#OrganicFarming | ಕೃಷಿಯನ್ನೇ ಆಧ್ಯಾತ್ಮವನ್ನಾಗಿಸಿದ ಅಪರೂಪದ‌ ಸಂತ ಮಂಗಳೂರಿಗೆ ಆಗಮನ : ಕೃಷಿಕರಿಗೆ ಕಾಡ ಸಿದ್ದೇಶ್ವರ ಶ್ರೀಗಳ ಪ್ರವಚನ

July 8, 2023
12:16 PM
ಕೃಷಿಯನ್ನೇ ಆಧ್ಯಾತ್ಮವನ್ನಾಗಿಸಿದ ಅಪರೂಪದ‌ ಸಂತ ಕಾಡಸಿದ್ದೇಶ್ವರ ಶ್ರೀಗಳು ಜುಲೈ 13 ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾವಯವ ಕೃಷಿಯನ್ನೇ ಆಧ್ಯಾತ್ಮವನ್ನಾಗಿಸಿದ, ಗ್ರಾಮ ಸ್ವರಾಜ್ಯಕ್ಕಾಗಿ ಪೀಠತ್ಯಾಗಗೈದ, ಶೇಳಖೆವಾಡಿ ಎಂಬ ಊರನ್ನು ದತ್ತು ಪಡೆದು ಆದರ್ಶ ಗ್ರಾಮವಾಗಿಸಿದ, ಕಾವಿ ಧರಿಸಿ ಗ್ರಾಮಾಭಿವೃದ್ಧಿ, ಸ್ವಚ್ಛತೆ, ಶಿಕ್ಷಣದ ಮೂಲಕ ‌ಕ್ರಾಂತಿಗೈದ, 25 ತಳಿಯ 1500 ದೇಸಿ ಗೋವುಗಳ ಸಂರಕ್ಷಕ, ಕನ್ನೇರಿಯನ್ನು ಕರ್ಮ ಭೂಮಿಯನ್ನಾಗಿಸಿದ ಅಪರೂಪದ, ಆದರ್ಶಮಯ ಸಂತ ಕಾಡಸಿದ್ದೇಶ್ವರ ಶ್ರೀಗಳು ಜುಲೈ13 ರಂದು ಪ್ರಥಮ ಬಾರಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ.

ಎಲ್ಲಾ ಸ್ವಾಮೀಜಿಗಳು ದೇವರು, ಆಧ್ಯಾತ್ಮದ ಪ್ರವಚನಗೈದರೆ, ಇವರು ಗೋವು, ಸಾವಯವ ಕೃಷಿ, ಸ್ವಾವಲಂಬಿ ಬದುಕಿನ ಬಗ್ಗೆ ‌ಮಾರ್ಗದರ್ಶನ‌ ನೀಡುತ್ತಾರೆ. ಕಾಡ ಸಿದ್ದೇಶ್ವರ ಶ್ರೀಗಳು ಬರೀ ಭಾಷಣಕಾರನಲ್ಲ.‌ ಸ್ವತಃ ಕೃಷಿ ಮಾಡಿ, ಶೇಳಖೆವಾಡಿ ಎಂಬ ಗ್ರಾಮವನ್ನು‌ ಮಾದರಿ ಕೃಷಿ ಗ್ರಾಮವನ್ನಾಗಿಸಿದ ಅಪರೂಪದ ಸಂತ.

ಪೂಜ್ಯಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ- ಪರಿಚಯ – ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲ್ಲೂಕಿನ ಕನೇರಿ ಸಿದ್ಧಗಿರಿ ಮಠಕ್ಕೆ 1,300 ವರ್ಷಗಳ ಇತಿಹಾಸವಿದೆ. ಬೆಳಗಾವಿಯಿಂದ 100 ಕಿ.ಮೀ ದೂರದಲ್ಲಿದೆ ಕನೇರಿ ಮಠ, ಪೂಜ್ಯಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ 1989 ರಲ್ಲಿ 49ನೇ ಮಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದರು.

1991 ರಿಂದ, ಪೂಜ್ಯಶ್ರೀ ಅವರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡರು ಮತ್ತು ಈ ಉದ್ದೇಶಕ್ಕಾಗಿ ಅವರು ಸಮೀಪದ ಗ್ರಾಮವಾದ ಕನ್ನೇರಿಯನ್ನು ತಮ್ಮ ‘ಕರ್ಮಭೂಮಿ’ಯನ್ನಾಗಿ ಮಾಡಿದರು. ಶೀಘ್ರದಲ್ಲೇ, ಹಲವಾರು ಯುವ ಮನಸ್ಸುಗಳು ಪೂಜ್ಯಶ್ರೀ ಮತ್ತು ಅವರ ಬೋಧನೆಗಳ ಕಡೆಗೆ ಆಕರ್ಷಿತರಾದರು. ತಮ್ಮ ಗ್ರಾಮ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ನೆರವಿನ ಮೇಲೆ ಅವಲಂಬಿತರಾಗಬಾರದು ಎಂದು ಪೂಜ್ಯಶ್ರೀ ಯುವಕರಿಗೆ ಮನವರಿಕೆ ಮಾಡಿದರು.

ಮಠದ ಪೀಠಾಧಿಪತಿಯಾಗಿ ಪೂಜೆ ಪುನಸ್ಕಾರ, ಆಶೀರ್ವಾದ ಪ್ರವಚನಗಳಲ್ಲಿಯೇ ಕಳೆದು ಹೋದರೆ ನಮ್ಮ ಈ ಎಲ್ಲ ಕನಸುಗಳು ನನಸಾಗುವುದಿಲ್ಲ ಎಂಬ ಕಾರಣಕ್ಕಾಗಿಯೇ 2014 ರಲ್ಲಿ ಪೀಠತ್ಯಾಗದ ಮಾಡಿ, ಆ ಜವಾಬ್ದಾರಿಯನ್ನು ಬೇರೆ ಸ್ವಾಮೀಜಿಗೆ ವಹಿಸಿ, ಶ್ರೀಗಳು ಸಂಪೂರ್ಣವಾಗಿ ಗ್ರಾಮ ಸ್ವರಾಜ್ಯದ ಕನಸು ನನಸು ಹೊತ್ತು ಅದನ್ನು ನನಸು ಮಾಡುವಲ್ಲಿ ಹಗಲು ರಾತ್ರಿ ದುಡಿಯುತ್ತಿದ್ದಾರೆ.

ಆತ್ಮನಿರ್ಭರ (ಸ್ವಯಂ) ಅಭಿವೃದ್ಧಿಗಾಗಿ ಸಿದ್ಧಗಿರಿ ಮಠದಿಂದ ಆರೋಗ್ಯ, ಶಿಕ್ಷಣ, ಗ್ರಾಮಾಭಿವೃದ್ಧಿ, ಕೃಷಿ ಮತ್ತು ಪರಂಪರೆಯ ಕ್ಷೇತ್ರಗಳಲ್ಲಿ ನಡೆದ ಸಮಗ್ರ ಕಾರ್ಯಕ್ರಮಗಳ ಮುಖ್ಯ ಶಿಲ್ಪಿ ಪೂಜ್ಯಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಶಿಲಾವನ, ಗ್ರಾಮೀಣ ಬದುಕಿನ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸುವ ಮೂಲಕ ಕೇವಲ ಪುಣ್ಯಕ್ಷೇತ್ರವಾಗಿದ್ದ ಕನೇರಿಯನ್ನು ಪ್ರವಾಸಿ ತಾಣವನ್ನಾಗಿಯೂ ಕಾಡಸಿದ್ದೇಶ್ವರ ಸ್ವಾಮೀಜಿ ಪರಿವರ್ತಿಸಿದ್ದಾರೆ. ಕನ್ನೇರಿಯಲ್ಲಿ ಗುರುಕುಲ, ಆಯುರ್ವೆದ ಮತ್ತು ಆತ್ಯಾಧುನಿಕ ಆಸ್ಪತ್ರೆ ತೆರೆಯಲಾಗಿದೆ. ಹಳ್ಳಿಯ ಜನಜೀವನ ಬಿಂಬಿಸುವ ‘ಗ್ರಾಮ ದರ್ಶನ’ ವಸ್ತು ಸಂಗ್ರಹಾಲಯ ಮಾಡಲಾಗಿದೆ. 30 ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗಿದೆ.

ಕಾಡಸಿದ್ದೇಶ್ವರ ಸ್ವಾಮೀಜಿಯವರು ಮಠದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಶೇಳಕೆವಾಡಿ ಎಂಬ ಗ್ರಾಮವನ್ನು ದತ್ತು ಪಡೆದು ಅದನ್ನು ಆದರ್ಶ ಗ್ರಾಮವನ್ನಾಗಿ ರೂಪಿಸಿದ್ದಾರೆ. ಈ ಗ್ರಾಮದಲ್ಲಿ ಕಳೆದ 5 ವರ್ಷದಲ್ಲಿ ಒಂದೂ ಅಪರಾಧ ಕೃತ್ಯವಾಗಿಲ್ಲ. ಇಡೀ ಗ್ರಾಮ ‘ಬಯೋಗ್ಯಾಸ್’ ಸೌಲಭ್ಯ ಪಡೆದುಕೊಂಡಿದೆ. ಶೌಚಾಲಯ ಮತ್ತು ಒಳಚರಂಡಿ ವ್ಯವಸ್ಥೆ ಇದೆ. ಗಂಡು ಹೆಣ್ಣಿನ ಅನುಪಾತ ಸಮಾನವಾಗಿದೆ. ಅಲ್ಲಿ ಎಲ್ಲ ಮಕ್ಕಳಿಗೆ ಶಿಕ್ಷಣ, ಸ್ವಚ್ಛತೆ ಎಲ್ಲವನ್ನೂ ಸಾಧಿಸಲಾಗಿದೆ. ‘ದೇಶದ ಎಲ್ಲ ಗ್ರಾಮಗಳೂ ಹೀಗೆಯೇ ಆಗಬೇಕು ಎನ್ನುವುದು ಅವರ ಕನಸು. ಗ್ರಾಮ ಸ್ವರಾಜ್ಯವಾದರೆ ದೇಶ ಸ್ವಾವಲಂಬಿಯಾಗುತ್ತದೆ’ ಎನ್ನುತ್ತಾರೆ ಸ್ವಾಮೀಜಿ,

ಕೇವಲ ಒಂದು ಎಕರೆ ಕೃಷಿ ಜಮೀನಿನಲ್ಲಿ ಒಂದು ಕುಟುಂಬ ಸ್ವತಂತ್ರವಾಗಿ ಬದುಕುವ ಹಾಗೆ ಮಾಡುವುದು ಅವರ ಗುರಿ. ಅದಕ್ಕಾಗಿ ಪ್ರಾತ್ಯಕ್ಷಿಕೆಯನ್ನು ಅವರು ಇಲ್ಲಿ ಮಾಡಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಒಂದು ಕುಟುಂಬಕ್ಕೆ ಬೇಕಾಗುವ ಎಲ್ಲ ದವಸಧಾನ್ಯಗಳನ್ನೂ ಬೆಳೆಯಲು ಸಾಧ್ಯವಿದೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಂತರ ಬೆಳೆಯ ಮೂಲಕ ಪ್ರತಿ ದಿನ ರೈತನಿಗೆ ಕನಿಷ್ಠ? 400 ಆದಾಯ ಬರುವ ಹಾಗೆ ಮಾಡಿದ್ದಾರೆ. ಎಲ್ಲಿಯೂ ರಾಸಾಯನಿಕ ಗೊಬ್ಬರವನ್ನು ಬಳಸದೆ ಕೇವಲ ಸಾವಯವ ಗೊಬ್ಬರ ಮತ್ತು ವಿಧಾನದ ಮೂಲಕವೇ ಎಲ್ಲವನ್ನೂ ಬೆಳೆದಿದ್ದಾರೆ. ‘ಕೇವಲ ಕೃಷಿ ಸಾವಯವ ಆದರೆ ಸಾಲದು, ರೈತರ ಬದುಕೂ ಸಾವಯವ ಆಗಬೇಕು. ದೇಶದ ಎಲ್ಲ ರೈತರೂ ಹೀಗೆ ಸ್ವಾವಲಂಬಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ’ ಎನ್ನುವುದು ಶ್ರೀಗಳ ಅಭಿಪ್ರಾಯ,

ದೇಸಿ ಗೋ ತಳಿಗಳ ಸಂವರ್ಧನೆಗೆ ಗೋಶಾಲೆಯನ್ನ ಕನ್ನೇರಿಯಲ್ಲಿ ತೆರೆಯಲಾಗಿದೆ. 1500ಕ್ಕೂ ಹೆಚ್ಚಿನ ಗೋವುಗಳು ಇಲ್ಲಿವೆ. 25 ಕ್ಕೂ ಹೆಚ್ಚು ತಳಿಯ ಹಸುಗಳಿವೆ. ಮಠದ ಸುತ್ತಲಿನ 100 ಗ್ರಾಮಗಳಲ್ಲಿ ಗೋ ಸಂವರ್ಧನೆಯ ಬಗ್ಗೆ, ಸಾವಯವ ಕೃಷಿಯ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ & ರೈತರಿಗೆ ತರಬೇತಿ ನೀಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಸಾವಯವ ಕೃಷಿಯ ಹೇಳಿಗೆಗಾಗಿಯೇ ಶ್ರೀ ಸಿದ್ಧಗಿರಿ ಕೃಷಿ ವಿಜ್ಞಾನ ಕೇಂದ್ರವನ್ನು , 2019 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಇದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR), ನವದೆಹಲಿಯ ಜಿಲ್ಲಾ ಮಟ್ಟದ ಸಂಸ್ಥೆಯಾಗಿದ್ದು ರೈತ ಸಮುದಾಯಕ್ಕಾಗಿ ಶ್ರೀಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಇದೇ ವರ್ಷ ಫೆಬ್ರವರಿ 20 ರಿಂದ 26ರ ವರೆಗೆ ಕಛೇರಿಯಲ್ಲಿ ಜರುಗಿದ ಸುಮಂಗಲಂ ಪಂಚಭೌತಿಕ ಮಹೋತ್ಸವಕ್ಕೆ ಅಂದಾಜು 30 ಲಕ್ಷಕ್ಕೂ ಹೆಚ್ಚು ಜನ ಸಾಕ್ಷಿಯಾಗಿದ್ದು ಒಂದು ಐತಿಹಾಸಿಕ ಕಾರ್ಯಕ್ರಮವೆನಿಸಿತು. ಇಡೀ ವಿಶ್ವವು ಬಾಹ್ಯಾಕಾಶ, ಗಾಳಿ, ಬೆಂಕಿ, ನೀರು ಮತ್ತು ಭೂಮಿಯಿಂದ ಮಾಡಲ್ಪಟ್ಟಿದೆ. ಪಂಚ ಮಹಾಭೂತಗಳು ಸಮತೋಲಿತವಾಗಿ ಮತ್ತು ಅವುಗಳ ಶುದ್ಧ ರೂಪದಲ್ಲಿ ಅಸ್ತಿತ್ವದಲ್ಲಿದ್ದರೆ ನಮ್ಮ ಜೀವನವು ಆನಂದಮಯ, ಅರ್ಥಪೂರ್ಣ ಮತ್ತು ಸಾರ್ಥಕವಾಗುತ್ತದೆ’ ಎಂಬ ಸತ್ಯಾಂಶವನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು. ಈ ಯಶಸ್ವಿ ಸಂಪೂರ್ಣ ಪೂಜ್ಯಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರಿಗೆ ಸಲ್ಲುತ್ತದೆ.

ಇಂತಹ ಮಹಾ ಚೇತನ ಮಂಗಳೂರಿಗೆ ಬರುತ್ತಿದ್ದಾರೆ, ಶ್ರೀಗಳ ಜತೆ ಕೃಷಿ ಸಂವಾದ ನಡೆಸಲು, ಕೃಷಿ ಬದುಕಿನ ಹೊಸ ಮಜಲನ್ನು ‌ಕಾಣಲು ಜುಲೈ 13 ಗುರುವಾರದಂದು‌ ಮಂಗಳೂರಿನ ಶರವು ದೇವಳ ಸಮೀಪದ‌ ಬಾಳಂಭಟ್ ‌ ಹಾಲ್ ಗೆ‌ ಬನ್ನಿ. ಬೆಳಗ್ಗೆ ‌9.30ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಕಾರ್ಯಕ್ರಮ.

ಗ್ರಾಮದ ಹಾಲಿನ ಸೊಸೈಟಿ, ಕೃಷಿ ಪತ್ತಿನ ಸಹಕಾರಿ ಸಂಘ, ದೇವಸ್ಥಾನ /ಭಜನಾ ಮಂಡಳಿ/ ಉತ್ಸವ ಸಮಿತಿ/ಶಾಲಾ ಆಡಳಿತ ಮಂಡಳಿ/ರೈತ ಸಂಘಟನೆಯವರು/ಗೋ ಶಾಲೆ &ಗೋ ಪಾಲಕರು… ಜೊತೆಯಾಗಿ ಬನ್ನಿ. ಬಂದವರಿಗೆಲ್ಲ ಉಚಿತ ಗೋ ಕೃಪಾಮೃತ ವಿತರಣೆಯೂ ಇದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ರತ್ನಾಕರ ಕುಳಾಯಿ 9448835606, ಹರಿಕೃಷ್ಣ ಕಾಮತ್ 9481390710.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror