ಬೇಸಗೆಯ ಕೊನೆ, ಮಳೆಗಾಲದ ಆರಂಭ. ಈ ಸಮಯದಲ್ಲಿ ಓಡು ಹುಳ ವಿಪರೀತವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಕಂಡುಬರುತ್ತಿದೆ. ಈ ಹುಳ ರಬ್ಬರ್ ಕಾಡಿನಿಂದ ಬರುತ್ತದೆ ಎಂದು ಹಲವಾರು ಮಂದಿ ಹೇಳುತ್ತಾರೆ. ಹೀಗಾಗಿ ಈ ಬಗ್ಗೆ ರಬ್ಬರ್ ಮಂಡಳಿಯ ಅಧ್ಯಯನ ನಡೆಸಬೇಕು ಎಂದು ರಬ್ಬರ್ ಮಂಡಳಿಗೆ ತಿಳಿಸಲಾಗುವುದು ಎಂದು ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್ ಹೇಳಿದ್ದಾರೆ.…….ಮುಂದೆ ಓದಿ…..
ಕಳೆದ ಹಲವಾರು ಸಮಯಗಳಿಂದ ಬೇಸಗೆಯ ಕೊನೆಗೆ ಹಾಗೂ ಮಳೆಗಾಲದ ಆರಂಭದಲ್ಲಿ ಈ ಹುಳ ವಿಪರೀತವಾಗಿ ಕಾಡುತ್ತದೆ. ಹಿಂಡು ಹಿಂಡಾಗಿ ಬರುವ ಈ ಹುಳ ದೀಪದ ಬೆಳಕಿನಲ್ಲಿ ರಾಶಿ ರಾಶಿಯಾಗಿ ಬೀಳುತ್ತದೆ. ಬಳಿಕ ಅಲ್ಲಿಯೇ ರಾಶಿ ಬೀಳುತ್ತದೆ, ತೀರಾ ಕಿರಿಕಿರಿಯಾಗುವ ಈ ಹುಳದ ಬಗ್ಗೆ ಹಲವಾರು ಮಂದಿ ವಿವಿಧ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ರಬ್ಬರ್ ಕಾಡಿನಿಂದಲೇ ಈ ಹುಳ ಬರುತ್ತದೆ ಎಂದು ಹಲವಾರು ಮಂದಿ ಹೇಳುತ್ತಾರೆ. ಆದರೆ ಅಧಿಕೃತವಾದ ಯಾವುದೇ ಅಧ್ಯಯನಗಳು ಈ ಬಗ್ಗೆ ನಡೆದಿಲ್ಲ. ಈ ಹಿಂದೆ ಅಡಿಕೆ ಸೋಗೆಯ ಛಾವಣಿ ಇದ್ದ ಕಡೆ ಇಂತಹ ಹುಳ ಸಾಕಷ್ಟು ಸಂಖ್ಯೆಯಲ್ಲಿ ಇತ್ತು ಎಂದು ಗ್ರಾಮೀಣ ಭಾಗದ ಕೃಷಿಕರು ಹೇಳುತ್ತಾರೆ.…….ಮುಂದೆ ಓದಿ…..
ಈ ಹುಳದಲ್ಲಿ ಆಸಿಡ್ ಮಾದರಿಯ ಅಂಶ ಇದ್ದು ಮೈಗೆ ತಾಗಿದರೆ ಸುಟ್ಟ ಗಾಯದ ಮಾದರಿಯಲ್ಲಿ ಮೈಯಲ್ಲಿ ಹುಣ್ಣಾಗುತ್ತದೆ. ಅದರ ಜೊತೆಗೆ ತೀರಾ ಕಿರಿಕಿರಿಯಾಗುವ ಲಕ್ಷಣಗಳನ್ನು ಈ ಹುಳ ಹೊಂದಿದೆ. ಈ ಹುಳದ ನಿವಾರಣೆಗೆ ಯಾವುದೇ ಔಷಧಗಳೂ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಕೆಲವು ಕಡೆ ವಿಪರೀತ ಪ್ರಮಾಣದ ವಿಷವೇ ನಿಯಂತ್ರಣಕ್ಕೆ ಬಳಕೆ ಮಾಡುತ್ತಾರೆ. ಹಾಗಿದ್ದರೂ ಈ ಹುಳದ ಮೂಲ ಯಾವುದು? ಎಲ್ಲಿ ಉತ್ಪಾದನೆಯಾಗುತ್ತದೆ..? ಏನು ಕಾರಣ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆದಿಲ್ಲ. ಈಗ ರಬ್ಬರ್ ಮೂಲಕವೇ ಈ ಹುಳ ಉತ್ಪಾದನೆಯಾಗುತ್ತದೆ ಎನ್ನುವ ಕೃಷಿಕರ ಮಾಹಿತಿ ಹಿನ್ನೆಲೆಯಲ್ಲಿ ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್ ಅವರು ಈ ಹುಳದ ಬಗ್ಗೆ ಅಧ್ಯಯನವನ್ನು ರಬ್ಬರ್ ಬೋರ್ಡ್ ಮೂಲಕ ಮಾಡಬೇಕು ಎಂದು ಮನವಿಯಲ್ಲಿ ಸಲ್ಲಿಸಲಿದ್ದಾರೆ.…….ಮುಂದೆ ಓದಿ…..
ಈ ಹಿಂದೆ ಅಡಿಕೆ ಎಲೆಚುಕ್ಕಿ ರೋಗ ಬಂದಾಗ, ರಬ್ಬರ್ ಮರದಿಂದ ಈ ರೋಗವು ಅಡಿಕೆಗೆ ಬಂದಿರಬಹುದೇ ಎಂಬ ಸಂದೇಹ ಇದ್ದ ಹಿನ್ನೆಲೆಯಲ್ಲಿ ರಬ್ಬರ್ ಬೋರ್ಡ್ ಮೂಲಕ ಈ ಬಗ್ಗೆ ಅಧ್ಯಯನ ನಡೆಸಲು ಮನವಿ ಸಲ್ಲಿಸಿದ್ದರು. ಆ ಬಳಿಕ ನಡೆದ ಅಧ್ಯಯನದಿಂದ ರಬ್ಬರ್ಗೆ ಬರುವ ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗಕ್ಕೆ ಸೂಕ್ತ ಔಷಧಗಳು ಇವೆ. ಆದರೆ ಅಡಿಕೆಗೂ ಈ ರೋಗ ಹರಡುವ ಬಗ್ಗೆ ಯಾವುದೇ ಪ್ರಾಥಮಿಕವಾದ ಮಾಹಿತಿಗಳು ಲಭ್ಯವಾಗಿಲ್ಲ, ಆದರೆ ಈ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ.…….ಮುಂದೆ ಓದಿ…..
ಈ ಹುಳದ ನಿಯಂತ್ರಣಕ್ಕೆ ಹಲವಾರು ಮಂದಿ ವಿಪರೀತ ಪ್ರಮಾಣದ ವಿಷ ಸಿಂಪಡಣೆ ಮಾಡಲಾಗುತ್ತಿದೆ. ಇದು ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಷ ಸಿಂಪಡಣೆ ಮಾಡಿ ಆ ಹುಳಗಳು ಬಿದ್ದ ಬಳಿಕ ಅದನ್ನು ರಾಶಿ ಮಾಡಿ ಉರಿಸುವ ಕೆಲಸ ಹಲವು ಕಡೆ ಮಾಡುತ್ತಾರೆ. ಹೀಗೆ ಸುಡುವುದರ ಪರಿಣಾಮದ ಬಗ್ಗೆಯೂ ಯಾವುದೇ ವೈಜ್ಞಾನಿಕವಾದ ಅಧ್ಯಯನಗಳಿಲ್ಲ.
ಮಳೆ ದೂರವಾಗಿ ಬಿಸಿಲು ಬಂದ ತಕ್ಷಣವೇ ಸಂಜೆ ವೇಳೆ ಬೆಳಕಿಗೆ ಹಾರಿ ಬರುತ್ತವೆ. ಮಳೆ ನಿರಂತರವಾಗಿ ಸುರಿಯುತ್ತಿದ್ದಂತೆಯೇ ದೂರದಿಂದ ಹಾರಿ ಬರುವ ಹುಳ ಕಡಿಮೆಯಾಗುತ್ತದೆ, ಮನೆಯ ಛಾವಣಿಯಲ್ಲಿ ಇರುವುದು ಹಾಗೇ ಉಳಿಯುತ್ತದೆ ಎನ್ನುತ್ತಾರೆ ಕೃಷಿಕರು. ಇದೀಗ ಓಡುಹುಳದ ಬಗ್ಗೆ ಕೂಡಾ ಕೃಷಿಕರು ಹೆಚ್ಚಿನ ಹಿಮ್ಮಾಹಿತಿಯನ್ನು ನೀಡಿದರೆ ರಬ್ಬರ್ ಮಂಡಳಿಯ ಮೂಲಕ ಅಧ್ಯಯನ ನಡೆಸುವುದಕ್ಕೆ ಹೆಚ್ಚು ಅನುಕೂಲವಾಗಬಹುದು.…….ಮುಂದೆ ಓದಿ…..
ಓಡು ಹುಳ ನಿಮ್ಮಲ್ಲುಂಟಾ…? | ಅದಕ್ಕೆ ರಬ್ಬರ್ ಬೆಳೆ ಕಾರಣವಾ…? | ಅಧ್ಯಯನ ಮಾಡಲು ರಬ್ಬರ್ ಮಂಡಳಿಗೆ ಸಲಹೆ | https://t.co/JGquhJrQZJ
Advertisement— theruralmirror (@ruralmirror) May 31, 2024