ಎ ಪಿ ಸದಾಶಿವ ಮರಿಕೆ ಅವರ ಕೃಷಿ ಅಭಿಮತ | ಗೋ ಆಧಾರಿತ ಕೃಷಿಯ ಕಡೆಗೆ ಕೃಷಿಕರು ಒಲವು ತೋರಿಸಿದರೆ ಕೃಷಿ ಸಮಸ್ಯೆಗಳಿಗೆ ಪರಿಹಾರ |

September 28, 2021
6:20 PM

ಕೃಷಿಕ ಎ ಪಿ ಸದಾಶಿವ ಅವರು ಕೃಷಿ ಸಮಸ್ಯೆಗಳ ಪರಿಹಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃಷಿಕರು ಈಗ ಮಾಡಬೇಕಾದ್ದೇನು ಹಾಗೂ ಗೋ ಆಧಾರಿತ ಕೃಷಿಯಿಂದ ಕೃಷಿ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ, ಹಲವು ರೋಗಗಳ ತಡೆ ಅಥವಾ ವಿಳಂಬ ಸಾಧ್ಯವಿದೆ ಎನ್ನುವುದು ಅವರ ಅಭಿಪ್ರಾಯ.

Advertisement

ರೂರಲ್ ಮಿರರ್  ವೆಬ್ ಪತ್ರಿಕೆಯಲ್ಲಿ ಅಡಿಕೆಯ ಹಳದಿ ಎಲೆ ರೋಗದ ಬಗ್ಗೆ, ಅದರ ಹರಡುವಿಕೆಯ ವೇಗದ ಬಗ್ಗೆ, ಅಡಿಕೆ ಕೃಷಿಕನ ಭವಿಷ್ಯದ ಬಗ್ಗೆ ಚಿಂತನಾತ್ಮಕ ಲೇಖನವೊಂದು ಪ್ರಕಟವಾಗಿತ್ತು. ಲೇಖನವನ್ನು ಓದುತ್ತಿದ್ದಂತೆ ಸ್ವತಹ ಅಡಿಕೆ ಕೃಷಿಕನಾಗಿರುವ ನನ್ನ ಮನಸ್ಸಿನಲ್ಲಿ ಅವ್ಯಕ್ತ ಭಯವೊಂದು ಮೂಡಿತು. ಈಗ ನನ್ನ ತೋಟದಲ್ಲಿ ರೋಗವಿಲ್ಲದಿದ್ದರೂ ಇದೇ ವೇಗದಿಂದ ರೋಗ ಹರಡಿದರೆ ನಮ್ಮ ತೋಟವನ್ನು ಮುಟ್ಟಲು ಹೆಚ್ಚು ದಿನವಿಲ್ಲ ಎಂಬ ಸತ್ಯ ಮನವರಿಕೆಯಾಯಿತು. ಹಾಗೇನಾದರೂ ಆದಲ್ಲಿ ಮುಂದೇನು ಎಂಬ ಯೋಚನೆ ನನ್ನನ್ನು ಚಿಂತೆಗಿಟ್ಟುಕೊಂಡಿತು.

ಯೋಚಿಸುತ್ತಿದ್ದ ನನ್ನ ಮನಸ್ಸು 40 ವರ್ಷದ ಹಿಂದಕ್ಕೋಡಿತು. ಆಗೆಲ್ಲಾ ನನ್ನ ಕೃಷಿಯ ಆರಂಭದ ದಿನಗಳು. ಶ್ರವಣ ಮಾಧ್ಯಮದ ಕೃಷಿರಂಗವನ್ನು ಕೇಳುತ್ತಿದ್ದರೆ ಆರಂಭವಾಗುವುದೇ ಕಪ್ಪುತಲೆ ಹುಳ ಬಲು ಕೆಟ್ಟಹುಳ ಎಂಬ ಪಲ್ಲವಿಯಿಂದ. ವಿಜ್ಞಾನಿಗಳು ಹೇಳಿದ ನಾನಾಥರದ ಔಷಧಿಗಳನ್ನು ಇದಕ್ಕೆ ಪ್ರಯೋಗ ಮಾಡಿತ್ತು. ಬೇರಿಗೆ ಕೊಡುವ ನುವಾಕ್ರೋನ್ ಎಂಬ ಇಂಜೆಕ್ಷನ್ ಅನ್ನು ಉಪಯೋಗಿಸಿ ಎಳನೀರನ್ನೆಲ್ಲಾ ವಿಷಮಯ ಮಾಡಿತ್ತು. ಯಾವುದಕ್ಕೂ ಬಗ್ಗದ ಕಪ್ಪುತಲೆ ಹುಳು ನಿಧಾನಕ್ಕೆ ಪ್ರಕೃತಿಯ ಎದುರು ಸೋತು ವಿಸ್ತರಣೆಯನ್ನು ನಿಲ್ಲಿಸಿತು.

ತೆಂಗಿನ ಮರದ ಕಾಂಡದಲ್ಲಿ ಗೋಂದು ಕಾರುವ ಖಾಯಿಲೆ ಆಗ ಜೋರಾಗಿತ್ತು. ಕಾಂಡದ ಸಿಪ್ಪೆತೆಗೆದು ತಾರು ಲೇಪಿಸುವುದು ಇನ್ನಿತರ ರಾಸಾಯನಿಕಗಳನ್ನು ಬಳಸುವುದು ಮಾಡಿ ಯಾವುದರಲ್ಲಿಯೂ ಹೇಳಿಕೊಳ್ಳುವಂತ ಪ್ರಯೋಜನ ಸಿಗದೇ ತನ್ನಷ್ಟಕ್ಕೆ ತನ್ನ ಹರಡುವಿಕೆಯನ್ನು ನಿಲ್ಲಿಸಿತು.

ಕೆಲವು ವರ್ಷದ ಹಿಂದೆ ಅಡಿಕೆಗೆ ಬರುವ ಕಜ್ಜಿ ಕೀಟ ತುಂಬಾ ಹಾನಿಯನ್ನು ಮಾಡಿತು. ಯಾವುದೇ ರಾಸಾಯನಿಕಗಳಿಗೆ ಬಗ್ಗದೆ ತನ್ನಷ್ಟಕ್ಕೆ ಹಾನಿಯನ್ನು ನಿಲ್ಲಿಸಿತು. ತೆಂಗಿನಲ್ಲಿಯೂ ಕೆಲವು ವರ್ಷ ಇದೇ ಕಜ್ಜಿ ಕೀಟ ಬಹಳ ಹಾನಿಯನ್ನು ಮಾಡಿ ಈಗ ತನ್ನ ಸಾಮರ್ಥ್ಯವನ್ನು ಕಳಕೊಂಡಿದೆ.

ಮೈಸೂರಿನಲ್ಲಿರುವ ನನ್ನ ಅಣ್ಣನ ತೋಟ ತೀವ್ರವಾಗಿ ಕಾಡುತ್ತಿದ್ದ ದೊಡ್ಡಗಾತ್ರದ ಬಸವನಹುಳುವಿನ 14 ವರ್ಷಗಳ ನಿರಂತರ ಕಾಟದಿಂದ ಮುಕ್ತಿ ಹೊಂದಿದೆ.

ಉಪ್ಪಿನಂಗಡಿ ಸಮೀಪದ ಪೆರಾಬೆ ಎಂಬ ಗ್ರಾಮದಲ್ಲಿ ಇರುವೆಗಳ ಉಪಟಳದಿಂದ ಜನ ಗುಳೇ ಹೊರಡುವಂತಹ ಸ್ಥಿತಿ ಇತ್ತು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಕೆಲವು ವರ್ಷಗಳಲ್ಲಿ ಅದು ತನ್ನ ಸಂತಾನ ವೃದ್ಧಿಯನ್ನು ನಿಲ್ಲಿಸಿದೆ.

ಬಾಳೆಯಲ್ಲಿ ಬರುವ ಪನಾಮ ವಿಲ್ಟು, ಮುಂಡು ತಿರಿ ಇತ್ಯಾದಿ ಖಾಯಿಲೆಗಳು ಬುಡಸಹಿತ ಕಿತ್ತು ತೋಟದಿಂದ ಹೊರಹಾಕಿ ಬೆಂಕಿ ಹಾಕಿ ಸುಡುವ ಪ್ರಯತ್ನ ಮಾಡಿದರೂ ಸಫಲವಾಗದೆ ಇಂದು ತನ್ನ ತೀವ್ರತೆಯನ್ನು ಕಳಕೊಂಡಿದೆ.

ಇಲ್ಲೆಲ್ಲಾ ಭೂತಾಯಿ ಒಮ್ಮೆ ನಮಗೆ ಮುನಿದಂತೆ ಕಂಡರೂ ಮತ್ತೆ ನಮ್ಮನ್ನು ಸಂತೈಸಿದೆ.

ಲೇಖನದ ಪ್ರಕಾರ ಹಳದಿ ರೋಗದ ಇತಿಹಾಸವನ್ನು ಗಮನಿಸಿದರೆ 1914 ರಿಂದ ಪ್ರಥಮವಾಗಿ ಗೋಚರಿಸಿ 80 ವರ್ಷಗಳ ಕಾಲ ಅದು ತೀವ್ರತೆಯನ್ನು ಪಡಕೊಂಡಿರಲಿಲ್ಲವಂತೆ. ಈಗಿನ 25 ವರ್ಷಗಳಲ್ಲಿ ನಾವು ಕೂಡ ಗೋ ಆಧಾರಿತ ಕೃಷಿಯನ್ನು ಕಡಿಮೆ ಮಾಡುತ್ತಾ ಬಂದು ರಾಸಾಯನಿಕಗಳನ್ನು ನೆಚ್ಚಿದ್ದು ಕಾಣುತ್ತಿದ್ದೇವೆ. ಈ ಕಾರಣದಿಂದಾಗಿಯೇ ಹಳದಿ ರೋಗದ ತೀವ್ರತೆಯು ಹೆಚ್ಚುತ್ತಿರುವುದೋ ಎಂಬ ಸಂಶಯ ನನ್ನನ್ನು ಕಾಡುತ್ತಿದೆ.

ಇದಕ್ಕೆ ಪೂರಕವಾಗಿ ಎಲ್ಲಿಯೋ ಕೇಳಿದ ವಿಷಯ ಎಂದು ರಮೇಶ ದೇಲಂಪಾಡಿಯವರು ಬರೆದ ಕಿರುಲೇಖನ ಮತ್ತಷ್ಟು ಇಂಬು ಕೊಟ್ಟಿತು. ಸುತ್ತೆಲ್ಲ ಹಳದಿ ರೋಗವಿದ್ದರೂ ಕೊಲ್ಲಮೊಗ್ರುವಿನ ಕೃಷಿಕರೊಬ್ಬರ ತೋಟ ಸಂಪೂರ್ಣ ಗೋ ಆಧಾರಿತವಾಗಿದ್ದು, ಯಾವುದೇ ರಾಸಾಯನಿಕಗಳನ್ನು ಬಳಸದ ಕಾರಣ ಇನ್ನೂ ಹಸಿರಾಗಿಯೇ ಇದೆ ಅಂತೆ.

ಈ ಬಗ್ಗೆ ಇನ್ನಷ್ಟು ಹೆಚ್ಚು ಅಧ್ಯಯನ ನಡೆಸಿ ಗೋ ಆಧಾರಿತ ಕೃಷಿಯ ಕಡೆಗೆ ಕೃಷಿಕರು ಒಲವು ತೋರಿಸಿದರೆ ಪರಿಹಾರಗಳನ್ನು ಕೃಷಿಕರೇ ಕಂಡುಕೊಳ್ಳಬಹುದೋ ಏನೋ ಎಂಬ ಯೋಚನೆ ಬಂತು.

ಯಾವುದೇ ಕೀಟಾಣುಗಳು ತನ್ನ ಅಸ್ತಿತ್ವಕ್ಕೆ ಧಕ್ಕೆಯಾದಾಗ, ತನ್ನ ಅಭಿವೃದ್ಧಿಗೆ ಸುತ್ತಮುತ್ತಲಿನ ಪರಿಸರ ಹಿತವಾದಾಗ ಸಂತಾನಾಭಿವೃದ್ಧಿ ತೀವ್ರತೆಯನ್ನು ಪಡೆಯುತ್ತ ದಂತೆ. ಗೋ ಆಧಾರಿತ ಸುಸ್ಥಿರ ಕೃಷಿಯನ್ನು ಕೈಗೊಂಡಲ್ಲಿ ಇಳುವರಿ ಸ್ವಲ್ಪ ಮಿತವಾದರೂ ಕಾಲದ ಓಟದಲ್ಲಿ ರೋಗ-ರುಜಿನಗಳನ್ನು ಪ್ರಕೃತಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೆಂದು ಮೇಲಿನ ಉದಾಹರಣೆಗಳಲ್ಲಿ ಕಂಡುಕೊಳ್ಳಬಹುದು.

ಲೇಖನದ ಪ್ರಕಾರ ರೋಗನಿರೋಧಕ ಹೊಸ ತಳಿಯೊಂದರ ಸಂಶೋಧನೆ ಪ್ರಗತಿಯಲ್ಲಿದೆಯಂತೆ. ಬಂದರೆ ಸಂತೋಷ. ಅದಕ್ಕೆ ಕಾದು ಕುಳಿತು ಸುಸ್ಥಿರ ಕೃಷಿಯನ್ನು ಮರೆತಲ್ಲಿ ಕೋಣನ ಹಿಂದೆ ಹೋದ ನರಿಯ ಸ್ಥಿತಿ ನಮ್ಮದು ಆಗಬಹುದು ಎಂದು ನನಗೆ ಅನಿಸಿತು. ಅಂಬಾ ಎಂದು ದನದ ಕರುವಿನ ಕೂಗು ಕೇಳಿದಾಗ ನನ್ನ ಚಿಂತೆಯಲ್ಲ ಮರೆತು ಬಂದದ್ದೆಲ್ಲಾ ಬರಲಿ ಗೋವಿನ ದಯೆಯೊಂದಿರಲಿ ಎಂದು ನೆಮ್ಮದಿಯಲ್ಲಿ ಇದ್ದೇನೆ.

# ಎ.ಪಿ. ಸದಾಶಿವ, ಮರಿಕೆ

 

 

 

 

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

SSLC ಪಾಸ್ ಮಾಡಿದವರಿಗೆ ಸುವರ್ಣಾವಕಾಶ..! ಮಂಗಳೂರಿನ ಜಿಟಿಟಿಸಿಯಲ್ಲಿ 100% ಉದ್ಯೋಗಾಧಾರಿತ ಡಿಪ್ಲೊಮಾ
April 24, 2026
7:30 AM
by: ಮಿರರ್‌ ಡೆಸ್ಕ್
13 ಟನ್ ಅಕ್ರಮ ಅಡಿಕೆ ವಶ : ಕರಾವಳಿ ರಕ್ಷಣಾ ಪಡೆಯ ದಾಳಿ
April 24, 2026
7:24 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಬಿಸಿಲು ಬಿಸಿ ತೀವ್ರ : ಮೈಸೂರಿನಲ್ಲಿ ಸನ್ ಸ್ಟ್ರೋಕ್ ವಾರ್ಡ್ ಆರಂಭಿಸಿದ ಆಸ್ಪತ್ರೆ
April 23, 2026
3:10 PM
by: ಮಿರರ್‌ ಡೆಸ್ಕ್
ರೈತರು ಇಂಧನದಾತರಾಗಬೇಕು – ಭೂಮಿ ಉಳಿಸಿ ಸಮ್ಮೇಳನದಲ್ಲಿ ಸಂದೇಶ
April 23, 2026
2:48 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror