕೂಲಿಯವರೋ ಬಂದಿದ್ದರೆ ಮರುದಿನ ಮನಸಾ ಶಪಿಸುತ್ತಲೇ ಅಂಗಳದ ಸುತ್ತು ಬಿದ್ದಿರುವ ಸೇರುಗಟ್ಟಲೆ ಗುಟುಕಾ ಪ್ಯಾಕೆಟ್ಟುಗಳನ್ನ ಎತ್ತುವ ಶ್ರಮ ನಮ್ಮದು ಆಗಿಯೇ ಆಗಿರುತ್ತದೆ.
 ಓರ್ವ ಸ್ವಾರ್ಥಿಯಾಗಿ ಸಂತೋಷಪಟ್ಟರೂ ನಿಸ್ವಾರ್ಥದಿಂದ ಯೋಚಿಸಿದರೆ ಭವಿಷ್ಯದ ಜನಾಂಗದ ಬಗ್ಗೆ ಖೇದವಾಗುತ್ತದೆ. ಜಗಿಯಬೇಕು ತಂಬಾಕು ರಹಿತ ಪಾನ್ ಮಾತ್ರ. ಜಗಿಯಬೇಕು ಸುಣ್ಣ ವೀಳ್ಯದೊಂದಿಗೆ ಅಡಿಕೆ ಮಾತ್ರ. ಪ್ರಚಾರಿಸಬೇಕು ಈ ದಿಕ್ಕಿನಲ್ಲಿ ಮಾತ್ರ. ಪತ್ರಿಕಾ ವರದಿಯಂತೆ ಮಾರುಕಟ್ಟೆ ಬೆಳೆಯಬೇಕು ತಂಬಾಕು ರಹಿತ ಪಾನಿನ ಮೂಲಕ,ಸುಸ್ಥಿರ ಜೀವನದ  ಆಶಯದೊಂದಿಗೆ ಎಂಬ ಮಾತಿನೊಂದಿಗೆ ವಿರಮಿಸುವೆ.
ಬರಹ :
 ಎ.ಪಿ. ಸದಾಶಿವ ಮರಿಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್
ಹೊಸರುಚಿ | ಎಳೆಯ ಹಲಸಿನ ಕಾಯಿ 65 – ಕರಕರಾ, ರುಚಿಕರ ಸ್ನ್ಯಾಕ್ ರೆಸಿಪಿ
February 22, 2026
9:09 AM
by: ದಿವ್ಯ ಮಹೇಶ್
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror