ನೆರೆಯವರು ‘ ಆಯುಧ ಪೂಜೆಗೆ ಬನ್ನಿ ‘ ಅಂತಾ ಕರೆದಿದ್ದರು. ನೆರೆ ಹೊರೆಯವರ ಭಾವನೆಗಳಿಗೆ ದಕ್ಕೆಯಾಗಬಾರದೆಂದು ಹೋಗಿದ್ದೆ. ಅವರೆಲ್ಲ ಆಯುಧ ಪೂಜೆ ಮಾಡುತ್ತಿರುವಾಗ ಅವರು ಬೆಳೆಸಿರುವ ಗಿಡಗಳನ್ನ ನೋಡ್ತಾ ಅಡ್ಡಾಡ್ತಿದ್ದೆ. ಭೂಮಿಯೆಲ್ಲ ಸೀದು ಕರಕಲಾಗಿತ್ತು, ಅಂದರೆ ಈಗ್ಗೆ 15 ದಿನಗಳ ಹಿಂದೆ ಕಳೆನಾಶಕ ಗ್ಲೈಫೊಸೇಟ್ ಸಿಂಪಡಿಸಿ ಅಗಿತ್ತು. ಭೂಮಿಯ ಅಂಚಲ್ಲಿ ಎಲ್ಲೆಲ್ಲಿ ಕಳೆನಾಶಕ ಸಿಂಪಡಿಸಿರಲಿಲ್ಲವೋ ಅಲ್ಲೆಲ್ಲ ಜೀವ ತಲೆ ಎತ್ತಿ ನಿಂತಿತ್ತು. ಆಹಾರವಾಗಿ ಬಳಕೆಯಾಗುತ್ತಿದ್ದ ‘ ಹರಕ ಹರಕೆ ಸೊಪ್ಪು’ ಮತ್ತು ನೆಲನೆಲ್ಲಿ ಮಾತ್ರ ಉಳಿದಿತ್ತು .
ಯಾವುದಿದು ಕಳೆನಾಶಕ ಗ್ಲೈಫೊಸೇಟ್ : ಅಮೇರಿಕ ಪುಟ್ಟ ವಿಯೆಟ್ನಾಮ್ ವಿರುದ್ಧ ಅನಗತ್ಯ ಕ್ಯಾತೆ ತೆಗೆದು ಯುದ್ಧ ಮಾಡುತ್ತಿದ್ದಾಗ ಮ್ಯಾಂಗ್ರೊವ್ ಕಾಡುಗಳಲ್ಲಿ ವಾಸಿಸುತ್ತ ಅಮೇರಿಕನ್ ಸೈನ್ಯಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದ ವಿಯೆಟ್ನಾಮಿ ಸೈನಿಕರನ್ನ ಬಂಧಿಸಲೇಬೇಕಾದ ಅಗತ್ಯ ಉಂಟಾಯಿತು. ಅಂದರೆ ವಿಯೆಟ್ನಾಮಿನ ಮ್ಯಾಂಗ್ರೊವ್ ಕಾಡಿನ ಎಲೆಗಳನ್ನ ಕೃತಕವಾಗಿ ಉದುರಿಸಬೇಕಾಯಿತು. ತಕ್ಷಣವೇ ಈ ಕಾರ್ಯಕ್ಕೆ ಮುಂದಾದ ಅಮೇರಿಕನ್ ರಾಸಾಯನಿಕ ವಿಜ್ಞಾನಿಗಳು ಜಲಜನಕ ಮತ್ತು ಇಂಗಾಲದ ಪರಮಾಣುಗಳನ್ನ ಅಭದ್ರಗೊಳಿಸಿ ‘ಗ್ಲೈಫೊಸೇಟ್ ‘ ಎಂಬ ವಿಷವನ್ನ ತಯಾರಿಸಿದರು. ಇದನ್ನ ಅಮೇರಿಕನ್ ಸೇನೆ ” ಏಜೆಂಟ್ ಆರೆಂಜ್ ” ಎಂಬ ಗುಪ್ತ ಹೆಸರಿನಿಂದ ಕರೆಯುತ್ತಿತ್ತು. ತಮ್ಮ ನೆಲದ ಮೇಲೆ ಸಿಂಪಡಿಸಿದ ಈ ವಿಷ ರಾಸಾಯನಿಕದಿಂದ ವಿಯೆಟ್ನಾಮ್ ಗೆ ಚೇತರಿಸಿಕೊಳ್ಳಲು ತುಂಬಾ ವರ್ಷಗಳೇ ಬೇಕಾದವು.
ಯುದ್ಧವೇನೊ ನಿಂತಿತು. ಆದರೆ ಅಮೇರಿಕದ ಗೋದಾಮುಗಳಲ್ಲಿ ವಿಪರೀತ ಪ್ರಮಾಣದ ‘ ಗ್ಲೈಫೊಸೇಟ್’ ಮಿಕ್ಕು ಹೋಗಿತ್ತು. ಸರಿ ಸೈನ್ಯದ ವಶದಲ್ಲಿದ್ದ ಗ್ಲೈಫೊಸೇಟನ್ನ ಮೊನ್ಸಾಂಟೊ ಕಂಪನಿ ಪಡೆದುಕೊಂಡು ಅದಕ್ಕೆ “ರೌಂಡ್ ಅಪ್ ” ಎಂಬ ಹೆಸರು ಕಟ್ಟಿ ಕಳೆನಾಶಕವಾಗಿ ಬಳಸಬಹುದೆಂದು ಆಫ್ರಿಕ , ಏಷಿಯಾ ಭೂಖಂಡಗಳಿಗೆ ಮಾರಾಟ ಮಾಡತೊಡಗಿತು. (ಇದನ್ನೇ ಕಾರ್ಪೊರೇಟ್ ಸಾಮರ್ಥ್ಯ / Corporate efficiency ಅಂತಲೂ ಕರೆಯಬಹುದು) ಮಿಲಿಯಗಟ್ಟಳೆ ಹೆಕ್ಟೇರುಗಳಲ್ಲಿ ಜೋಳ ಬೆಳೆಯುತ್ತಿದ್ದ ಅಮೇರಿಕದ ಭೂ ಮಾಲೀಕರು , ರಾಂಚರುಗಳು ಕೂಡ ಈ ಗ್ಲೈಫೊಸೇಟನ್ನ ಕಳೆನಾಶಕವಾಗಿ ಬಳಸಿ ಕಳೆಯ ವಿರುದ್ಧ ವ್ಯಾಪಕ ಯುದ್ಧ ಹೂಡಿ ಗೆದ್ದುಬಿಟ್ಟೆವು ಎಂದುಕೊಳ್ಳುವಷ್ಟರಲ್ಲಿ, ಅಮೇರಿಕದ ಬಹುಪಾಲು ಭೂಮಿಗಳು ಇದರಿಂದ ಬರಡಾಗತೊಡಗಿದವು.
ಈ ಗ್ಲೈಫೊಸೇಟನ್ನ ಕಳೆನಾಶಕವಾಗಿ ಬಳಸಿದ್ದ ಭೂ ಪ್ರದೇಶಗಳ ಬಗ್ಗೆ ಅಧ್ಯಯನ ಮಾಡಿದ ಅಮೇರಿಕದ ಕೆಲವು ಮರ್ಯಾದಸ್ತ ವಿಜ್ಞಾನಿಗಳು ಈ ಗ್ಲೈಫೊಸೇಟ್ ಕ್ಯಾನ್ಸರ್ ಕಾರಕ ಎಂಬ ತೀರ್ಮಾನಕ್ಕೆ ಬಂದಿದ್ದರು. ಆನಂತರ ಅಮೇರಿಕಾದಲ್ಲಿ ಇದಕ್ಕೆ ಬ್ಯಾನ್ ಮಾಡಲಾಯಿತು. ತನ್ನಲ್ಲಿ ಉಳಿದು ಹೋಗಿದ್ದ ದೊಡ್ಡ ಪ್ರಮಾಣದ ಈ ಕಳೆನಾಶಕವನ್ನು ಮತ್ತೊಂದು ಕಂಪನಿಯ ಮೂಲಕ ಬಡ ಹಾಗೂ ಅಭಿವೃದ್ಧಿ ಶೀಲ ದೇಶದ ಮಾರುಕಟ್ಟೆಗಳಲ್ಲಿ ಹರಿಬಿಟ್ಟು, ತನ್ನ ಜೇಬನ್ನು ತುಂಬಿಸಿ ಕೊಂಡಿತು. ( ಈ ಹಿಂದೆ ಇದೇ ರೀತಿಯಲ್ಲಿ ಮಾರಾಟ ಮಾಡಿದ ಎಂಡೋಸಲ್ಫಾನ್ ನ ಪ್ರಭಾವ ಕರ್ನಾಟಕ ಹಾಗೂ ಕೇರಳ ರಾಜ್ಯದ ಅನೇಕ ಕಡೆಗಳಲ್ಲಿ ನೋಡುತ್ತಿದ್ದೇವೆ.) ಮುಂದೊಂದು ದಿನ ಈ ಕಳೆನಾಶಕ ಬಳಕೆಯ ಪರಿಣಾಮವಾಗಿ ನಮ್ಮ ಮನೆಮನೆಗಳಲ್ಲಿ ಕ್ಯಾನ್ಸರ್ ತಾಂಡವವಾಡುವುದನ್ನು ನಿರಾಕರಿಸುವಂತಿಲ್ಲ.
ನಮ್ಮ ಸುಖದ ಆಸೆಗೆ, ಹಣಗಳಿಸುವ ಹಂಬಲಕ್ಕೆ ನಮ್ಮ ಮುಂದಿನ ಪೀಳಿಗೆಗೆ ಕ್ಯಾನ್ಸರ್ ಬಳುವಳಿಯಾಗಿ ನೀಡುವುದು ಎಷ್ಟು ಸರಿ ? ನಮ್ಮ ಭೂಮಿಯನ್ನು ಬರಡಾಗಿಸಿ, ಒಂದು ಹುಲ್ಲು ಕಡ್ಡಿಯೂ ಬೆಳೆಯದಂತಹ ಭೂಮಿಯನ್ನು ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಉಳಿಸಿ, ಅವರು ಆಫ್ರಿಕಾದ ಅನೇಕ ದೇಶಗಳಲ್ಲಿಯ ಪರಿಸ್ಥಿತಿಯಂತೆ ಆಹಾರಕ್ಕಾಗಿ ಅಂಗಲಾಚುವ ಕಾಲ ತಂದೊಡ್ಡಬೇಕೆ.
ಮೂಲಬರಹ: L C Nagaraj