ತುಮಕೂರು(Tumkur) ರುಚಿರುಚಿಯ ಹಲಸಿನ ಹಣ್ಣುಗಳ(Jackfruit) ತವರು. ಆದರೆ, ಉಳಿದೆಡೆಯ ಕೃಷಿಕರು(Farmers) ತಮ್ಮ ಹಲಸಿನಿಂದ ಜೇಬು ತುಂಬುತ್ತಿರುವಾಗ ಇಲ್ಲಿನವರು ಬಿಡಿಕಾಸು ಬೆಲೆಗೆ ಮಧ್ಯವರ್ತಿಗಳಿಗೆ ಮಾರಿ ಕೈ ತೊಳೆಯುತ್ತಿದ್ದಾರೆ! ಇನ್ನು ಕೆಲವರು ಅಡಿಕೆಯ(Areca Nut) ಹುಚ್ಚು ಮತ್ತಿತರ ಕಾರಣಗಳಿಂದ ಈಗಲೂ ಒಳ್ಳೊಳ್ಳೆ ಹಲಸಿನ ಮರ ಕಡಿಯುತ್ತಿದ್ದಾರೆ. ಈ ರೈತರಿಗೆ ಹಲಸಿನ ನೈಜ ಮೌಲ್ಯದ ರುಚಿ ತೋರಿಸಲು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರ (Agricultural Science Centre) ಒಂದು ಪ್ರಯೋಗ ನಡೆಸಿತು. ಸುತ್ತಲಿನ ರೈತರ ಜತೆ ಮಾತಾಡಿ, ಒಂದು ದಿನ ರಸ್ತೆ ಬದಿಯಲ್ಲೇ ಹಲಸಿನಂಗಡಿ ತೆರೆಸಿತು. ಕೃಷಿ ವಿಜ್ಞಾನ ಕೇಂದ್ರದ ಮಡಚಬಲ್ಲ ಟೆಂಟು ಒಳ್ಳೆ ಉಪಯೋಗಕ್ಕೆ ಬಂತು.
ಅವಸರದ ಕಾರ್ಯಕ್ರಮ. ಸೀಸನಿನ ಕೊನೆ. ಹಣ್ಣು ತಂದ ರೈತರು ಇಬ್ಬರೇ. ತಡಸೂರಿನ ಯೋಗಾನಂದಮೂರ್ತಿ ಮತ್ತು ತಿಮ್ಲಾಪುರದ ಕುಮಾರಸ್ವಾಮಿ. ಕೇವೀಕೆ ಅವರಿಗೆ ಶುಚಿತ್ವ ಕಲಿಸಿ ಸೊಳೆ ಬಿಡಿಸಿ ತುಂಬಲು ಪೆಟ್ಟಿಗೆ, ಅದಕ್ಕೆ – ಹಣ್ಣಿಗೆ ಅಂಟಿಸಲು ಲೇಬಲ್ ಕೊಟ್ಟಿತು. ತಲೆಗವಸು, ಕೈಗವುಸು ಹಾಕಿಸಿತು. ಸಣ್ಣ ಬೆಲೆ. ಐದು ಸೊಳೆಗೆ ಹದಿನೈದೇ ರೂ. ಹೆದ್ದಾರಿಯ ವಾಹನಿಗರೇ ಗ್ರಾಹಕರು. ಧೋ ಅಂತ ಮಳೆ ಸುರಿದ ಕಾರಣ ಹೆದ್ದಾರಿಯ ಹಲಸಿನಂಗಡಿ ಬಂದ್ ಮಾಡಬೇಕಾಯಿತು. ಅಷ್ಟರೊಳಗೆ, ಅರ್ಧ ತಾಸಿನಲ್ಲೇ 3,000 ರೂ. ಸಂಪಾದನೆ.
ವಾಟ್ಸಪ್ ಗುಂಪುಗಳಲ್ಲಿ ’ನಾವೂ ತರ್ತಿದ್ದೇವಲ್ಲಾ’ ಎಂದರು ರೈತರು. “ನಮ್ಮ ಹಲವು ಬಂಧುಮಿತ್ರರಿಗೂ ಹುರುಪು ಮೂಡಿದೆ. ಮುಂದಿನ ವಾರ ಇನ್ನಷ್ಟು ಹಣ್ಣು ತಂದಾರು. ದಿನವಿಡೀ ಮಾಡೋಣ” ಎನ್ನುತ್ತಾರೆ ಯೋಗಾನಂದ ಮೂರ್ತಿ.
“ಕೃಷಿಕರಿಗೆ ರುಚಿ ಸಿಕ್ಕಿದೆ. ಮುಂದಿನ ವಾರ ಹೆದ್ದಾರಿಯ ಎರಡೂ ಬದಿಗಳಲ್ಲಿ, ಪೂರ್ತಿ ದಿನ ಸೊಳೆ ಮಾರಾಟ ನಡೆಸುವ ಯೋಜನೆ ಇದೆ. ಇನ್ನಷ್ಟು ರೈತರು ಬರುತ್ತಾರಂತೆ. ಹಣ್ಣು ಸಿಗುವ ವರೆಗೆ ವಾರದ ಹೆದ್ದಾರಿ ಹಲಸಿನಂಗಡಿ ಮುಂದುವರಿಸುತ್ತೇವೆ” ಎನ್ನುತ್ತಾರೆ ಈ ಶ್ಲಾಘನೀಯ ಪ್ರಯೋಗದ ರೂವಾರಿ ಕೇವೀಕೆ ಮುಖ್ಯಸ್ಥ ಡಾ. ಗೋವಿಂದ ಗೌಡ.ವಿ. ಈ ಕೃಷಿಕಸ್ನೇಹಿ ವಿಜ್ಞಾನಿ ಮತ್ತು ತೋಟಗಾರಿಕಾ ಇಲಾಖೆಯ ವರಿಷ್ಠರೊಡನೆ ಈ ಥರದ ಹೆದ್ದಾರಿ ಬದಿಯ ಪ್ರಾಯೋಗಿಕ ಸೊಳೆ ಮಾರಾಟ ನಡೆಸುವಂತೆ ’ಅಡಿಕೆ ಪತ್ರಿಕೆ’ ಸಲಹೆ ಮಾಡಿತ್ತು. ಇವರುಗಳೆಲ್ಲಾ ಈ ಥರದ ಪ್ರಯತ್ನಗಳನ್ನು ಬೆಂಬಲಿಸಲು ಸಜ್ಜಾಗುತ್ತಿದ್ದಾರೆ.
ಈ ಬಾರಿ ಚಂದ್ರ ( ಕೆಂಪು) ಹಲಸು ಸಿಕ್ಕಿರಲಿಲ್ಲ. ಸಿಕ್ಕರೆ ಮುಂದಿನ ವಾರ ಅದೂ ಬರಬಹುದು. ಆಸಕ್ತರು ಈ ರೈತರನ್ನು ನಡುವೆ ಸಂಪರ್ಕಿಸಿದರೆ ಲಭ್ಯತೆ ಹೊಂದಿ ರೈತರ ಮನೆಗಳಲ್ಲಿ ಹಣ್ಣು ಒದಗಿಸಲು ಯತ್ನಿಸಬಹುದು. ಅಥವಾ ಮುಂದಿನ ವಾರದ ಹಲಸಿನಂಗಡಿಯ ಸುದ್ದಿ ಬಂದಾಗ ಮುಂಚಿತವಾಗಿ ಪೋನ್ ಮಾಡಿ ಬುಕ್ ಮಾಡಬಹುದೇನೋ.
ತುಮಕೂರು ಹಲಸಿನ ರೈತರಿಗೆ ಆದಾಯವರ್ಧನೆಯ ಬಾಗಿಲು ತೆರೆಯಬಹುದಾದ ಚಾರಿತ್ರಿಕ ಪುಟ್ಟ ಹೆಜ್ಜೆಯಿದು. ಕೇವೀಕೆ ತಂಡ, ರೈತರು ಮತ್ತು ಗ್ರಾಹಕರು – ಎಲ್ಲರಿಗೂ ಅಭಿನಂದನೆಗಳು. ಹೀಗೆ ಊರಿನ ಬೇರೆ ಸ್ತರಗಳ ಒಂದಷ್ಟು ಮಂದಿ ಎರಡು ವರ್ಷ ಕಾಲ ಸರಿಯಾದ ತಯಾರಿ, ಪ್ಲಾನಿಂಗಿನೊಂದಿಗೆ ಸತತ ಶ್ರಮ ವಹಿಸಿದರೆ ಈ ಮಾರ್ಕೆಟಿಂಗ್ ರೀತಿಯನ್ನು ಗಟ್ಟಿಗೊಳಿಸಬಹುದು. ರೈತರಿಗೆ ಹಲಸಿನ ನಿಜವಾದ ಬೆಲೆ ಖಂಡಿತ ಸಿಗಬಹುದು. ಅನುಮಾನವಿದ್ದವರು ತೂಬುಗೆರೆ ರೈತರ ಬಳಿ ಕೇಳಿನೋಡಿ!
ಕೊನೆಹಳ್ಳಿ ಕೇವೀಕೆ ಮುಖ್ಯಸ್ಥರು , ಡಾ. ಗೋವಿಂದ ಗೌಡ – 96633 30296
ಹಲಸಿನ ಹಣ್ಣಿಗೆ ಸಂಪರ್ಕ: ಯೋಗಾನಂದ ಮೂರ್ತಿ – 97437 5356
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…
ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…
ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…
ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…