ಸಂಚಲನ ಮೂಡಿಸಿದ ಹೆದ್ದಾರಿಯ ಹಲಸಿನಂಗಡಿ | ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಯೋಜನೆ |

July 22, 2024
12:21 PM

ತುಮಕೂರು(Tumkur) ರುಚಿರುಚಿಯ ಹಲಸಿನ ಹಣ್ಣುಗಳ(Jackfruit) ತವರು. ಆದರೆ, ಉಳಿದೆಡೆಯ ಕೃಷಿಕರು(Farmers) ತಮ್ಮ ಹಲಸಿನಿಂದ ಜೇಬು ತುಂಬುತ್ತಿರುವಾಗ ಇಲ್ಲಿನವರು ಬಿಡಿಕಾಸು ಬೆಲೆಗೆ ಮಧ್ಯವರ್ತಿಗಳಿಗೆ ಮಾರಿ ಕೈ ತೊಳೆಯುತ್ತಿದ್ದಾರೆ! ಇನ್ನು ಕೆಲವರು ಅಡಿಕೆಯ(Areca Nut) ಹುಚ್ಚು ಮತ್ತಿತರ ಕಾರಣಗಳಿಂದ ಈಗಲೂ ಒಳ್ಳೊಳ್ಳೆ ಹಲಸಿನ ಮರ ಕಡಿಯುತ್ತಿದ್ದಾರೆ. ಈ ರೈತರಿಗೆ ಹಲಸಿನ ನೈಜ ಮೌಲ್ಯದ ರುಚಿ ತೋರಿಸಲು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರ (Agricultural Science Centre) ಒಂದು ಪ್ರಯೋಗ ನಡೆಸಿತು. ಸುತ್ತಲಿನ ರೈತರ ಜತೆ ಮಾತಾಡಿ, ಒಂದು ದಿನ ರಸ್ತೆ ಬದಿಯಲ್ಲೇ ಹಲಸಿನಂಗಡಿ ತೆರೆಸಿತು. ಕೃಷಿ ವಿಜ್ಞಾನ ಕೇಂದ್ರದ ಮಡಚಬಲ್ಲ ಟೆಂಟು ಒಳ್ಳೆ ಉಪಯೋಗಕ್ಕೆ ಬಂತು.

Advertisement

ಅವಸರದ ಕಾರ್ಯಕ್ರಮ. ಸೀಸನಿನ ಕೊನೆ. ಹಣ್ಣು ತಂದ ರೈತರು ಇಬ್ಬರೇ. ತಡಸೂರಿನ ಯೋಗಾನಂದಮೂರ್ತಿ ಮತ್ತು ತಿಮ್ಲಾಪುರದ ಕುಮಾರಸ್ವಾಮಿ. ಕೇವೀಕೆ ಅವರಿಗೆ ಶುಚಿತ್ವ ಕಲಿಸಿ ಸೊಳೆ ಬಿಡಿಸಿ ತುಂಬಲು ಪೆಟ್ಟಿಗೆ, ಅದಕ್ಕೆ – ಹಣ್ಣಿಗೆ ಅಂಟಿಸಲು ಲೇಬಲ್ ಕೊಟ್ಟಿತು. ತಲೆಗವಸು, ಕೈಗವುಸು ಹಾಕಿಸಿತು. ಸಣ್ಣ ಬೆಲೆ. ಐದು ಸೊಳೆಗೆ ಹದಿನೈದೇ ರೂ. ಹೆದ್ದಾರಿಯ ವಾಹನಿಗರೇ ಗ್ರಾಹಕರು.  ಧೋ ಅಂತ ಮಳೆ ಸುರಿದ ಕಾರಣ ಹೆದ್ದಾರಿಯ ಹಲಸಿನಂಗಡಿ ಬಂದ್ ಮಾಡಬೇಕಾಯಿತು. ಅಷ್ಟರೊಳಗೆ, ಅರ್ಧ ತಾಸಿನಲ್ಲೇ 3,000 ರೂ. ಸಂಪಾದನೆ.

ವಾಟ್ಸಪ್ ಗುಂಪುಗಳಲ್ಲಿ ’ನಾವೂ ತರ್ತಿದ್ದೇವಲ್ಲಾ’ ಎಂದರು ರೈತರು. “ನಮ್ಮ ಹಲವು ಬಂಧುಮಿತ್ರರಿಗೂ ಹುರುಪು ಮೂಡಿದೆ. ಮುಂದಿನ ವಾರ ಇನ್ನಷ್ಟು ಹಣ್ಣು ತಂದಾರು. ದಿನವಿಡೀ ಮಾಡೋಣ” ಎನ್ನುತ್ತಾರೆ ಯೋಗಾನಂದ ಮೂರ್ತಿ.

“ಕೃಷಿಕರಿಗೆ ರುಚಿ ಸಿಕ್ಕಿದೆ. ಮುಂದಿನ ವಾರ ಹೆದ್ದಾರಿಯ ಎರಡೂ ಬದಿಗಳಲ್ಲಿ, ಪೂರ್ತಿ ದಿನ ಸೊಳೆ ಮಾರಾಟ ನಡೆಸುವ ಯೋಜನೆ ಇದೆ. ಇನ್ನಷ್ಟು ರೈತರು ಬರುತ್ತಾರಂತೆ. ಹಣ್ಣು ಸಿಗುವ ವರೆಗೆ ವಾರದ ಹೆದ್ದಾರಿ ಹಲಸಿನಂಗಡಿ ಮುಂದುವರಿಸುತ್ತೇವೆ” ಎನ್ನುತ್ತಾರೆ ಈ ಶ್ಲಾಘನೀಯ ಪ್ರಯೋಗದ ರೂವಾರಿ ಕೇವೀಕೆ ಮುಖ್ಯಸ್ಥ ಡಾ. ಗೋವಿಂದ ಗೌಡ.ವಿ. ಈ ಕೃಷಿಕಸ್ನೇಹಿ ವಿಜ್ಞಾನಿ ಮತ್ತು ತೋಟಗಾರಿಕಾ ಇಲಾಖೆಯ ವರಿಷ್ಠರೊಡನೆ ಈ ಥರದ ಹೆದ್ದಾರಿ ಬದಿಯ ಪ್ರಾಯೋಗಿಕ ಸೊಳೆ ಮಾರಾಟ ನಡೆಸುವಂತೆ ’ಅಡಿಕೆ ಪತ್ರಿಕೆ’ ಸಲಹೆ ಮಾಡಿತ್ತು. ಇವರುಗಳೆಲ್ಲಾ ಈ ಥರದ ಪ್ರಯತ್ನಗಳನ್ನು ಬೆಂಬಲಿಸಲು ಸಜ್ಜಾಗುತ್ತಿದ್ದಾರೆ.

 

ಈ ಬಾರಿ ಚಂದ್ರ ( ಕೆಂಪು) ಹಲಸು ಸಿಕ್ಕಿರಲಿಲ್ಲ. ಸಿಕ್ಕರೆ ಮುಂದಿನ ವಾರ ಅದೂ ಬರಬಹುದು. ಆಸಕ್ತರು ಈ ರೈತರನ್ನು ನಡುವೆ ಸಂಪರ್ಕಿಸಿದರೆ ಲಭ್ಯತೆ ಹೊಂದಿ ರೈತರ ಮನೆಗಳಲ್ಲಿ ಹಣ್ಣು ಒದಗಿಸಲು ಯತ್ನಿಸಬಹುದು. ಅಥವಾ ಮುಂದಿನ ವಾರದ ಹಲಸಿನಂಗಡಿಯ ಸುದ್ದಿ ಬಂದಾಗ ಮುಂಚಿತವಾಗಿ ಪೋನ್ ಮಾಡಿ ಬುಕ್ ಮಾಡಬಹುದೇನೋ.

ತುಮಕೂರು  ಹಲಸಿನ ರೈತರಿಗೆ ಆದಾಯವರ್ಧನೆಯ ಬಾಗಿಲು ತೆರೆಯಬಹುದಾದ ಚಾರಿತ್ರಿಕ ಪುಟ್ಟ ಹೆಜ್ಜೆಯಿದು. ಕೇವೀಕೆ ತಂಡ, ರೈತರು ಮತ್ತು ಗ್ರಾಹಕರು – ಎಲ್ಲರಿಗೂ ಅಭಿನಂದನೆಗಳು. ಹೀಗೆ ಊರಿನ ಬೇರೆ ಸ್ತರಗಳ ಒಂದಷ್ಟು ಮಂದಿ ಎರಡು ವರ್ಷ ಕಾಲ ಸರಿಯಾದ ತಯಾರಿ, ಪ್ಲಾನಿಂಗಿನೊಂದಿಗೆ  ಸತತ ಶ್ರಮ ವಹಿಸಿದರೆ ಈ ಮಾರ್ಕೆಟಿಂಗ್ ರೀತಿಯನ್ನು ಗಟ್ಟಿಗೊಳಿಸಬಹುದು. ರೈತರಿಗೆ ಹಲಸಿನ ನಿಜವಾದ ಬೆಲೆ ಖಂಡಿತ ಸಿಗಬಹುದು. ಅನುಮಾನವಿದ್ದವರು ತೂಬುಗೆರೆ ರೈತರ ಬಳಿ ಕೇಳಿನೋಡಿ!

 

ಕೊನೆಹಳ್ಳಿ ಕೇವೀಕೆ ಮುಖ್ಯಸ್ಥರು , ಡಾ. ಗೋವಿಂದ ಗೌಡ –  96633 30296

ಹಲಸಿನ ಹಣ್ಣಿಗೆ ಸಂಪರ್ಕ:  ಯೋಗಾನಂದ ಮೂರ್ತಿ – 97437 5356

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಡಿಮೆ ದರದಲ್ಲಿ ಅಡಿಕೆ ಆಮದು ಮಾಡಿದರೆ ಸಂಪೂರ್ಣ ಜಪ್ತಿ – ದೆಹಲಿ ಹೈಕೋರ್ಟ್
February 19, 2026
8:46 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ
February 19, 2026
12:29 PM
by: ಸಾಯಿಶೇಖರ್ ಕರಿಕಳ
ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ
February 19, 2026
7:55 AM
by: ಮಿರರ್‌ ಡೆಸ್ಕ್
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ
February 19, 2026
7:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror