ಸಾಂಪ್ರದಾಯಿಕ ಜಂಬು ನೇರಳೆಗಿಂತ(syzygium fruit) ಹಣ್ಣಾಗುವಾಗ ಕೆಂಪು ಒತ್ತು ಜಾಸ್ತಿ. ಒಳ್ಳೆಯ ಹಣ್ಣಾದರೆ ಹತ್ತಿಯಂತೆ ಮೃದು ಮತ್ತು ಬಹಳ ರುಚಿ. ಆದರೇನು ಮಾಡೋಣ? ಬೆಳೆಯುವುದು, ಹಣ್ಣಾಗುವವರೆಗೂ ಕಾದು ಕಾದು ಹಣ್ಣಾಗುವಾಗ ನಮಗೆ ಉಳಿಯುವುದು ಬಾವಲಿ(Bat) ತಿಂದದ್ದರ ಅರ್ಧ ಪಾಲು ಮಾತ್ರ. ಪ್ರಾಮಾಣಿಕವಾಗಿ ಹೇಳುವೆ ಒಂದಾದರೂ ಇಡಿಯ ಹಣ್ಣನ್ನು ಪೂರ್ಣವಾಗಿ ತಿನ್ನಲು ಸಿಕ್ಕುವುದು ಕಷ್ಟ.
ಈ ವರ್ಷ ಹಣ್ಣಿನ ಬೆಳೆ ಸಮೃದ್ಧ. ಸುಮಾರು 35 ಅಡಿ ಎತ್ತರದ ಮರದ ಗೆಲ್ಲು ಗೆಲ್ಲುಗಳಲ್ಲು ಹೂ ಬಿಟ್ಟಿತ್ತು ಕಾಯಿ ಕಚ್ಚಿತ್ತು. ಮರವನ್ನು ದಿನಕ್ಕೊಮ್ಮೆಯಾದರೂ ನೋಡುವ ಮೊಮ್ಮಕ್ಕಳು ಹಣ್ಣು ತಿನ್ನುವುದು ಯಾವಾಗ ಅಜ್ಜ ಎಂದು ಕೇಳುವಾಗ ಏನಾದರೂ ಉಪಾಯ ಮಾಡಲೇಬೇಕೆಂದು ಮನಸ್ಸು ಹೇಳಿತು. ಮರಕ್ಕೆ ಬಲೆಯನ್ನು ಹಾಕಿದರೆ ಬಾವಲಿ ಮತ್ತು ಪಕ್ಷಿ ಸಂಕುಲಗಳಿಂದ ಕಾಪಾಡಬಹುದು ಎಂಬ ಮಾಹಿತಿಯಂತೆ ಕಾಯಿ ಬೆಳೆಯುತ್ತಾ ಬಂದಂತೆ ಬಲೆಯನ್ನು ಮರಕ್ಕೇರಿಸುವ ಪ್ರಯತ್ನದತ್ತ ಹೊರಟೆ. ದೊಡ್ಡದಾದ ಬಲೆಯನ್ನು ಎತ್ತರಕ್ಕೆ ಏರಿಸುವಾಗಲೇ ಅದರ ಸಮಸ್ಯೆಯ ಪೂರ್ಣ ಅರಿವಾಗುವುದು.
ಬಲೆ ಮುದ್ದೆ ಕಟ್ಟಿಕೊಳ್ಳುವುದು, ಗಿಡದ ಗೆಲ್ಲುಗಳೆ ಬಲೆಯನ್ನು ಕಚ್ಚಿ ಹಿಡಿದುಕೊಳ್ಳುವುದು, ಅಡಿಕೆ ತೋಟದ ಬದಿಯಲ್ಲಿ ಮರ ಇರುವ ಕಾರಣ ಅಡಿಕೆ ಮರದ ಬುಡಕ್ಕೆ ಹಾಕಿದ ಕಸ ಕಡ್ಡಿಗಳೇ ಬಲೆಗೆ ಅಡ್ಡಿಯಾಗುವುದು, ಎತ್ತರಕ್ಕೆ ಕೊಂಡೊಯ್ಯಲು ಉದ್ದದ ಕೊಕ್ಕೆಯ ಸಮಸ್ಯೆ,(ಅದಕ್ಕೆ ನಾನು ಬಳಸಿದ್ದು ಕಾರ್ಬನ್ ಫೈಬರ್ ದೋಟಿ) ದೋಟಿಯ ಕ್ಲ್ಯಾಂಪ್ಗಳೇ ಬಲೆಗೆ ಸಿಕ್ಕಿಕೊಂಡು ಏರಿಸಿದ ಬಲೆ ಪುನಹ ಜಾರಿಕೊಳ್ಳುವುದು ಎಲ್ಲವೂ ಒಂದು ಅದ್ಭುತ ಅನುಭವ. ಅಂತೂ ಒಬ್ಬ ಸಹಾಯಕನ ಸಹಾಯದೊಂದಿಗೆ ಸುಮಾರು 2 ಗಂಟೆಗಳ ಹೋರಾಟದಲ್ಲಿ ಮರಕ್ಕೆ ಪೂರ್ಣವಲ್ಲದಿದ್ದರೂ, ನಮಗೆ ಧಾರಾಳ ಸಿಗುವಷ್ಟು ಪ್ರಮಾಣದ ಎತ್ತರಕ್ಕಾದರೂ ಬಲೆಯನ್ನು ಹಾಕಲು ಸಫಲನಾದೆ.
ಎರಡು ದಿನದ ನಂತರ ಬಲಿತ ಕಾಯಿ ಹಣ್ಣಾಗ ಹತ್ತಿತ್ತು. ಇಂದೀಗ ಸಮೃದ್ಧ ಫಸಲನ್ನು ಕೊಯ್ದು ಮೊಮ್ಮಕ್ಕಳೊಂದಿಗೆ ತಿನ್ನುವಾಗ ಮಾಡಿದ ಶ್ರಮ ಸಾರ್ಥಕ ಅಂತ ಅನಿಸಿತು. ಶ್ರಮವನ್ನು ಹಂಚಿಕೊಂಡರೆ ಸಂತೋಷವನ್ನು ಹಂಚಿಕೊಂಡಂತೆ ಮತ್ತು ಬೇರೆಯವರಿಗೂ ಶ್ರಮಪಡಲು ಪ್ರೋತ್ಸಾಹ ಎಂಬ ಭಾವದಲ್ಲಿ ಬರಹ ರೂಪಕ್ಕಿಳಿಸಿದೆ.
ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…
ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…
ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…
ಬಿ.ಎಸ್ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…