ಆಯುಷ್‌ ಇಲಾಖೆ ಪ್ರಕಟಿಸಿದ ಪೌಷ್ಟಿಕ ಆಹಾರ | “ಪತ್ರೊಡೆ” ಸವಿಯುವ ಆಟಿ ಅಮವಾಸ್ಯೆ ಇಂದು | ಕಾಡಿನ ಕೆಸುವು ಇನ್ನು ಹುಡುಗಾಟವಲ್ಲ “ಹುಡುಕಾಟ” |

August 7, 2021
11:54 PM
ಈ ಬಾರಿಯ ಆಟಿ ಅಮವಾಸ್ಯೆಗೆ ಹೆಚ್ಚಿನ ಮಹತ್ವ ಇದೆ. ಕೊರೋನಾ ಕಾರಣದಿಂದ ದೇಹದಲ್ಲಿ  ರೋಗನಿರೋಧಕ ಶಕ್ತಿ ಹೆಚ್ಚಿಸಲು ವಿವಿಧ ಪ್ರಯತ್ನ ನಡೆಯುತ್ತಿದೆ. ಇದಕ್ಕೇ ಆಟಿಯ ಸಮಯದಲ್ಲಿ  ತಯಾರಿಸುವ ಸಾಂಪ್ರದಾಯಿಕ ತಿಂಡಿಗಳೂ ಈಗ ಮಹತ್ವ ಪಡೆದಿದೆ. ತುಳುನಾಡಿನ ಪತ್ರೊಡೆ ಅತ್ಯಂತ ಪೌಷ್ಟಿಕ ಆಹಾರ ಎಂದು ಈಗ ಪರಿಗಣಿಸಲಾಗಿದೆ. 

Advertisement
Advertisement

ಆಟಿಯ ಮಳೆ ಜೋರಾಗಿತ್ತು.‌ ಬೆಳಗಿನ ಕಾಫಿಯಾಗುತ್ತಲೇ ಶ್ಯಾಮಲಕ್ಕನ ನೆನಪಾಯಿತು. ಮೊನ್ನೆ ತಾನೇ ಮಗಳ ಮದ್ವೆ ಮಾಡಿ ಮುಗಿಸಿದ್ದಳು. ಕೊರೋನಾ   ಕಟ್ಟುಪಾಡುಗಳಿಂದಾಗಿ ಆಯ್ದ ಬಂಧುಗಳ  ನಡುವೆ ಅಕ್ಕನ ಮಗಳ ಮದ್ವೆ ಆಗಿತ್ತು. ಹೇಗಾಯ್ತು ಎಂದು ಕೇಳಿಬಿಡುವ ಅಂತ ಫೋನ್ ಮಾಡಿದರೆ ಆಕೆಗೆ ಅಳು ತಡಯಲಾಗಲಿಲ್ಲ.

ಏನು ಹೇಳುದು ಮಾರಾಯ್ತಿ , ಆಟಿಗೆ ಮೊದಲು ಮದ್ವೆ  ಮಾಡಬೇಕು  ಅರ್ಜೆಂಟಲ್ಲಿ  ಮಾಡಿದ್ದಾಯಿತು. ಎಲ್ಲಿ , ಹ್ಯಾಗೆ ತಪ್ಪಾಯಿತು ಅಂತ ಗೊತ್ತಿಲ್ಲ ಮಗಳ ಮನೆಯಲ್ಲಿ ಎರಡು ಜನರಿಗೆ ಪಾಸಿಟಿವ್ ಬಂತು. ಹಾಗಾಗಿ ಅಲ್ಲಿ , ಇಲ್ಲಿ ಎರಡೂ ಕಡೆ ಕ್ವಾರಂಟೈನ್ ನಲ್ಲಿದ್ದೇವೆ.  ಈ ಕೊರೋನಾ ಯಾವ ಜನ್ಮದ ಶಾಪ ಅಂತನೇ ಅರ್ಥವಾಗದು.  ಆಕೆಗೇನೋ ಸಮಾಧಾನ ಮಾಡಿ ಫೋನ್  ಕಟ್ಟ್  ಮಾಡಿದೆ.

ಈ ಒಂದೆರಡು ವರ್ಷದಲ್ಲಿ ಬದುಕು ಎಷ್ಟು ಬದಲಾಯಿತಲ್ಲವೇ. ಸರಾಗವಾಗಿ ನಡೆಯುತ್ತಿದ್ದ ನಮ್ಮ ಕಾರ್ಯಗಳಿಗೆಲ್ಲ ಒಂದು ದೊಡ್ಡ ಪೆಟ್ಟು ಈ ಮಹಾಮಾರಿ.  ಮಕ್ಕಳ ವಿದ್ಯಾಭ್ಯಾಸ,  ವ್ಯಾಪಾರ ವ್ಯವಹಾರ, ವ್ಯವಸ್ಥೆಗಳೆಲ್ಲ ತಟಪಟ.ಹಬ್ಬ ಹರಿದಿನಗಳಾದರೂ ಅವರವರ ಮನೆಮಟ್ಟಿಗೆ ಮಾಡಲು ಅಡ್ಡಿಯಿಲ್ಲ ಬಿಡಿ.

ಈಗ ಮತ್ತೆ ಆಟಿ ತಿಂಗಳು ಬಂದಿದೆ, ಈಗ ಅಮವಾಸ್ಯೆಯೂ ಬಂದಾಯ್ತು. ನಮ್ಮ (ದಕ್ಷಿಣ ಕನ್ನಡ)ದ ಮಟ್ಟಿಗೆ ಆಟಿ  ತಿಂಗಳೆಂದರೆ  ತುಂಬಾ ವಿಶೇಷ, ಆಟಿ ಅಮವಾಸ್ಯಗೆ ಇನ್ನೂ ಹೆಚ್ಚಿನ ಮಹತ್ವ. ಆಟಿಯಲ್ಲಿ  ಭೂತಗಳಿಗೆ ಅಗೆಲು   ಹಾಕುವ ಪದ್ಧತಿ ಇದೆ.  ಕಷ್ಟಗಳ ನಿವಾರಣೆಗಾಗಿ ಆಟಿಕಳೆಂಜ ಮನೆ ಮನೆಗೆ ಬಂದು ಹರಸುವ  ವಿಶೇಷ  ಸಂಪ್ರದಾಯ  ತುಳುನಾಡಿನಲ್ಲಿದೆ.

ಆಟಿ  ತಿಂಗಳು ವಿಶಿಷ್ಠವಾದ ಆಹಾರ ಪದ್ಧತಿಗೆ  ಪ್ರಸಿದ್ಧವಾಗಿದೆ. ಅದರಲ್ಲೂ ಹಾಲೆ ಮರದ ಕಷಾಯ ಅಮೃತ ಸಮಾನವಾದುದು.  ನಿರ್ದಿಷ್ಟ ದಿನದಂದು ಸೂರ್ಯೋದಯಕ್ಕೂ ಮೊದಲು ಕೆತ್ತೆ ತಂದು ಕಷಾಯ ಮಾಡಿ ಖಾಲಿ ಹುಟ್ಟೆಗೆ ಕುಡಿದರೆ ನಮನ್ನು ಯಾವ ಕಾಯಿಲೆಗಳು  ಬಾಧಿಸದು ಎಂಬುದು ನಂಬಿಕೊಂಡ ಆಚರಣೆಯಾಗಿದೆ.

ವಿಶೇಷವಾದ ಮರಕೆಸುವಿನ ಪತ್ರೊಡೆ,  ಅರಶಿನ ಎಲೆಯಲ್ಲಿ ಮಾಡುವ ಕಡುಬು,  ಗೆಡ್ಡೆಗೆಣಸುಗಳ ಬಳಕೆ, ತಗತೆ ಸೊಪ್ಪಿನ ಪಲ್ಯ, ಚಟ್ನಿ, ಕಣಿಲೆ ಖಾದ್ಯಗಳು ಒಂದೇ ಎರಡೇ , ಹೇಳಿದಷ್ಟು ಮುಗಿಯದು ಆಟಿ ವೈವಿದ್ಯಗಳು.ಇತ್ತೀಚಿನ ದಿನಗಳಲ್ಲಿ ಆಟಿ ತಿಂಗಳಿ ವಿಶೇಷ ಕವಿಗೋಷ್ಠಿಗಳು, ಆಹಾರಮೇಳ, ಆಟಿದ ಕೂಟ ಅಂತೆಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಅದಕ್ಕೆಲ್ಲಾ ಕೊರೊನಾ ಬ್ರೇಕ್ ಹಾಕಿದೆ.

ಈಗ ಪತ್ರೊಡೆಗೆ ದೇಶ ಮಟ್ಟ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಕೊರೋನಾ ವೈರಾಣುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಪೋಷಕಾಂಶಗಳನ್ನು ನೀಡುವ ಆಹಾರಗಳನ್ನು ಆಯುಷ್ ಇಲಾಖೆ ಗುರುತಿಸಿದ್ದು, ಇಂತಹ 26 ಆಹಾರಗಳನ್ನು ಸಾಂಪ್ರದಾಯಿಕ ಆಹಾರಗಳು ಎಂದು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ಪತ್ರೊಡೆಯೂ ಸೇರಿದೆ. ಪತ್ರೊಡೆಯನ್ನು ಕರ್ನಾಟಕ ಮಾತ್ರವಲ್ಲದೆ, ಸಮುದ್ರದಂಚಿನ ರಾಜ್ಯಗಳಾಗಿರುವ ಕೇರಳ, ಮಹಾರಾಷ್ಟ್ರ, ಗೋವಾ, ಜೊತೆಗೆ ಹಿಮಾಚಲ ಪ್ರದೇಶ, ಗುಜರಾತ್ ಹಾಗೂ ಈಶಾನ್ಯ ಭಾಗದ ಕೆಲವು ರಾಜ್ಯಗಳಲ್ಲಿ ಪತ್ರೊಡೆ ತಯಾರಿಸಿ, ಸೇವಿಸಲಾಗುತ್ತದೆ. ಆದರೆ ಪ್ರತಿ ರಾಜ್ಯದಲ್ಲೂ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಪತ್ರೊಡೆ ಖಾದ್ಯವು ಹೆಚ್ಚು ತಯಾರಾಗುವುದು ಮಳೆಗಾಲದ ದಿನಗಳಲ್ಲಿ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಕೆಸುವಿನ ಗಿಡಗಳು ಹೆಚ್ಚಾಗಿ ಬೆಳೆದು ಅವುಗಳ ಎಲೆಗಳ ಲಭ್ಯತೆ ಹೆಚ್ಚಾಗುವ ಕಾರಣದಿಂದ ಇದನ್ನು ಮಳೆಗಾಲದಲ್ಲಿ ತಯಾರಿಸುವುದು ವಾಡಿಕೆ.ಕೊರೋನಾ ಸಮಯಯದಲ್ಲಿ ಪೌಷ್ಟಿಕಾಂಶಗಳಿಂದ ಶ್ರೀಮಂತವಾಗಿರುವ ಆಹಾರಗಳನ್ನು ಸೇವಿಸುವಂತೆ ಕೇಂದ್ರ ಆಯುಷ್ ಸಚಿವಾಲಯ ಸಲಹೆ ನೀಡಿದೆ. 

ಕೆಸುವಿನ ಎಲೆಯಲ್ಲಿ ನಾರಿನ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಈ ನಾರಿನ ಅಂಶವು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಇದರಿಂದ ಮನುಷ್ಯ ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ನಾರಿನ ಅಂಶದ ಜೊತೆಗೆ, ವಿಟಮಿನ್ ಸಿ, ಕಬ್ಬಿಣಾಂಶ, ಹಾಗೂ ಬೀಟಾ ಕೆರೊಟೀನ್ ಅಂಶ ಕೆಸುವಿನ ಎಲೆಗಳಲ್ಲಿ ಹೆಚ್ಚಾಗಿರುತ್ತದೆ. ಇದರಿಂದಾಗಿ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ವೃದ್ಧಿಸಲು ಅನುಕೂಲವಾಗುತ್ತದೆ. ಇದರೊಂದಿಗೆ ರುಮಟಾಯ್ಡ್ ಆಥ್ರೆಂಟೀಸ್ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಉರಿಯೂತ ಕಡಿಮೆ ಮಾಡಲು ಪತ್ರೊಡೆ ಸಹಕಾರಿ ಎಂದು ಆಯುಷ್ ಸಚಿವಾಲಯವು ವಿವರಿಸಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ
February 14, 2026
7:45 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror