ವಿಟ್ಲ :ಯುವಕರು ಕೃಷಿಯತ್ತ ವಾಲುತ್ತಿರುವುದರಿಂದ ಕೃಷಿಗೆ ಅತ್ಯುತ್ತಮ ಭವಿಷ್ಯವಿದೆ. ಕೃಷಿಕಾರ್ಯದಲ್ಲಿ ವಿದ್ಯಾವಂತರು ಭಾಗವಹಿಸಿದಾಗ ಹೊಸ ಅವಿಷ್ಕಾರಗಳ ಜತೆಗೆ ಮನ್ನಣೆ ಸಿಗಲು ಸಾಧ್ಯ. ವಿದ್ಯಾವಂತ ಸಮಾಜ ಕೃಷಿಗೆ ಬಂದಾಗ ವ್ಯಕ್ತಿಗೂ , ವೃತ್ತಿಗೂ , ಹಣಕ್ಕೂ ಹೆಚ್ಚು ಗೌರವ ಬರುತ್ತದೆ ಎಂದು ಮಲೆನಾಡು ಕೃಷಿಕ ಸಮುದಾಯ ಸಂಘಟನೆ ಅಧ್ಯಕ್ಷ ಸತ್ಯನಾರಾಯಣ ಕೂಳೂರು ಹೇಳಿದರು.
ಅವರು ಬುಧವಾರ ವಿಟ್ಲ ಸಿಪಿಸಿಆರ್ ಐ ಯಲ್ಲಿ ಕ್ಯಾಂಪ್ಕೋ, ಅಡಿಕೆ ಪತ್ರಿಕೆ ಹಾಗೂ ಸಿಪಿಸಿಆರ್ ಐ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಅಡಿಕೆ ಕೌಶಲ್ಯ ಪಡೆ ತರಬೇತಿ 2022 ಕಾರ್ಬನ್ ಫೈಬರ್ ದೋಟಿ ಮೂಲಕ ಕೊಯ್ಲು – ಸಿಂಪಡಣೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅಡಿಕೆಗೂ ಭವಿಷ್ಯ ಇದೆ. ಆದರೆ ಅಡಿಕೆ ಹಾನಿಕಾರವಲ್ಲ ಎಂಬುದನ್ನು ವೈಜ್ಞಾನಿಕ ವರದಿಯ ಮೂಲಕ ನ್ಯಾಯಾಲಯದಲ್ಲಿ ದೃಢ ಪಡಿಸುವ ಕಾರ್ಯ ನಡೆಯಬೇಕಾಗಿದೆ. ಅಡಿಕೆಯ ಮೇಲಿನ ಆರೋಪವು ಅಡಿಕೆಗೆ ಸಂಬಂಧಿಸದ ಸಂಸ್ಥೆಯಿಂದ ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಧ್ಯಯನ ನಂತರ ಸುಪ್ರೀಂಕೋರ್ಟ್ ಮೂಲಕ ಈ ಆರೋಪ ಮುಕ್ತ ಆಗಬಹುದು.ಆದರೆ ಅಡಿಕೆ ಬೆಳೆಗಾರರಿಗೆ ಸೂಕ್ತ ರಕ್ಷಣೆ ಅಗತ್ಯವಾಗಿದೆ. ಅದರಲ್ಲಿ ಕೊಯ್ಲು ಹಾಗೂ ಸಿಂಪಡಣೆಯೂ ಮುಖ್ಯ ಕೆಲಸಕ್ಕಾಗಿ ತರಬೇತಿ ನಡೆಯುತ್ತಿರುವುದು ಕೂಡಾ ಉತ್ತಮ ಬೆಳವಣಿಗೆಯಾಗಿದೆ.ಕಾರ್ಬನ್ ದೋಟಿಗಳ ಮೂಲಕ 75ಅಡಿಯಿಂದಲೂ ಅಡಿಕೆ ಕೊಯಿಲು ಮಾಡಬಹುದಾಗಿದೆ. ದೋಟಿಯ ಮೂಲಕ ಔಷಧಿ ಸಿಂಪಡಣೆ ಕಾರ್ಯ ಮಾಡುವುದರಿಂದ ಔಷಧಿ ಉಳಿತಾಯ ಮಾಡಬಹುದಾಗಿದೆ ಎಂದು ತಿಳಿಸಿದರು.ಶಿಬಿರ ನಿರ್ದೇಶಕ ಕ್ಯಾಂಪ್ಕೋ ಉಪಾಧ್ಯಕ್ಷ ಶಂ. ನಾ. ಖಂಡಿಗೆ ಮಾತನಾಡಿ ಶಿಬಿರಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯವನ್ನು ಸಂಪನ್ಮೂಲ ವ್ಯಕ್ತಿಗಳು ಮಾಡಿದ್ದಾರೆ. ಅಪಘಾತ ವಿಮೆ ಸೇರಿ ವಿವಿಧ ಸವಲತ್ತುಗಳನ್ನು ಕ್ಯಾಂಪ್ಕೋ ವತಿಯಿಂದ ಶಿಬಿರಾರ್ಥಿಗಳಿಗೆ ಮಾಡಲಾಗಿದೆ. 19ಮಂದಿಯನ್ನು ತರಬೇತಿಗೊಳಿಸಿದ್ದು, ಸಹಕಾರಿ ಸಂಘಗಳು ಇದನ್ನು ಮುಂದುವರಿಸಬೇಕು. ದೋಟಿ ಆಂದೋಲನವಾಗಿ ಎಲ್ಲಾ ಕಡೆ ಪಸರಿಸಬೇಕು ಎಂದು ತಿಳಿಸಿದರು.
ಶಿಬಿರಾರ್ಥಿಗಳಾದ ಐವರ್ನಾಡು ನಿವಾಸಿ ವಚನ್ ಕುಮಾರ್, ಬೆಳ್ಳಾರೆ ನಿವಾಸಿ ಬಾಲಕೃಷ್ಣ, ಮಂಗಳೂರು ನಿವಾಸಿ ಎರೌನ್ ರೋಶನ್ ಡಿಮೆಲ್ಲೊ ಅಭಿಪ್ರಾಯ ಹಂಚಿಕೊಂಡರು. 19ಮಂದಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಲಾಯಿತು. ಸಿಪಿಸಿಆರ್ಐ ವಿಟ್ಲದ ವಿಜ್ಞಾನಿ ಡಾ. ಎಲ್ವಿನ್ ಅಪ್ಸರಾ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮೂರೂರು ಕಲ್ಲಬ್ಬೆ ಭಾಗದ ರಾಜೇಶ್ ಭಟ್, ರಾಜು ಶೆಟ್ಟಿ, ರಮೇಶ್ ಭಟ್, ಮೈಕೆ ಗಣೇಶ್ ಭಟ್, ಕ್ಯಾಂಪ್ಕೋ ನಿರ್ದೇಶಕರಾದ ಎಸ್. ಆರ್. ಸತೀಶ್ಚಂದ್ರ, ರಾಘವೇಂದ್ರ ಭಟ್ ಕೆದಿಲ, ಡಾ. ಜಯಪ್ರಕಾಶ ತೊಟ್ಟೆತ್ತೋಡಿ, ಮಹೇಶ್ ಚೌಟ, ಸತ್ಯನಾರಾಯಣ ಪ್ರಸಾದ್, ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಉಪಸ್ಥಿತರಿದ್ದರು.
ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶಾಸ್ತ್ರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…
ಆಗಸ್ಟ್ 26ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…